ವಿಜಯಪುರ: 'ಅಕ್ರಮ ಮರಳು ದಂಧೆಯ ಮೇಲೆ ತೀವ್ರ ನಿಗಾ ವಹಿಸಿ'

By Kannadaprabha NewsFirst Published May 30, 2020, 11:48 AM IST
Highlights

ಇಂಡಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಾಗಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ವಿಶೇಷವಾದ ಇಬ್ಬರು ಅಧಿಕಾರಿಗಳನ್ನು 24‍‍X7 ಕಾಲ ನಿಯೋಜನೆ| ಭೀಮಾ ನದಿ ನೀರು ಬರುವವರೆಗೆ ತೀವ್ರ ನಿಗಾ ಇಡಲು ಉದ್ದೇಶ| ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ|

ವಿಜಯಪುರ(ಮೇ.30): ಜಿಲ್ಲೆಯ ಭೀಮಾ ಮತ್ತು ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಿಸುವ ಜೊತೆಗೆ ಅಕ್ರಮವಾಗಿ ಸಾಗಾಣಿಕೆ ಬಗ್ಗೆಯೂ ತೀವ್ರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಶುಕ್ರವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿ ತಾಲೂಕು ಮಟ್ಟದ ಕಂದಾಯ, ಪೊಲೀಸ್‌, ಗಣಿ ಮತ್ತು ಭೂವಿಜ್ಞಾನ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ತಾಲೂಕು ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿರುವ ತಾಲೂಕು ಕಾರ್ಯಪಡೆ ಸಮಿತಿ ಇನ್ನೂ ಚುರುಕಾಗಿ ಕಾರ್ಯ ನಿರ್ವಹಿಸುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಸಿಂದಗಿ: ಅಕ್ರಮ ಮದ್ಯ ವಶಪಡಿಸಿಕೊಂಡು ಬೆಂಕಿ ಹಚ್ಚಿದ ವನಿತೆಯರು..!

ಪೊಲೀಸ್‌ ಇಲಾಖೆ ನೆರವು ಪಡೆಯಿರಿ:

ಭೀಮಾ ನದಿ ತೀರ ವಿಶೇಷವಾಗಿ ಇಂಡಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಾಗಿ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ವಿಶೇಷವಾದ ಇಬ್ಬರು ಅಧಿಕಾರಿಗಳನ್ನು 24‍‍X7 ಕಾಲ ನಿಯೋಜಿಸಿ, ಭೀಮಾ ನದಿ ನೀರು ಬರುವವರೆಗೆ ತೀವ್ರ ನಿಗಾ ಇಡಲು ಉದ್ದೇಶಿಸಲಾಗಿದೆ. ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿ ಇದ್ದು, ಪೊಲೀಸ್‌ ಉಪ ಅಧೀಕ್ಷಕರು, ತಹಸೀಲ್ದಾರ್‌, ಲೋಕೋಪಯೋಗಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಅಕ್ರಮ ಮರಳು ಗಣಿಗಾರಿಕೆ ಕುರಿತು ಬರುವ ದೂರುಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು. ಅವಶ್ಯಕ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ನೆರವು ಪಡೆಯಲು ತಿಳಿಸಿದರು.

ಲೋಪವಾದರೆ ಕ್ರಮ:

ಇಂಡಿ, ಮೋರಟಗಿ ಚೆಕ್‌ಪೋಸ್ಟ್‌ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಬೇಕು. ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರನ್ನು ತಾಲೂಕು ಟಾಸ್ಕ್‌ಫೋರ್ಸ್‌ ಸಮಿತಿ ಅಡಿಯಲ್ಲಿ ನೇಮಿಸಬೇಕು. ದೂರುಗಳು ಬಂದ ತಕ್ಷಣ ವಿಳಂಬವಿಲ್ಲದೆ ತಕ್ಷಣ ಕ್ರಮ ಕೈಗೊಳ್ಳಬೇಕು. ತಾಳಿಕೋಟೆಯಲ್ಲಿ ತಹಸೀಲ್ದಾರರು ಪೊಲೀಸ್‌ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕ್ರಮ ಕೈಗೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ಮತ್ತು ಸಮನ್ವಯತೆ ಕೊರತೆಯಿಂದ ಲೋಪವಾದಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ವಿಜಯಪುರ ಕೃಷ್ಣಾ ನದಿ ತೀರದ ವ್ಯಾಪ್ತಿಯಲ್ಲಿಯೂ ತೀವ್ರ ನಿಗಾ ಇಡುವ ಕಾರ್ಯವನ್ನು ಸಂಬಂಧಪಟ್ಟಅಧಿಕಾರಿಗಳು ಮಾಡಬೇಕು. ವಿಶೇಷವಾಗಿ ಬಬಲೇಶ್ವರ ತಹಸೀಲ್ದಾರ್‌ ಈ ಕುರಿತು ವಿಶೇಷ ನಿಗಾ ಇಡುವಂತೆ ಸೂಚಿಸಿದರು. ಆಡಳಿತದ ಸಮರ್ಪಕ ನಿರ್ವಹಣೆಗೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಲೋಪಕ್ಕೆ ಅವಕಾಶ ನೀಡದಂತೆ ಅವರು ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ನೂತನ ಮರಳು ನೀತಿ ಅನ್ವಯ ಕಾರ್ಯ ನಿರ್ವಹಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಸೇರಿದಂತೆ ಗಣಿ ಮತ್ತು ಭೂವಿಜ್ಞಾನ, ಪೊಲೀಸ್‌, ಲೋಕೋಪಯೋಗಿ, ಕಂದಾಯ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅಕ್ರಮ ಗಣಿಗಾರಿಕೆ ತಡೆಗೆ ತಾಲೂಕಾವಾರು ಸಹಾಯವಾಣಿ ಮತ್ತು ವಿಚಕ್ಷಣಾ ತಂಡಗಳ ರಚನೆ ಮತ್ತು ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ್‌ ಅವರು ಹೇಳಿದ್ದಾರೆ. 
 

click me!