Kolara: ಹಸುಗಳಿಗೆ ಬೊಬ್ಬೆ ರೋಗ, ಹೈನುಗಾರಿಕೆ ನಂಬಿರುವ ಕುಟುಂಬಗಳಿಗೆ ಪೆಟ್ಟು!

Published : Dec 02, 2022, 09:28 PM IST
Kolara: ಹಸುಗಳಿಗೆ ಬೊಬ್ಬೆ ರೋಗ, ಹೈನುಗಾರಿಕೆ ನಂಬಿರುವ ಕುಟುಂಬಗಳಿಗೆ ಪೆಟ್ಟು!

ಸಾರಾಂಶ

ಕೋಲಾರ ಜಿಲ್ಲೆ ಅಂದ್ರೆ ಸಾಕು ಹಾಲು ಉತ್ಪಾದನೆಗೆ ಹೆಸರುವಾಸಿ, ದಿನಕ್ಕೆ ಲಕ್ಷಾಂತರ ಲೀಟರ್ ನಷ್ಟು ಹಾಲು ಇಲ್ಲಿಂದ ಉತ್ಪಾದನೆಯಾಗಿ ದೇಶದ ನಾನಾ ಕಡೆಗಳಿಗೆ ಸರಬರಾಜು ಆಗ್ತಿದೆ. ಆದರೆ ಕಳೆದ ಒಂದೂ ತಿಂಗಳಿನಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಹಸುಗಳಿಗೆ ವಿಚಿತ್ರ ಖಾಯಿಲೆಯೊಂದು ಕಾಣಿಸಿಕೊಂಡಿದ್ದು ರೈತರನ್ನು, ಹಾಲು ಉತ್ಪಾದಕರನ್ನು ಆತಂಕಕ್ಕೆ ದೂಡಿದೆ.

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಡಿ.2): ಅವರೆಲ್ಲಾ ಹೈನೋದ್ಯಮ ನಂಬಿ ಜೀವಿಸುತ್ತಿರುವ ಕುಟುಂಬಗಳು. ಆದ್ರೆ ಕಳೆದ ಒಂದು ತಿಂಗಳಿನಿಂದ ಅವರಲ್ಲಿ ಆತಂಕ ಮನೆ ಮಾಡಿದ್ದು, ಎಷ್ಟೇ ಖರ್ಚು ಮಾಡಿದ್ರು ಅದರಿಂದ ಪರಿಹಾರ ಸಿಗ್ತಿಲ್ಲ. ಹಸುಗಳ ಮೈಮೇಲೆ ಎಲ್ಲಿ ನೋಡಿದ್ರು ಬೊಬ್ಬೆಗಳು. ಸುಸ್ತಾಗಿ ಮೇವು ಸೇವಿಸದೇ ನರಳುತ್ತಿರುವ ಹಸುಗಳು. ಅಯ್ಯೋ ಏನಪ್ಪಾ ಈಗಾಯ್ತಲ್ಲ ಅಂತ ಗೋಳಾಡುತ್ತಿರುವ ರೈತರು. ಅಂದಹಾಗೆ ಇವೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ತಾಲೂಕಿನ ತೊಟ್ಲಿ ಗ್ರಾಮದ ಸುತ್ತಮುತ್ತ. ಕೋಲಾರ ಜಿಲ್ಲೆ ಅಂದ್ರೆ ಸಾಕು ಹಾಲು ಉತ್ಪಾದನೆಗೆ ಹೆಸರುವಾಸಿ, ದಿನಕ್ಕೆ ಲಕ್ಷಾಂತರ ಲೀಟರ್ ನಷ್ಟು ಹಾಲು ಇಲ್ಲಿಂದ ಉತ್ಪಾದನೆಯಾಗಿ ದೇಶದ ನಾನಾ ಕಡೆಗಳಿಗೆ ಸರಬರಾಜು ಆಗ್ತಿದೆ. ಬಿಸಿಲು, ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಹಾಲು ಉತ್ಪಾದನೆ ಮಾಡುವ ಮೂಲಕ ಇಲ್ಲಿನ ರೈತರು ಸೈ ಎನಿಸಿಕೊಂಡಿದ್ದಾರೆ. ಆದ್ರೆ ಕಳೆದ ಒಂದೂ ತಿಂಗಳಿನಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಹಸುಗಳಿಗೆ ವಿಚಿತ್ರ ಖಾಯಿಲೆಯೊಂದು ಕಾಣಿಸಿಕೊಂಡಿದ್ದು ರೈತರನ್ನು, ಹಾಲು ಉತ್ಪಾದಕರನ್ನು ಆತಂಕಕ್ಕೆ ದೂಡಿದೆ.

