Chikkamagaluru: ನಿವೇಶನಕ್ಕೆ ಆಗ್ರಹಿಸಿ ಸಿಪಿಐ ಧರಣಿ; ಅಪರ ಜಿಲ್ಲಾಧಿಕಾರಿಗೆ ಮನವಿ

By Ravi JanekalFirst Published Nov 30, 2022, 8:23 PM IST
Highlights

ನಿವೇಶನರಹಿತರಿಗೆ ನಿವೇಶನ ನೀಡಲು ಭೂಮಿ ಗುರುತಿಸಿ ಪಂಚಾಯಿತಿಗಳಿಗೆ ಕೊಡಬೇಕು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಉಳ್ಳವರಿಗೆ ನೀಡುವ ಬದಲು  ನಿವೇಶನ ರಹಿತರಿಗೆ ನಿವೇಶನ ಹಂಚಲು ಭೂಮಿಯನ್ನು ಕಾಯ್ದಿರಿಸಿ, ಮನೆಕಟ್ಟಿಸಿಕೊಡಬೇಕೆಂದು ಒತ್ತಾಯಿಸಲಾಯಿತು. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ನ.30): ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಮನೆ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ನಿವೇಶನ ರಹಿತರು ಸಿಪಿಐ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಆಜಾದ್ ವೃತ್ತದ ಬಳಿ ಧರಣಿ ನಡೆಸಿದರು. ಧರಣಿ ಬಳಿಕ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಸುವಂತೆ ಪ್ರತಿಭಟನಾ ನಿರತರು ಅಪರ ಜಿಲ್ಲಾಧಿಕಾರಿ ರೂಪ ಅವರಿಗೆ ಮನವಿ ಸಲ್ಲಿಸಿದರು. 

ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿ ಕಳಪೆ : ಆರೋಪ

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದು ಸ್ವಾತಂತ್ರ್ಯ ಸುವರ್ಣಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕೋಟ್ಯಂತರ ಕುಟುಂಬಗಳಿಗೆ ವಾಸಿಸಲು ಇನ್ನೂ ಸೂರು ಇಲ್ಲದೆ ಬದುಕು ನಡೆಸುತ್ತಿದ್ದಾರೆ. ರಾಜ್ಯದಲ್ಲೂ ಲಕ್ಷಾಂತರ ಜನರಿಗೆ ಸ್ವಂತ ನಿವೇಶನ ಮತ್ತು  ಮನೆಗಳಿಲ್ಲದೆ ಜೀವನ ಸಾಗಿಸಲಾಗುತ್ತಿದೆ. ನಿವೇಶನ ರಹಿತರಿಗೆ ಮನೆ ಕಟ್ಟಿಸಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ರೈತರಿಗೆ ಅನ್ಯಾಯವಾಗುವ ಕಾಯ್ದೆ ಜಾರಿಯಾಗಲು ಬಿಡಲ್ಲ: ಡಿ.ಕೆ.ಶಿವಕುಮಾರ್‌

 ಸಾವಿರಾರು ಜನರು ಗ್ರಾಮಪಂಚಾಯಿತಿ, ನಗರಸಭೆ, ಪುರಸಭೆ ಮತ್ತು ಪಟ್ಟಣಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಿ ನಿವೇಶನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ನಿವೇಶನ ನೀಡಲು ಭೂಮಿ ಇಲ್ಲವೆಂಬ ಸಬೂಬು ಹೇಳಲಾಗುತ್ತಿದೆ. ಆದರೆ ಕೈಗಾರಿಕೋದ್ಯಮಿಗಳಿಗೆ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಭೂಮಿ ನೀಡಲು ಭೂ ಬ್ಯಾಂಕ್‌ ಸ್ಥಾಪಿಸಲಾಗಿದೆ. ಖಾಸಗಿ ಟ್ರಸ್ಟ್ ಮತ್ತು ಸಂಸ್ಥೆಗಳಿಗೆ ಸರ್ಕಾರಿ ಭೂಮಿ ನೀಡುವುದರೊಂದಿಗೆ ರಾಜ್ಯಸರ್ಕಾರ ಕಾರ್ಪೋರೇಟ್ ಪರ, ಬಡವರ ವಿರೋಧಿ ಎಂಬುದನ್ನು ಸಾಬೀತುಪಡಿಸಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ಮಂದಿ ನಿವೇಶನರಹಿತರು ನಿವೇಶನಕ್ಕೆ ಅರ್ಜಿಸಲ್ಲಿಸಿದ್ದರೂ ನಗರಸಭೆ ನಿವೇಶನ ನೀಡಲು ಮುಂದಾಗಿಲ್ಲ, ಅಪಾರ್ಟ್ಮೆಂಟ್ ಮಾದರಿಯಲ್ಲಿ ಕಟ್ಟಡ ನಿರ್ಮಿಸುವುದಾಗಿ ಹೇಳಿದ್ದು, ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲವೆಂದು ಮನವಿಯಲ್ಲಿ ಆರೋಪಿಸಲಾಗಿದೆ. 

