ಬಿಜೆಪಿಗೆ ಕಾಂಗ್ರೆಸ್ಸೇ ಪ್ರಬಲ ವೈರಿ: ಡಿಕೆಶಿ

By Kannadaprabha NewsFirst Published Mar 14, 2023, 5:44 AM IST
Highlights

ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ಸೇ ಪ್ರಬಲ ವೈರಿ. ಜೆಡಿಎಸ್‌ ಬಿಜೆಪಿಗೆ ಮಿತ್ರನೇ ಹೊರತು ಶತ್ರುವಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತುಗಳಿಂದಲೇ ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

  ನಾಗಮಂಗಲ :  ರಾಜ್ಯದಲ್ಲಿ ಬಿಜೆಪಿಗೆ ಕಾಂಗ್ರೆಸ್ಸೇ ಪ್ರಬಲ ವೈರಿ. ಜೆಡಿಎಸ್‌ ಬಿಜೆಪಿಗೆ ಮಿತ್ರನೇ ಹೊರತು ಶತ್ರುವಲ್ಲ. ಇದು ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ಮಾತುಗಳಿಂದಲೇ ಸಾಬೀತಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಮಂಡ್ಯಕ್ಕೆ ಬಂದಿದ್ದ ಮೋದಿ ಅವರು ಕಾಂಗ್ರೆಸ್‌ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡಿದರೇ ವಿನಃ ಜೆಡಿಎಸ್‌ ಪಕ್ಷದ ವಿರುದ್ಧ ಒಂದೇ ಒಂದು ಮಾತನಾಡಲಿಲ್ಲ. ಮಂಡ್ಯ ಜಿಲ್ಲೆಯ ಆರು ಕ್ಷೇತ್ರಗಳಲ್ಲಿರುವುದು ಜೆಡಿಎಸ್‌ ಹೊರತು ಕಾಂಗ್ರೆಸ್‌ ಅಲ್ಲ. ಆದರೂ, ಜೆಡಿಎಸ್‌ ವಿರುದ್ಧ ಮಾತನಾಡುವ ಗೋಜಿಗೆ ಹೋಗದೆ ಕಾಂಗ್ರೆಸ್‌ ಪಕ್ಷವನ್ನೇ ಟಾರ್ಗೆಟ್‌ ಮಾಡಿಕೊಂಡು ಟೀಕಿಸಿದರು. ಇದರರ್ಥ ಜೆಡಿಎಸ್‌ ನಮ್ಮ ಮಿತ್ರಪಕ್ಷ ಎನ್ನುವುದನ್ನು ಪರೋಕ್ಷವಾಗಿ ಮೋದಿ ಅವರೇ ಒಪ್ಪಿಕೊಂಡಿದ್ದಾರೆ ಎಂದು ಕುಟುಕಿದರು.

Latest Videos

ಯಾರೂ ಡಿಕೆಶಿ ಮಾತಿಗೆ ಬಲಿಯಾಗಲ್ಲ, ಹೋಗುವವರನ್ನು ಗೌರವಯುತವಾಗಿ ಕಳಿಸ್ತೇವೆ: ಯಡಿಯೂರಪ್ಪ

ನಾವು ಕೊಟ್ಟಅಧಿಕಾರವನ್ನು ಕುಮಾರಸ್ವಾಮಿ ಸರಿಯಾಗಿ ಬಳಸಿಕೊಳ್ಳದಿದ್ದರಿಂದಲೇ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾಯಿತು. ಭ್ರಷ್ಟಸರ್ಕಾರದ ಇತಿಹಾಸವನ್ನು ಈ ಚುನಾವಣೆಯಲ್ಲಿ ಕೊನೆಗಾಣಿಸಬೇಕು. ಮತ್ತೆಂದಿಗೂ ಬಿಜೆಪಿಗೆ ಕರ್ನಾಟಕದಲ್ಲಿ ಅಧಿಕಾರದ ಬಾಗಿಲು ತೆರೆಯದಂತೆ ಶಾಶ್ವತವಾಗಿ ಮುಚ್ಚಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ನಾವು ಆಡಿದ ಮಾತಿಗೆ ಎಂದೂ ತಪ್ಪುವವರಲ್ಲ. 200 ಯೂನಿಟ್‌ ವಿದ್ಯುತ್‌ ಉಚಿತ, ಗೃಹಿಣಿಯರಿಗೆ 2000 ರು. ಖಚಿತ. ಅದೇ ರೀತಿ ಬಡವರಿಗೆ 10 ಕೆಜಿ ಅಕ್ಕಿ ಕೊಡುವುದು ನಿಶ್ಚಿತ. ಡಬಲ್‌ ಇಂಜಿನ್‌ ಸರ್ಕಾರದಲ್ಲಿ ಕಂಡಿದ್ದು ಬರೀ ಭ್ರಷ್ಟಾಚಾರ. ಸ್ವಜನಪಕ್ಷಪಾತ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವುದರಿಂದ ನೀವು ಕಾಣುವುದು ಕೇವಲ ಅಭಿವೃದ್ಧಿ ಮಾತ್ರ ಎಂದು ಹೇಳಿದರು.

