Cylinder Explosion: ಅಕ್ರಮ ಗ್ಯಾಸ್‌ ರೀಫಿಲ್ಲಿಂಗ್‌ ವೇಳೆ ಸಿಲಿಂಡರ್‌ ಸ್ಫೋಟ

By Kannadaprabha NewsFirst Published Jan 9, 2022, 6:58 AM IST
Highlights

*  ಪ್ರೆಸ್ಟೀಜ್‌ ನಿರ್ಮಿಸುತ್ತಿರುವ ಮಾಲ್‌ನಲ್ಲಿ ಥರ್ಮಕೋಲ್‌ಗ ಬೆಂಕಿ ತಗುಲಿ ಅವಘಡ
*  ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಆಗಿಲ್ಲ
*  ಗ್ಯಾಸ್‌ ಏಜೆನ್ಸಿ ಮಾಲೀಕನ ವಿರುದ್ಧ ಎಫ್‌ಐಆರ್‌
 

ಬೆಂಗಳೂರು(ಜ.09): ಮನೆ ವರಾಂಡದಲ್ಲಿ ಅಕ್ರಮವಾಗಿ ದೊಡ್ಡ ಸಿಲಿಂಡರ್‌ನಿಂದ(Cylinder) ಸಿಲಿಂಡರ್‌ಗೆ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುವಾಗ ಗ್ಯಾಸ್‌ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡಿರುವ(Explosion) ಘಟನೆ ಶನಿವಾರ ಗೋವಿಂದರಾಜನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮೂಡಲಪಾಳ್ಯದ ಪಂಚಶೀಲನಗರದ ಬೆಟ್ಟಯ್ಯ ಎಂಬುವವರ ಮನೆಯಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಬೆಟ್ಟಯ್ಯ ಪುತ್ರ ವಿನಯ್‌(30) ಹಾಗೂ ಕೆಲಸಗಾರ ಕುಮಾರ್‌(28) ಎಂಬುವವರು ಗಾಯಗೊಂಡಿದ್ದು(Injured), ಚಿಕಿತ್ಸೆಗಾಗಿ(Treatment) ಆಸ್ಪತ್ರೆಗೆ(Hospital) ದಾಖಲಿಸಲಾಗಿದೆ. ಸ್ಫೋಟದಿಂದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ದ್ವಿಚಕ್ರ ವಾಹನವೊಂದು ಸುಟ್ಟು ಕರಕಲಾಗಿದೆ. ಮನೆಯ ಕಿಟಿಕಿ, ಗೋಡೆ ಹಾಗೂ ಮನೆಯ ವಸ್ತುಗಳಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Dhabha Set on Fire: ಬಿಲ್‌ ಕೇಳಿದ್ದಕ್ಕೆ ಡಾಬಾಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು!

ಬೆಟ್ಟಯ್ಯ ಅವರು ಭಾರತ್‌ ಭವಾನಿ ಗ್ಯಾಸ್‌ ಏಜೆನ್ಸಿ(Bharat Bhawani Gas Agency) ನಡೆಸುತ್ತಿದ್ದರು. ಮಧಾಹ್ನ 12 ಗಂಟೆ ಸುಮಾರಿಗೆ ಮನೆಯ ವರಾಂಡದಲ್ಲಿ ಬೆಟ್ಟಯ್ಯ ಪುತ್ರ ವಿನಯ್‌ ದೊಡ್ಡ ಸಿಲಿಂಡರ್‌ನಿಂದ ಸಣ್ಣ ಸಿಲಿಂಡರ್‌ಗೆ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುವಾಗ ಗ್ಯಾಸ್‌ ಸೋರಿಕೆಯಾಗಿ ಸಿಲಿಂಡರ್‌ ಸ್ಫೋಟಗೊಂಡಿದೆ. ಅವಘಡದ ವಿಚಾರ ತಿಳಿದ ತಕ್ಷಣ ಅಗ್ನಿಶಾಮಕ ಸಿಬ್ಬಂದಿ(Fire Department) ಹಾಗೂ ಪೊಲೀಸರು(Police) ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಗ್ಯಾಸ್‌ ಏಜೆನ್ಸಿಯ ಮಾಲೀಕ ಬೆಟ್ಟಯ್ಯ ಮನೆಯ ಗೋದಾಮಿನಲ್ಲಿ 20ಕ್ಕೂ ಅಧಿಕ ಗ್ಯಾಸ್‌ ಸಿಲಿಂಡರ್‌ ಸಂಗ್ರಹಿಸಿದ್ದರು. ಗ್ಯಾಸ್‌ ರೀಫಿಲ್ಲಿಂಗ್‌ ವೇಳೆ ಒಂದು ಸಿಲಿಂಡರ್‌ ಸ್ಫೋಟಗೊಂಡಿದೆ. ಒಂದು ವೇಳೆ ಇತರೆ ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರೆ, ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಬೆಟ್ಟಯ್ಯ ಅಕ್ರಮವಾಗಿ ಗ್ಯಾಸ್‌ ರೀಫಿಲ್ಲಿಂಗ್‌ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಬೆಟ್ಟಯ್ಯ ವಿರುದ್ಧ ಎಫ್‌ಐಆರ್‌(FIR) ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Bengaluru Crime: ಬಾರ್‌ಗೆ ಬೆಂಕಿ ಹಚ್ಚಲು ಬಂದವರು ಅಮಲಲ್ಲಿ ಕಾಂಡಿಮೆಂಟ್ಸ್‌ ಸುಟ್ಟರು

