
ಕಲಬುರಗಿ (ಏ.12): ಜಾತಿ ರಹಿತ ಸಮ-ಸಮಾಜ ನಿರ್ಮಾಣವಾಗಬೇಕಾದರೆ ದ್ವೇಷ ಬಿಟ್ಟು ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಭಾವೈಕ್ಯತೆಯಿಂದ ಮನುಷ್ಯರಾಗಿ ಬಾಳಬೇಕಿದೆ. ಮೂಢನಂಬಿಕೆ ಬಿಟ್ಟು ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಚಿತ್ತಾಪುರ ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ಮಹಾತ್ಮ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದಿಂದ ಆಯೋಜಿಸಿದ ಭೋಜಲಿಂಗೇಶ್ವರರ ನೂತನ ದೇವಸ್ಥಾನ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ, ನೂತನ ಬೆಳ್ಳಿ ರಥೋತ್ಸವ ಚಾಲನೆ ಹಾಗೂ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಅನೇಕ ಜಾತಿ ಧರ್ಮಗಳಿವೆ, ಅನೇಕ ಭಾಷೆ ಸಂಸ್ಕೃತಿಗಳಿವೆ. ವೈವಿದ್ಯತೆ ಇರುವ ಸಮಾಜದಲ್ಲಿ ಏಕತೆ ಪ್ರದರ್ಶನ ಮಾಡುವುದು ಅತ್ಯವಶ್ಯಕ. ಯಾವುದೇ ಧರ್ಮ ದ್ವೇಷ ಮಾಡಲು ಹೇಳುವುದಿಲ್ಲ ಎಲ್ಲರನ್ನೂ ಪ್ರೀತಿಸಿದಾಗಲೇ ಮಾನವ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಇದೇ ತತ್ವವನ್ನು ಸಾರಿದ ಮತ್ತು ಸತ್ಯದ ಹಾದಿ ತೋರಿದ ಭೋಜಲಿಂಗೇಶ್ವರ ಮಠ ಸರ್ವ ಧರ್ಮದ ಭಕ್ತ ವೃಂದದ ಉದ್ದಾರಕ್ಕೆ ಶ್ರಮಿಸುವ ಜಾತ್ಯಾತೀತ ಮಠವಾಗಿ ಬೆಳೆಯಲಿ ಎಂದು ಸಿಎಂ ಸಿದ್ದರಾಮಯ್ಯ ಹಾರೈಸಿದರು.
ಧರ್ಮದ ಹೆಸರಲ್ಲಿ ಜಾತಿಯನ್ನು ಒಡೆದು, ಒಂದು ಧರ್ಮದ ಜನರನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಪಟ್ಟಭದ್ರ ಹಿತಾಸಕ್ತಿಗಳು ನಮ್ಮ ನಡುವೆ ಇದ್ದಾರೆ. ನೀವು ಅಂತಹ ಪಟ್ಟಭದ್ರರ ಮಾತು ಕೇಳಬಾರದು. ಸರ್ವರನ್ನು ಪ್ರೀತಿಸುವ ಮನೋಬಾವನೆ ಬೆಳೆಸಿಕೊಳ್ಲಬೇಕು ಮತ್ತು ಒಗ್ಗಟ್ಟಾಗಿರಬೇಕು ಎಂದು ಸಮುದಾಯಕ್ಕೆ ಕರೆ ನೀಡಿದ ಸಿ.ಎಂ. ಅವರು, ಇದನ್ನೆ ಭೋಜಲಿಂಗೇಶ್ವರ ಹೇಳಿದ್ದಾರೆ ಎಂದು ಪುನರುಚ್ಚರಿಸಿದರು.
ಸ್ವಚ್ಛ ಮನಸಿನಿಂದ ದೇವಸ್ಥಾನಕ್ಕೆ ಹೋಗಿ ನಮಗಷ್ಟೇ ಅಲ್ಲದೇ ಎಲ್ಲರಿಗೂ ಒಳ್ಳೆಯದು ಮಾಡು ಎಂದು ಪ್ರಾರ್ಥಿಸಿದಾಗ ಮಾತ್ರ ಫಲ ಸಿಗುತ್ತದೆ. ಬಸವಣ್ಣ, ಸೂಫಿ, ಸಂತರು ಕೂಡಾ ಇದನ್ನೇ ಪ್ರತಿಪಾದಿಸಿದರು. ಬಸವಣ್ಣ ಕಾಯಕ ಹಾಗೂ ದಾಸೋಹ ಎರಡನ್ನು ಒತ್ತಿ ಹೇಳಿದ್ದಾರೆ. ಎಲ್ಲರೂ ಕಷ್ಟಪಟ್ಟು ದುಡಿಯಬೇಕು. ಸಮಾನವಾಗಿ ಹಂಚಿಕೊಳ್ಳಬೇಕು. ಕಾಯಕ ಹಾಗೂ ದಾಸೋಹಗಳನ್ನು ಎಲ್ಲರೂ ಮಾಡಬೇಕು. ಕೆಲವರೇ ಮಾಡಿದರೆ ಅಸಮಾನತೆ ಸಮಾಜ ನಿರ್ಮಾಣವಾಗುತ್ತದೆ. ಪ್ರತಿಯೊಬ್ಬರಿಗೆ ಸಮಾನತೆ ಹಾಗೂ ಆರ್ಥಿಕಶಕ್ತಿ ಬಂದಾಗ ಮಾತ್ರ ಸಮಾನತೆ ಬರಲು ಸಾಧ್ಯ ಎಂದರು.