ಚುನಾವಣೆ ಮುಂದೂಡಲು ಬಿಜೆಪಿ ಯತ್ನ

ಬೆಂಗಳೂರು(ಮಾ.08): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು 50 ದಿನ ಮಾತ್ರ ಬಾಕಿ ಉಳಿದಿದೆ. ಆದರೆ, ತರಾತುರಿಯಲ್ಲಿ ಅಲ್ಪಾವಧಿ ಟೆಂಡರ್‌ ಮೂಲಕ ಅಕ್ರಮವಾಗಿ ಹಣ ಲೂಟಿ ಹೊಡೆಯಲು ಉದ್ದೇಶಪೂರ್ವಕವಾಗಿ ಚುನಾವಣೆ ದಿನಾಂಕ ಮುಂದೂಡುತ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕೂಡಲೇ ದಿನಾಂಕ ನಿಗದಿ ಮಾಡಿ ರಾಜ್ಯ ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರ ತಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಮಾ.28 ಕೊನೆಯ ಕೆಲಸದ ದಿನ ಎಂದು ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಗುಜರಾತ್‌ ಚುನಾವಣೆ ನಂತರ ರಾಜ್ಯದಲ್ಲಿ ಬಹಳ ತರಾತುರಿಯಲ್ಲಿ ಚುನಾವಣೆ ನಡೆಸಲು ಸಭೆ ನಡೆಸಿ ದಿನಾಂಕ ನಿಗದಿ ಮಾಡಿದ್ದರು. ಈಗ ಎಷ್ಟು ಅವಕಾಶ ಸಿಗುತ್ತೋ ಅಷ್ಟೂ ಲೂಟಿ ಹೊಡೆಯಲು ದಿನಾಂಕ ಮುಂದಕ್ಕೆ ಹಾಕುತ್ತಿದ್ದಾರೆ. ಬಿಜೆಪಿ ಎಷ್ಟೇ ಅಕ್ರಮ ದಾರಿ ಹಿಡಿದರೂ ಈ ಬಾರಿ ಸೋಲಿಸಲು ಜನರು ನಿರ್ಧರಿಸಿದ್ದಾರೆ. ಈವರೆಗೆ ಕಾಂಗ್ರೆಸ್‌ 136 ಸ್ಥಾನ ಗಳಿಸುವುದಾಗಿ ಇದ್ದ ಸಮೀಕ್ಷೆ ಇದೀಗ 140 ಸ್ಥಾನಕ್ಕೆ ಹೋಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಕ್ಕರ್‌ ಬಾಂಬ್‌ ಬಗ್ಗೆ ಈಗ ಡಿಕೆಶಿ ಏನೆನ್ನುತ್ತಾರೆ?: ಸಿಎಂ ಬೊಮ್ಮಾಯಿ ತಿರುಗೇಟು

ದಿನನಿತ್ಯ ಬಿಜೆಪಿಗೆ ಆಘಾತಕಾರಿ ಸುದ್ದಿ ಬರುತ್ತಿದೆ. ಹೊರಗಿನಿಂದ ಮಾತ್ರವಲ್ಲ ಬಿಜೆಪಿ ಪಕ್ಷದಲ್ಲೇ ಆಂತರಿಕವಾಗಿ ಆಘಾತಗಳು ಆಗುತ್ತಿವೆ. ರಾಷ್ಟ್ರೀಯ ನಾಯಕರು ನೆರೆ, ಕೋವಿಡ್‌ ಸಮಯದಲ್ಲಿ ರಾಜ್ಯಕ್ಕೆ ಬರಲಿಲ್ಲ. ಇದೀಗ ಕೇವಲ ಮತ ಕೇಳಲು ಬರುತ್ತಿದ್ದಾರೆ. ಜನರ ಕಷ್ಟ, ಅಭಿವೃದ್ಧಿ ಅವರಿಗೆ ಆದ್ಯತೆಯಾಗಿಲ್ಲ. ಚುನಾವಣೆಯಲ್ಲಿ ಮತ ಗಳಿಸುವುದಷ್ಟೇ ಅವರ ಆದ್ಯತೆಯಾಗಿದೆ. ಇದು ಜನರಿಗೆ ಅರ್ಥವಾಗಿದ್ದು, ಅವರೇ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರದ ಗೃಹಮಂತ್ರಿ ಅಮಿತ್‌ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬದಲಾವಣೆಯ ಪರ್ವ ರಾಜ್ಯದಲ್ಲಿ ಆರಂಭವಾಗಿದೆ. ನಮ್ಮ ನಾಯಕರ ರಾಜ್ಯ ಪ್ರವಾಸದ ಕಾರ್ಯಕ್ರಮದಲ್ಲಿ ಜನ ಪ್ರವಾಹದಂತೆ ಹರಿದು ಬರುತ್ತಿರುವುದೇ ಇದಕ್ಕೆ ಸಾಕ್ಷಿ. ಖಂಡಿತ ನಾವು 140 ಸ್ಥಾನಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.

click me!