Mandya: ರಾಜ್ಯ, ರಾಷ್ಟ್ರಕ್ಕೆ ಕಾಂಗ್ರೆಸ್‌ ಅನಿವಾರ್ಯ: ಚಲುವರಾಯಸ್ವಾಮಿ

By Govindaraj SFirst Published Jan 14, 2023, 9:23 PM IST
Highlights

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಸವಲತ್ತುಗಳು ಸಿಗುತ್ತವೆ. ಹಾಗಾಗಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಕಾಂಗ್ರೆಸ್‌ ಪಕ್ಷ ಅನಿವಾರ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು. 

ನಾಗಮಂಗಲ (ಜ.14): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಸವಲತ್ತುಗಳು ಸಿಗುತ್ತವೆ. ಹಾಗಾಗಿ ರಾಜ್ಯ ಹಾಗೂ ರಾಷ್ಟ್ರಕ್ಕೆ ಕಾಂಗ್ರೆಸ್‌ ಪಕ್ಷ ಅನಿವಾರ್ಯ ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್‌.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಭೈರಸಂದ್ರ ಗ್ರಾಮದ ಶ್ರೀಹದ್ದಿಕಲ್ಲು ಹನುಮಂತರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಳಿಂಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಳೆದ ಮೂರು ಬಾರಿ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ನಾನು ಮಾಡಿರುವ ನೂರಾರು ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದಿವೆ. ಆದರೆ, ನನ್ನ ವಿರುದ್ಧ ಎರಡು ಬಾರಿ ಗೆದ್ದು ಶಾಸಕರಾಗಿರುವವರು ಕ್ಷೇತ್ರದಲ್ಲಿ ಯಾವುದಾದರೊಂದು ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಿದ್ದಾರೆಯೇ. ಅದನ್ನು ವೇದಿಕೆಯಲ್ಲಿ ನಿಂತು ಹೇಳಲಿ ಎಂದು ಪರೋಕ್ಷವಾಗಿ ಶಾಸಕ ಸುರೇಶ್‌ಗೌಡರಿಗೆ ಸವಾಲು ಹಾಕಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಾಲೂಕಿನ ಹೇಮಾವತಿ ನಾಲಾ ಅಗಲೀಕರಣಕ್ಕೆ 250 ಕೋಟಿ ರು. ಅನುದಾನ ಬಿಡುಗಡೆ ಮಾಡದಿದ್ದರೆ ಇಂದು ತಾಲೂಕಿನ ಹಲವು ಕೆರೆ ಕಟ್ಟೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿರಲಿಲ್ಲ.

ಸಿದ್ದರಾಮಯ್ಯಗೆ ಮುಖಂಡರು ದಾರಿ ತಪ್ಪಿಸುತ್ತಿದ್ದಾರೆ: ಸಚಿವ ಮುನಿರತ್ನ

ನಾಲಾ ಆಧುನೀಕರಣದ ಜೊತೆಗೆ ಈ ಬಾರಿ ಉತ್ತಮ ಮಳೆಯಾದ ಕಾರಣದಿಂದಾಗಿ ಎಲ್ಲ ಕೆರೆಕಟ್ಟೆಗಳೂ ಸಹ ತುಂಬಿವೆ. ಕೆರೆಕಟ್ಟೆಗಳನ್ನು ತುಂಬಿಸುವಲ್ಲಿ ಈಗಿನ ಶಾಸಕರ ಯಾವುದೇ ಪರಿಶ್ರಮವಿಲ್ಲ ಎಂದರು. ಕಳೆದ ಚುನಾವಣೆ ವೇಳೆ ದೇವೇಗೌಡರು ಮತ್ತು ಕುಮಾರಸ್ವಾಮಿ ಪರವಾಗಿ ಒಬ್ಬರನ್ನು ಗೆಲ್ಲಿಸಿದ್ದಕ್ಕೆ ಕ್ಷೇತ್ರಕ್ಕೆ ಯಾವ ಪ್ರಯೋಜನವಾಗಿದೆ. ಮಾರ್ಕೋನಹಳ್ಳಿ ಜಲಾಶಯದಿಂದ ತಾಲೂಕಿನ 128 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭಗೊಂಡು ಐದು ವರ್ಷ ಕಳೆದರೂ ಸಹ ಇಂದಿಗೂ ಅದಕ್ಕೆ ಚಾಲನೆ ಕೊಡಿಸಲಾಗದವರಿಗೆ ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವೇ ಎಂದು ಶಾಸಕರ ಆಡಳಿತ ವೈಖರಿಯನ್ನು ಟೀಕಿಸಿದರು.

