ಕೊರೋನಾ ವಿರುದ್ಧ ಹೋರಾಡಿ ಗೆದ್ದ 10 ತಿಂಗಳ ಕಂದಮ್ಮ, ಈಗ ಸಂಪೂರ್ಣ ಗುಣಮುಖ

By Kannadaprabha NewsFirst Published Apr 12, 2020, 7:17 AM IST
Highlights

ಕೊರೋನಾ ಸೋಂಕು 12ಕ್ಕೆ ತಲುಪಿ ಭೀತಿಗೆ ಒಳಗಾಗಿದ್ದ ದ.ಕ.ಜಿಲ್ಲೆಯಲ್ಲಿ ಶನಿವಾರವೂ ಯಾವುದೇ ಸೋಂಕಿತ ಪ್ರಕರಣ ದೃಢಪಟ್ಟಿಲ್ಲ. ಇದರೊಂದಿಗೆ ಕಳೆದ ಒಂದು ವಾರದಿಂದೀಚೆಗೆ ಕೊರೋನಾ ಸೋಂಕು ಪತ್ತೆ ರಹಿತ ಜಿಲ್ಲೆಯಾಗಿ ಜನತೆಗೆ ತುಸು ನೆಮ್ಮದಿ ಉಂಟುಮಾಡಿದೆ.

ಮಂಗಳೂರು(ಏ.12): ಕೊರೋನಾ ಸೋಂಕು 12ಕ್ಕೆ ತಲುಪಿ ಭೀತಿಗೆ ಒಳಗಾಗಿದ್ದ ದ.ಕ.ಜಿಲ್ಲೆಯಲ್ಲಿ ಶನಿವಾರವೂ ಯಾವುದೇ ಸೋಂಕಿತ ಪ್ರಕರಣ ದೃಢಪಟ್ಟಿಲ್ಲ. ಇದರೊಂದಿಗೆ ಕಳೆದ ಒಂದು ವಾರದಿಂದೀಚೆಗೆ ಕೊರೋನಾ ಸೋಂಕು ಪತ್ತೆ ರಹಿತ ಜಿಲ್ಲೆಯಾಗಿ ಜನತೆಗೆ ತುಸು ನೆಮ್ಮದಿ ಉಂಟುಮಾಡಿದೆ.

ಇದರೊಂದಿಗೆ 12 ಪಾಸಿಟಿವ್‌ ಪ್ರಕರಣಗಳಲ್ಲಿ 6 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಶೇಕಡಾ 50 ಪ್ರಗತಿಯಾಗಿದೆ ಎಂದು ಜಿಲ್ಲಾಡಳಿತದ ಬುಲೆಟಿನ್‌ ತಿಳಿಸಿದೆ. ಅದೇ ರೀತಿ ಶನಿವಾರ ಕೋವಿಡ್‌-19 ಪಾಸಿಟಿವ್‌ ಆಗಿದ್ದ ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗು ಕೂಡ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದೆ. ಜೊತೆಯಲ್ಲಿ ಕ್ವಾರಂಟೈನ್‌ ಹಾಗೂ ತಪಾಸಣೆಗೆ ಒಳಗಾಗಿದ್ದ ಮಗುವಿನ ತಾಯಿ ಹಾಗೂ ಅಜ್ಜಿಯ ಪರೀಕ್ಷಾ ವರದಿಗಳು ನೆಗೆಟಿವ್‌ ಬಂದಿದೆ. ಆದ್ದರಿಂದ ಅವರು ಕೂಡ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ವೇಳೆ ಗುಣಮುಖಗೊಂಡ ಮಗುವಿನ ಕೈಗೆ ಮುದ್ರೆ ಹಾಕಲಾಗಿದ್ದು, 14 ದಿನಗಳ ಪ್ರತ್ಯೇಕ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದೆ.

ಲಾಕ್‌ಡೌನ್‌ ಇರ​ದಿ​ದ್ದರೆ 8.2 ಲಕ್ಷ ಜನಕ್ಕೆ ವೈರಸ್‌ ಬರ್ತಿತ್ತು!

