ಕೊಡಗು: ಆಸ್ತಿಗಾಗಿ ತಹಶೀಲ್ದಾರ್ ಸಹಿ, ಸೀಲ್‌ಗಳನ್ನೇ ನಕಲು ಮಾಡಿದ ಭೂಪ..!

By Girish GoudarFirst Published Nov 17, 2023, 9:44 PM IST
Highlights

ಮರಣ ಪ್ರಮಾಣ ಪತ್ರವೂ ನಕಲಿ, ವಂಶವೃಕ್ಷವೂ ನಕಲಿ. ಅಯ್ಯಯ್ಯೋ ಅಷ್ಟೇ ಏಕೆ ಈ ದಾಖಲೆಗಳನ್ನೆಲ್ಲಾ ಸೃಷ್ಟಿಸಿ ಮೃತಪಟ್ಟಿರುವ ಹುಲಿಮನೆ ಅಪ್ಪಯ್ಯ ಅವರೇ ನಮ್ಮ ತಂದೆ ಎಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿಯೂ ನಕಲಿ ಮಗನಂತೆ ರೀ, ನಕಲಿ ಮಗನಂತೆ. ಹಾಗಂತ ನಾವು ಹೇಳುತ್ತಿರುವುದಲ್ಲ. ಎಲ್ಲವನ್ನೂ ನಕಲಿ ಮಾಡಿದ್ದಾರೆ ಅಂತ ಆ ವ್ಯಕ್ತಿಯ ವಿರುದ್ಧ ದೂರು ಕೊಟ್ಟಿರುವ ದೂರುದಾರರು ಹೇಳುತ್ತಿರುವ ಮಾತಿದು. 

ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ನ.17):  ಅಕ್ರಮವಾಗಿ ಹಣ, ಆಸ್ತಿ ಸಂಪಾದಿಸುವುದಕ್ಕೆ ಏನೇನೋ ಮಾಡುತ್ತಾರೆ ಎನ್ನುವುದನ್ನು ನೋಡಿರುತ್ತೇವೆ ಕೇಳಿರುತ್ತೇವೆ ಅಲ್ಲವೇ?. ಆದರೆ ಇಲ್ಲೊಬ್ಬ ಭೂಪ ಯಾರದ್ದೋ ಆಸ್ತಿ ಕಬಳಿಸುವುದಕ್ಕಾಗಿ ತಹಶೀಲ್ದಾರ್ ಅವರ ಸಹಿ, ಸೀಲುಗಳನ್ನೇ ನಕಲಿ ಮಾಡಿ ನಕಲಿ ದಾಖಲೆಗಳನ್ನು ಸಲ್ಲಿಸಲು ಹೋಗಿ ಸಿಕ್ಕಿಬಿಕ್ಕಿದ್ದಾನೆ.

ಮರಣ ಪ್ರಮಾಣ ಪತ್ರವೂ ನಕಲಿ, ವಂಶವೃಕ್ಷವೂ ನಕಲಿ. ಅಯ್ಯಯ್ಯೋ ಅಷ್ಟೇ ಏಕೆ ಈ ದಾಖಲೆಗಳನ್ನೆಲ್ಲಾ ಸೃಷ್ಟಿಸಿ ಮೃತಪಟ್ಟಿರುವ ಹುಲಿಮನೆ ಅಪ್ಪಯ್ಯ ಅವರೇ ನಮ್ಮ ತಂದೆ ಎಂದು ಹೇಳಿಕೊಳ್ಳುತ್ತಿರುವ ಈ ವ್ಯಕ್ತಿಯೂ ನಕಲಿ ಮಗನಂತೆ ರೀ, ನಕಲಿ ಮಗನಂತೆ. ಹಾಗಂತ ನಾವು ಹೇಳುತ್ತಿರುವುದಲ್ಲ. ಎಲ್ಲವನ್ನೂ ನಕಲಿ ಮಾಡಿದ್ದಾರೆ ಅಂತ ಆ ವ್ಯಕ್ತಿಯ ವಿರುದ್ಧ ದೂರು ಕೊಟ್ಟಿರುವ ದೂರುದಾರರು ಹೇಳುತ್ತಿರುವ ಮಾತಿದು. 

