ವಿಜಯಪುರ: ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಡಿಸಿ ಖಡಕ್‌ ಸೂಚನೆ

By Girish GoudarFirst Published May 11, 2022, 8:38 AM IST
Highlights

*   ನೀರಿನ ಸಮಸ್ಯೆ ನೀಗಿಸಲು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಸೂಚನೆ
*   ಅಧಿಕಾರಿಗಳ ವಿರುದ್ಧ ದೂರು ಕೇಳಿ ಬಂದ್ರೆ ಕಠಿಣ ಕ್ರಮ ಎಂದ ಡಿಸಿ
*   ಇಂಡಿ ತಾಲೂಕಿನ 35 ಗ್ರಾಮಗಳಲ್ಲಿ ತೆಲೆದೋರಿದ ಕುಡಿಯುವ ನೀರಿಗೆ ಸಮಸ್ಯೆ
 

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಮೇ.10): ವಿಜಯಪುರ ಜಿಲ್ಲೆ ಅಂದ್ರೆ ಮೊದಲೇ ಬರದ ನಾಡು. ಅದ್ರಲ್ಲೂ ಬೇಸಿಗೆ(Summer) ಬಂದ್ರೆ ಸಾಕು ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತೆ. ಇಂಡಿ(Indi) ತಾಲೂಕಿನ ಕೆಲ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ನೀಡಿಬೇಕಾದ ಪರಿಸ್ಥಿತಿ ಉಂಟಾಗುತ್ತೆ. ಈ ನಿಟ್ಟಿನಲ್ಲಿ ವಿಜಯಪುರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

Latest Videos

ಕಾಲುವೆ ಮೂಲಕ ನೀರು ಹರಿಸಲು ಸೂಚಿಸಿದ ಜಿಲ್ಲಾಧಿಕಾರಿ

ಕಾಲುವೆಗಳಿಗೆ ನೀರು ಹರಿಸುವ ಮೂಲಕ ಜನ-ಜಾನುವಾರುಗಳಿಗೆ(Livestock) ಕುಡಿವ ನೀರಿಗೆ(Drinking Water) ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Vijayapura: ಅಭಿಮಾನಿಯ ಮದುವೆಯಲ್ಲಿ ಕಟೌಟ್‌ ಆಗಿ ನಿಂತ ಅಪ್ಪು..!

ವಿಜಯಪುರ(Vijayapura) ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲ ಸಂಗ್ರಹಾಲಯ ಕಾಲುವೆಗಳ ಮೂಲಕ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತರು, ಪೊಲೀಸ್ ಉಪಾಧೀಕ್ಷಕರು, ತಹಸೀಲ್ದಾರರು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ  ವಿಡಿಯೋ ಸಂವಾದ ನಡೆಸಿದರು. 

ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರ ನೇತೃತ್ವದಲ್ಲಿ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸ್ಥಿತಿಗತಿಯ ಬಗ್ಗೆ ಚರ್ಚಿಸಲಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ ಜಿಲ್ಲಾಧಿಕಾರಿಗಳು, ಅತೀ ಹೆಚ್ಚು ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ನೀರು ಸರಬರಾಜಿಗೆ ಅನುಕೂಲವಾಗುವಂತೆ ಕಾಲುವೆಗಳಿಗೆ(Canal) ನೀರು ಹರಿಸುವುದರ ಬಗ್ಗೆ ನಿರ್ಣಯಿಸಲಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ತುರ್ತಾಗಿ ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.

