Uttara Kannada| ಅಕಾಲಿಕ ಮಳೆಗೆ ನೀರುಪಾಲಾದ ಬೆಳೆ, ಕಂಗಾಲಾದ ಅನ್ನದಾತ..!

By Kannadaprabha NewsFirst Published Nov 16, 2021, 11:04 AM IST
Highlights

*   ಕೈಗೆ ಬಂದ ತುತ್ತು ಕಳೆದುಕೊಂಡ ರೈತರು, ಜಿಲ್ಲೆಯ ಹಲವೆಡೆ ಮಳೆ
*  ಸಿಡಿಲು ಬಡಿದು ಮನೆಗೆ ಹಾನಿ
*  ಸಿದ್ದಾಪುರದಲ್ಲಿ ಮುಳುಗಿದ ಬತ್ತ

ಕಾರವಾರ(ನ.16): ಉತ್ತರಕನ್ನಡ(Uttara Kannada) ಜಿಲ್ಲೆಯಲ್ಲಿ ಭಾನುವಾರ ಹಾಗೂ ಸೋಮವಾರ ಸುರಿದ ಅಕಾಲಿಕ ಮಳೆ ರೈತರನ್ನು ಸಂಕಷ್ಟಕ್ಕೆ ನೂಕಿದ್ದು, ಜಿಲ್ಲೆಯ ಕರಾವಳಿ ಭಾಗದಲ್ಲಿ ಕೊಯ್ಲಾದ ಬತ್ತದ ಬೆಳೆ ಸಂಪೂರ್ಣ ಮಳೆ ನೀರಿಗೆ ಸಿಕ್ಕಿ ಹಾನಿಯಾಗಿದೆ.

ಕಳೆದ ಮೂರು ದಿನಗಳಿಂದ ಮೋಡ ಕವಿದ(Cloudy) ವಾತಾವರಣವಿದ್ದ ಜಿಲ್ಲೆಯಲ್ಲಿ ಭಾನುವಾರ ಮಧ್ಯಾಹ್ನದ ಬಳಿಕ ಜಿಲ್ಲೆಯಾದ್ಯಂತ ಗುಡುಗು-ಸಿಡಿಲು ಸಹಿತ ಭಾರಿ ಮಳೆಯಾಗಿತ್ತು(Rain). ತಡರಾತ್ರಿವರೆಗೆ ಸುರಿದ ಅಕಾಲಿಕ ಮಳೆ(Premature Rain) ಸೋಮವಾರ ಮುಂಜಾನೆ ಕೂಡ ಶಿರಸಿ, ಸಿದ್ದಾಪುರ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ರೈತರು(Farmers) ಜನಸಂಕಷ್ಟಕ್ಕೆ ಸಿಲುಕುವಂತಾಗಿದೆ. ಸೋಮವಾರ ಸಂಜೆ ಕಾರವಾರ(Karwar), ಅಂಕೋಲಾ ಮತ್ತಿತರ ಕಡೆಗಳಲ್ಲಿ ಭಾರಿ ಮಳೆಯಾಗಿದೆ.

ಅದರಲ್ಲಿಯೂ ಕರಾವಳಿಯ(Coastal) ಅಂಕೋಲಾ(Ankola), ಹೊನ್ನಾವರ(Honnavara), ಕುಮಟಾ(Kumta) ಭಾಗದಲ್ಲಿ ಬತ್ತದ ಬೆಳೆ(Paddy Crop) ಬೆಳೆದು ನಿಂತಿದ್ದು ಬಹುತೇಕರು ಕೊಯ್ಲು ಸಹ ಪ್ರಾರಂಭಿಸಿದ್ದರು. ಆದರೆ ಭಾನುವಾರ ಹಾಗೂ ಸೋಮವಾರ ಸುರಿದ ಮಳೆಯಿಂದಾಗಿ ಎಲ್ಲವೂ ನೀರು ಪಾಲಾಗಿದೆ. ಗೋಕರ್ಣದ ಗಂಗೆಕೊಳ್ಳದಲ್ಲಿ ರೈತರೊಬ್ಬರು ಎರಡು ದಿನ ಕೊಯ್ದು ಗದ್ದೆಯಲ್ಲಿ ಬಿಟ್ಟಿದ್ದ ಬತ್ತದ ಪೈರು ಸಂಪೂರ್ಣ ಮಳೆ ನೀರಿನಲ್ಲಿ ಮುಳುಗಿ ತೇಲಲಾರಂಭಿಸಿದೆ. ಇದೀಗ ಮಳೆ ಕಡಿಮೆಯಾದ ಕಾರಣ ನೀರಿನಲ್ಲಿರುವ ಪೈರು ರಕ್ಷಣೆಗೆ ಮುಂದಾಗಿರುವ ರೈತರು ಅವುಗಳನ್ನು ನೀರಿನಿಂದ ಮೇಲೆತ್ತಿ ಒಣಗಿಸಲು ಹರಸಾಹಸ ಪಡುತ್ತಿದ್ದಾರೆ. ಕೈಗೆ ಬಂದ ಬೆಳೆ ಕೊನೆ ಗಳಿಗೆಯಲ್ಲಿ ನೀರು ಪಾಲಾಗಿ ಬೆಳೆ ಹಾನಿಯಾಗಿದ್ದು, ಸರ್ಕಾರ(Government of Karnataka) ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ(Compensation) ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರೈತರಿಗೆ ಬೆಳೆ ಕಳೆದುಕೊಳ್ಳುವ ಆತಂಕ : ಸಾಂಕ್ರಾಮಿಕ ರೋಗಗ ಭೀತಿ

ಮಳೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಳೆ ಮುಗಿಯಲಿ ಎಂದು ಕೆಲ ರೈತರು ಕೊಯ್ಲನ್ನೆ ಮುಂದೂಡುತ್ತಿದ್ದಾರೆ. ಆದರೆ ಬತ್ತದ ತೆನೆಗಳು ನೆಲಕ್ಕೊರಗಿ ನೀರಿನಲ್ಲಿ ಮುಳುಗುತ್ತಿವೆ.

ಮಳೆಯಿಂದ ಕೊಯ್ದ ಬತ್ತದ ಬೆಳೆ ನಾಶವಾಗಿದೆ. ಮತ್ತೂ ಮಳೆ ಬರುವ ಆತಂಕ ಇದೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಅಂತ ಕುಮಟಾ- ರೈತ ಮಾದೇವ ಗೌಡ ತಿಳಿಸಿದ್ದಾರೆ. 

ಬೆಳೆ ಹಾನಿ ಆದವರಿಂದ ಅರ್ಜಿ ಸ್ವೀಕರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಬತ್ತದ ಕೊಯ್ಲಿನ ಸಂದರ್ಭದಲ್ಲಿ ಮಳೆಯಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೌಡ ಹೇಳಿದ್ದಾರೆ. 
ಸಿದ್ದಾಪುರದಲ್ಲಿ ಮುಳುಗಿದ ಬತ್ತ

ಸಿದ್ದಾಪುರ(Siddapur): ತಾಲೂಕಿನಲ್ಲಿ ಮುಂದುವರಿದ ಮಳೆಯಿಂದ ಅಪಾರ ನಷ್ಟ ಉಂಟಾಗುತ್ತಿದೆ. ಕಟಾವು ಮಾಡಿದ ಬತ್ತದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.

ಗದ್ದೆಗಳಲ್ಲಿ ನೀರು ಹೊರಹಾಕಲು ರೈತರು ಹರಸಾಹಸ ಮಾಡುತ್ತಿದ್ದಾರೆ. ಬತ್ತ ಹಾಳಾಗುವ ಜತೆಗೆ ಹುಲ್ಲು ಸಿಗದಂತಾಗಿದೆ. ಗದ್ದೆಯಲ್ಲಿನ(Land) ನೀರು(Water) ಹೊರಹೋಗಲು ದಾರಿ ಮಾಡಿಕೊಡುತ್ತಿದ್ದಾರೆ. ಐಗೋಡಿನಲ್ಲಿ ತಿಮ್ಮ ಕೆರಿಯ ನಾಯ್ಕ, ಜಗದೀಶ್‌ ದ್ಯಾವ ನಾಯ್ಕ ಅವರ ಗದ್ದೆಗಳಲ್ಲಿ ನೀರು ತುಂಬಿದ್ದು, ಬತ್ತ ಹಾಗೂ ಹುಲ್ಲು ಸಂಪೂರ್ಣ ಹಾಳಾಗಿದೆ. ಮಳೆ ಭಾನುವಾರವೂ ನಿಂತಿಲ್ಲ. ಬಿಸಿಲು ಕಾಣಲು ಸಾಧ್ಯವಾಗುತ್ತಿಲ್ಲ. ಅದರಿಂದ ರೈತರು ಕಂಗಾಲಾಗಿದ್ದಾರೆ. ಹಂಗಾಮು ಪೂರ್ತಿ ದುಡಿದದ್ದು ವ್ಯರ್ಥವಾಗಿದೆ ಎಂದು ಮರುಗುತ್ತಿದ್ದಾರೆ. ಸರ್ಕಾರ ಪರಿಹಾರ ನೀಡಿ ರೈತರನ್ನು ಉಳಿಸುವ ಕೆಲಸ ಮಾಡಬೇಕಿದೆ.