ಹಲವಾರು ಕಡೆ ಸಾಂಕ್ರಾಮಿಕ ಬೊಬ್ಬೆ ರೋಗ ಕಾಣಿಸಿಕೊಂದಿದ್ದು ಹಸುಗಳು ವಿಪರೀತ ಸುಸ್ತಾಗಿ, ಮೇವು, ನೀರು ಸರಿಯಾಗಿ ಸೇವಿಸದೇ ನರಳಾಟ ಅನುಭವಿಸುತ್ತಿದೆ. ಮೊದಲು ಜ್ವರ ಕಾಣಿಸಿಕೊಂಡು ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತಿದ್ದು, ಒಂದು ಹೊತ್ತಿಗೆ 7 ರಿಂದ 8 ಲೀಟರ್ ಹಾಲು ನೀಡುತ್ತಿದ್ದ ಹಸುಗಳು ಕೇವಲ ಒಂದರಿಂದ ಎರಡು ಲೀಟರ್ ಹಾಲು ಕೊಡ್ತಿದೆ.ಇದು ಹಾಲು ಉತ್ಪಾದಕರ ನಿದ್ದೆ ಗೆಡಿಸಿದೆ.

ಇನ್ನು ರೋಗಗ್ರಸ್ತ ಹಸುಗಳಿಗೆ ಅತಿಯಾದ ಜ್ವರವಿದ್ದು, ಮಂಕಾಗಿ, ಮೂಗು, ಕೆಚ್ಚಲು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವಂತಹ ಲಕ್ಷಣಗಳು ಗೋಚರಿಸುತ್ತಿದೆ. ಜತೆಗೆ, ಹಸುಗಳ ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಹಾಲು ಕೊಡುವ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತಿದೆ. ಕೆಲವು ರಾಸುಗಳು ಮೇವು ತಿನ್ನದೆ ಕ್ರಮೇಣವಾಗಿ ಬಡಕಲಾಗುತ್ತಿರೋದ್ರಿಂದ ಹೈನುಗಾರಿಗೆ ನಂಬಿರುವ ಕುಟುಂಬಕ್ಕೆ ಭಾರಿ ನಷ್ಟವನ್ನು ಉಂಟು ಮಾಡಿದೆ.

ಈಗಾಗಲೇ ಸ್ಥಳೀಯ ಸುಗಟೂರು ಪಶು ಇಲಾಖೆಯ ವೈದ್ಯರು ಪ್ರತಿದಿನ ರೋಗಗ್ರಸ್ಥ ಹಸುಗಳಿಗೆ ಆ್ಯಂಟಿಬಯೋಟಿಕ್, ನೋವು ನಿವಾರಕ, ಅಲರ್ಜಿ ನಿವಾರಕ ಔಷಧ ನೀಡುತ್ತಾ ಬರುತ್ತಿದ್ರು ಸಹ ಕಡಿಮೆ ಆಗುತ್ತಿಲ್ಲ. ಇದೊಂದು ವೈರಲ್ ಖಾಯಿಲೆ ಆಗಿರೋದ್ರಿಂದ ಸೊಳ್ಳೆ ಮತ್ತು ನೊಣಗಳಿಂದ ಹರಡುತ್ತಿದೆ. ಬೊಬ್ಬೆ ರೋಗದ ಹಸುಗಳಿಗೆ ಸೊಳ್ಳೆ/ನೊಣಗಳು ಕಚ್ಚಿ,ರಕ್ತ ಹೀರಿದ ಬಳಿಕ ಆ ರಕ್ತವನ್ನು ಮತ್ತೊಂದು ಹಸುಗಳಿಗೆ ಕಚ್ಚುವ ಮೂಲಕ ರೋಗ ಉಲ್ಬಣಿಸುತ್ತಿದೆ. ರೋಗ ತಗುಲಿದ ಕೂಡಲೇ ರಾಸುಗಳು ಬಡಕಲಾಗಿ, ಚರ್ಮದ ಗ೦ತಿಗಳು ಕೊಳೆತು, ನೊಣಗಳ ಉಪಟಳದಿ೦ದ ಚರ್ಮದಲ್ಲಿ ಆಳವಾದ ರ೦ಧ್ರಗಳಾಗುತ್ತಿದೆ. ಗುಂಪಿನಲ್ಲಿರುವ ಶೇ10 ರಿ೦ದ 20 ರಷ್ಟು ರಾಸುಗಳು ರೋಗಕ್ಕೆ ತುತ್ತಾಗಬಹುದು. ಅವುಗಳಲ್ಲಿ ಶೇ 1 ರಿ೦ದ 5 ರಷ್ಟು ರಾಸುಗಳು ಸಾವನ್ನಪ್ಪಬಹುದು.

