ಮಹಿಳೆಯರ ರಕ್ಷಣೆಗಾಗಿ ಪಿಂಕ್‌ ಸಾರಥಿಗೆ ಚಾಲನೆ

By Web DeskFirst Published Jun 7, 2019, 8:30 AM IST
Highlights

ಮಹಿಳೆಯರ ರಕ್ಷಣೆಗೆ ಸಿಎಂ ಕುಮಾರಸ್ವಾಮಿ ಪಿಂಕ್ ಸಾರಥಿಗೆ ಚಾಲನೆ ನೀಡಿದ್ದಾರೆ. 25 ಪಿಂಕ್‌ ಸಾರಥಿ ಗಸ್ತು ವಾಹನಗಳು ಕಾರ್ಯಾರಂಭ ಮಾಡಿವೆ. 

ಬೆಂಗಳೂರು :  ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ತಕ್ಷಣವೇ ಧಾವಿಸಲು 25 ಪಿಂಕ್‌ ಸಾರಥಿ ಗಸ್ತು ವಾಹನಗಳಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹಸಿರು ನಿಶಾನೆ ತೋರಿದರು.

ಗುರುವಾರ ವಿಧಾನಸೌಧ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಬಿಎಂಟಿಸಿಯ ನೂತನ ಸೇವೆಗೆ ಚಾಲನೆ ನೀಡಿದರು.

ನಿರ್ಭಯ ಯೋಜನೆಯಡಿ 25 ಪಿಂಕ್‌ ಸಾರಥಿ ಗಸ್ತು ವಾಹನಗಳನ್ನು .4.30 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗಿದ್ದು, ಈ ವಾಹನಗಳು ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲಿವೆ. ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತೊಂದರೆಯಾದರೆ ಕೂಡಲೇ ಅವರ ರಕ್ಷಣೆಗೆ ಈ ವಾಹನಗಳು ಧಾವಿಸಲು ಅನುಕೂಲವಾಗುವಂತೆ ಜಿಪಿಎಸ್‌ ಅಳವಡಿಸಲಾಗಿದೆ. ಬಿಎಂಟಿಸಿ ನಿಯಂತ್ರಣ ಕೊಠಡಿಯಿಂದ ಪಿಂಕ್‌ ಸಾರಥಿ ವಾಹನಗಳ ಮೇಲೆ ನಿಗಾ ಇಡಲಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಾರಿ ತಂದಿರುವ ನಿರ್ಭಯ ಯೋಜನೆಯಡಿ ಬಿಎಂಟಿಸಿಗೆ .56.07 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ಮಹಿಳೆಯರ ರಕ್ಷಣೆ ಮತ್ತು ಅಭಿವೃದ್ಧಿ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಈ ಯೋಜನೆಯಡಿ 25 ಪಿಂಕ್‌ ಸಾರಥಿ ಗಸ್ತುವಾಹನಗಳು ಮಹಾನಗರದಲ್ಲಿ ಜೂ.6ರಿಂದಲೇ ಕಾರ್ಯಾಚರಣೆ ಆರಂಭಿಸಿವೆ.

ಪಿಂಕ್‌ ಸಾರಥಿ ವಾಹನಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಿರ್ಭಯ ಯೋಜನೆಯಡಿ ಮಹಿಳಾ ಸುರಕ್ಷತೆ ಮತ್ತು ಭದ್ರತೆಗಾಗಿ ಪಿಂಕ್‌ ಜೀಪುಗಳನ್ನು ಖರೀದಿಸಲಾಗಿದೆ. ಮಹಿಳೆಯರು ತಮಗೆ ಯಾವುದೇ ತೊಂದರೆ ಆಗುವ ಮುನ್ಸೂಚನೆ ಸಿಗುವ ವೇಳೆಯಲ್ಲಿ ಸಹಾಯವಾಣಿಗೆ ಕರೆ ಮಾಡಿ ಪಿಂಕ್‌ ಸಾರಥಿ ನೆರವು ಪಡೆದುಕೊಳ್ಳಬಹುದು ಎಂದು ಹೇಳಿದರು.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಎನ್‌.ವಿ.ಪ್ರಸಾದ್‌ ಮಾತನಾಡಿ, ನಿರ್ಭಯ ಯೋಜನೆಯಡಿ ಮಹಿಳೆಯರಿಗೆ ಲಘು ಮತ್ತು ಭಾರೀ ವಾಹನಗಳ ಚಾಲನಾ ತರಬೇತಿ ನೀಡಲಾಗುತ್ತಿದೆ. ಮಹಿಳೆಯರ ರಕ್ಷಣೆ ಉದ್ದೇಶಕ್ಕಾಗಿ ಪ್ರಮುಖ ಬಸ್‌ ನಿಲ್ದಾಣಗಳಲ್ಲಿ ವಿಶ್ರಾಂತಿ ಕೊಠಡಿ, ಎಲ್ಲ ಬಸ್‌ ನಿಲ್ದಾಣಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಹಿಂದುಳಿದ ವರ್ಗಗಳ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ, ಬಿಎಂಟಿಸಿ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನೆರವು

ತೊಂದರೆಗೆ ಸಿಲುಕಿದ ಮಕ್ಕಳು, ಮಹಿಳಾ ಪ್ರಯಾಣಿಕರು 77609 91212 (ವಾಟ್ಸಪ್‌) 1800 425 1663 (ಟೋಲ್‌ ಫ್ರೀ) ಮೂಲಕ ಸಂಪರ್ಕಿಸಿ ಪಿಂಕ್‌ ಸಾರಥಿ ವಾಹನಗಳ ನೆರವು ಪಡೆಯಬಹುದು.

click me!