ಮೈಸೂರು (ಜು.24): ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಕೆಳಗಿಳಿಸುವುದು ಸರಿಯಲ್ಲ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಘಟಕದ ಅಧ್ಯಕ್ಷ ಟಿ.ಎಸ್. ಲೋಕೇಶ್ ಖಂಡಿಸಿದರು.
ಒಂದು ವೇಳೆ ಆ ರೀತಿ ಮಾಡಿದಲ್ಲಿ ವೀರಶೈವ ಲಿಂಗಾಯತರನ್ನೇ ಮತ್ತೆ ಮುಖ್ಯಮಂತ್ರಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆ ವೇಳೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಮುಂಬರುವ ಸಿಎಂ ಕೂಡ ಭ್ರಷ್ಟರೇ ಬರೋದು: ಸಿದ್ದು ಭವಿಷ್ಯ
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಬಂದ ಮತಗಳಲ್ಲಿ ಸಿಂಹಪಾಲು ವೀರಶೈವ ಲಿಂಗಾಯತರದ್ದಾಗಿದೆ. ಇವರೆಲ್ಲ ತಮ್ಮ ಸಮುದಾಯದ ಓರ್ವರು ಸಿಎಂ ಆಗಲಿದ್ದಾರೆಂಬ ನಿರೀಕ್ಷೆಯಲ್ಲಿ ಮತ ಹಾಕಿದರು. ಹೀಗಾಗಿ,ಯಡಿಯೂರಪ್ಪ ಅವರಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಹೈಕಮಾಂಡ್ ಅರಿತುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಒಂದು ವೇಳೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದಲ್ಲಿ ಸಮುದಾಯ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಯಡಿಯೂರಪ್ಪ ಅವರು ಪ್ರವಾಹ ಪರಿಸ್ಥಿತಿ, ಕೊರೋನಾದಂತಹ ಸಮಯದಲ್ಲಿ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ. ಹೀಗಿದ್ದರೂ ಅವರನ್ನು ಬದಲಿಸಬೇಕೆಂಬ ಕೂಗು ಎದ್ದಿರುವುದು ಸರಿಯಲ್ಲ. ಒಂದು ವೇಳೆ ಅವರನ್ನು ಕೆಳಗಿಳಿಸಿದಲ್ಲಿ ಪಕ್ಷದಲ್ಲಿನ ಸಮುದಾಯದವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಸಮುದಾಯದ ರಾಜಕೀಯ ಭವಿಷ್ಯದ ಕಾರಣದಿಂದಲೂ ಸಮುದಾಯದವರನ್ನೇ ಈ ಸರ್ಕಾರದ ಅವಧಿ ಪೂರ್ಣಗೊಳ್ಳುವವರೆಗೂ ಮುಖ್ಯಮಂತ್ರಿ ಆಗಿರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆ ವೇಳೆ ಸಮುದಾಯದವರು ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಮಹಾಸಭಾದ ಪದಾಧಿಕಾರಿಗಳಾದ ಎಚ್.ವಿ. ಬಸವರಾಜು ಹಿನಕಲ್, ಪುಟ್ಟಸ್ವಾಮಿ, ಸಂದೇಶ್, ಕೆ. ಶಿವಕುಮಾರ್, ಸಿ. ಗುರುಸ್ವಾಮಿ, ವರುಣ ಮಹೇಶ್ ಇದ್ದರು.