ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚಿ: ಸಿಎಂ ಬೊಮ್ಮಾಯಿ

By Kannadaprabha NewsFirst Published Oct 21, 2022, 2:11 PM IST
Highlights

ನಗರದ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಸರ್ಕಾರಕ್ಕೆ ಇದೆ. ನಗರದಲ್ಲಿ ತೀವ್ರ ಮಳೆಯಿಂದ ಸೃಷ್ಟಿಯಾಗಿರುವ ರಸ್ತೆಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರು (ಅ.21): ನಗರದ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಸರ್ಕಾರಕ್ಕೆ ಇದೆ. ನಗರದಲ್ಲಿ ತೀವ್ರ ಮಳೆಯಿಂದ ಸೃಷ್ಟಿಯಾಗಿರುವ ರಸ್ತೆ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲು ಆದೇಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಅಗ್ನಿಶಾಮಕ ದಳದ 90 ಮೀಟರ್‌ ಎತ್ತರದ ಲ್ಯಾಡರ್‌ ಸೇವೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ದಾಖಲೆಯ ಮಳೆಯಿಂದಾಗಿ ನಗರದಲ್ಲಿ ಕೆಲ ಸಮಸ್ಯೆ ಸೃಷ್ಟಿಯಾಗಿದೆ. ಎರಡು ಕ್ಷೇತ್ರಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಬೆಂಗಳೂರು ಮುಳುಗಿದೆ ಎಂಬಂತೆ ಬಿಂಬಿಸಲು ಯತ್ನಿಸಿದರು. ದೊಡ್ಡದಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿನ ವಿಚಾರಗಳನ್ನು ತಿಳಿಯದೆ ವ್ಯಾಖ್ಯಾನ ಮಾಡುವುದು ತಪ್ಪು. ಬೆಂಗಳೂರು ನಗರದ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯ ಸರ್ಕಾರಕ್ಕಿದ್ದು, ಅದನ್ನು ಮಾಡುತ್ತೇವೆ ಎಂದು ಹೇಳಿದರು.

ಮನೆ ಮನೆಗೆ ನಲ್ಲಿ ನೀರು ನೀಡಲು 3428 ಕೋಟಿ: ಸಂಪುಟ ಸಭೆಯಲ್ಲಿ ಒಪ್ಪಿಗೆ

ಈಗಾಗಲೇ ನಗರದಲ್ಲಿ ಸೃಷ್ಟಿಯಾಗಿದ್ದ ಗುಂಡಿಗಳನ್ನು ಒಂದು ಬಾರಿ ಮುಚ್ಚಿದ್ದೇವೆ. ಈಗ ಮತ್ತೆ ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ಗುಂಡಿಗಳು ಸೃಷ್ಟಿಯಾಗಿವೆ. ಅವುಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ. ಮಳೆ ಕಡಿಮೆಯಾದರೆ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಳೆಯಿದ್ದ ಸಂದರ್ಭದಲ್ಲಿ ಹಾಕಿದರೆ ಅದು ಉಳಿಯುವುದಿಲ್ಲ. ಆದರೂ, ಯೋಜನಾ ಬದ್ಧವಾಗಿ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂದರು.

ಸಂಚಾರ ದಟ್ಟಣೆ ಸುಗಮಕ್ಕೆ ಕ್ರಮ: ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿತ್ಯ 5000 ಹೊಸ ವಾಹನಗಳು ರಸ್ತೆಗೆ ಇಳಿಯುತ್ತವೆ. ರಸ್ತೆ ಮಾತ್ರ ಅಷ್ಟೇ ಇದೆ. ಆದರೂ ಕೂಡ ಸಂಚಾರ ನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳನ್ನು ಪೊಲೀಸ್‌ ಇಲಾಖೆ ಮಾಡುತ್ತಿದೆ. ಹೊಸ ವಿಧಾನಗಳನ್ನು ಬಳಸಿ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿದೆ. ನಿರ್ಭಯ ಯೋಜನೆಯಡಿ 7,500 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಇದರಿಂದ ಮಹಿಳೆಯರ ಸುರಕ್ಷತೆಯ ಜೊತೆಗೆ ಸಂಚಾರ ದಟ್ಟಣೆ ಸುಗಮಗೊಳಿಸಲು ಸಹ ಉಪಯೋಗವಾಗುತ್ತಿದೆ ಎಂದು ಹೇಳಿದರು.

