
ಬೆಂಗಳೂರು (ಸೆ.5): ರಾಜಧಾನಿ ಬೆಂಗಳೂರಿನಲ್ಲಿ ಈಗ ಟ್ರಾಫಿಕ್ ಫೈನ್ ಜಮಾನ. ಬೆಂಗಳೂರು ಟ್ರಾಫಿಕ್ ಪೊಲೀಸರು, ಟ್ರಾಫಿಕ್ ನಿಯಮ ಉಲ್ಲಂಘನೆ ಕೇಸ್ನಲ್ಲಿ ಹಾಕಲಾಗಿರುವ ದಂಡದಲ್ಲಿ ಶೇ. 50ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಇದರಿಂದಾಗಿ ಜನರು ತಮ್ಮ ವಾಹನಗಳ ಮೇಲೆ ಇರುವ ಟ್ರಾಫಿಕ್ ಫೈನ್ಅನ್ನು ವೆಬ್ಸೈಟ್ ಮೂಲಕ ಚೆಕ್ ಮಾಡಿಕೊಂಡು ದಂಡ ಕಟ್ಟಲು ಆರಂಭಿಸಿದ್ದಾರೆ. ಇದರಿಂದಾಗಿ ಬೆಂಗಳೂರು ಪೊಲೀಸರು ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ದಂಡದ ರೂಪದಲ್ಲಿ ಪಡೆದುಕೊಂಡಿದ್ದರೆ. ಸಾಮಾನ್ಯ ಜನರೇ ದಂಡ ಕಟ್ಟುತ್ತಿರುವಾಗ ನಮ್ಮ ಬುದ್ಧಿವಂತ ನಾಗರೀಕರು, ರಾಜ್ಯದ ಸಿಎಂ ಸಿದ್ಧರಾಮಯ್ಯ ಅವರ ಕಾರ್ನ ಮೇಲಿರುವ ಟ್ರಾಫಿಕ್ ಉಲ್ಲಂಘನೆ ಕೇಸ್ಅನ್ನು ಹೊರತೆಗೆದಿದ್ದು, ನೀವೂ ಡಿಸ್ಕೌಂಟ್ನ ಲಾಭ ಪಡದು ದಂಡ ಕಟ್ಟಿ ಎಂದಿದ್ದಾರೆ.
ಟ್ರಾಫಿಕ್ ಫೈನ್ನಲ್ಲಿ ಶೇ. 50ರಷ್ಟು ಡಿಸ್ಕೌಂಟ್ ಇದೆ ಸಿಎಂ ಸಾಹೇಬ್ರೆ, ಈ ಅವಕಾಶ ಸದುಪಯೋಗಪಡಿಸಿಕೊಂಡು ನಿಮ್ಮ ಕಾರ್ನ ಮೇಲಿರುವ ಫೈನ್ಗಳನ್ನು ಕ್ಲಿಯರ್ ಮಾಡಿಕೊಳ್ಳಿ ಎಂದಿದ್ದಾರೆ.
ಸಿಎಂ ಸಿದ್ಧರಾಮಯ್ಯ ಉಪಯೋಗಿಸುವ ಸರ್ಕಾರಿ ಕಾರ್ನ ಮೇಲೆ 7 ಟ್ರಾಫಿಕ್ ಉಲ್ಲಂಘನೆ ಕೇಸ್ಗಳಿವೆ. ಇದರಿಂದಾಗಿ ಈ ಕಾರ್ನ ಮೇಲೆ ಒಟ್ಟಾರೆ 2 ಸಾವಿರ ರೂಪಾಯಿ ಟ್ರಾಫಿಕ್ ಫೈನ್ ಅಮೌಂಟ್ ಬಾಕಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಕಾರ್ ಫೋಟೊ ಹಾಕಿ ಫೈನ್ ಕಟ್ಟುವಂತೆ ಜನರು ಸೂಚಿಸಿದ್ದಾರೆ.