ಭೋಜಲಿಂಗೇಶ್ವರ ದೇವಾಲಯದ ಶಕ್ತಿ ಜನರಿಗೆ ತಿಳಿಸುವ ಕೆಲಸ ನೀವೆಲ್ಲ ಮಾಡಬೇಕು ಎಂದು ಹೇಳಿದ ಸಿಎಂ, ಬಸವಣ್ಣನವರ ಇವನಾರವ ಇವನಾರವ ಎಂದೆನಿಸದಿರಯ್ಯ ಎನ್ನುವ ವಚನ ಹಾಗೂ ಕನಕದಾಸರ ಕುಲಕುಲವೆಂದು ಹೊಡದಾಡದಿರಿ ಎನ್ನುವ ವಾಣಿಯನ್ನು ಸಿಎಂ ಉಚ್ಚರಿಸಿದರು.
ಬಸವಣ್ಣನವರ, ಕನಕದಾಸರ ಶರಣರ, ಸಾಧು ಸಂತರ ಸಮಾನತೆಯ ತತ್ವಗಳು ಇದ್ದರೂ ಇನ್ನೂ ಜಾತಿ ವ್ಯವಸ್ಥೆ ಹೋಗಿಲ್ಲ. ಇವನಾರವ ಎನ್ನುತ್ತೇವೆ ಹೊರತು ಇವ ನಮ್ಮವ ಎನ್ನುತ್ತಿಲ್ಲ. ಕನಕದಾಸರ ಉಕ್ತಿ ಯಂತೆ ಕುಲದ ಆಚೆಗೆ ನಾವೆಲ್ಲ ಮನುಷ್ಯರಾಗಿ ಬಾಳಬೇಕು ಎಂದು ಕರೆ ನೀಡಿದ ಸಿಎಂ, ಡಾ ಅಂಬೇಡ್ಕರ್ ಅವರ ಆಶಯದಂತೆ ಎಲ್ಲರೂ ಸಮಾನವಾಗಿ ಬಾಳಬೇಕು. ಈ ಎಲ್ಲ ತತ್ವಗಳು ಜಾರಿಗೆ ಬರಲು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಜಾತಿ ವ್ಯವಸ್ಥೆಯ ವಿರುದ್ಧ ಚಾಲನೆ ಸಿಗಬೇಕೆಂದರೆ ಶಿಕ್ಷಣ ದೊರಕಿದಾಗ ಮಾತ್ರ ಸಮಾನತೆ ಸಿಗುತ್ತದೆ. ದೇವಸ್ಥಾನ ಉದ್ಘಾಟನೆ ನೆರವೇರಿಸಿದ್ದೇನೆ. ಇದು ಸಾರ್ಥಕವಾಗಬೇಕಾದರೆ ನೀವೆಲ್ಲ ಮನುಷ್ಯರಾಗಿ ಬಾಳಬೇಕು ಎಂದರು.
ಜಾತಿ ವ್ಯವಸ್ಥೆ ಸ್ವಲ್ಪ ಕಡಿಮೆಯಾಗಿದೆಯಾದರು ಇನ್ನೂ ಪೂರ್ಣವಾಗಿ ಹೋಗಿಲ್ಲ. ಅದು ತುಂಬಾ ಜಡತ್ವ ಹೊಂದಿದೆ. ಪ್ರತಿಯೊಬ್ಬರು ವೈಚಾರಿಕತೆ ಹಾಗೂ ವೈಜ್ಞಾನಿಕ ಹಿನ್ನೆಲೆಯ ಇರುವ ವಿದ್ಯೆ ಪಡೆದುಕೊಳ್ಳಬೇಕು. ಸಮಾಜದಲ್ಲಿ ಮೂಢನಂಬಿಕೆಗಳ ದಾಸರಾಗಬೇಡಿ. ಬಸವಣ್ಣನವರು ಆ ಕಾಲದಲ್ಲಿಯೇ ಕರ್ಮ ಸಿದ್ಧಾಂತ ತಿರಸ್ಕಾರ ಮಾಡಿದ್ದರು. ಈಗಲೂ ವಿದ್ಯಾವಂತರು ಇದನ್ನು ನಂಬುತ್ತಿರುವುದು ದುರಂತ. ಕರ್ಮಸಿದ್ದಾಂತವೇ ಶುದ್ಧ ಸುಳು. ಅದನ್ನು ನಂಬಬೇಡಿ ಎಂದು ಜನ ಸಮುದಾಯಕ್ಕೆ ಕರೆನೀಡಿದರು.
ಹಿರಗಪ್ಪ ತಾತನವರ ಬೇಡಿಕೆಯಂತೆ ಸುಕ್ಷೇತ್ರದಲ್ಲಿ ವಸತಿ ನಿಲಯ ನಿರ್ಮಾಣ ಹಾಗೂ ಭಕ್ತಾದಿಗಳಿಗೆ ಯಾತ್ರಿ ನಿವಾಸ ಸ್ಥಾಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ. ಯಾತ್ರಿ ನಿವಾಸಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು 1 ಕೋಟಿ ರೂ. ಹಣ ನೀಡುವ ಭರವಸೆ ನೀಡಿದ್ದಾರೆ. ವಸತಿ ನಿಲಯ ಪ್ರಾರಂಭಕ್ಕೆ ಸರ್ಕಾರ ಸಹಾಯ ಮಾಡಲಿದೆ ಎಂದು ಭರವಸೆ ನೀಡಿದರು. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಭಕ್ತರ ಕೋರಿಕೆಯಂತೆ ಸುಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡಲಾಗುವುದು. ಇದಲ್ಲದೆ ಭಕ್ತರಿಂದ ನಿರ್ಮಿಸಲಾದ ದೇವಸ್ಥಾನದ ಜೀರ್ಣೋದ್ಧಾರಕ್ಕು ಸಹ ತಾವು ಬದ್ದ ಇರುವುದಾಗಿ ತಿಳಿಸಿದರು.