ಕಾಲುಬಾಯಿ ರೋಗ ನಿಗ್ರಹಕ್ಕೆ ಲಸಿಕೆಯೇ ಮಾರ್ಗ: ಸಚಿವ ಚವ್ಹಾಣ್‌

ಇನ್ನು ರೋಗ ಪೀಡಿತ ರಾಸುಗಳನ್ನು ಆರೋಗ್ಯವ೦ತ ಹಸುಗಳಿಂದ ಬೇರ್ಪಡಿಸಿ ಕೂಡಲೆ ಚಿಕಿತ್ಸೆಗೆ ಒಳಪಡಿಸಿ, ರಾಸುಗಳಿಗೆ ಸೊಳ್ಳೆ ಪರದೆಗಳನ್ನು ಬಳಸಬೇಕಾಗಿದೆ, ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ ಸೂಕ್ತವಾದ ರೋಗ ನಿವಾರಕ ಔಷದಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸಿ೦ಪಡಿಸಿದ್ರೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು. ಮುಖ್ಯವಾಗಿ ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ ಅನ್ನೋದು ಒಂದೇ ಕಡೆ ಖುಷಿ ತಂದುಕೊಟ್ಟಿದ್ರು ಸಹ,ಪ್ರತಿದಿನ ಸಾವಿರಾರು ರೂಪಾಯಿ ಖರ್ಚು ಮಾಡಿದ್ರು ಸಹ ಹಸುಗಳು ಚೇತರಿಕೆ ಕಾಣದೆ ಇರೋದಕ್ಕೆ ಹಾಲು ಉತ್ಪಾದಕರನ್ನು ಆತಂಕಕ್ಕೆ ದೂಡಿದೆ.

31 ಗೋವುಗಳ ದತ್ತು ಪಡೆದ ಸಚಿವ ಸುಧಾಕರ್‌

ಒಟ್ಟಾರೆ ಬೊಬ್ಬೆ ರೋಗದಿಂದ ಹಲವಾರು ಹಸುಗಳು ನರಳಾಡುತ್ತಿದ್ದು, ಹಾಲು ಉತ್ಪಾದಕರು ದಿನಕ್ಕೆ ಸಾವಿರಾರು ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸ್ತಿದ್ರು ಸಹ ಖಾಯಿಲೆ ವಾಸಿಯಾಗುತ್ತಿಲ್ಲ. ಇನ್ನಾದ್ರೂ ಸಂಬಂಧಪಟ್ಟ ಇಲಾಖೆಯವರು ಕೂಡಲೇ ನೆರವಿಗೆ ಧಾವಿಸಿ, ಖಾಯಿಲೆ ಉಲ್ಬಣವಾಗದಂತೆ ತಡೆಗಟ್ಟಿ, ಸೂಕ್ತ ಚಿಕಿತ್ಸೆ ನೀಡಲಿ ಅನ್ನೋದು ನಮ್ಮ ಮನವಿ.

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