2ಎ ಮೀಸಲಾತಿ ತೆಗೆಯುವ ಪ್ರಸಂಗ ಬಂದರೇ ಸುಮ್ಮನಿರುವುದಿಲ್ಲ: ಶಾಸಕ ಲಕ್ಷ್ಮಣ ಸವದಿ

By Kannadaprabha NewsFirst Published Feb 25, 2024, 10:00 PM IST
Highlights

ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ, ಅನ್ಯಾಯ ಮಾಡಿದಾಗ ಕಾಂಗ್ರೆಸ್‌ ಸೇರಿದೆ. ನನ್ನ ಮನೆಯ ಮಗನಿಗೆ ಅನ್ಯಾಯವಾಗಿದೆ ಎಂದು ನನ್ನ ನೋವಿನಲ್ಲಿ ಕಣ್ಣಿರು ಒರಿಸಿದವರು ಕರ್ನಾಟಕದ ಗಾಣಿಗ ಸಮಾಜ. ಗಾಣಿಗ ಸಮಾಜ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಬೆಳೆಸಿದ್ದು, ಸಮಾಜಕ್ಕೆ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. ಹೂ ತರುವ ಕೆಲಸ ಮಾಡುತ್ತೇನೆ ವಿನಃ ಹುಲ್ಲು ತರುವ ಕೆಲಸ ಮಾಡುವುದಿಲ್ಲ: ಅಥಣಿ ಶಾಸಕ ಲಕ್ಷ್ಮಣ ಸವದಿ 

ಇಂಡಿ(ಫೆ.25):  ಕಳೆದ ಚುನಾವಣೆಯಲ್ಲಿ ನನ್ನ ರಾಜಕೀಯ ಬದುಕಿಗೆ ಕಾರಣಿಬೂತರಾಗಿರುವ ಗಾಣಿಗ ಸಮಾಜ. ಗಾಣಿಗ ಸಮಾಜದ ಬೆಳವಣಿಗೆಯಲ್ಲಿ ನನ್ನ ಸಂಪೂರ್ಣ ಸಹಕಾರವಿದ್ದು, ಸದಾ ತಮ್ಮ ಜೊತೆ ಇರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.

ಪಟ್ಟಣದಲ್ಲಿ ಗಾಣಿಗ ಸಂಘದ 2 ಎಕರೆ ಜಾಗದಲ್ಲಿ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮೀಜಿ ಸಭಾ ಭವನದ ಭೂಮಿಪೂಜಾ ಕಾರ್ಯಕ್ರಮ ಹಾಗೂ ವಿಜಯಪುರ ಜಿಲ್ಲಾ ಗಾಣಿಗ ಸಮಾಜ ಬೃಹತ್‌ ಸಮಾವೇಶದಲ್ಲಿ ಸಭಾಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷದಲ್ಲಿ ಇರಲಿ, ಮೊದಲು ನಮ್ಮಲ್ಲಿ ಮಾನವೀಯ ಮೌಲ್ಯಗಳು ಇರಬೇಕು. ಮಾನವೀಯ ಮೌಲ್ಯಗಳ ತಳಹದಿಯ ಮೇಲೆ ಬದುಕು ಸಾಗಿಸಬೇಕು. ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವುದನ್ನು ಕಲಿಯಬೇಕು ಎಂದು ತಿಳಿಸಿದರು.

ವಿನಾಶ ಕಾಲೇ ವಿಪರೀತ ಬುದ್ಧಿ: ಅನಂತಕುಮಾರ ಹೆಗಡೆ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ

ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬರಲು ಲಕ್ಷ್ಮಣ ಸವದಿ ಕೊಡುಗೆ ಅಪಾರವಾಗಿದೆ. ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣುವ ವ್ಯಕ್ತಿತ್ವ ಹೊಂದಿದವರು ಲಕ್ಷ್ಮಣ ಸವದಿ. ಎಲ್ಲ ಸಮುದಾಯದ ಅಕ್ಕರೆ, ಪ್ರೀತಿ ಇದ್ದರೆ ಮಾತ್ರ ನಾಯಕನಾಗಲು ಸಾಧ್ಯ ಎಂದರು.

