ತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆ ಕಂಡು ಡಿಸಿ ಗರಂ; ಮುಖ್ಯಾಧಿಕಾರಿಗೆ ತೀವ್ರ ತರಾಟೆ

Published : Oct 12, 2022, 12:55 PM ISTUpdated : Oct 12, 2022, 12:56 PM IST
ತ್ಯಾಜ್ಯ ವಿಲೇವಾರಿ ಘಟಕ ಅವ್ಯವಸ್ಥೆ ಕಂಡು ಡಿಸಿ ಗರಂ; ಮುಖ್ಯಾಧಿಕಾರಿಗೆ ತೀವ್ರ ತರಾಟೆ

ಸಾರಾಂಶ

ರೋಣ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವೈಶಾಲಿ ಭೇಟಿ  ಕಸ ವಿಂಗಡಣಾ ಘಟಕ ಶೀಘ್ರ ಸ್ಥಾಪಿಸಲು ಸೂಚನೆ  ಡಿಸಿ ಎದುರು ಸಮಸ್ಯೆ ಹೇಳಿಕೊಂಡ ರೈತರು

ರೋಣ (ಅ.12) : ಸ್ಥಳೀಯ ಪುರಸಭೆ ವ್ಯಾಪ್ತಿಯ ಅಬ್ಬಿಗೇರಿ ರಸ್ತೆಯಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ…. ಅವರು ಭೇಟಿ ನೀಡಿ, ಅಲ್ಲಿಯ ಅವ್ಯವಸ್ಥೆ ಕಂಡು ಮುಖ್ಯಾಧಿಕಾರಿ ಕೃಷ್ಣ ನಾಯಕ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಹಸಿ ಕಸ ವಾಸನೆ ತಡೆಗೆ ಹೊಸ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

ಕಸ ನಿರ್ವಹಣಾ ಘಟಕದಲ್ಲಿ ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಕಂಡ ಜಿಲ್ಲಾಧಿಕಾರಿ ವೈಶಾಲಿ ಅವರು, ಏನ್ರೀ, ಸಮರ್ಪಕ ಕಸ ನಿರ್ವಹಣೆ ಮಾಡುವುದನ್ನು ಬಿಟ್ಟು ರಸ್ತೆಯ ಬದಿಯಲ್ಲಿಯೇ ಕಸವನ್ನು ತಂದು ಹಾಕಿದ್ದೀರಿ? ನಿಮಗೆ ಬಂದು ವೀಕ್ಷಣೆ ಮಾಡಲು ಬರುವುದಿಲ್ಲವೇ? ಕಸ ವಿಲೇವಾರಿಗೆ ಎಂದೇ ಒಂದು ನಿರ್ದಿಷ್ಟಸ್ಥಳವಿರುತ್ತದೆ. ಹೀಗೆ ಎಲ್ಲೆಂದರಲ್ಲಿ ಕಸ ಹಾಕಿ ಬಿಸಾಕಿದರೆ ಹೇಗೆ? ಗ್ರಾಮ ಪಂಚಾಯಿತಿಯಲ್ಲಿ ಒಂದೇ ಕಸ ವಿಲೇವಾರಿ ವಾಹನ ಇದ್ದರೂ ಅವರು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಾರೆ. ಪುರಸಭೆಯಲ್ಲಿ ಕಸ ವಿಲೇವಾರಿಗೆ ಐದಾರು ವಾಹನಗಳು ಇದ್ದರೂ ನಿಮಗೆ ಸರಿಯಾಗಿ ನಿರ್ವಹಣೆ ಮಾಡಲು ಆಗುತ್ತಿಲ್ಲವೇ ಎಂದು ಮುಖ್ಯಾಧಿಕಾರಿ ಕೃಷ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲ, ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಮಾಡಿಲ್ಲ. ನೀರು ನಿಂತಲ್ಲಿಯೇ ನಿಲ್ಲುತ್ತಿದೆ. ಹಸಿ ಕಸ ಹಾಗೂ ಒಣ ಕಸವನ್ನು ತಂದು ಇಲ್ಲಿ ಹಾಕಲಾಗುತ್ತಿದೆ. ಶೀಘ್ರದಲ್ಲಿಯೇ ಕಸ ವಿಂಗಡಣಾ ಘಟಕವನ್ನು ಸ್ಥಾಪಿಸಿ ಸಮರ್ಪಕ ಕಸ ನಿರ್ವಹಣೆ ಮಾಡಿ ಎಂದು ಖಡಕ್‌ ಸೂಚನೆ ನೀಡಿದರು.

