ಸಿಎಂ ಭೇಟಿ ಮಾಡಿದ ಶಾಸಕ ರಮೇಶ್‌ ಕುಮಾರ್‌ ಟೀಂ

By Kannadaprabha NewsFirst Published Sep 15, 2021, 1:51 PM IST
Highlights
  •  ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗು ಡಿಸಿಸಿ ಬ್ಯಾಂಕ್‌ ವಿಚಾರದಲ್ಲಿ ಯಾವುದೇ ದುಡುಕಿನ ನಿರ್ಧಾರ ಇಲ್ಲ
  • ಸಮಸ್ಯೆಯನ್ನು ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

 ಕೋಲಾರ (ಸೆ.15): ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹಾಗು ಡಿಸಿಸಿ ಬ್ಯಾಂಕ್‌ ವಿಚಾರದಲ್ಲಿ ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುವುದಿಲ್ಲ. ಏನೇ ಸಮಸ್ಯೆ ಇದ್ದರೂ ಅದನ್ನು ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ನೇತೃತ್ವದಲ್ಲಿ ಎರಡೂ ಜಿಲ್ಲೆಗಳ ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ,ಎಸ್‌ಎನ್‌ನಾರಾಯಣಸ್ವಾಮಿ, ವಿ.ಮುನಿಯಪ್ಪ,ಶಿವಶಂಖರರೆಡ್ಡಿ, ರೂಪಕಲಾ ಶಶಿಧರ್‌, ವಿಧಾನ ಪರಿಷತ್‌ ಸದಸ್ಯರಾದ ನಸೀರ್‌ ಅಹಮದ್‌ ಮುಂತಾದವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಈ ಭರವಸೆ ನೀಡಿದ್ದಾರೆ.

ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ

ಈ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರಿ ವ್ಯವಸ್ಥೆಯನ್ನು ಬೆಳೆಸುವುದು ಅಷ್ಟುಸುಲಭವಲ್ಲ. ಆದರೆ ಆಗಿರುವ ತಪ್ಪುಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸೋಣ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಬೇಡ ಇದರಿಂದ ಸಂಸ್ಥೆಗಳಿಗೆ ಧಕ್ಕೆ ಆಗುವುದು ಬೇಡ ಎಂದು ಹೇಳಿದ್ದಾಗಿ ಶಾಸಕ ಶ್ರೀನಿವಾಸಗೊಡ ಮತ್ತು ಕೆ.ವೈ.ನಂಜೇಗೌಡ ತಿಳಿಸಿದರು.

ರಮೇಶ್ ಕುಮಾರ್ ಬೆನ್ನಿಗೆ ನಿಂತು ಕುಮಾರಸ್ವಾಮಿಗೆ ತಿರುಗೇಟು ಕೊಟ್ಟ ಜೆಡಿಎಸ್ ಶಾಸಕ

ಡಿಸಿಸಿ ಬ್ಯಾಂಕ್‌ ವಿರುದ್ಧ ಧ್ವೇಷ ಬೇಡ

ಇದಕ್ಕೂ ಮುಂಚೆ ಜಿಲ್ಲೆಯ ನಾಯಕರು ಡಿಸಿಸಿ ಬ್ಯಾಂಕ್‌ ಮತ್ತು ಕೋಲಾರ ಹಾಲು ಒಕ್ಕೂಟಗಳು ಬೆಳೆದು ಬಂದ ದಾರಿ ಮತ್ತು ಈಗಿನ ಸ್ಥಿತಿಗತಿಗಳ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿಯನ್ನು ನೀಡಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿದ್ದರೆ ಅದನ್ನು ಸರಿಪಡಿಸುವ ವ್ಯವಸ್ಥೆ ಇದೆ, ಅದನ್ನು ಮಾಡಲಿ ಅದು ಬಿಟ್ಟು ಬ್ಯಾಂಕ್‌ನ ಅಸ್ಥಿತ್ವವನ್ನೇ ಹಾಳು ಮಾಡಲು ಹೊರಟಿರುವುದು ಸರಿಯಲ್ಲ. ಇತ್ತೀಚೆಗೆ ತಾನೇ ಕೊರೋನಾ ಸಂಕಷ್ಟಕ್ಕೆ ಒಳಗಾಗಿದ್ದ ಬ್ಯಾಂಕ್‌ ಇದೀಗ ಚೇತರಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವರು ರಾಜಕೀಯ ದ್ವೇಷಕ್ಕಾಗಿ ಬ್ಯಾಂಕನ್ನು ವಿಭಜಿಸುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳಿಗೆ ನಿಯೋಗ ಮನವರಿಕೆ ಮಾಡಿದೆ.