ಮಳೆಗೆ ನಗರದ ರಸ್ತೆಯಲ್ಲೇ ಕೆರೆ ಸೃಷ್ಟಿ: ನಗರದಲ್ಲಿ ಮಂಗಳವಾರವೂ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದು ಸುಲ್ತಾನ್‌ಪೇಟೆ ರಸ್ತೆ, ಕೆ.ಆರ್‌.ಮಾರುಕಟ್ಟೆಸೇರಿದಂತೆ ಹಲವು ಪ್ರದೇಶಗಳಲ್ಲಿನ ರಸ್ತೆಗಳು ಕೆರೆಯಂತಾಗಿದ್ದವು, ಕೆಲವು ದ್ವಿಚಕ್ರ ವಾಹನಗಳು ಮುಳುಗಡೆಯಾಗಿ ಅವಾಂತರ ಸೃಷ್ಟಿಸಿತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು-ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಮಧ್ಯಾಹ್ನದ ನಂತರ ದಟ್ಟಮೋಡಗಳು ಆವರಿಸಿಕೊಂಡು ಸಣ್ಣದಾಗಿ ಆರಂಭವಾದ ಮಳೆ ನಂತರ ಗುಡುಗು, ಮಿಂಚಿನೊಂದಿಗೆ ಧಾರಾಕಾರವಾಗಿ ಸುರಿಯಿತು. ಇದರಿಂದ ವಾಹನ ಸವಾರರು, ಬೀದಿಬದಿ ವ್ಯಾಪಾರಿಗಳು, ಪಾದಚಾರಿಗಳು ತೊಂದರೆ ಅನುಭವಿಸಿದರು. ತಗ್ಗು ರಸ್ತೆಗಳು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರ ವ್ಯತ್ಯಯಗೊಂಡಿತ್ತು.

ಮುಳುಗಿದ ವಾಹನಗಳು: ನಗರದ ಸುಲ್ತಾನ್‌ಪೇಟೆಯ ರಸ್ತೆಯಲ್ಲಿ ನೀರು ತುಂಬಿಕೊಂಡು ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಮುಳುಗಿದ್ದು, ಲಕ್ಷಾಂತರ ನಷ್ಟವಾಗಿದೆ. ಶ್ರೀರಾಂಪುರದಲ್ಲಿ ಮಳೆಗೆ ಭೂ ಕುಸಿತವುಂಟಾಗಿ ದೊಡ್ಡ ಗುಂಡಿ ಸೃಷ್ಟಿಯಾಗಿತ್ತು. ಕೆ.ಆರ್‌.ಮಾರುಕಟ್ಟೆ, ಜಯಮಹಲ್‌ ರಸ್ತೆ, ಮೆಜೆಸ್ಟಿಕ್‌, ಯಶವಂತಪುರ, ಮಲ್ಲೇಶ್ವರಂ, ಚಾಮರಾಜಪೇಟೆ, ಮಾಗಡಿ ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗುಂಡಿಗಳು ಬಾಯ್ತೆರೆದಿದ್ದು, ಮಳೆಗೆ ತುಂಬು ಗುಂಡಿಗಳಂತಾಗಿದ್ದವು. ಕೆಲವು ಕಡೆಗಳಲ್ಲಿ ಈಗಾಗಲೇ ಮುಚ್ಚಲಾಗಿದ್ದ ರಸ್ತೆ ಗುಂಡಿಗಳು ಮತ್ತೆ ತೆರೆದುಕೊಂಡಿದ್ದು, ಜಲ್ಲಿ ಕಲ್ಲುಗಳು, ಎಂ ಸ್ಯಾಂಡ್‌ ಕಲ್ಲಿನ ಪುಡಿ ರಸ್ತೆ ಎಲ್ಲೆಡೆ ಚೆಲ್ಲಾಡಿತ್ತು. ಹೀಗಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ಸಚಿವ ಸೋಮಣ್ಣ ಕ್ರಿಯಾಶೀಲ ಜನಪ್ರತಿನಿಧಿ: ಸಿಎಂ ಬೊಮ್ಮಾಯಿ

ನಗರದ ವಿದ್ಯಾಪೀಠ, ಹುಳಿಮಾವು, ಯಲಹಂಕ, ಅಟ್ಟೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ದಾಖಲಾಗಿದೆ. ಯಲಹಂಕ, ಹೆಬ್ಬಾಳ, ಜಯನಗರ, ನಾಗವಾರ, ವಿದ್ಯಾರಣ್ಯಪುರ, ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಕೋರಮಂಗಲ, ವಿಜಯನಗರ, ಹಂಪಿನಗರ, ನಾಯಂಡಹಳ್ಳಿ, ಬನಶಂಕರಿ, ಮೆಜೆಸ್ಟಿಕ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಕಾಲ ಒಂದೇ ಸಮನೇ ಮಳೆ ಸುರಿಯಿತು. ಚಾಲುಕ್ಯ ವೃತ್ತ, ಟೌನ್‌ಹಾಲ್‌, ಕೆ.ಆರ್‌.ಮಾರುಕಟ್ಟೆ, ರಾಜಾಜಿನಗರ, ಸುಜಾತ, ಜಯನಗರದ ಮೆಟ್ರೋ ಪಿಲ್ಲರ್‌ ಕೆಳಭಾಗದ ಮುಖ್ಯರಸ್ತೆಗಳಲ್ಲಿ ರಸ್ತೆಯಲ್ಲೇ ನೀರು ನಿಂತಿತ್ತು.

click me!