ಇದರಿಂದ ಕೆಲಕಾಲ ಕಸಿವಿಸಿಗೊಂಡ ಮುಖ್ಯಾಧಿಕಾರಿ ಕೃಷ್ಣ ನಾಯಕ ಅವರು, ಹೆಚ್ಚು ಗಾಳಿ ಇರುವುದರಿಂದ ಕಸ ಗಾಳಿಗೆ ಹಾರಿ ಎಲ್ಲೆಂದರಲ್ಲಿ ಬಂದು ಬೀಳುತ್ತಿದೆ. ಶೀಘ್ರದಲ್ಲಿಯೇ ಕಸ ವಿಂಗಡಣಾ ಘಟಕವನ್ನು ಸ್ಥಾಪಿಸಿ ಸಮರ್ಪಕ ಕಸ ನಿರ್ವಹಣೆ ಮಾಡುತ್ತೇವೆ. ನೀರು ಸರಾಗವಾಗಿ ಹರಿದು ಹೋಗುವಂತೆ ಸಮರ್ಪಕ ಚರಂಡಿ ನಿರ್ಮಿಸುತ್ತೇವೆ ಎಂದರು. ಮೊತ್ತೊಮ್ಮೆ ಭೇಟಿ ನೀಡುತ್ತೇನೆ. ಆಗ ಇಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಕಾಣಬಾರದು ಎಂದು ತಾಕೀತು ಮಾಡಿದರು.

ಇದಕ್ಕೂ ಮೊದಲು ತಹಸೀಲ್ದಾರ್‌ ಕಾರ್ಯಾಲಯದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಅವರು ತಹಸೀಲ್ದಾರ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದರು. ಸಭೆಯ ಬಳಿಕ ಸಾರ್ವಜನಿಕರು ತಮ್ಮ ಹಲವು ಸಮಸ್ಯೆಗಳನ್ನು ಹೇಳಿಕೊಂಡರು.

ಬೆಂಗಳೂರಿನ ತ್ಯಾಜ್ಯ ವಿಲೇವಾರಿಗೆ 590 ಕೋಟಿಯ ಟೆಂಡರ್‌..!

ಮಾಡಲಗೇರಿ ಗ್ರಾಮದ ರೈತರಾದ ಯಚ್ಚರಸಾಬ್‌ ಪಿಂಜಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಮ್ಮ ಹೊಲದಲ್ಲಿ ಗೋವಿನ ಜೋಳವನ್ನು ಬೆಳೆದಿದ್ದೇನೆ. ಮಳೆಗೆ ಸಂಪೂರ್ಣ ಹಾನಿಯಾಗಿದೆ. ಆದರೆ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ನನ್ನ ಹೊಲದಲ್ಲಿ ಹೆಸರು ಬೆಳೆ ಬೆಳೆಯಲಾಗಿದೆ ಎಂದು ಮಾಹಿತಿಯನ್ನು ದಾಖಲಿಸಿಕೊಂಡು ಹೋಗಿದ್ದಾರೆ. ಅವರು ಮಾಡಿರುವ ತಪ್ಪಿನಿಂದಾಗಿ ನನಗೆ ಬರಬೇಕಾಗಿದ್ದ ಬೆಳೆ ಹಾನಿ ಪರಿಹಾರವು ಬಂದಿಲ್ಲ, ಬೆಳೆವಿಮೆಗೂ ತೊಂದರೆಯಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳ ಹಾನಿ ಪರಿಹಾರ ದೊರೆಕಿಲ್ಲ. ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡರು. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ ವೈಶಾಲಿ ಅವರು, ಈ ಕುರಿತು ಸಮಸ್ಯೆಯನ್ನು ಶೀಘ್ರದಲ್ಲಿಯೇ ಬಗೆಹರಿಸುವಂತೆ ಸೂಚನೆ ನೀಡಿದರು. ಎರಡು ದಿನಗಳಲ್ಲಿ ಹೊಲಕ್ಕೆ ಭೇಟಿ ನೀಡಿ ಮರು ಬೆಳೆ ಸಮೀಕ್ಷೆ ಮಾಡಿ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು. ಈ ವೇಳೆ ಅನೇಕ ರೈತರು ತಮ್ಮ ಅಳಲನ್ನು ತೋಡಿಕೊಂಡರು.

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