ಭೂಮಿ ಗುರುತು ಮಾಡುವ ಅಧಿಕಾರ ಪಂಚಾಯಿತಿಗಳಿಗೆ ನೀಡುವಂತೆ ಒತ್ತಾಯ 

ನಿವೇಶನರಹಿತರಿಗೆ ನಿವೇಶನ ನೀಡಲು ಭೂಮಿ ಗುರುತಿಸಿ ಪಂಚಾಯಿತಿಗಳಿಗೆ ಕೊಡಬೇಕು. ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಉಳ್ಳವರಿಗೆ ನೀಡುವ ಬದಲು  ನಿವೇಶನ ರಹಿತರಿಗೆ ನಿವೇಶನ ಹಂಚಲು ಭೂಮಿಯನ್ನು ಕಾಯ್ದಿರಿಸಿ, ಮನೆಕಟ್ಟಿಸಿಕೊಡಬೇಕೆಂದು ಒತ್ತಾಯಿಸಲಾಯಿತು. 

ಚಿಕ್ಕಮಗಳೂರು: ಅರಣ್ಯ ಇಲಾಖೆ ಕಾರ್ಯಾಚರಣೆ, ಕಾಡಾನೆ ಸೆರೆ

ಜಿಲ್ಲೆಯಲ್ಲಿ ಕಾಡುಪ್ರಾಣಿ ಮತ್ತು ಮನುಷ್ಯ ನಡುವೆ ಸಂಘರ್ಷ ಹೆಚ್ಚಿದ್ದು, ಹಲವರು ಪ್ರಾಣಕಳೆದುಕೊಂಡಿದ್ದಾರೆ. ಇದಕ್ಕೆ ರೈತರನ್ನು ಹೊಣೆ ಮಾಡದೆ ಕಾಡಿನೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಹಣ್ಣಿನಗಿಡ ಮತ್ತು ಬಿದಿರನ್ನು ಬೆಳೆಸಲು ಅಧಿಕಾರಿಗಳು ಮುಂದಾಗಬೇಕೆಂದು ಒತ್ತಾಯಿಸಿದರು. ನಗರಸಭೆ ಅಪಾರ್ಟ್‌ಮೆಂಟ್ ನಿರ್ಮಿಸುವುದನ್ನು ಕೈಬಿಟ್ಟು ನಿವೇಶನ ಹಂಚಿಕೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಬಸವರಾಜ್ ಮನವಿ ಸ್ವೀಕರಿಸಿ, ಸಮಸ್ಯೆ ಆಲಿಸಿದರು. ಸಿಪಿಐ ಜಿಲ್ಲಾಕಾರ್ಯದರ್ಶಿ ಎಸ್.ಎಲ್.ರಾಧಾಸುಂದರೇಶ್, ಜಿಲ್ಲಾ ಸಹಕಾರ್ಯದರ್ಶಿ ಜಿ.ರಘು, ಮುಖಂಡ ಎಸ್.ವಿಜಯಕುಮಾರ್, ಇದ್ದರು.

click me!