Chamarajanagar: ಕ್ರಷರ್‌ ತ್ಯಾಜ್ಯ ಘಟಕವಾದ ಹೆದ್ದಾರಿ: ಪರಿಸರ ಇಲಾಖೆ ಮೌನ

By Govindaraj SFirst Published Dec 31, 2022, 7:39 PM IST
Highlights

ಕ್ರಷ​ರ್ಸ್‌ಗಳಲ್ಲಿನ ಅನುಪಯುಕ್ತ ವಸ್ತುಗಳನ್ನು ಸರ್ಕಾರಿ ಜಾಗದಲ್ಲಿ ಹಾಕದಂತೆ ಷರತ್ತು ಇದ್ದರೂ ತಾಲೂಕಿನ ಬೇಗೂರು ಭಾಗದ ಕ್ರಷ​ರ್‍ಸ್/ಕ್ವಾರಿ ಮಾಲೀಕರು ಮೈಸೂರು-ಊಟಿ ಹೆದ್ದಾರಿ ಬೇಗೂರು-ಹಿರೀಕಾಟಿ ತನಕ ಹೆದ್ದಾರಿ ಬದಿಯಲ್ಲಿ ಕ್ರಷರ್ಸ್‌ನ ಸ್ಲರಿ ಸುರಿದಿದ್ದು ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ತೊಂದರೆಯಾಗುತ್ತಿದೆ. 

ಗುಂಡ್ಲುಪೇಟೆ (ಡಿ.31): ಕ್ರಷ​ರ್ಸ್‌ಗಳಲ್ಲಿನ ಅನುಪಯುಕ್ತ ವಸ್ತುಗಳನ್ನು ಸರ್ಕಾರಿ ಜಾಗದಲ್ಲಿ ಹಾಕದಂತೆ ಷರತ್ತು ಇದ್ದರೂ ತಾಲೂಕಿನ ಬೇಗೂರು ಭಾಗದ ಕ್ರಷ​ರ್‍ಸ್/ಕ್ವಾರಿ ಮಾಲೀಕರು ಮೈಸೂರು-ಊಟಿ ಹೆದ್ದಾರಿ ಬೇಗೂರು-ಹಿರೀಕಾಟಿ ತನಕ ಹೆದ್ದಾರಿ ಬದಿಯಲ್ಲಿ ಕ್ರಷರ್ಸ್‌ನ ಸ್ಲರಿ ಸುರಿದಿದ್ದು ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ಜನರಿಗೆ ತೊಂದರೆಯಾಗುತ್ತಿದೆ. ಪರಿಸರ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಷರತ್ತುಗಳನ್ನು ಕ್ರಷ​ರ್‍ಸ್ನ ಕೆಲ ಮಾಲೀಕರು ಉಲ್ಲಂಘಿಸಿ ಜನರು ಹಾಗೂ ವಾಹನ ಸವಾರರಿಗೆ ತೊಂದರೆ ಕೊಡುತ್ತಿದ್ದರೂ ಜಿಲ್ಲಾಡಳಿತ ಏನು ಗೊತ್ತಿಲ್ಲದಂತೆ ವರ್ತಿಸುತ್ತಿದೆ ಎಂದು ಜನರು ದೂರಿದ್ದಾರೆ.