ನಿರ್ಮಾಣ ಹಂತದ ಕಟ್ಟಡದಲ್ಲಿ ಅಗ್ನಿ ಅವಘಡ: ದಟ್ಟಹೊಗೆ, ಆತಂಕ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡವೊಂದರ ಮೂರನೇ ಮಹಡಿಯಲ್ಲಿ ದಿಢೀರ್‌ ಬೆಂಕಿ(Fire), ದಟ್ಟಹೊಗೆ ಕಾಣಿಸಿಕೊಂಡು ಭಾರೀ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್‌ ಬಳಿ ‘ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ’ಗೆ(Prestige Falcon City)ಹೊಂದಿಕೊಂಡಂತೆ ಪ್ರೆಸ್ಟೀಜ್‌ ಕಂಪನಿ(Prestige Company) ನಿರ್ಮಿಸುತ್ತಿರುವ ಮಾಲ್‌ನ ಮೂರನೇ ಮಹಡಿಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ. ಅವಘಡದಲ್ಲಿ ಕೆಲವಸ್ತುಗಳು ಹಾನಿಯಾಗಿವೆ, ಯಾವುದೇ ಪ್ರಾಣಿಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲ್‌ನ ಮೂರನೇ ಮಹಡಿಯಲ್ಲಿ ಥಿಯೇಟರ್‌ ನಿರ್ಮಿಸಲಾಗುತ್ತಿದೆ. ಸೌಂಡ್‌ ವ್ಯವಸ್ಥೆಗಾಗಿ ಗೋಡೆಗಳಿಗೆ ಥರ್ಮಕೋಲ್‌ ಅಳವಡಿಸಲಾಗಿದೆ. ಮಧ್ಯಾಹ್ನ ಈ ಥರ್ಮಕೋಲ್‌ಗೆ ಬೆಂಕಿ ತಗುಲಿದೆ, ನಂತರ ದಟ್ಟಹೊಗೆ ಕಾಣಿಸಿಕೊಂಡು ಬೆಂಕಿ ಹೆಚ್ಚಾಗಿದೆ. ತಕ್ಷಣ ಕಾರ್ಮಿಕರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗೋಡೆಗಳಿಗೆ ಥರ್ಮಕೋಲ್‌ ಅಳವಡಿಸಿದ್ದರಿಂದ ಬೆಂಕಿ ವ್ಯಾಪಿಸಿ ಭಾರೀ ಪ್ರಮಾಣದ ಹೊಗೆ ತುಂಬಿಕೊಂಡಿತ್ತು. ಘಟನೆ ವೇಳೆ ಕಟ್ಟಡದಲ್ಲಿ ಯಾವುದೇ ಕಾರ್ಮಿಕರು ಇರಲಿಲ್ಲ. ಹೀಗಾಗಿ ಭಾರೀ ಅನಾಹುತ ತಪ್ಪಿದೆ.

ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ಹಾಗೂ ಕೋಣನಕುಂಟೆ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ವೆಲ್ಡಿಂಗ್‌ ಮಾಡುವಾಗ ಬೆಂಕಿ ಕಿಡಿ ಥರ್ಮಕೋಲ್‌ಗೆ ತಾಕಿರಬಹುದು ಇಲ್ಲವೇ ಶಾರ್ಟ್‌ ಸರ್ಕಿಟ್‌ನಿಂದಲೂ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನಿರ್ಮಾಣ ಹಂತದ ಈ ಕಟ್ಟಡದಲ್ಲಿ ಅಗ್ನಿಶಾಮಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ತನಿಖೆಯಿಂದ ಬೆಳಕಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!