ಸರ್ಕಾರಿ ಕಾರು ಕೆಎ 05 GA 2023 ಕಾರಿನ ಮೇಲೆ ಬರೋಬ್ಬರಿ 7 ಟ್ರಾಫಿಕ್ ವಾಯ್ಲೇಷನ್ ಕೇಸ್ ದಾಖಲಾಗಿದೆ. ಈಗಾಗಲೇ ಬೆಂಗಳೂರು ಪೊಲೀಸರು, ಟ್ರಾಫಿಕ್ ಫೈನ್ ಮೇಲೆ 50% ಡಿಸ್ಕೌಂಟ್ ಇದೆ ಎಂದು ಹೇಳಿದ್ದಾರೆ. ಈ ಅವಕಾಶ ಬಳಸಿಕೊಂಡು ದಂಡ ಕಟ್ಟಿ ಎಂದಿದ್ದಾರೆ.
ಕೆಲವು ಕೇಸ್ಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕಾರ್ನಲ್ಲಿ ಸೀಟ್ಬೆಲ್ಟ್ ಧರಿಸದೇ ಇರುವುದು ಕಂಡಿದ್ದರೆ, ಇನ್ನೂ ಕೆಲವು ಕಡೆ ಓವರ್ಸ್ಪೀಡ್ಗಾಗಿ ಫೈನ್ ಹಾಕಲಾಗಿದೆ.
'ಗೌರವಾನ್ವಿತ ಸಿಎಂ ಸಿದ್ಧರಾಮಯ್ಯ ಅವರೇ, ನಿಮ್ಮ ಅಧಿಕೃತ ಕಾರ್ನ ಮೇಲೆ ಬಾಕಿ ಇರುವ ಸಂಚಾರ ಉಲ್ಲಂಘನೆಗಳು. ಓವರ್ಸ್ಪೀಡ್, ಸೀಟ್ಬೆಲ್ಟ್ ಹಾಕದೇ ಇರೋದಕ್ಕೆ ಫೈನ್ ಹಾಕಲಾಗಿದೆ. ಫೈನ್ಗಳನ್ನು ಕ್ಲೀಯರ್ ಮಾಡ್ತೀರಿ ಅಂತಾ ನಂಬುತ್ತೇವೆ. ಯಾಕೆಂದರೆ ಶೇ. 50ರಷ್ಟು ಡಿಸ್ಕೌಂಟ್ ಇರೋದು 12ನೇ ತಾರೀಖಿನ ವರೆಗೆ ಮಾತ್ರ. ರಸ್ತೆ ಸುರಕ್ಷತೆಗೆ ರಾಯಭಾರಿಯಾಗಿ. ಸುರಕ್ಷತೆ ಮೊದಲು ಅನ್ನೋದು ನಮ್ಮ ಆದ್ಯತೆಯಾಗಬೇಕು' ಎಂದು ಆರ್ಸಿಬಿ ಬೆಂಗಳೂರು ಅನ್ನೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಸಿಎಂ ಕಾರ್ನ ಟ್ರಾಫಿಕ್ ಉಲ್ಲಂಘನೆಯ ಚಿತ್ರಗಳು ಹಾಗೂ ಚಲನ್ ಅನ್ನು ಪೋಸ್ಟ್ ಮಾಡಲಾಗಿದೆ.
ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, 'ಇದು ಸರ್ಕಾರಿ ಕಾರ್ನ ಮೇಲೆ ಬಿದ್ದಿರುವ ಫೈನ್. ಇದನ್ನು ಯಾರು ಕಟ್ಟಬೇಕು? ಕೊನೆಗೆ ಇದನ್ನು ಕಟ್ಟೋದು ಜನರ ತೆರಿಗೆ ಹಣದಿಂದಲೇ. ಫೈನ್ಅನ್ನು ಅಲ್ಲಿ ಕಟ್ಟಿಬೇರೆ ಯಾವುದಾದರೂ ಚಾರ್ಜ್ ಎಂದು ಹಾಕುತ್ತಾರೆ. ಹಾಗಾಗಿ ಇಲ್ಲಿ ಎಷ್ಟು ಚಲನ್ ಇದ್ದರೂ ಲೆಕ್ಕಕ್ಕೆ ಬರೋದಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ.