ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸಿ: ಹೊರಟ್ಟಿ

By Kannadaprabha NewsFirst Published Sep 11, 2022, 10:30 PM IST
Highlights

ಗಣಿಧಣಿಗಳ ಕೆಟ್ಟಕಣ್ಣು ಕಪ್ಪತ್ತಗುಡ್ಡದ ಮೇಲೆ ಮತ್ತೆ ಬೀಳುವ ಮೂಲಕ ಗಣಿಗಾರಿಕೆ ನಡೆಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ಆಸೆ ಆಮಿಷಗಳಿಗೆ ಬಲಿಯಾಗದೇ ಸರ್ಕಾರವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು: ಬಸವರಾಜ ಹೊರಟ್ಟಿ 

ಹುಬ್ಬಳ್ಳಿ/ಗದಗ(ಸೆ.11): ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಿಸಿಕೊಳ್ಳುವ ಕಪ್ಪತ್ತಗುಡ್ಡಕ್ಕೆ ಮತ್ತೆ ಕಂಟಕ ಎದುರಾಗಿದೆ. ಹೀಗಾಗಿ ಇದರ ಸಂರಕ್ಷಣೆಗೆ ವಿಶೇಷ ಕಾರ್ಯಪಡೆ ರಚಿಸುವ ಮೂಲಕ ಮುಖ್ಯಮಂತ್ರಿ ದಿಟ್ಟಕ್ರಮಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗೆ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಗಣಿಧಣಿಗಳ ಕೆಟ್ಟಕಣ್ಣು ಕಪ್ಪತ್ತಗುಡ್ಡದ ಮೇಲೆ ಮತ್ತೆ ಬೀಳುವ ಮೂಲಕ ಗಣಿಗಾರಿಕೆ ನಡೆಸಲು ಸಲ್ಲಿಸಿರುವ ಪ್ರಸ್ತಾವನೆಯನ್ನು ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ, ಆಸೆ ಆಮಿಷಗಳಿಗೆ ಬಲಿಯಾಗದೇ ಸರ್ಕಾರವು ನಿರ್ದಾಕ್ಷಿಣ್ಯವಾಗಿ ತಿರಸ್ಕರಿಸಬೇಕು. ಜತೆಗೆ ಕಪ್ಪತ್ತಗುಡ್ಡ ರಕ್ಷಿಸಲು, ಅಭಿವೃದ್ಧಿಗೆ ಪೂರಕ ಯೋಜನೆಯನ್ನು ಸರ್ಕಾರ ರೂಪಿಸಬೇಕು. ಪ್ರತಿವರ್ಷ ಕಾಡಿಗೆ ಬೆಂಕಿ ಬೀಳುತ್ತದೆ. ಪ್ರತಿಸಲವು ಕಾಡನ್ನು ಬೆಂಕಿಯಿಂದ ರಕ್ಷಿಸಲಾಗುತ್ತದೆ. ಅದೇ ರೀತಿ ಗಣಿಗಾರಿಕೆಯಿಂದ ರಕ್ಷಣೆ ಮಾಡಬೇಕು ಎಂದು ತಿಳಿಸಿದ್ದಾರೆ.

ಗದಗ: ಕಪ್ಪತ್ತಗುಡ್ಡದಿಂದ ಹರಿಯುತ್ತಿರುವ ಬಿಳಿದ್ರವ, ಆತಂಕ

ಕಪ್ಪತ್ತಗುಡ್ಡವನ್ನು ಪಶ್ಚಿಮ ಘಟ್ಟಗಳ ಸೆರಗು ಎನ್ನಲಾಗುತ್ತಿದೆ. ಪಶ್ಚಿಮ ಘಟ್ಟದ ರೀತಿಯಲ್ಲಿ ಇದನ್ನು ಸಂರಕ್ಷಿಸಬೇಕಾಗಿದೆ. ಇಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಖನಿಜ ಸಂಪತ್ತು ಇದೆ. ಸರ್ಕಾರವು ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮವೆಂದು ಘೋಷಿಸಿ 2019ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಸರ್ಕಾರ ಹಾಗೂ ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ವನ್ಯಜೀವಿಧಾಮದ 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶವಿಲ್ಲ. ಪರಿಸರದ ಸೂಕ್ಷ್ಮ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶಕೊಟ್ಟರೆ ವನ್ಯಜೀವಿ ಧಾಮದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳೇ ಹೇಳಿರುವುದು ಹಾಸ್ಯಾಸ್ಪದವಾಗಿದೆ ಎಂದು ಹೊರಟ್ಟಿಪತ್ರದಲ್ಲಿ ಹೇಳಿದ್ದಾರೆ.
 

click me!