ಸಿದ್ಧಾರ್ಥ್‌ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡ ನೇತ್ರಾವತಿ ಸೇತುವೆಗೆ ರಕ್ಷಣಾ ಗೋಡೆ..?

By Kannadaprabha NewsFirst Published Sep 5, 2019, 12:16 PM IST
Highlights

ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡ ನೇತ್ರಾವತಿ ನದಿಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಚಿಂತಿಸಲಾಗಿದೆ. ನೇತ್ರಾವತಿ ಸೇತುವೆ ಬಳಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯುವ  ನಿಟ್ಟಿನಲ್ಲಿಈ ಬಗ್ಗೆ ಸಲಹೆ ನೀಡಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಸಲಹೆ ಮಾಡಿದ್ದಾರೆ. ಈ ಕುರಿತು ದ.ಕ. ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ್ದಾರೆ.

ಮಂಗಳೂರು(ಸೆ.05): ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡ ನೇತ್ರಾವತಿ ಸೇತುವೆಗೆ ತಡೆಗೋಡೆ ನಿರ್ಮಿಸುವ ಬಗ್ಗೆ ಚಿಂತಿಸಲಾಗಿದೆ.

ನೇತ್ರಾವತಿ ಸೇತುವೆಯಲ್ಲಿ ಆತ್ಮಹತ್ಯೆಯಂತಹ ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವುದನ್ನು ತಡೆಯಲು ಸೇತುವೆಯ ಎರಡು ಬದಿಗಳಲ್ಲಿ ರಕ್ಷಣಾ ಗೋಡೆ ರಚಿಸುವಂತೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಸಲಹೆ ಮಾಡಿದ್ದಾರೆ.

ನೇತ್ರಾವತಿ ಸೇತುವೆ ಬಳಿ ಆಗಮಿಸುವ ಮುನ್ನ ಪತ್ರ ಪೋಸ್ಟ್ ಮಾಡಿದ್ದ ಸಿದ್ಧಾರ್ಥ

ಈ ಕುರಿತು ದ.ಕ. ಜಿಲ್ಲಾಧಿಕಾರಿ ಜೊತೆ ಚರ್ಚೆ ನಡೆಸಿದ ಅವರು, ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆಯ ನಂತರ ಕೆಲವೇ ದಿನಗಳಲ್ಲಿ ನಾಲ್ಕು ಮಂದಿ ಅಲ್ಲಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅದರಲ್ಲಿ ಒಬ್ಬರು ಬದುಕಿ ಉಳಿದಿದ್ದಾರೆ. ಭವಿಷ್ಯದಲ್ಲಿ ನೇತ್ರಾವತಿ ಸೇತುವೆಗೆ ಸೂಸೈಡ್ ಪಾಯಿಂಟ್ ಎನ್ನುವ ಹಣೆಪಟ್ಟಿ ಬರದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

5ರಿಂದ 6 ಅಡಿ ಎತ್ತರದ ಗೋಡೆ:

ಅಲ್ಲಿ ಎರಡು ಸೇತುವೆಗಳಿದ್ದು ಎರಡಕ್ಕೂ ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಎರಡೂ ಸೇತುವೆಗಳ ನಾಲ್ಕು ಬದಿಗಳಲ್ಲಿಯೂ ಕನಿಷ್ಠ 5 ರಿಂದ 6 ಅಡಿಗಳಷ್ಟು ಎತ್ತರದ ಗ್ರಿಲ್ ಹಾಕಿ ಫೈಬರ್ ತಡೆಗೋಡೆಯ ತರಹ ವ್ಯವಸ್ಥೆ ಮಾಡಿದರೆ ಅದು ಆತ್ಮಹತ್ಯೆಗೆ ಮುಂದಾಗುವವರಿಗೆ ತೊಡಕಾಗಲಿದೆ. ಇನ್ನು ಪಾರದರ್ಶಕ ಗೋಡೆ ತರಹದ ವ್ಯವಸ್ಥೆಯಿಂದ ನದಿಯ ಸೌಂದರ್ಯಕ್ಕೂ ಧಕ್ಕೆ ಆಗುವುದಿಲ್ಲ ಎಂದು ಶಾಸಕರು ಸಲಹೆ ನೀಡಿದ್ದಾರೆ.

ನೇತ್ರಾವತಿ ನದಿಯಲ್ಲಿ ಸಿದ್ಧಾರ್ಥ್ ಮೃತದೇಹ ಪತ್ತೆ

ಸಿಸಿ ಕ್ಯಾಮೆರಾ ಅಳವಡಿಕೆ:

ಎರಡೂ ಸೇತುವೆಗಳ ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಅಹಿತಕರ ಘಟನೆ ನಡೆಯುವುದನ್ನು ತಡೆಯಲು ಸಹಕಾರಿಯಾಗಬಹುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಮಂಗಳೂರು: ನೇತ್ರಾವತಿ ಸೇತುವೆಗೆ ಸಿಸಿ ಟಿವಿ ಅಳವಡಿಕೆ

ಎರಡೂ ಕಾಮಗಾರಿಗಳಿಗೆ ಕ್ರಿಯಾಯೋಜನೆಯನ್ನು ತಯಾರಿಸಲು ಶಾಸಕರು ತಿಳಿಸಿದ್ದು, ಮುಂದಿನ ಕೆಲ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಆದರೆ ಆತ್ಮಹತ್ಯೆ ಮಾಡುವುದು ಸಮಸ್ಯೆಗೆ ಪರಿಹಾರ ಅಲ್ಲ ಎಂದು ಯುವಜನಾಂಗ ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದು ಶಾಸಕರ ಪ್ರಕಟಣೆ ತಿಳಿಸಿದ್ದಾರೆ.

click me!