ಭಟ್ಕಳದಲ್ಲಿ ಮಳೆ ಜೋರು

ಭಟ್ಕಳ(Bhatkal): ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಸೋಮವಾರದ ತುಳಸಿ ಪೂಜೆಗೂ ತೊಂದರೆ ಉಂಟಾಯಿತು.

ಭಾನುವಾರ ಮತ್ತು ಸೋಮವಾರ ತಾಲೂಕಿನಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆ ಸುರಿದಿದ್ದು, ಎಲ್ಲೆಡೆ ಬತ್ತದ ಬೆಳೆ ಕೊಯ್ಲು ಆರಂಭವಾಗಿರುವುದರಿಂದ ತೊಂದರೆ ಉಂಟಾಗಿದೆ. ಮಳೆಯಿಂದಾಗಿ ಜಾನುವಾರು ಮೇವು ಆದ ಕರಡ (ಹುಲ್ಲು) ಒದ್ದೆಯಾಗಿದೆ. ಈ ಸಮಯದಲ್ಲಿ ಮಳೆ ಬಂದಿರುವುದರಿಂದ ಎಲ್ಲರಿಗೂ ಒಂದಲ್ಲದೊಂದು ತೊಂದರೆ ಉಂಟಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಸೋಮವಾರದ ತುಳಸಿ ಪೂಜೆ ಸಂಭ್ರಮಕ್ಕೂ ಮಳೆ ತೊಂದರೆಯನ್ನುಂಟು ಮಾಡಿದೆ. ಸಂಜೆ ಒಂದು ತಾಸಿಗೂ ಅಧಿಕ ಮಳೆ ಸುರಿದಿದ್ದರಿಂದ ಹಬ್ಬದ ಖರೀದಿಗೆ ಹಿನ್ನಡೆ ಉಂಟಾಯಿತು. ಗುಡುಗು ಮಿಂಚಿನೊಂದಿಗೆ ಮಳೆ ಬಂದಿದ್ದರಿಂದ ವಿದ್ಯುತ್‌(Electricity) ಕಣ್ಣಾಮುಚ್ಚಾಲೆ ಆಟವೂ ಶುರುವಾಗಿತ್ತು.

Bengaluru| ಮಳೆ-ಚಳಿ ಜುಗಲ್‌ ಬಂಧಿ, ಐಟಿ ಸಿಟೀಲಿ ಮಲ್ನಾಡ್‌ ಹವೆ..!

ವಿದ್ಯುತ್‌ ವ್ಯತ್ಯಯ

ಕಾರವಾರ: ಕಾರವಾರ, ಭಟ್ಕಳಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆ ಸುರಿದ ಪರಿಣಾಮ ಹಲವೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಅಂಕೋಲಾ, ಕುಮಟಾ ಹಾಗೂ ಹೊನ್ನಾವರದ ಕೆಲವೆಡೆಯೂ ಮಳೆ ಸುರಿದಿದೆ. ಕುಮಟಾದ ಕೆಲವೆಡೆ ಹಾಗೂ ಶಿರಸಿಯಲ್ಲಿ ಭಾನುವಾರ ಭಾರಿ ಮಳೆ ಸುರಿದಿತ್ತು. ಮಳೆಯಿಂದಾಗಿ ಕಾರವಾರ ನಗರ ಸೇರಿದಂತೆ ಕೆಲವೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಹಠಾತ್‌ ಮಳೆಯಿಂದ ಜನಸಂಚಾರಕ್ಕೂ ತೊಂದರೆ ಉಂಟಾಯಿತು. ನಗರಕ್ಕೆ ಬಂದಿದ್ದ ಜನತೆ ಸೂರು ಸಿಕ್ಕಲ್ಲಿ ಆಶ್ರಯ ಪಡೆದರು

ಸಿಡಿಲು ಬಡಿದು ಮನೆಗೆ ಹಾನಿ

ಕುಮಟಾ: ಭಾನುವಾರ ರಾತ್ರಿ ಸಿಡಿಲು(Lightning Strike) ಬಡಿದು ತಾಲೂಕಿನ ಯಲವಳ್ಳಿಯ ಮನೆಯಲ್ಲಿದ್ದ ವಸ್ತುಗಳು ಸುಟ್ಟುಹೋಗಿವೆ. ನಾಗರಾಜ ಮಡಿವಾಳ ಹೊಸಮನೆ ಅವರ ನಿವಾಸಕ್ಕೆ ಸಿಡಿಲೆರಗಿ ಟಿವಿ ಮತ್ತಿತರ ಉಪಕರಣಗಳು ಸುಟ್ಟುಹೋಗಿವೆ. ಮನೆಯವರು ಹೊರಗಡೆ ಇದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.
 

click me!