ಕರ್ನಾಟಕದಲ್ಲಿ ಭೀಕರ ಬರ ಇದ್ದರೂ ವಿಜೃಂಭಣೆಯಿಂದ ಹಂಪಿ ಉತ್ಸವ ಆಚರಣೆ: ಸಿಎಂ ಸಿದ್ದರಾಮಯ್ಯ

By Girish GoudarFirst Published Feb 2, 2024, 11:21 PM IST
Highlights

ವಿಜಯನಗರ ಸಾಮ್ರಾಜ್ಯ ಕಾಲದ ಗತವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಹೀಗಾಗಿ ಬರ ಪರಿಸ್ಥಿತಿ ಇದ್ದರೂ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ನರಸಿಂಹ ಮೂರ್ತಿ ಕುಲಕರ್ಣಿ

ವಿಜಯನಗರ(ಹಂಪಿ)(ಫೆ.02): ಜಾತಿ ಧರ್ಮಗಳ‌ ಮಧ್ಯೆ ವಿಷ ಬೀಜ ಬಿತ್ತುವವರಿಗೆ ಸಂವಿಧಾನದ ಅರಿವನ್ನು ನೀಡಬೇಕಿದೆ. ಇತಿಹಾಸ ತಿಳಿದವರು ಭವಿಷ್ಯವನ್ನು ರೂಪಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೂರು ದಿನಗಳ ಕಾಲ ಜರುಗುವ ಐತಿಹಾಸಿಕ ಹಂಪಿ ಉತ್ಸವವನ್ನು ನಗಾರಿ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ವಿಜಯನಗರ ಸಾಮ್ರಾಜ್ಯ ಕಾಲದ ಗತವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಹೀಗಾಗಿ ಬರ ಪರಿಸ್ಥಿತಿ ಇದ್ದರೂ ಹಂಪಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

Latest Videos

ಹಂಪಿ ಉತ್ಸವದ ರೂವಾರಿ ಎಂಪಿ ಪ್ರಕಾಶ

ಹಂಪಿ ಉತ್ಸವದ ಪ್ರೇರಣಾ ಶಕ್ತಿ ಎಂ.ಪಿ.ಪ್ರಕಾಶ್ ಅವರನ್ನು  ಸ್ಮರಿಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿಯ ಉತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಗುತ್ತಿದೆ. ಆದರೆ ಹಂಪಿಯಲ್ಲಿ ಮಾಡುತ್ತಿಲ್ಲ ಎಂದು ಆಗಿನ ಸಂದರ್ಭದಲ್ಲಿ ಎಂಪಿ‌ ಪ್ರಕಾಶ ಪ್ರಸ್ತಾಪಿಸಿದಾಗ,  ಅಂದಿನ  ಸರ್ಕಾರ ಆಗ ಒಪ್ಪಿಕೊಂಡು, ಹಂಪಿ ಉತ್ಸವ ಆಚರಣೆಯನ್ನು ಪ್ರಾರಂಭಿಸಿತ್ತು  ಎಂದು ನೆನಪಿಸಿಕೊಂಡರು. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್ ಎಂಬುವವರು ಸಾಮ್ರಾಜ್ಯದ ಕುರಿತು, ಹಂಪಿ ನಗರದ ವೈಭವವನ್ನು ಯಾರೂ ಕೂಡ ಎಲ್ಲಿಯೂ ಕೂಡ ಕಿವಿಯಲ್ಲಿ ಕೇಳಿರಲಿಕ್ಕಿಲ್ಲ, ಕಣ್ಣಿನಿಂದ ನೋಡಿರಲಕ್ಕಿಲ್ಲ, ಸ್ವರ್ಗದಂತೆ ವೈಭವವಿತ್ತು ಎಂದು ವರ್ಣನೆ ಮಾಡಿದ್ದಾರೆ.  ಅಂತಹ 500 ವರ್ಷಗಳ ಹಿಂದಿನ ವೈಭವದ ಇತಿಹಾಸವನ್ನು ಮತ್ತೆ ಸ್ಮರಿಸುವುದು, ಅದನ್ನು ಮುಂದಿನ ಪೀಳಿಗೆಗೆ ತಿಳಿಸುವುದು ಅಗತ್ಯವಾಗಿದೆ ಎಂದರು.

ವಿಜಯನಗರ: ಹಂಪಿ ಉತ್ಸವದಲ್ಲಿ ಧ್ವನಿ, ಬೆಳಕಿನ ರಸದೌತಣ..!

