ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

By Kannadaprabha NewsFirst Published Sep 27, 2021, 2:36 PM IST
Highlights

*  ಉದ್ಯೋಗ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಗಮನ 
*  ನಮ್ಮ ಅವಧಿಯಲ್ಲಿಯೇ ಮಹದಾಯಿ ವಿವಾದ ತಾರ್ಕಿಕ ಅಂತ್ಯ
*  ಮೀಸಲಾತಿಗೆ ಹೋರಾಟ ಮಾಡೋದರಲ್ಲಿ ತಪ್ಪೇನಲ್ಲ 
 

ಗದಗ(ಸೆ.27):  ಉತ್ತರ ಕರ್ನಾಟಕ(North Karnataka) ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ವಿಫುಲ ಅವಕಾಶಗಳಿದ್ದು, ಅದರಲ್ಲಿಯೂ ಕೃಷಿ ಆಧಾರಿತ ಟೆಕ್‌ಸ್ಟೈಲ್ ಹಾಗೂ ಫುಡ್ ಪ್ರೊಸೆಸ್ಸಿಂಗ್ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ. 

ಅವರು ಭಾನುವಾರ ರಾತ್ರಿ ಗದಗ ನಗರದ ಕೆ. ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ 2 ದಿನಗಳ ಕಾಲ ಆಯೋಜಿಸಲಾಗಿದ್ದ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಭಾಗಕ್ಕೆ ಬಂಡವಾಳ ಹೂಡಿಕೆ ಹೆಚ್ಚಳವಾಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತಂದಿದೆ. ಅದರಲ್ಲಿಯೂ ಮುಖ್ಯವಾಗಿ ಕೇವಲ ಹೂಡಿಕೆ ಆಧಾರಿತ ಕೈಗಾರಿಕೆಗಳ(Industry) ಸ್ಥಾಪನೆಯಿಂದ ಬಂಡವಾಳ ಹೂಡಿಕೆ ಮಾತ್ರ ಆಗಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಉದ್ಯೋಗ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಗಮನ ನೀಡಲಾಗುವುದು ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಸಿಎಂ ಚಿತ್ತ: ಬೆಳಗಾವಿ ಸೌಧಕ್ಕೆ ಸರ್ಕಾರ ನವಶಕ್ತಿ..!

ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ರೈತರು ಬೆಳೆದ ಬೆಳೆಗಳಿಗೆ ಉತ್ತಮ ಲಾಭವೂ ಸಿಗುತ್ತದೆ. ಕೈಗಾರಿಕೆಗಳಿಗೆ ಸಹಜವಾಗಿ ಕಚ್ಚಾ ಸಾಮಗ್ರಿಗಳು ಲಭ್ಯವಾಗುತ್ತವೆ. ರಾಜ್ಯದ ಶೇ. 70ರಷ್ಟು ಜನ ಇನ್ನು ದುಡಿಮೆಯಿಂದ ಆಚೆ ಇದ್ದು ಅವರಿಗೂ ದುಡಿಮೆ ಕಲ್ಪಿಸುವ ನಿಟ್ಟನಲ್ಲಿ ಮಹತ್ವದ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ದೇಶ, ರಾಜ್ಯದ ಪ್ರಗತಿಯ ಜತೆಗೆ ವೈಯಕ್ತಿಕವಾಗಿ ಅವರ ಪ್ರಗತಿಯೂ ಆಗುತ್ತದೆ. ನಮ್ಮ ದೇಶದ ಆರ್ಥಿಕತೆ ನಿಂತಿರುವುದೇ ಕೃಷಿಕರು, ಕಾರ್ಮಿಕರು ಮತ್ತು ಕುಲಶಕರ್ಮಿಗಳ ಮೇಲೆ ಅವರನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೇಂದ್ರ ಸರ್ಕಾರ ಈಗಾಗಲೇ ವಿಶೇಷ ಗಮನ ನೀಡಿದೆ. ಈಗಾಗಲೇ ಉತ್ತರ ಕರ್ನಾಟಕ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ತಮ್ಮ ಸಮಸ್ಯೆಗಳು, ಆಗಬೇಕಾಗಿರುವ ಕೆಲಸ ಕಾರ್ಯಗಳ ಕುರಿತು 2ದಿನಗಳ ಕಾಲ ಚರ್ಚಿಸಿ ಸಮಗ್ರವಾಗಿ ಮನವಿಯನ್ನು ಸಲ್ಲಿಸಿದ್ದು ಈ ಕುರಿತು ಶೀಘ್ರದಲ್ಲಿ ಚರ್ಚಿಸಿ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ(CC Patil) ಮಾತನಾಡಿ, ಕೈಗಾರಿಕೋದ್ಯಮಿಗಳಿಗೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು, ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವ ನಿಟ್ಟನಲ್ಲಿ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.

