ಅಪಘಾತದಲ್ಲಿ ಮೃತಪಟ್ಟ ಟೆಕ್ಕಿ ಕುಟುಂಬಕ್ಕೆ 3.2 ಕೋಟಿ ರು. ಪರಿಹಾರ

By Web DeskFirst Published Sep 5, 2019, 11:38 AM IST
Highlights

ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಅವರ ಕುಟುಂಬದ ಸದಸ್ಯರಿಗೆ ಹೈಕೋರ್ಟ್ 3.2 ಕೋಟಿ ರು. ಪರಿಹಾರ ಪ್ರಕಟಿಸಿದೆ. 

ಬೆಂಗಳೂರು [ಸೆ.05]:  ರಸ್ತೆ ಅಪಘಾತದಲ್ಲಿ ಮೃತಪಟ್ಟ ಶಿವಮೊಗ್ಗ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಅವರ ಕುಟುಂಬದ ಸದಸ್ಯರಿಗೆ ಹೈಕೋರ್ಟ್ 3.2 ಕೋಟಿ ರು. ಪರಿಹಾರ ಪ್ರಕಟಿಸಿದೆ. ಪ್ರಕರಣದಲ್ಲಿ 1.7 ಕೋಟಿ ರು. ಪರಿಹಾರ ಘೋಷಿಸಿದ್ದ ಮೋಟಾರು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ಮೃತ ಯತೀಂದ್ರನಾಥ್ ಪತ್ನಿ, ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ಬಿ.ವಿ. ನಾಗರತ್ನ ಮತ್ತು ನ್ಯಾ. ಕೆ.ನಟ ರಾಜನ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

4 ವರ್ಷದ ಹಿಂದೆ ಮೃತಪಟ್ಟಿದ್ದ ಯತೀಂದ್ರ: ಎನ್.ಬಿ.ಯತೀಂದ್ರನಾಥ್ (40) ಅವರು  ಕಾರಿನಲ್ಲಿ 2015 ರ ಫೆ.10ರಂದು ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ- 7 ರಲ್ಲಿ ಮೂಲಕ ಬಾಗೇಪಲ್ಲಿ ಬಳಿಯ ಸುಂಕಲಮ್ಮ ದೇವಸ್ಥಾನಕ್ಕೆ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 3.30 ಕ್ಕೆ ಚಾಲಕನ ಅತಿವೇಗ, ನಿರ್ಲಕ್ಷ್ಯದ ಚಾಲನೆಯಿಂದ ಕಾರು ನಿಯಂತ್ರಣ ತಪ್ಪಿ ಪರಗೋಡು ಗ್ರಾಮದ ಬಳಿ ಪಲ್ಟಿ ಯಾಗಿ ಅಪಘಾತ ಸಂಭವಿಸಿತ್ತು.