ಮಡಿಕೇರಿ ಹೋಟೆಲ್‌ಗಳ ಮೇಲೆ ಅಧಿಕಾರಿಗಳ ರೇಡ್: ಗಬ್ಬು ನಾರುವ ದೃಶ್ಯ ಕಂಡು ನಗರಸಭೆ ಸದಸ್ಯರೇ ಶಾಕ್ !

ಹೌದು ಇಂತಹ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿರುವುದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಚಿಕ್ಕಕಣಗಾಲು ಗ್ರಾಮದಲ್ಲಿ. ಗ್ರಾಮದಲ್ಲಿ ಹುಲಿಮನೆ ಅಪ್ಪಯ್ಯ ಎಂಬುವರ 1/18 ಸರ್ವೆ ನಂಬರ್ ನ 3 ಎಕರೆ ಆಸ್ತಿಯನ್ನು 1972 ರಲ್ಲಿ ಈಗ ನಕಲಿ ದಾಖಲೆ ಸೃಷ್ಟಿರುವುದರ ವಿರುದ್ಧ ದೂರು ನೀಡಿರುವ ಚಂಗಪ್ಪ ಅವರ ತಂದೆ ಬೋಪಯ್ಯ ಖರೀದಿಸಿದ್ದರಂತೆ. ಹುಲಿಮನೆ ಅಪ್ಪಯ್ಯ ಅವರಿಗೆ ಸರ್ಕಾರ ಜಮೀನು ಮಂಜೂರು ಮಾಡಿದ ಐದು ವರ್ಷಗಳಲ್ಲೇ ಮಾರಾಟ ಮಾಡಿದ್ದಾರೆಂದು ಮಾರಾಟ ಪ್ರಕ್ರಿಯೆಯನ್ನು ಅಂದಿನ ಜಿಲ್ಲಾಧಿಕಾರಿ ಅವರು ರದ್ದುಗೊಳಿಸಿದ್ದರಂತೆ. ಸ್ವಲ್ಪ ಸಮಯದಲ್ಲೇ ಜಿಲ್ಲಾಧಿಕಾರಿ ಅವರು ಈ ಆದೇಶ ಮಾಡಿದ್ದು ಪಕ್ಕದ ಸರ್ವೆ ನಂಬರಿನದು ಎಂದು ಮರು ಆದೇಶ ಮಾಡಿದ್ದರಂತೆ. ಹೀಗಾಗಿ ಆಸ್ತಿ ಪುನಃ ಅಪ್ಪಯ್ಯ ಅವರ ಹೆಸರಿನಲ್ಲೇ ಉಳಿದಿತ್ತಂತೆ. ಹಲವು ವರ್ಷಗಳಿಂದ ಅನುಭೋಗದಾರರಾಗಿರುವ ಬೋಪಯ್ಯ ಅವರ ಮರಣದ ನಂತರ ಅವರ ಮಕ್ಕಳಾದ ಚಂಗಪ್ಪ ಅವರು ತಮ್ಮ ಬಳಿ ಇರುವ ಸೇಲ್ ದೀಡ್ ಮುಂತಾದವುಗಳನ್ನು ಇಲಾಖೆಗೆ ತೋರಿಸಿ ಇತ್ತೀಚೆಗೆ ಆಸ್ತಿಯನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. 