ಕೋಚಿಮುಲ್‌ ವಿಭಜನೆ ಬೇಡ:

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹಾಲು ಒಕ್ಕೂಟವು ಬಹಳ ಕಷ್ಟದಿಂದ ಮೇಲಕ್ಕೆ ಬಂದಿದೆ,ಎರಡೂ ಜಿಲ್ಲೆಗಳ ಜೀವನಾಡಿಯಾಗಿರುವ ಹಾಲು ಒಕ್ಕೂಟವನ್ನು ಈ ಸಮಯದಲ್ಲಿ ಇಬ್ಬಾಗಿಸುವುದರಿಂದ ಎರಡೂ ಜಿಲ್ಲೆಯ ರೈತರು ಕಷ್ಟವನ್ನು ಅನುಭವಿಸಬೇಕಾಗುತ್ತದೆ, ಈಗಾಗಲೇ ಜಿಲ್ಲೆಯಲ್ಲಿ ಖಾಸಗಿ ಹಾಲಿನ ಡೇರಿಗಳ ಹಾವಳಿ ಹೆಚ್ಚಾಗಿರುವುದರಿಂದ ಇಲ್ಲಿ ಆಗುವ ಅವಸರದ ನಿರ್ಧಾರಗಳಿಂದ ಖಾಸಗಿ ಸಂಸ್ಥೆಗಳು ಅನುಕೂಲ ಪಡೆಯುವ ಸಾಧ್ಯತೆಗಳಿರುವುದರಿಂದ ಸಧ್ಯ ಹಾಲು ಒಕ್ಕೂಟವನ್ನು ವಿಭಜಿಸುವುದು ಬೇಡ ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಇದಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 220 ಕೋಟಿ ರೂಪಾಯಿಗಳಲ್ಲಿ ಮೆಗಾ ಡೇರಿ ಸ್ಥಾಪನೆ ಮಾಡಲಾಗಿದೆ, ಇಲ್ಲಿ ಇನ್ನೂ 40 ಕೋಟಿ ಸಾಲವನ್ನು ತೀರಿಸಬೇಕಾದ ಪರಸ್ಥಿತಿ ಇದೆ, ಇದರ ಜತೆಗೆ ಕೋಲಾರದಲ್ಲಿಯೂ 180 ಕೋಟಿ ವೆಚ್ಚದಲ್ಲಿ ಎಂವಿಕೆ ಡೇರಿ ತೆರೆಯಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಇಂತಹ ಪರಿಸ್ಥಿತಿಯಲ್ಲಿ ಒಕ್ಕೂಟವು ವಿಭಜನೆಯಾದರೆ ಹಾಲು ಒಕ್ಕೂಟದ ವ್ಯವಸ್ಥೆಯಲ್ಲದೆ ಎರಡೂ ಜಿಲ್ಲೆಯ ಹಾಲು ಉತ್ಪಾದಕ ರೈತರ ಮೇಲೆ ಪರಿಣಾಮ ಬೀರಲಿದೆ ಎಂದು ನಿಯೋಗ ಮುಖ್ಯಮಂತ್ರಿಗೆ ವಿವರಿಸಿದೆ.

click me!