ತಾಲೂಕಿನ ಬೇಗೂರು ಬಳಿಯ ಮರಳಿಹಳ್ಳದ ಬಳಿಯಿಂದ ತಾಲೂಕಿನ ಹಿರೀಕಾಟಿ ಗಡಿಯ ತನಕ ಮೈಸೂರು-ಊಟಿ ಹೆದ್ದಾರಿ ಬದಿಯಲ್ಲಿ ಎಂ ಸ್ಯಾಂಡ್‌ನ ಸ್ಲರಿ(ತ್ಯಾಜ್ಯ) ಸುರಿದಿದ್ದಾರೆ. ತಾಲೂಕಿನ ಕೆಲ ಕ್ರಷ​ರ್‍ಸ್ಗಳ ಮಾಲೀಕರು ಸ್ಲರಿ(ತ್ಯಾಜ್ಯ) ಸುರಿಯಲು ತ್ಯಾಜ್ಯ ಘಟಕಗಳಿಗೆ ಸ್ಥಳ ನಿಗದಿಪಡಿಸಿಲ್ಲ. ತಮ್ಮ ಟಿಪ್ಪರ್‌ಗಳ ಮೂಲಕ ಹೆದ್ದಾರಿಯ ಬದಿ ಹಾಗೂ ಹಳ್ಳಗಳಲ್ಲಿ ಸುರಿದು ಕೈ ತೊಳೆದುಕೊಳ್ಳುತ್ತಿದ್ದಾರೆ. ಹೆದ್ದಾರಿಯಲ್ಲಿ ನೂರಾರು ಲಾರಿ, ಟಿಪ್ಪರ್‌, ಬಸ್‌, ಟ್ರಕ್‌ಗಳು ಸಂಚರಿಸುವುದರಿಂದ ವಾಹನಗಳ ತೆರಳುವ ರಭಸ ಹಾಗೂ ಗಾಳಿಗೆ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸ್ಲರಿಯ ಧೂಳು ಕಣ್ಣಿಗೆ ಹಾಗು ದೇಹಕ್ಕೆ ತಾಗಿ ತೊಂದರೆಯಾಗುತ್ತಿದೆ.