ಯತೀಂದ್ರನಾಥ್ ಸಾವನ್ನಪ್ಪಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಬೆಂಗಳೂರಿನ ಎಂಟನೇ ಹೆಚ್ಚುವರಿ ಸಣ್ಣ ವ್ಯಾಜ್ಯಗಳ ಮತ್ತು ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಾಧಿ ಕರಣ, ಮೃತನ ಕುಟುಂಬ ಸದಸ್ಯರಿಗೆ ವಾರ್ಷಿಕ ಶೇ. 9 ರಷ್ಟು ಬಡ್ಡಿದರಲ್ಲಿ 1.7 ಕೋಟಿ ರು. ಪರಿಹಾರ ನೀಡಲು ವಿಮಾ ಕಂಪನಿಗೆ 2017 ರಲ್ಲಿ ಆದೇಶಿ ಸಿತ್ತು. ಈ ಪರಿಹಾರ ಮೊತ್ತವನ್ನು 50 ಕೋಟಿ ರು.ಗೆ ಹೆಚ್ಚಿಸಬೇಕು ಎಂದು ಕೋರಿ ಯತೀಂದ್ರ ನಾಥ್ ಪತ್ನಿ ಎಸ್.ಎಲ್. ವರ್ಷಾ ಹಾಗೂ ಕುಟುಂಬದ ಸದಸ್ಯರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮತ್ತೊಂದೆಡೆ ನ್ಯಾಯಾಧಿಕರಣದ ಆದೇಶ ರದ್ದುಪಡಿಸುವಂತೆ ಕೋರಿ ವಿಮಾ ಕಂಪನಿಯ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಹೈಕೋರ್ಟ್, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಿನದಂದು ಯತೀಂದ್ರನಾಥ್ ಉದ್ಯೋಗ ಮಾಡುತ್ತಿರ ಲಿಲ್ಲ ಎಂಬ ಅಂಶ ಪರಿಗಣಿಸಿ ನ್ಯಾಯಾಧಿಕರಣವು 1.7 ಕೋಟಿ ರು. ಪರಿಹಾರ ನೀಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಯತೀಂದ್ರನಾಥ್ ದ್ವಿತೀಯ ಪಿಯುನಲ್ಲಿ 6 ನೇ, ಸಿಇಟಿ-ಕರ್ನಾಟಕದಲ್ಲಿ 3ನೇ, ಆಲ್ ಇಂಡಿಯಾ ಐಐಟಿ- ಜೆಇಇನಲ್ಲಿ 77 ನೇ, ಮತ್ತು 1992 ರ 12ನೇ ತರಗತಿಯ ರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾ ಶೋಧನಾ ಪರೀಕ್ಷೆಯಲ್ಲಿ 76ನೇ ರ್ಯಾಂಕ್ ಗಳಿಸಿದ್ದರು. ಅಲ್ಲದೆ,  ಐಟಿ-ಮದರಾಸಿನಿಂದ ಕಂಪ್ಯೂಟರ್ ಸೈನ್ಸ್ ವಿಭಾಗದ ಪದವಿ ಪರೀಕ್ಷೆಯಲ್ಲಿ ಯತೀಂದ್ರನಾಥ್ ಅತ್ಯುತ್ತಮ ಶ್ರೇಯಾಂಕದಲ್ಲಿ ತೇರ್ಗಡೆಯಾಗಿದ್ದರು.

ಅಮೆರಿಕದ ಜಾರ್ಜಿಯಾ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಅಮೆರಿಕದಲ್ಲಿ ಥಾಮಸ್ ಆಲ್ವಾ ಎಡಿಸನ್ ಪೇಟೆಂಟ್ ಮೆಡಲ್ ಸಹ ಪಡೆದಿದ್ದರು. ಅನೇಕ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಮಾಡಿ, ನಂತರ ಬೆಂಗಳೂರಿಗೆ ಬಂದಿದ್ದರು. ನ್ಯಾಯಾಧಿಕರಣ ಯತೀಂದ್ರನಾಥ್ ಅವರ ಗಳಿಕೆಯ ಸಾಮರ್ಥ್ಯವನ್ನು ಪರಿಗಣಿಸದೆ ಅಪಘಾತ ನಡೆದ ದಿನದಂದು ಅವರು ಯಾವುದೇ ಉದ್ಯೋಗದಲ್ಲಿ ಇರಲಿಲ್ಲ ಎಂಬ ಅಂಶವನ್ನು ಮಾತ್ರ ಗಮನದಲ್ಲಿ ಇರಿಸಿಕೊಂಡು 1.7 ಕೋಟಿ ರು.ಪರಿಹಾರ ನೀಡಿದೆ. 

ಈ ಆದೇಶ ಸೂಕ್ತವಾಗಿಲ್ಲ ಎಂದು ತಿಳಿಸಿದ ಹೈಕೋಟ್, ಪರಿಹಾರ ಮೊತ್ತವನ್ನು 3.2  ಕೋಟಿ ರು.ಗೆ ಹೆಚ್ಚಿಸಿ ಆದೇಶಿಸಿದೆ. ಈ ಪರಿಹಾರ ಮೊತ್ತದಲ್ಲಿ ಯತೀಂದ್ರನಾಥ್ ಪತ್ನಿ ಮತ್ತು ಅಪ್ರಾಪ್ತ ಮಗನಿಗೆ ತಲಾ ಶೇ.30 ರಷ್ಟು, ತಂದೆ-ತಾಯಿಗೆ ತಲಾ ಶೇ. 15 , ಮದುವೆಯಾಗದ ಸೋದರಿಗೆ .10 ರಷ್ಟು ಹಣವನ್ನು ವಿತರಿಸಬೇಕು ಹೈಕೋರ್ಟ್ ಇದೇ ವೇಳೆ ಆದೇಶಿಸಿದೆ.

click me!