ಸಿದ್ದಲಿಂಗ ಚೌದರಿ, ನಿಂಗರಾಜ ಬಗಲಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಿನಾಕ್ಷಿ ಉಟಗಿ, ರವಿ ಗಿಣ್ಣಿ, ಮಲ್ಲಣ್ಣ ಮನಗೂಳಿ, ರಾಜು ಬಗಲಿ, ಈರಣ್ಣ ಗಾಣಿಗೇರ, ಎಂ.ಎಸ್‌.ಬಿಷ್ಟಗೊಂಡ, ಪಿ.ಬಿ.ಯಾಳವಾರ, ರಾಜೇಂದ್ರ ಮಸಳಿ, ಶಿವಾನಂದ ಕಲಶೆಟ್ಟಿ, ಸಚಿನ ಅಡಕಿ, ಬಸವರಾಜ ಉಳ್ಳಾಗಡ್ಡಿ, ಗುರುನಾಥ ಅಂದೇವಾಡಿ, ಈಶ್ವರ ಶಿರಾಡೋಣ, ಡಾ.ಬಾಬು ಸಜ್ಜನ, ಸಿ.ಎಸ್‌.ಬಿರಾದಾರ, ಶರಣಪ್ಪ ಶಹಾಪೇಟಿ, ಅಮರೇಶ ಹೊಸಮನಿ, ಬಿ.ಎಂ.ಪಾಟೀಲ, ಶಿವಾನಂದ ಮಾವಿನಹಳ್ಳಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

ಸೂರ್ಯ, ಚಂದ್ರ ಇರುವವರೆಗೂ ಸಿದ್ಧೇಶ್ವರ ಶ್ರೀಗಳು ನಮ್ಮ ಮಧ್ಯ ಇರಬೇಕೆಂಬ ಸದಾಶೆಯದೊಂದಿಗೆ ಹಾಗೂ ಮುಂಬರುವ ಯುವ ಸಮುದಾಯಕ್ಕೆ ಸಿದ್ಧೇಶ್ವರ ಶ್ರೀಗಳ ನಡೆ, ನುಡಿ, ಚಿಂತನೆಗಳು ತಿಳಿದುಕೊಳ್ಳಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಶ್ರೀಗಳ ಹೆಸರಿನಲ್ಲಿ ಬೃಹತ್‌ ಸಭಾಭವನ ನಿರ್ಮಾಣ ಮಾಡಲಾಗುತ್ತಿದೆ. ಗಾಣಿಗ ಸಮಾಜದ ಅಭಿವೃದ್ಧಿಗಾಗಿ ಇಂಡಿಯಿಂದ ವಿಧಾನಸಭಾದವರೆಗೂ ತಮ್ಮ ಹಿಂದೆ ಇರುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದ್ದಾರೆ.  

2ಎ ಮೀಸಲಾತಿ ತೆಗೆಯುವ ಪ್ರಸಂಗ ಬಂದರೇ ಸುಮ್ಮನಿರುವುದಿಲ್ಲ: ಶಾಸಕ ಲಕ್ಷ್ಮಣ

2ಎ ಮೀಸಲಾತಿ ತೆಗೆಯಲಾಗುತ್ತಿದೆ ಎಂಬ ಸುದ್ದಿ ಹಬ್ಬಿಸಲಾಗಿದೆ. ಅದು ಸಾಧ್ಯವಿಲ್ಲ. ಒಂದು ವೇಳೆ 2ಎ ಮೀಸಲಾತಿ ತೆಗೆಯುವ ಪ್ರಸಂಗ ಸರ್ಕಾರದಲ್ಲಿ ಬಂದರೇ ಸುಮ್ಮನಿರುವುದಿಲ್ಲ. ಮೀಸಲಾತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇನೆ. ಸಮಾಜದ ಒಳ್ಳೆಯ ಕಾರ್ಯಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.