ಕಾಂಗ್ರೆಸ್‌ ಭ್ರಷ್ಟಾಚಾರಿಗಳ, ಭಯೋತ್ಪಾದಕರ ಪಕ್ಷ: ನಳಿನ್‌ ಕುಮಾರ್‌ ಕಟೀಲ್‌

ಎಂ ಸ್ಯಾಂಡ್‌ ಘಟಕಗಳಲ್ಲೆ ತ್ಯಾಜ್ಯ ಸಂಗ್ರಹಿಸಲು ಜಾಗ ಮೀಸಲಿಡದ ಕಾರಣ ಹೆದ್ದಾರಿ ಹಾಗು ರಸ್ತೆ ಬದಿಗಳಲ್ಲಿ ಈ ಸ್ಲರಿ ಸುರಿದು ಹೋಗುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಜಾಣ ಮೌನ ವಹಿಸಿದೆ. ರಸ್ತೆ ಬದಿಯ ಸ್ಲರಿಯ ಧೂಳು ಒಂದು ಕಡೆಯಾದರೆ, ಇನ್ನು ಹೆದ್ದಾರಿಯಲ್ಲಿ ಸಂಚರಿಸುವ ಕಲ್ಲು(ಬೋಡ್ರಸ್‌) ತುಂಬಿದ ಟಿಪ್ಪರ್‌ಗಳು ಹೊದಿಕೆ ಹಾಕದೆ ಹೋಗುವುದರಿಂದಲೂ ಧೂಳು ಹಾರುತ್ತಿದೆ. ಜಿಲ್ಲಾಧಿಕಾರಿಗಳು ಇನ್ನಾದರೂ ಬೇಗೂರು-ಹಿರೀಕಾಟಿ ಹೆದ್ದಾರಿಯ ಬದಿಯಲ್ಲಿ ಅಕ್ರಮವಾಗಿ ಸುರಿದಿರುವ ಸ್ಲರಿ ಬಗ್ಗೆ ಟಿಪ್ಪರ್‌ ಗಳ ಹಾವಳಿಯ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ,ಸ್ಲರಿ ಸುರಿದ ಕ್ರಷ​ರ್‍ಸ್ ಗಳ ಮೇಲೆ ಕ್ರಮ ಜರುಗಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳೇ ನೀವೇ ನೋಡ ಬನ್ನಿ!: ಹೆದ್ದಾರಿ ಬದಿಯಲ್ಲಿ ಎಂ ಸ್ಯಾಂಡ್‌ ಸ್ಲರಿ(ತ್ಯಾಜ್ಯ) ಸುರಿದಿರುವುದನ್ನು ಜಿಲ್ಲಾಧಿಕಾರಿಗಳೇ ನೀವೇ ಬಂದು ನೋಡಿ ಎಂದು ಈ ರಸ್ತೆಯಲ್ಲಿ ಸಂಚರಿಸುವ ಕಾರು, ಬೈಕ್‌ ಸವಾರರು ಕೋರಿಕೊಂಡಿದ್ದಾರೆ. ಹೆದ್ದಾರಿಯ ಬದಿಯ ಧೂಳು ಬರುತ್ತಿದೆ ಜೊತೆಗೆ ಹೆದ್ದಾರಿಯಲ್ಲಿ ಟಿಪ್ಪರ್‌ಗಳಲ್ಲಿ ಹೊದಿಕೆ ಇಲ್ಲದೆ ತೆರಳುತ್ತಿರುವ ಟಿಪ್ಪರ್‌ಗಳಿಂದಲೂ ದೂರು ಬರುತ್ತಿದೆ ಈ ಬಗ್ಗೆ ಸಂಬಂಧ ಇಲಾಖೆ ಏನು ಮಾಡುತ್ತಿಲ್ಲ. ಗುಂಡ್ಲುಪೇಟೆ,ಬೇಗೂರು, ತೆರಕಣಾಂಬಿ ಠಾಣಾ ವ್ಯಾಪ್ತಿಯ ರಸ್ತೆಗಳಲ್ಲಿ ಹಾಗು ಬೇಗೂರು ಹಾಗು ತೆರಕಣಾಂಬಿ ಪೊಲೀಸ್‌ ಠಾಣೆಯ ಮುಂದೆ ಓವರ್‌ ಲೋಡ್‌ ಕಲ್ಲು ಹಾಗೂ ಎಂ.ಸ್ಯಾಂಡ್‌, ಜಲ್ಲಿ ಸಾಗಾಣಿಕೆ ಆಗುತ್ತಿದೆ. ಆದರೂ ಸ್ಥಳೀಯ ಪೊಲೀಸರು ತುಟಿ ಬಿಚ್ಚುತ್ತಿಲ್ಲ. ಈ ಸಂಬಂಧ ಜನರು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತಿದ್ದರೂ ಅಧಿಕಾರಿಗಳ ತಮಗೆ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಬೈಕ್‌ ಸವಾರ ವೆಂಕಟೇಶ್‌ ಆರೋಪಿಸಿದ್ದಾರೆ.

Chamarajanagar: ಮಡಹಳ್ಳಿ ದುರಂತ ಬಳಿಕವೂ ಷರತ್ತಿನಂತೆ ಗಣಿಗಾರಿಕೆ ನಡೆಯುತ್ತಿಲ್ಲ!

‘ಹೆದ್ದಾರಿ ಬದಿಯಲ್ಲಿ ಎಂ ಸ್ಯಾಂಡ್‌ ಸ್ಲರಿ(ತ್ಯಾಜ್ಯ)ಯನ್ನು ಘಟಕಗಳ ಮಾಲೀಕರು ಅಕ್ರಮವಾಗಿ ಸುರಿಯುತ್ತಿದ್ದಾರೆ ಹಾಗೂ ಟಿಪ್ಪರ್‌ಗಳಲ್ಲಿ ಕಲ್ಲು ಸಾಗಿಸುವಾಗ ಸುರಕ್ಷತಾ ಕ್ರಮ ಪಾಲಿಸಲ್ಲ. ಈ ಬಗ್ಗೆ ಪೊಲೀಸರು ಕ್ರಮ ಜರುಗಿಸಲು ಅವಕಾಶವಿದೆ. ಆದರೂ ಕ್ರಮಕ್ಕೆ ಮುಂದಾಗುತ್ತಿಲ್ಲ.
-ರಾಜು, ವಾಹನ ಸವಾರ, ಗುಂಡ್ಲುಪೇಟೆ

click me!