ಮಗುವಿಗೆ ಸೋಂಕು ದೃಢಪಟ್ಟಬಳಿಕ ಸಜಿಪನಡು ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಿ ಇಡೀ ಗ್ರಾಮವನ್ನು ಕ್ವಾರಂಟೈನ್‌ ನಲ್ಲಿ ಇಡಲಾಗಿತ್ತು. ತಾಲೂಕಿನಲ್ಲಿ ಆತಂಕ ಹೆಚ್ಚಾಗಿತ್ತು. ಇದೀಗ ಮಗು ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಮೂಲಕ ಗ್ರಾಮದಲ್ಲಿ ಸ್ವಲ್ಪಮಟ್ಟಿಗೆ ನೆಮ್ಮದಿ ಮೂಡಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಏ.24ರ ವರೆಗೂ ಸಜಿಪನಡು ಗ್ರಾಮದ ಕ್ವಾರಂಟೈನ್‌ ಮುಂದುವರಿಯಲಿದೆ ಎಂದು ತಹಸೀಲ್ದಾರ್‌ ರಶ್ಮಿ ಎಸ್‌.ಆರ್‌. ತಿಳಿಸಿದ್ದಾರೆ.

ದೇರಳಕಟ್ಟೆಕ್ಷೇಮ ಆಸ್ಪತ್ರೆಗೆ ಮಾ.20ರಂದು ದಾಖಲಾದ 10 ತಿಂಗಳ ಮಗುವಿಗೆ ಮಾ.25ರಂದು ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿತ್ತು. ಬಳಿಕ ಆಕೆಗೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯಲ್ಲಿ ಮಗು ಚೇತರಿಸಿತ್ತು. ಬಳಿಕ ಏ.7 ಮತ್ತು 8ರಂದು ಸ್ಯಾಂಪಲ್‌ನ್ನು ಪುನರ್‌ ತಪಾಸಣೆ ನಡೆಸಿದಾಗ ನೆಗೆಟಿವ್‌ ಬಂದಿತ್ತು.

ಸಂಸದರ ವೇತನ ಕಟ್: ಕ್ಯಾಬಿನೆಟ್ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್!

ವೈದ್ಯರಿಗೆ ಸವಾಲಾಗಿತ್ತು ಪ್ರಕರಣ: 10 ತಿಂಗಳ ಮಗುವಿನ ಕರೋನಾ ಪ್ರಕರಣ ರಾಜ್ಯದಲ್ಲೇ ವಿಶಿಷ್ಟಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟಕಂದನಿಗೆ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು. ಪುಟ್ಟಮಗುವಿನ ಐಸೋಲೇಶನ್‌ನೊಂದಿಗೆ, ಚಿಕಿತ್ಸೆ ನೀಡುವುದು ಬಹಳ ಸೂಕ್ಷ್ಮವಾಗಿತ್ತು. ವೈದ್ಯರು ಈ ಸವಾಲನ್ನು ಬಹಳ ನಾಜೂಕಾಗಿ ನಿರ್ವಹಿಸಿದ್ದು, ವೆನ್ಲಾಕ್‌ ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡಿ, ಮಗುವನ್ನು ಗುಣಮುಖಗೊಳಿಸಿದ್ದಾರೆ. ಇದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೂ ಖ್ಯಾತಿ ತಂದಿದೆ.

ಮೊದಲ ಬಾರಿಗೆ ಒಂದೇ ದಿನ 1000+ ಕೇಸ್ ಪತ್ತೆ: 8 ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ

8 ಮಂದಿ ತಪಾಸಣೆಗೆ ದಾಖಲು: ಜಿಲ್ಲೆಯಲ್ಲಿ ಶನಿವಾರ 52 ಮಂದಿಯ ಸ್ಕ್ರೀನಿಂಗ್‌ ನಡೆಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗಾದಲ್ಲಿ 23 ಮಂದಿ ಇದ್ದು, ಮತ್ತೆ 8 ಮಂದಿ ಸೇರ್ಪಡೆಯಾಗಿದ್ದಾರೆ. ಶನಿವಾರ ಬಂದ 46 ಸ್ಯಾಂಪಲ್‌ಗಳು ನೆಗೆಟಿವ್‌ ಆಗಿದ್ದು, ಇನ್ನೂ 34 ಸ್ಯಾಂಪಲ್‌ಗಳ ಫಲಿತಾಂಶ ಬರಬೇಕಾಗಿದೆ. ಶನಿವಾರ ತಾಲೂಕುಗಳ ಜ್ವರ ಕ್ಲಿನಿಕ್‌ಗಳಿಂದ 8 ಮಂದಿಯನ್ನು ತಪಾಸಣೆಗೆ ದಾಖಲಿಸಲಾಗಿದೆ.

click me!