ಇಂಡಿ ತಾಲೂಕಿನ 35 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

ಇಂಡಿ ತಾಲೂಕಿನಲ್ಲಿ ಸುಮಾರು 35 ಗ್ರಾಮಗಳು ತೀವ್ರವಾದಂತಹ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಅಂತಹ ಗ್ರಾಮಗಳಿಗೆ ಕುಡಿವ ನೀರು ಪೂರೈಸುಲು ಈ ಭಾಗದ ಕಾಲವೆಗಳ ಮೂಲಕ ನೀರು ಹರಿಸುವುದು ಅತೀ ಅಗತ್ಯವಿದೆ ಎಂದು ಇದೆ ವೇಳೆ ಸಹಾಯಕ ಆಯುಕ್ತರಾದ ರಾಮಚಂದ್ರ ಗಡದೆ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಲಮಟ್ಟಿ ಜಲಾಶಯದಿಂದ(Almatti Dam) ನಾರಾಯಣಪುರ ಜಲಾಶಯಕ್ಕೆ ನೀರು ಹರಿಸಿ 3.88 ಟಿ.ಎಂ.ಸಿ ನೀರಿನ ಸಂಗ್ರಹಣೆ ಕಾಯ್ದಿರಿಸಬೇಕು. ಈ ಮೂಲಕ ಒಟ್ಟು 4.62 ಟಿಎಂಸಿ ನೀರನ್ನು ನಾರಾಯಣಪುರ ಜಲಾಶಯದಿಂದ ಸಿಂದಗಿ(Sindagi) ಮತ್ತು ಇಂಡಿ ತಾಲ್ಲೂಕಿನ ಉಪ ಕಾಲುವೆ ಐಬಿಸಿ ಮತ್ತು ಐಎಲ್‌ಸಿ ಜಾಲಗಳಿಗೆ ನೀರನ್ನು ಹರಿಸಲಾಗುತ್ತಿದ್ದು, ಈ ನೀರನ್ನು ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಲುವಾಗಿ ಕಾಲುವೆ ಕೊನೆಯ ಹಂತದವರೆಗೆ ತಲುಪಿಸಬೇಕಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ದೂರುಗಳು ಬಂದರೆ ಅಧಿಕಾರಿ ಮೇಲೆ ಕಠಿಣ ಕ್ರಮ

ಕಳೆದ ವರ್ಷಕ್ಕೆ ಹೋಲಿಸಿದರೆ ನಾರಾಯಣಪುರ(Narayanapura Dam) ಹಾಗೂ ಆಲಮಟ್ಟಿ ಡ್ಯಾಮ್‌ಗಳಲ್ಲಿ ನೀರಿನ ಲಭ್ಯತೆ ಇದ್ದು, ನೀರು ಪೂರೈಕೆಗೆ ಸಮಸ್ಯೆಯಾಗುವುದಿಲ್ಲ. ರೈತರು, ಜನ-ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಕಾಲಕ್ಕೆ ನೀರು ಪೂರೈಕೆಗೆ ಗಮನ ಕೊಡಬೇಕು ಎಂದ ಜಿಲ್ಲಾಧಿಕಾರಿಗಳು, ನೀರಿನ ತೊಂದರೆಯಾಗಿದೆ ಎಂದು ದೂರುಗಳು ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Vijayapura: ಇಡೀ ದಿನ ಕರೆಂಟ್‌ ಇಲ್ಲದೆ ಪರದಾಡಿದ ವಿಜಯಪುರ ಜನ!

ಕಾಲುವೆಗಳಲ್ಲಿ ಅನವಶ್ಯಕವಾಗಿ ನೀರು ಪೋಲಾಗಬಾರದು. ನೀರನ್ನು ಮನಸಿಗೆ ಬಂದಂತೆ ದುರುಪಯೋಗಪಡಿಸಿಕೊಳ್ಳುವುದು ಕೆಲವು ಕಡೆಗಳಲ್ಲಿ ವರದಿಯಾಗಿದೆ. ಇದು ತಪ್ಪಬೇಕು. ಇದು ಬೇಸಿಗೆಯ ಅವಧಿ. ನೀರಿನ ಅವಶ್ಯಕತೆ ತುಂಬಾ ಇದ್ದು, ಇದನ್ನರಿತು ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಜನರಲ್ಲಿ ಮನವರಿಕೆ ಮಾಡಬೇಕು ಎಂದರು.

ಕೆರೆ ತುಂಬಿಸಲು ಕಟ್ಟುನಿಟ್ಟಿನ ಆದೇಶ

ವಿಜಯಪುರ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಲುವಾಗಿ ಯಂಕಂಚಿ ಕೆರೆ, ಬಳಗಾನೂರ ಕೆರೆ, ಸಂಗೋಗಿ ಕೆರೆ ಹಾಗೂ ಲೋನಿ ಕೆರೆ(Lake) ತುಂಬಿಸಲು ಇದೆ ವೇಳೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಮಾಡಿದರು. ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮೇ ಅಂತ್ಯದವರೆಗೆ ಅತ್ಯಂತ ಜವಾಬ್ದಾರಿಯುತವಾಗಿ ನಡೆಸಿ ನೀರಿನ ಅಪವ್ಯಯ ಆಗದಂತೆ ಕ್ರಮ ವಹಿಸಬೇಕು. ಈ ವಿಷಯದಲ್ಲಿ ಏನಾದರೂ ಸಮಸ್ಯೆಗಳಾದರೆ ತಮ್ಮ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
 

click me!