
ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದೀಗ ಬೆಳ್ತಂಗಡಿಯ ಎಸ್ಐಟಿ ಕಚೇರಿಯಲ್ಲಿ ಗಿರೀಶ್ ಮಟ್ಟೆಣ್ಣನವರ್ ಅವರನ್ನು ವಿಚಾರಣೆಗಾಗಿ ಕರೆಯಲಾಗಿದೆ. ಚಿನ್ನಯ್ಯ ಹಾಗೂ ಜಯಂತ್ ನೀಡಿದ ಹೇಳಿಕೆಗಳನ್ನು ಜೋಡಿಸಿ ಪ್ರಶ್ನೆಗಳ ಪಟ್ಟಿಯನ್ನು ಸಿದ್ಧಪಡಿಸಿದ ಎಸ್ಐಟಿ ತಂಡ, ಹಲವಾರು ತಾಂತ್ರಿಕ ಸಾಕ್ಷ್ಯಾಧಾರಗಳೊಂದಿಗೆ ವಿಚಾರಣೆ ನಡೆಸಿದೆ.
ಚಿನ್ನಯ್ಯ ಬಂಧನದ ನಂತರ ನೀಡಿದ ಹೇಳಿಕೆಗಳು ತನಿಖೆಗೆ ಹೊಸ ದಿಕ್ಕು ತೋರಿಸಿದ್ದು, ಗಿರೀಶ್ ಮಟ್ಟೆಣ್ಣನವರ್ ಅವರ ಪಾತ್ರದ ಬಗ್ಗೆ ಎಸ್ಐಟಿ ವಿಶೇಷ ಗಮನ ಹರಿಸಿದೆ. ಚಿನ್ನಯ್ಯ ಹಾಗೂ ಜಯಂತ್ ಇಬ್ಬರ ಹೇಳಿಕೆಗಳನ್ನು ಪರಸ್ಪರ ಹೋಲಿಕೆ ಮಾಡಿ, ಗಿರೀಶ್ ಮಟ್ಟೆಣ್ಣನವರ್ ವಿರುದ್ಧ ಹಲವು ಪ್ರಶ್ನೆಗಳನ್ನು ಎಸ್ಐಟಿ ಸಿದ್ಧಪಡಿಸಿದೆ.
ಗಿರೀಶ್ ಮಟ್ಟೆಣ್ಣನವರ್ ದೆಹಲಿ ಪ್ರವಾಸ ಕೈಗೊಂಡಿದ್ದ ಮಾಹಿತಿಯನ್ನೂ ಎಸ್ಐಟಿ ಪರಿಶೀಲಿಸುತ್ತಿದೆ. ಈ ಪ್ರಯಾಣಕ್ಕೆ ಯಾರು ಸೂಚನೆ ನೀಡಿದ್ದರು? ವೆಚ್ಚವನ್ನು ಯಾರು ಭರಿಸಿದ್ದರು? ಎಂಬುದರ ಕುರಿತು ವಿವರವಾಗಿ ವಿಚಾರಣೆ ನಡೆದಿದೆ. ಜೊತೆಗೆ, ಚಿನ್ನಯ್ಯ ಅವರನ್ನು ಹೇಗೆ ಪರಿಚಯಿಸಿಕೊಂಡರು ಎಂಬ ಪ್ರಶ್ನೆಯನ್ನೂ ಎಸ್ಐಟಿ ತಂಡ ಮುಂದಿಟ್ಟಿದೆ.
ತನಿಖೆಯ ಭಾಗವಾಗಿ ಕಾಲ್ ಡೀಟೇಲ್ಸ್, ಮೊಬೈಲ್ ಲೊಕೇಶನ್, ಹೋಟೆಲ್ ಬಿಲ್ ಹಾಗೂ ಸಿಸಿಟಿವಿ ದೃಶ್ಯಗಳನ್ನು ಎಸ್ಐಟಿ ಪಡೆದು ಪರಿಶೀಲಿಸುತ್ತಿದೆ. ಇವುಗಳ ಆಧಾರದ ಮೇಲೆ ಗಿರೀಶ್ ಮಟ್ಟೆಣ್ಣನವರ್ ಹೇಳಿಕೆಗಳನ್ನು ಕ್ರಾಸ್-ವೆರಿಫಿಕೇಶನ್ ಮಾಡುವ ಕಾರ್ಯ ನಡೆದಿದೆ.
ಗಿರೀಶ್ ಮಟ್ಟೆಣ್ಣನವರ್ ಅವರಿಗೆ ಅಧಿಕೃತ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅವರು ಬೆಳ್ತಂಗಡಿಯ ಎಸ್ಐಟಿ ಕಚೇರಿಗೆ ಹಾಜರಾಗಿದ್ದಾರೆ. ಅಲ್ಲಿ ಅಧಿಕಾರಿಗಳು ಹಲವು ಹಂತದ ಪ್ರಶ್ನೋತ್ತರ ನಡೆಸಿದ್ದು, ಅವರ ಪಾತ್ರವನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತಿದ್ದಾರೆ.
ಗಿರೀಶ್ ಮಟ್ಟೆಣ್ಣನವರ್ ಅವರ ಹೇಳಿಕೆ ಹಾಗೂ ಲಭ್ಯವಾಗಿರುವ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ, ಮುಂದಿನ ತನಿಖೆಯ ದಿಕ್ಕು ನಿಗದಿಯಾಗುವ ಸಾಧ್ಯತೆ ಇದೆ. ಚಿನ್ನಯ್ಯನೊಂದಿಗೆ ಇರುವ ನಂಟಿನ ಬಗ್ಗೆ ಹಾಗೂ ಇತರ ಶಂಕಾಸ್ಪದ ಅಂಶಗಳ ಬಗ್ಗೆ ಎಸ್ಐಟಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ಹೊರತರುವ ನಿರೀಕ್ಷೆಯಿದೆ.