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮದೇ ಸರ್ಕಾರದಲ್ಲಿ ನಾನು 5 ವರ್ಷ ಮಂತ್ರಿಯಾಗಿರುತ್ತೇನೆ. ಆ ಅವಧಿಯಲ್ಲಿ ಮುಂದಿನ 50 ವರ್ಷಗಳಿಗೆ ಆಗುವಷ್ಟುಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದೋ ವ್ಯಾಮೋಹಕ್ಕೆ ಸಿಲುಕಿ ಮುಂದಿನ ಚುನಾವಣೆಯಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡರೆ ಕ್ಷೇತ್ರದ ಅಭಿವೃದ್ಧಿ ಮರೀಚಿಕೆಯಾಗುತ್ತದೆ. ಚುನಾವಣೆಯಲ್ಲಿ ಕೊಡುವ ಆಮಿಷ ಶಾಶ್ವತವಾಗಿರುವುದಿಲ್ಲ. ಕಾಂಗ್ರೆಸ್‌ ಪಕ್ಷ ಜನಪರ ಕೆಲಸ ಮಾಡುತ್ತದೆ. ನಾನು ಶಾಸಕನಾಗಿ ಆಯ್ಕೆಯಾದರೆ ಕ್ಷೇತ್ರ ಮತ್ತು ಜಿಲ್ಲೆ ಸಮಗ್ರವಾಗಿ ಅಭಿವೃದ್ಧಿಯಾಗುತ್ತದೆ. ಹಾಗಾಗಿ ವಿರೋಧಿಗಳ ಯಾವುದೇ ಆಮಿಷಕ್ಕೆ ಬಲಿಯಾಗದೆ ಅಭಿವೃದ್ಧಿ ದೃಷ್ಟಿಯಿಂದ ನನಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕಿನ ಗಡಿ ಗ್ರಾಮ ಗೊಂದಿಹಳ್ಳಿಯಿಂದ ಗರುಡನಹಳ್ಳಿ, ಬಿಳಗುಂದ, ಬೆಟ್ಟದಕೋಟೆ ಮಾರ್ಗವಾಗಿ ಭೈರಸಂದ್ರದ ವರೆಗೂ ಬೃಹತ್‌ ಬೈಕ್‌ ರಾರ‍ಯಲಿ ನಡೆಸಿದರು. ರಾರ‍ಯಲಿಯಲ್ಲಿ ಆಗಮಿಸಿದ ಎನ್‌.ಚಲುವರಾಯಸ್ವಾಮಿ ಹದ್ದಿನಕಲ್ಲು ಹನುಮಂತರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜೆಸಿಬಿ ಮತ್ತು ಕ್ರೇನ್‌ ಯಂತ್ರದ ಮೂಲಕ ಹೂಮಳೆ ಸುರಿಸಿ ಎನ್‌.ಚಲುವರಾಯಸ್ವಾಮಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ವೇದಿಕೆಯಲ್ಲಿ ಕಾಳಿಂಗನಹಳ್ಳಿ ಗ್ರಾಪಂ ವ್ಯಾಪ್ತಿಯ ನೂರಾರು ಮಂದಿ ಜೆಡಿಎಸ್‌ ಕಾರ್ಯಕರ್ತರು ಪಕ್ಷ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ನಿವೇಶನ ಹಂಚಿಕೆ ಹೆಸರಲ್ಲಿ ಭೂಮಿ ಕಸಿಯುವ ಯತ್ನ: ಶಾಸಕ ಶರತ್‌ ಬಚ್ಚೇಗೌಡ

ಚಲುವರಾಯಸ್ವಾಮಿ ಪುತ್ರ ಸಚ್ಚಿನ್‌, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ತಾಪಂ ಮಾಜಿ ಅಧ್ಯಕ್ಷ ಮೂಡ್ಲೀಗೌಡ, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ವಿ.ದಿನೇಶ್‌, ಜಿಪಂ ಮಾಜಿ ಸದಸ್ಯರಾದ ಕಂಚನಹಳ್ಳಿ ಬಾಲು, ಸುರೇಶ್‌, ಮುಖಂಡರಾದ ಪಾಪಣ್ಣ, ವಡೇರಹಳ್ಳಿ ಬಾಬು, ರಘು, ಗವೀಗೌಡ, ಸತ್ಯಣ್ಣ, ಸುನಿಲ ಲಕ್ಷ್ಮೀಕಾಂತ್‌, ಸಂಪತ್‌, ರಮೇಶ್‌, ಅಶೋಕ್‌ ಸೇರಿದಂತೆ ನೂರಾರುಮಂದಿ ಇದ್ದರು.

click me!