ಜನದಟ್ಟಣೆ ಸ್ಥಳದಲ್ಲಿ ಕೋವಿಡ್‌ ಟೆಸ್ಟ್‌ ಕಡ್ಡಾಯ..!

By Kannadaprabha NewsFirst Published Dec 13, 2020, 7:45 AM IST
Highlights

ಸೋಂಕು ಪರೀಕ್ಷಾ ಶಿಬಿರಕ್ಕೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚನೆ| ತಾಂತ್ರಿಕ ಸಲಹಾ ಸಮಿತಿ ಸಭೆಯ ನಿರ್ದೇಶನ| ನಿತ್ಯ 41 ಸಾವಿರ ಜನರಿಗೆ ಪರೀಕ್ಷೆ, ಇದರಿಂದ ಸೋಂಕಿತರ ಗುರುತಿಸಲು ಸಹಕಾರಿ| 

ಬೆಂಗಳೂರು(ಡಿ.13): ನಗರದಲ್ಲಿ ಅತಿ ಹೆಚ್ಚು ಜನದಟ್ಟಣೆ ಸೇರುವ ಪ್ರದೇಶಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಕೊರೋನಾ ಸೋಂಕು ಪರೀಕ್ಷೆಯನ್ನು ಮುಂದುವರಿಸುವಂತೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳು, ಕಾರ್ಖಾನೆಗಳು, ಮಾರುಕಟ್ಟೆಗಳು, ವಸತಿ ಸಮುಚ್ಛಯಗಳು, ವಿಲ್ಲಾ ಹಾಗೂ ಜನ ನಿಬಿಡ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಸೋಂಕು ಪರೀಕ್ಷೆ ನಡೆಸಲು ಗುರುವಾರ ನಡೆದ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜನ ಹೆಚ್ಚು ಸೇರುವ ಪ್ರದೇಶಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಕಡ್ಡಾಯ ಸೋಂಕು ಪರೀಕ್ಷಾ ಶಿಬಿರಗಳನ್ನು ಆಯೋಜಿಸಿ ಮುಂದುವರಿಸುವಂತೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಕೊರೋನಾ ಹೋಗಿಲ್ಲ, ಇನ್ನೂ ಇದೆ 2ನೇ ಅಲೆ: ಸರ್ಕಾರದಿಂದ ಮಹತ್ವದ ಸೂಚನೆ

ನಗರದಲ್ಲಿ ನಿತ್ಯ 41 ಸಾವಿರ ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸುತ್ತಿದೆ. ಹೀಗಾಗಿ, ಸೋಂಕಿತರನ್ನು ಶೀಘ್ರ ಗುರುತಿಸಲು ಸಹಕಾರಿಯಾಗಿದ್ದು, ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಹಕಾರಿಯಾಗಿದೆ ಎಂದು ಹೇಳಿದರು.
ಇನ್ನು ರಾಜ್ಯದಲ್ಲಿ ಪ್ರತಿದಿನ ಒಂದು ಲಕ್ಷಕ್ಕಿಂತ ಹೆಚ್ಚು ಜನರನ್ನು ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಇದರಲ್ಲಿ 90 ಸಾವಿರ ಜನರ ಗಂಟಲು ದ್ರವ ಮಾದರಿ ಹಾಗೂ 10 ಸಾವಿರ ಜನರನ್ನು ರಾರ‍ಯಪಿಡ್‌ ಆ್ಯಂಟಿಜೆನ್‌ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.

606 ಮಂದಿಗೆ ಸೋಂಕು: 923 ಮಂದಿ ಗುಣಮುಖ

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 606 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 923 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಮೃತಪಟ್ಟವರದಿಯಾಗಿದೆ. ಈ ಮೂಲಕ ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,77,857ಕ್ಕೆ ಏರಿಕೆಯಾಗಿದ್ದು, ಗುಣಮುಖರ ಸಂಖ್ಯೆ 3,60,724 ತಲುಪಿದೆ. ಇನ್ನು 12,902 ಸಕ್ರಿಯ ಸೋಂಕಿತರಿದ್ದು, ಆಸ್ಪತ್ರೆ, ಆರೈಕೆ ಕೇಂದ್ರ ಹಾಗೂ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 111 ಮಂದಿ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವ ಹಿನ್ನೆಲೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಆರು ಮಂದಿ ಸೋಂಕಿಗೆ ಬಲಿಯಾದ ವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,230 ಏರಿಕೆಯಾಗಿದೆ.
 

click me!