ಇದೇ ವೇಳೆಗೆ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ಮುತ್ತಪ್ಪ ಎಂಬುವರು ಹುಲಿಮನೆ ಅಪ್ಪಯ್ಯ ಅವರು ನನ್ನ ತಂದೆ. ಅವರ ಆಸ್ತಿ ನನಗೆ ಸೇರಬೇಕು ಎಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಹೇಗೆ ಸಾಧ್ಯ ಎಂದು ಒಂದೊಂದೇ ದಾಖಲೆಗಳನ್ನು ಪರಿಶೀಲಿಸುತ್ತಾ ಹೋದಾಗ ಮುತ್ತಪ್ಪ ಎಂಬುವರು ನಕಲಿ ಮರಣ ಪ್ರಮಾಣ ಪತ್ರ ಹಾಗೂ ನಕಲಿ ವಂಶವೃಕ್ಷಗಳನ್ನು ಸೃಷ್ಟಿಸಿ ಸಲ್ಲಿಸಿರುವುದು ಗೊತ್ತಾಗಿದೆ. 

ಕೊಡಗು: 90 ಕುಟುಂಬಗಳಿಗೆ ಶೀಘ್ರವೇ ಹಕ್ಕುಪತ್ರ ವಿತರಣೆ, ಶಾಸಕ ಮಂತರ್ ಗೌಡ ಭರವಸೆ

ಹೀಗಾಗಿ ಚಂಗಪ್ಪ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿ ಅಪ್ಪಯ್ಯ ಅವರ ಮಗನೇ ಅಲ್ಲ. ಅಪ್ಪಯ್ಯ ಅವರಿಗೆ ಮದುವೆಯೇ ಆಗಿರಲಿಲ್ಲ. ಇನ್ನೂ ಈ ಮಗ ಎಲ್ಲಿಂದ ಬಂದ ಎಂದು ಚಂಗಪ್ಪ ಪ್ರಶ್ನಿಸಿದ್ದಾರೆ. ಈ ಕುರಿತು ಮಡಿಕೇರಿ ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರನ್ನು ಕೇಳಿದರೆ ಆಸ್ತಿ ವಿವಾದ ಇರುವುದು ನಿಜ. ಮುತ್ತಪ್ಪ ಎಂಬುವರು ಹುಲಿಮನೆ ಅಪ್ಪಯ್ಯ ಅವರ ಮಗನೋ ಅಲ್ಲವೋ ಗೊತ್ತಿಲ್ಲ. ಆದರೆ ಅವರು ಸಲ್ಲಿಸಿರುವ ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷಗಳು ನಕಲಿಯಾಗಿವೆ. ಇದರ ವಿರುದ್ಧ ಅವರಿಗೆ ನೊಟೀಸ್ ಜಾರಿಮಾಡಿ ಎರಡು ಬಾರಿ ವಿಚಾರಣೆಗೆ ಕರೆದಿದ್ದೇವೆ. ಆದರೂ ಅವರು ಬಾರದೇ ಇರುವುದರಿಂದ ಅವರ ವಿರುದ್ಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸುವುದಕ್ಕೆ ನಮ್ಮ ಇಲಾಖೆ ಸಿಬ್ಬಂದಿಯ ಸಹಾಯವೇನಾದರೂ ಇದೆಯಾ ಎನ್ನುವುದನ್ನು ತನಿಖೆ ಮಾಡುತ್ತೇವೆ ಎಂದು ಮಡಿಕೇರಿ ತಹಶೀಲ್ದಾರ್ ಹೇಳಿದ್ದಾರೆ. 

ಒಟ್ಟಿನಲ್ಲಿ ಆಸ್ತಿಗೋಸ್ಕರ ಇಬ್ಬರ ನಡುವೆ ಗೊಂದಲಗಳಿದ್ದು, ತಹಶೀಲ್ದಾರ್ ಅವರ ಸಹಿ, ಸೀಲುಗಳನ್ನೇ ನಕಲಿ ಮಾಡಿ ದಾಖಲೆಗಳನ್ನು ಸೃಷ್ಟಿರುವುದು ಕೊಡಗಿನಲ್ಲಿ ಭೂ ಮಾಫಿಯಾ ಕೆಲಸ ಮಾಡುತ್ತಿದೆಯಾ ಎನ್ನುವ ಅನುಮಾನ ಸೃಷ್ಟಿಸಿದೆ.

click me!