ಕಾಂಗ್ರೆಸ್‌ಗೆ ಅಮಿತ್‌ ಶಾ ಅವ್ರನ್ನು ತಡೆಯೋಕಾಗಲ್ಲ: ಬೊಮ್ಮಾಯಿ

By Kannadaprabha NewsFirst Published Jan 8, 2020, 12:08 PM IST
Highlights

ಅಮಿತ್‌ ಶಾ ಅವರು ಜ.19ರಂದು ಮಂಗಳೂರಿಗೆ ಬರುವುದನ್ನು ತಡೆಯುವುದಕ್ಕೆ ಕಾಂಗ್ರೆಸ್‌ನವರಿಂದ ಆಗುವುದಿಲ್ಲ, ಗೃಹ ಸಚಿವರು ಬಂದೇ ಬರುತ್ತಾರೆ ಎಂದು ರಾಜ್ಯ ಗೃಹ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಉಡುಪಿ(ಜ.08): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಜ.19ರಂದು ಮಂಗಳೂರಿಗೆ ಬರುವುದನ್ನು ತಡೆಯುವುದಕ್ಕೆ ಕಾಂಗ್ರೆಸ್‌ನವರಿಂದ ಆಗುವುದಿಲ್ಲ, ಗೃಹ ಸಚಿವರು ಬಂದೇ ಬರುತ್ತಾರೆ ಎಂದು ರಾಜ್ಯ ಗೃಹ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವರಿಗೆ ‘ಗೋಬ್ಯಾಕ್‌’ ಎನ್ನುವುದು ಕಾಂಗ್ರೆಸ್‌ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ನಿಲುವು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿವಾದದ ಕಿಡಿ ಹೊತ್ತಿಸಿದ್ದ 'ಫ್ರೀ ಕಾಶ್ಮೀರ' ಫಲಕಕ್ಕೆ ಕ್ಷಮೆ ಕೋರಿದ ಯುವತಿ!

ಅಮಿತ್‌ ಶಾ ಮಂಗಳೂರಿಗೆ ಬಂದರೆ ಉಪವಾಸ ಧರಣಿ ಮಾಡುತ್ತೇನೆ ಎಂದು ಕಾಂಗ್ರೆಸ್‌ ನಾಯಕ ಐವನ್‌ ಡಿಸೋಜ ಹೇಳಿರುವುದದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಯಿ, ಉಪವಾಸ ಮಾಡಿದ್ರೆ ಮಾಡಲಿ, ಇದರಿಂದ ಅವರ ಆರೋಗ್ಯವಾದರೂ ಸುಧಾರಣೆಯಾಗುತ್ತದೆ ಎಂದು ವ್ಯಂಗ್ಯವಾಡಿದರು.

ಅಸೆಂಬ್ಲಿಯಲ್ಲಿ ನೆನಪಿಸುವೆ:

ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಪ್ರಕೃತಿ ವಿಕೋಪ ಪರಿಹಾರವನ್ನು ಪೂರ್ತಿ ಬಿಡುಗಡೆ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ಎಷ್ಟುಪರಿಹಾರ ನೀಡಿದ್ದಾರೆ ಎಂಬ ವಿವರಗಳನ್ನು ವಿಧಾನಮಂಡಲದಲ್ಲಿ ಸಿದ್ದರಾಮಯ್ಯ ಅವರಿಗೆ ನೆನಪಿಸುತ್ತೇನೆ ಎಂದರು.

ಕೇಂದ್ರ ಸರ್ಕಾರಕ್ಕೆ ಪರಿಹಾರ ಬಿಡುಗಡೆಗೆ ಕೆಲವು ಮಾನದಂಡಗಳಿರುತ್ತವೆ, ಅದರಂತೆ ಬಿಡುಗಡೆ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಳಿದಷ್ಟುಪರಿಹಾರವನ್ನು ಹಿಂದಿನ ಯಾವ ಕೇಂದ್ರ ಸರ್ಕಾರವು ಕೊಟ್ಟಿಲ್ಲ. ಇದು ಸಿದ್ದರಾಮಯ್ಯನವರಿಗೂ ಚೆನ್ನಾಗಿ ಗೊತ್ತಿದೆ. ಆದರೆ ರಾಜಕೀಯ ಮಾಡುವುದಕ್ಕಾಗಿ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಫೆಬ್ರವರಿಯಲ್ಲಿ ಯುಐಎಂ:

ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಫೆಬ್ರವರಿ ತಿಂಗಳಲ್ಲಿ ಉಡುಪಿ ಹೂಡಿಕೆದಾರರ ಸಮಾವೇಶ (ಉಡುಪಿ ಇನ್‌ವೆಸ್ಟರ್ಸ್‌ ಮೀಟ್‌) ನಡೆಸಲಾಗುತ್ತದೆ. ಹೊರಗಿನ ಹೂಡಿಕೆದಾರರು ಉಡುಪಿಯಲ್ಲಿ ಬಂಡವಾಳ ಹೂಡುವಂತೆ ಈ ಮೂಲಕ ಆಹ್ವಾನಿಸಲಾಗುತ್ತದೆ. ಅದಕ್ಕೆ ಮೊದಲು ಜಿಲ್ಲೆಯಲ್ಲಿ ಕೆ.ಐ.ಎ.ಡಿ.ಬಿ.ಯಲ್ಲಿ ಎಷ್ಟುಭೂಮಿ ಲಭ್ಯ ಇದೆ, ಜಿಲ್ಲೆಯ ತಾಲೂಕುಗಳಲ್ಲಿ ಕೈಗಾರಿಕಾ ಎಸ್ಟೇಟುಗಳಿವೆ ಎಂಬ ವಿವರಗಳನ್ನು ಸಂಗ್ರಹಿಸಿ, ಅದರ ಆಧಾರದಲ್ಲಿ ಹೂಡಿಕೆದಾರರನ್ನು ಆಹ್ವಾನಿಸಲಾಗುತ್ತದೆ ಎಂದರು.

click me!