ಇಂಡಿಯಲ್ಲಿ ಗಾಣಿಗ ಸಮಾಜ ಸಂಘ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲಾಮಟ್ಟದಲ್ಲಿ ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು. ಗಾಣಿಗ ಸಮಾಜಕ್ಕೆ ತನು, ಮನ, ಧನದಿಂದ ಸಹಾಯ, ಸಹಕಾರ ನೀಡಿ, ಸಮಾಜದ ಬೆನ್ನೆಲುಬಾಗಿ ನಿಂತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಅವರನ್ನು ಪ್ರಾಂಜಲಮನಸ್ಸಿನಿಂದ ಸಮಾಜದ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಸಮಾಜದ ಏಳಿಗೆಗಾಗಿ ಸಮಾಜ ಸಂಘಟನೆ ಮಾಡಬೇಕು. ಆದರೆ, ಸಮಾಜ ಸಂಘಟನೆ ಮಾಡುವಾಗ ಯಾವ ಸಮುದಾಯಕ್ಕೂ ನೋವಾಗದ ರೀತಿಯಲ್ಲಿ ಸಂಘಟನೆ ಮಾಡಬೇಕು. ತಾವು ಮಾಡಿದ ಸಂಘಟನೆ ಇತರರಿಗೆ ಮಾದರಿಯಾಗುವಂತೆ ಇರಬೇಕು ಎಂದರು.

ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಅವಾಚ್ಯ ಪದ ಬಳಕೆ: 'ದೀಪ ಆರೋ ಮುಂಚೆ ಹೆಚ್ಚು ಉರಿಯುತ್ತೆ' ಎಂದ ಶಾಸಕ ಲಕ್ಷ್ಮಣ್ ಸವದಿ!

ನಾಯಕನಾಗುವವನು ಜಾತ್ಯಾತೀತೆಯ ನಾಯಕತ್ವದ ಗುಣ ಇರಬೇಕು. ಬೇರೊಬ್ಬರ ನೋವು, ಅದು ನನ್ನ ನೋವು ಎಂದು ತಿಳಿಯಬೇಕು. ಇನ್ನೊಬ್ಬರ ನೋವಿನಲ್ಲಿ ನಾವು ಪಾಲ್ಗೊಂಡರೇ ಮಾತ್ರ ನಾಯಕನಾಗಲು ಸಾಧ್ಯ. ಸಮಾಜದಿಂದ ವ್ಯಕ್ತಿತ್ವ ಬೆಳೆಸಿಕೊಳ್ಳಬಾರದು. ನಾವು ಮಾಡುವ ಕಾರ್ಯ ಪ್ರವೃತ್ತಿಯಿಂದ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿ, ಅನ್ಯಾಯ ಮಾಡಿದಾಗ ಕಾಂಗ್ರೆಸ್‌ ಸೇರಿದೆ. ನನ್ನ ಮನೆಯ ಮಗನಿಗೆ ಅನ್ಯಾಯವಾಗಿದೆ ಎಂದು ನನ್ನ ನೋವಿನಲ್ಲಿ ಕಣ್ಣಿರು ಒರಿಸಿದವರು ಕರ್ನಾಟಕದ ಗಾಣಿಗ ಸಮಾಜ. ಗಾಣಿಗ ಸಮಾಜ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಬೆಳೆಸಿದ್ದು, ಸಮಾಜಕ್ಕೆ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಳ್ಳುತ್ತೇನೆ. ಹೂ ತರುವ ಕೆಲಸ ಮಾಡುತ್ತೇನೆ ವಿನಃ ಹುಲ್ಲು ತರುವ ಕೆಲಸ ಮಾಡುವುದಿಲ್ಲ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ. 

click me!