ಜಾತಿ ಧರ್ಮ ಮತ್ತು ಸಂವಿಧಾನ

ಸರ್ಕಾರದ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವ ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ಪುನಃ ರಾಜ್ಯದಲ್ಲಿ ಮರುಕಳಿಸಬೇಕು ಎನ್ನುವುದು ಸರ್ಕಾರದ ಆಶಯ..
ಇತಿಹಾಸ ತಿಳಿಯದವರು ಇತಿಹಾಸ ನಿರ್ಮಿಸಲಾರರು ಎಂದು ಡಾ. ಅಂಬೇಡ್ಕರ್ ಅವರು ಹೇಳಿರುವಂತೆ, ಇತಿಹಾಸ ತಿಳಿಯುವುದರಿಂದ ನಾವು ಅನೇಕ ತಪ್ಪುಗಳನ್ನು ತಿದ್ದಿಕೊಳ್ಳಬಹುದು, ಒಳ್ಳೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ.  ಬಸವಣ್ಣನವರು ವರ್ಗ ರಹಿತ, ಜಾತಿ ರಹಿತ, ಸಮ ಸಮಾಜ ನಿರ್ಮಾಣಕ್ಕೆ ಹೋರಾಟ ಮಾಡಿದರು.  ಮನುಷ್ಯತ್ವ, ಸಮಾನತೆ ಇರುವ ಸಮಾಜವನ್ನು ನಾವೆಲ್ಲ ಸೇರಿ ನಿರ್ಮಾಣ ಮಾಡಬೇಕು.  ಸರ್ಕಾರಕ್ಕೆ ವಿಜಯನಗರ ಕಾಲದ ವೈಭವ ಮತ್ತು ಬಸವಾದಿ ಶರಣರ ಆಶಯಗಳು ಮತ್ತು ಇವರು ಹಾಕಿಕೊಟ್ಟ ಮಾರ್ಗವೇ ಮಾದರಿ. ಆದ್ದರಿಂದ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದರು. 

ಸಂವಿಧಾನ ಬದಲಾವಣೆ ಮಾಡುವವರಿದ್ದಾರೆ

ಬಸವಾದಿ ಶರಣರ, ಅಂಬೇಡ್ಕರ್ ಅವರ ಸಂವಿಧಾನದ ಆಶಯ ಎರಡೂ ಒಂದೇ ಆಗಿದೆ. ಸಹಿಷ್ಣತೆ, ಸಹಬಾಳ್ವೆ, ಸಂಪತ್ತಿನ ಸಮಾನ ಹಂಚಿಕೆ, ಅವಕಾಶಗಳ ಸಮಾನ ಹಂಚಿಕೆ ಬಸವಾದಿ ಶರಣರು ಮತ್ತು ಅಂಬೇಡ್ಕರ್ ಅವರ ಆಶಯವಾಗಿದೆ.  ಪ್ರತಿಯೊಬ್ಬರೂ ತಮ್ಮ ಧರ್ಮವನ್ನು ಪ್ರೀತಿಸಬೇಕು. ಪರ ಧರ್ಮಗಳನ್ನು ಗೌರವಿಸಬೇಕು. ಧರ್ಮ ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷ, ವೈಷಮ್ಯ ಹರಡುವವರನ್ನು ತಿರಸ್ಕರಿಸದೇ ಹೋದರೆ ನಾಡಿನ, ದೇಶದ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ಬಸವಣ್ಣನವರ ಆಶಯದ ಸಹಬಾಳ್ವೆ, ಸಹಿಷ್ಣುತೆ ನಮಗೆ, ನಿಮಗೆ ಮಾದರಿಯಾಗಲಿ ಎಂದರು.

ಕರ್ನಾಟಕದ ಗ್ಯಾರಂಟಿಯೇ ಇತರರಿಗೆ ಮಾದರಿ

ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಯೂ, ರಾಜ್ಯದ ಆರ್ಥಿಕ ಸ್ಥಿತಿಯನ್ನು ಕೂಡ ಸದೃಢವಾಗಿಯೇ ಇರಿಸಿದ್ದೇವೆ.  ಹಂಪಿಯ ವೈಭವದಂತೆ ನಮ್ಮ ಸರ್ಕಾರವೂ ಕೂಡ ವೈಭವದ ಕಡೆ ಹೆಜ್ಜೆ ಇಡುವ ಕಾರ್ಯ ಮಾಡುತ್ತಿದೆ.

ಹೊಸಪೇಟೆ: ಹಂಪಿಯಲ್ಲಿ ದೇವರ ದರ್ಶನಕ್ಕೂ ಬಂತು ಡ್ರೆಸ್‌ ಕೋಡ್‌..!

ಕರ್ನಾಟಕ ಮಾದರಿ ಸರ್ಕಾರವಾಗಿದ್ದು, ನಾವು ಬೇರೆ ರಾಜ್ಯವನ್ನು ಅನುಸರಿಸುವುದಿಲ್ಲ, ನಮ್ಮದೇ ಮಾದರಿ ಸರ್ಕಾರವಾಗಿದೆ. ಗ್ಯಾರಂಟಿ ಟೀಕಿಸಿದ ಕೇಂದ್ರ ಸರ್ಕಾರ ಇದೀಗ ಅದನ್ನು ಮಾದರಿಯಾಗಿಟ್ಡುಕೊಂಡಿದೆ ಎಂದರು..

ದೆಹಲಿಯಲ್ಲಿ ಪ್ರತಿಭಟನೆ

ಫೆ. 07 ರಂದು ಬರ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲು ಒತ್ತಾಯಿಸಿ, ರಾಜ್ಯದ ಶಾಸಕರು ಮತ್ತು ಸಚಿವರುಗಳೊಂದಿಗೆ ದೆಹಲಿಗೆ ಭೇಟಿ ನೀಡಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಇದು ಯಾವುದೇ ರಾಜಕೀಯಕ್ಕಲ್ಲ. ಈ ನಾಡಿನ ಜನರಿಗೋಸ್ಕರ ಹೋಗುತ್ತಿದ್ದೇವೆ ಎಂದರು.

click me!