ಗದಗನಲ್ಲಿ 3ನೇ ಕೊರೋನಾ ಪ್ರಕರಣ: ಜಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌-19 ಟೆಸ್ಟ್‌ ಆರಂಭ

By Kannadaprabha NewsFirst Published Apr 19, 2020, 9:41 AM IST
Highlights

ಗದಗ ಜಿಲ್ಲೆಯಲ್ಲಿ 3ನೇ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆ| ರಂಗನವಾಡಿಯ ಪ್ರದೇಶವನ್ನು ಕಂಟೋನ್ಮೆಂಟ್‌ ಪ್ರದೇಶವೆಂದು ಘೋಷಣೆ|  ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸೋಂಕು ಪತ್ತೆಯಾದ ಓಣಿಯ ಎಲ್ಲ ಜನರಿಗೆ ಮಲ್ಲಸಮುದ್ರದ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌| ವಸತಿ ಶಾಲೆಯಲ್ಲಿಯೇ ಅವರಿಗೆ ಊಟದ ವ್ಯವಸ್ಥೆ|
 

ಗದಗ(ಏ.19): ನಗರದಲ್ಲಿರುವ ಜಿಮ್ಸ್‌ ಆಸ್ಪತ್ರೆಯಲ್ಲಿಯೇ ಶನಿವಾರದಿಂದಲೇ ಸ್ವ್ಯಾಬ್‌ ಟೆಸ್ವ್‌ ಮಾಡಲು ಆರಂಭ ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.

ಅವರು ಶನಿವಾರ ಸಂಜೆ ಜಿಪಂ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 3ನೇ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ. 42 ವರ್ಷದ ರಂಗನವಾಡಿ ಪ್ರದೇಶದ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ರಂಗನವಾಡಿಯ ಪ್ರದೇಶವನ್ನು ಈಗಾಗಲೇ ಕಂಟೋನ್ಮೆಂಟ್‌ ಪ್ರದೇಶವೆಂದು ಘೋಷಿಸಲಾಗಿದೆ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸೋಂಕು ಪತ್ತೆಯಾದ ಓಣಿಯ ಎಲ್ಲ ಜನರನ್ನು ಮಲ್ಲಸಮುದ್ರದ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದು ವಸತಿ ಶಾಲೆಯಲ್ಲಿಯೇ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಅವರೇ ಅಡುಗೆ ತಯಾರಿಸುವವದಿದ್ದರೆ ಅಂತಹವರಿಗೆ ಅಗತ್ಯದ ಆಹಾರ ಸಾಮಗ್ರಿಗಳನ್ನು ಒದಗಿಸಲಾಗುವುದು. ರಂಗನವಾಡಾ ಪ್ರದೇಶವನ್ನು ಸಂಪೂರ್ಣವಾಗಿ ಕ್ರಿಮಿನಾಶಕ ಔಷಧವನ್ನು ಸಿಂಪಡಿಸಲು ನಿರ್ದೇಶನ ನೀಡಲಾಗಿದೆ. ಶನಿವಾರದಿಂದಲೇ ಗದಗ ಜಿಮ್ಸ್‌ನಲ್ಲಿ ಕೊರೋನಾ ಪತ್ತೆ ಕೇಂದ್ರ(ಟೆಸ್ಟಿಂಗ್‌ ಲ್ಯಾಬ್‌) ಪ್ರಾರಂಭ ಮಾಡಲಾಗಿದ್ದು, ಇದರಿಂದ ಕೊರೋನಾ ವೈರಸ್‌ ಪರೀಕ್ಷೆಗಳು ಇನ್ನು ಮುಂದೆ ಶೀಘ್ರ ಗತಿಯಲ್ಲಿ ಜರುಗಲು ಅನುಕೂಲವಾಗುತ್ತದೆ ಎಂದು ಹೇಳಿದರು.

'ಕೊರೋನಾ ಟೆಸ್ಟಿಂಗ್‌ ಲ್ಯಾಬ್‌ ತೆರೆಯುವಲ್ಲಿ ಯಡಿಯೂರಪ್ಪ ಸರ್ಕಾರ ನಿರ್ಲಕ್ಷ್ಯ'

ಗದಗ- ಬೆಟಗೇರಿ ನಗರ ಪ್ರದೇಶದಲ್ಲಿ ಸೋಮವಾರದಿಂದ ಪೆಟ್ರೋಲ್‌ ಮಾರಾಟಕ್ಕೆ ಎರಡು ಗಂಟೆ ನಿಗದಿಪಡಿಸಲಾಗಿದ್ದು, ಡೀಸಲ್‌ ಮಾರಾಟ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ. ಹೂವು ಬೆಳೆಗಾರರಿಗೂ ತರಕಾರಿ ಮಾರಾಟಗಾರರಂತೆ ನಿಗದಿತ ಅವಧಿಯಲ್ಲಿ ಮಾರಾಟ ಮಾಡಲು ನಿಬಂಧನೆಗಳೊಂದಿಗೆ ಅನುಮತಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ಅರ್ಹ ಪಡಿತರ ಕುಟುಂಬಗಳಿಗೆ ಪಡಿತರ ಒದಗಿಸಲಾಗುತ್ತಿದ್ದು, ಹೊಸದಾಗಿ ಅರ್ಜಿ ಸಲ್ಲಿಸಿದವರಿಗೂ ಶೀಘ್ರವೇ ಪಡಿತರ ವಿತರಣೆಗೆ ಕ್ರಮ ಜರುಗಿಸಬೇಕು. ಒಟಿಪಿಗಾಗಿ ಕಾಯದಂತೆ ಸೂಚನೆ ನೀಡಲಾಗಿದೆ ಎಂದ ಪಾಟೀಲ, ದಾನಿಗಳು ಆಹಾರ ಸಾಮಗ್ರಿ ವಿತರಿಸುವ ಮುಂಚೆ ನಿಯಮಿಸಲಾಗುವ ಅಧಿಕಾರಿಗಳ ಗಮನಕ್ಕೆ ತರಬೇಕು. ದಿನಸಿ ವ್ಯಾಪಾರಸ್ಥರು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ವ್ಯಾಪಾರಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಶಾಸಕ ಎಚ್‌.ಕೆ. ಪಾಟೀಲ ಮಾತನಾಡಿ, ಗದಗನ ರಂಗನವಾಡಾ ಪ್ರದೇಶದಲ್ಲಿ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿದ್ದ ಜನರಿಗೆ ಧೈರ್ಯ ತುಂಬಲಾಗುತ್ತಿದೆ. ಸಾರ್ವಜನಿಕರು ಸ್ವಯಂ ಶಿಸ್ತು ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೊರೋನಾ ವೈರಸ್‌ ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದರು.
 

click me!