ಗದಗ(Gadag) ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಆನಂದ ಪೊತ್ನೀಸ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಶಾಸಕ ಎಚ್.ಕೆ. ಪಾಟೀಲ, ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕ ಮಹಾಸಂಸ್ಥೆಯ ಬೆಂಗಳೂರಿನ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಲದ್ದಡ ಮುಂತಾದವರು ಮಾತನಾಡಿದರು. ಹಾವೇರಿ ಸಂಸದ ಶಿವಕುಮಾರ ಉದಾಸಿ ಹಾಗೂ ಯಾದಗಿರಿ, ಕೊಪ್ಪಳ, ಗಂಗಾವತಿ, ಹಾವೇರಿ, ಧಾರವಾಡ ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು. 

ಉದ್ಯಮ ಸ್ಥಾಪಿಸಲು ಅವಕಾಶಗಳು ಈ ವಿಷಯವಾಗಿ ಜಗದೀಶ ಗುಡಗುಂಟಿ, ರೋಹನ ಜುವಳಿ, ಸರಕು ಸೇವಾ ತೆರಿಗೆ ಬದಲಾವಣೆಗಳು ಕುರಿತು ಎನ್. ಯಶವಂತರಾಜ್, ರವಿ ಮೆಣಸಿ ನಕಾಯಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಸ್ಯೆಗಳು ಕುರಿತು ಶಂಕ್ರಣ್ಣ ಮುನವಳ್ಳಿ, ವಿನಯ ಜವಳಿ ವಿಚಾರಗೋಷ್ಠಿಗಳನ್ನು ನಡೆಸಿಕೊಟ್ಟರು.

ಜನರ ಬಳಿ ಆಡಳಿತ ಯೋಜನೆಗೆ ಸಿದ್ಧತೆ: ಸಿಎಂ ಬೊಮ್ಮಾಯಿ

ನಮ್ಮ ಅವಧಿಯಲ್ಲಿಯೇ ಮಹದಾಯಿ ವಿವಾದ ತಾರ್ಕಿಕ ಅಂತ್ಯ: ಬೊಮ್ಮಾಯಿ

ನಮ್ಮ ಅವಧಿಯಲ್ಲಿಯೇ ಮಹದಾಯಿ(Mahdayi) ವಿವಾದಕ್ಕೆ ಖಂಡಿತವಾಗಿ ತಾರ್ಕಿಕ ಅಂತ್ಯ ಕಾಣಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಭಾನುವಾರ ಗದಗ ನಗರದಲ್ಲಿ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹದಾಯಿ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಲಾಗಿದೆ, ಕೆಲವೇ ದಿನದಲ್ಲಿ ಮಾಡಿಫೈಡ್ ಪ್ರಾಜೆಕ್ಟ್‌ ರಿಪೋರ್ಟ್ ಅನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ಈ ವಿಷಯದಲ್ಲಿ ಅಗತ್ಯ ಕ್ರಮ ತೆಗೆದುಕೊಂಡು, ಕಾಮಗಾರಿಯನ್ನು ಶೀಘ್ರವಾಗಿ ಆರಂಭಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು.

ಪಂಚಮಸಾಲಿ ಮೀಸಲಾತಿಗೆ ಹೋರಾಟ ವಿಚಾರ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಮೀಸಲಾತಿಗೆ ಹೋರಾಟ ಮಾಡೋದರಲ್ಲಿ ತಪ್ಪೇನಲ್ಲ, ಸರ್ಕಾರವಾಗಿ ನಾವು ಕಾನೂನು ಚೌಕಟ್ಟು ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಕೆಲಸ ಮಾಡಬೇಕು, ಹಾಗೆಯೇ ಮಾಡುತ್ತಿದ್ದೇವೆ. ಈಗಾಗಲೇ ಈ ವಿಷಯವಾಗಿ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ, ಆಯೋಗ ತನ್ನ ಕೆಲಸ ಮಾಡುತ್ತಿದೆ. ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಿಲ್ಲೆಗಳಿಂದ ಮಾಹಿತಿಯನ್ನ್ನು ಪಡೆಯಲಾಗುತ್ತಿದೆ. ಆಯೋಗದಿಂದ ರಿಪೋರ್ಟ್ ಬಂದ ನಂತರ ಸರ್ಕಾರ ಮುಂದಿನ ಕೆಲಸ ಮಾಡುತ್ತದೆ. ನಾನು ಕೂಡಾ ಹೋರಾಟ ನಡೆಸುತ್ತಿರುವ ಸ್ವಾಮಿಗಳ ಜೊತೆ ಸಂಪರ್ಕದಲ್ಲಿದ್ದೇನೆ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗುತ್ತೇನೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಮುಂತಾದವರು ಹಾಜರಿದ್ದರು.  
 

click me!