ಬೀದರ್‌ನ ಪಶು ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಚವ್ಹಾಣ

By Kannadaprabha NewsFirst Published Jan 18, 2023, 11:00 PM IST
Highlights

ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಥಣಿ ಕಾಲೇಜಿಗೆ 30 ಕೋಟಿ ಅನುದಾನ ನೀಡಲಾಗಿದೆ. ಹೀಗೆ ವಿವಿ ವ್ಯಾಪ್ತಿಯಲ್ಲಿರುವ ಎಲ್ಲ ಕಾಲೇಜುಗಳ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಿದೆ ಎಂದ ಸಚಿವ ಪ್ರಭು ಬಿ.ಚವ್ಹಾಣ. 

ಬೀದರ್‌(ಜ.18):  ಇಲ್ಲಿನ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ತಿಳಿಸಿದರು. ಅವರು ಬೀದರ್‌ನಲ್ಲಿರುವ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಜರುಗಿದ ವಿಶ್ವವಿದ್ಯಾಲಯದ 18ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿಂದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಾಕಷ್ಟು ಅನ್ಯಾಯವಾಗಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಪ್ರಗತಿ ಕೆಲಸಗಳಾಗುತ್ತಿವೆ.

ವಿವಿ ಆವರಣದಲ್ಲಿ ಆಡಳಿತ ಭವನ ನಿರ್ಮಾಣಕ್ಕಾಗಿ 25 ಕೋಟಿ ರು. ವೆಚ್ಚದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಮುಂಬರುವ ಆಯವ್ಯಯದಲ್ಲಿ ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಥಣಿ ಕಾಲೇಜಿಗೆ 30 ಕೋಟಿ ಅನುದಾನ ನೀಡಲಾಗಿದೆ. ಹೀಗೆ ವಿವಿ ವ್ಯಾಪ್ತಿಯಲ್ಲಿರುವ ಎಲ್ಲ ಕಾಲೇಜುಗಳ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಿದೆ ಎಂದು ಸಚಿವರು ಹೇಳಿದರು.

ಕಾಂಗ್ರೆಸ್‌ನಿಂದ ಶೀಘ್ರ ರಾಜ್ಯಮಟ್ಟದ ಒಬಿಸಿ ಸಮಾವೇಶ: ಮಧು ಬಂಗಾರಪ್ಪ

ನಮ್ಮ ದೇಶ ಕೃಷಿ ಪ್ರಧಾನ ದೇಶ. ಜಾನುವಾರುಗಳು ರೈತರ ಆರ್ಥಿಕತೆಗೆ ಬೆನ್ನೆಲುಬಿನಂತೆ ಕೆಲಸ ಮಾಡುತ್ತವೆ. ಹಾಗೆಯೇ ಗೋವುಗಳಿಗೆ ಪವಿತ್ರ ಸ್ಥಾನಮಾನ ನೀಡಲಾಗಿದೆ. ಗೋವನ್ನು ಮಾತೆಯೆಂದು ಪೂಜಿಸಲಾಗುತ್ತದೆ. ಇಂತಹ ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವುದನ್ನು ತಪ್ಪಿಸಿ ಜಾನುವಾರುಗಳ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಇದರಡಿ ಈವರೆಗೆ 35 ಸಾವಿರ ಗೋವುಗಳನ್ನು ಸಂರಕ್ಷಿಸಿ ಸುಮಾರು 3 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು.

ದೇಶಾದ್ಯಂತ ಜಾನುವಾರುಗಳಿಗೆ ಕಾಡಿದ್ದ ಲಿಂಪಿಸ್ಕಿನ್‌ ರೋಗವನ್ನು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ತಡೆಯಲು ಲಸಿಕಾಕರಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಹೇಳಿದರು. ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸರಿಯಾಗಿ ವ್ಯಾಸಂಗ ಮಾಡಬೇಕು. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಪೋಷಕರಿಗೆ ಮೋಸವಾಗದ ರೀತಿಯಲ್ಲಿ ಪ್ರಯತ್ನ ನಡೆಸಬೇಕು. ವಿದ್ಯಾಭ್ಯಾಸದ ನಂತರ ಸಮಾಜ ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಕಾರ್ಯದರ್ಶಿ ಡಾ.ವಿನೋದ ಭಟ್‌ ಮತನಾಡಿ, ಜಾನುವಾರು ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ವಿಶ್ವವಿದ್ಯಾಲಯ ಜಾನುವಾರು ಸಾಕಾಣಕೆದಾರರು ಮತ್ತು ರೈತರ ಏಳಿಗೆಗೆ ನೆರವಾಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಗಢಗಢ: ಬೀದರಲ್ಲಿ ಹೆಚ್ಚು ಚಳಿ

ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ವಸಂತ ಬಿರಾದಾರ, ಕವಿತಾ ಮಿಶ್ರಾ, ಡಾ.ದೀಪಕ ದೊಡಯ್ಯಾ, ಡಾ.ಯತೀಂದ್ರ.ಎಸ್‌ ಮಾತನಾಡಿದರು. ವಿವಿ ಕುಲಸಚಿವರಾದ ಶಿವಶಂಕರ.ಎಸ್‌ ಶೈಕ್ಷಣಿಕ ವರದಿ ಮಂಡಿಸಿದರು. ವಿವಿ ಕುಲಪತಿಗಳಾದ ಪ್ರೊ. ಕೆ.ಸಿ ವೀರಣ್ಣ ಅಧ್ಯಕ್ಷತೆ ವಹಿಸಿದ್ದರು.

ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಎನ್‌.ಎಂ ದಿನೇಶ, ಭೋಜನಾಯಕ, ಕರ್ನಾಟಕ ಪಶುವೈದ್ಯಕೀಯ ಪರಿಷÜತ್ತಿನ ಅಧ್ಯಕ್ಷ ಡಾ. ಕೆ ಸತ್ಯನಾರಾಯಣ, ವಿಶ್ವವಿದ್ಯಾಲಯದ ಡಾ. ಬಿ.ವಿ ಶಿವಪ್ರಕಾಶ, ಡಾ. ದಿಲೀಪಕುಮಾರ, ಡಾ. ಎನ್‌ ಪ್ರಕಾಶ, ಡಾ. ಎನ್‌.ಎ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಂಗಳೂರು ಪಶುವೈದ್ಯಕೀಯ ಕಾಲೇಜಿನ ಡಾ.ಶ್ರೀಕೃಷ್ಣ ಇಸ್ಲೂರ್‌ ಅವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಸಂಜೀವಕುಮಾರ ಬಸಪ್ಪ ಅವರಿಗೆ ಶ್ರೇಷ್ಠ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

click me!