Kodagu: ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಿರುವಾಗಲೇ ಕುಸಿಯುತ್ತಿದ್ದ ತಡೆಗೋಡೆ ತೆರವು!

Published : Jan 25, 2023, 07:38 PM IST
Kodagu: ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಿರುವಾಗಲೇ ಕುಸಿಯುತ್ತಿದ್ದ ತಡೆಗೋಡೆ ತೆರವು!

ಸಾರಾಂಶ

ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಸಂಕೀರ್ಣಕ್ಕೆ ನಿರ್ಮಿಸುತ್ತಿದ್ದ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು ಗೊದ್ದೇ ಇದೆ. ಇದರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಜ.25): ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಸಂಕೀರ್ಣಕ್ಕೆ ನಿರ್ಮಿಸುತ್ತಿದ್ದ ತಡೆಗೋಡೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು ಗೊದ್ದೇ ಇದೆ. ಇದರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ಕೂಡ ನೀಡಲಾಗಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಕುಸಿದು ಬೀಳುತ್ತಿದ್ದ ಜಾಗದಲ್ಲಿ ಅದನ್ನು ತೆರವು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೊಡಗು ಜಿಲ್ಲಾಧಿಕಾರಿ ಕಚೇರಿಗೆ ಬರೋಬ್ಬರಿ ಏಳುಕೋಟೆ ವೆಚ್ಚದಲ್ಲಿ ಜರ್ಮನಿ ಟೆಕ್ನಾಲಜಿಯನ್ನು ಬಳಸಿ ತಡೆಗೋಡೆಯನ್ನು ನಿರ್ಮಿಸಲಾಗುತ್ತಿತ್ತು. 

2019ರಲ್ಲಿಯೇ ಕಾಮಗಾರಿ ಆರಂಭವಾಗಿತ್ತಾದರೂ 2022ರ ಜೂನ್ ತಿಂಗಳಲ್ಲಿ ಕಾಮಗಾರಿ ಮುಗಿಯುವ ಹಂತ ತಲುಪಿತ್ತು. ಆದರೆ ಅದು ಅಷ್ಟರಲ್ಲೇ ಕುಸಿಯಲಾರಂಭಿಸಿತ್ತು. ಇದರ ವಿರುದ್ಧ ಸಾಮಾಜಿಕ ಕಾರ್ಯಕರ್ತ ತೆನ್ನೀರಾ ಮೈನಾ ಎಂಬುವವರು 2022ರ ಜೂನ್ ತಿಂಗಳಲ್ಲಿ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ನ್ಯಾಯಾಲಯ ವಿಚಾರಣೆ ನಡೆಸಿ ಬಳಿಕ ಇದೇ ತಿಂಗಳ 31ಕ್ಕೆ ಕಾಮಗಾರಿಯ ತಾಂತ್ರಿಕ ಗುಣಮಟ್ಟದ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ನಿರ್ಧರಿಸಿತ್ತು. 

Chitradurga: ಕಾಡುಗೊಲ್ಲ ಸಮುದಾಯ ಎಸ್ಟಿ ಸೇರ್ಪಡೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ವಿಪರ್ಯಾಸವೆಂದರೆ ಲೋಕಾಯುಕ್ತ ನ್ಯಾಯಾಧೀಶರು ಕಾಮಗಾರಿ ಪರಿಶೀಲನೆಗೆ ಬರಲು ಒಂದುವಾರ ಇರುವಾಗ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಡೆಗೋಡೆ ಕಾಮಗಾರಿ ನಿರ್ವಹಿಸಿದ ಕಂಪನಿಯ ಮೂಲಕವೇ ಕುಸಿದು ಬೀಳುವ ಹಂತ ತಲುಪಿದ್ದ ಕಾಮಗಾರಿಯ ಸ್ಥಳದಲ್ಲಿ ಅದನ್ನು ತೆರವುಗೊಳಿಸುತ್ತಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾವುದೇ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಅದು ವಿಚಾರಣೆ ಹಂತದಲ್ಲಿ ಇದ್ದರೆ, ಅದನ್ನು ಯಥಾಸ್ಥಿತಿ ಕಾಪಾಡಿಕೊಳ್ಳಬೇಕು. ಆದರೆ ಇಲ್ಲಿ ಯಾರ ಒಪ್ಪಿಗೆ, ಅಥವಾ ಆದೇಶವಿಲ್ಲದೆ ಕುಸಿದು ಬೀಳುತ್ತಿದ್ದ ತಡೆಗೋಡೆ ಭಾಗವನ್ನು ತೆರವು ಮಾಡಲಾಗುತ್ತಿದೆ. 

ಹೀಗಾಗಿ ಇದು ಇಲ್ಲಿ ನಡೆದಿರುವ ಕಳಪೆ ಕಾಮಗಾರಿಯನ್ನು ಲೋಕಾಯುಕ್ತರಿಂದ ಮುಚ್ಚಿಡಲು ಮಾಡುತ್ತಿರುವ ಪ್ರಯತ್ನ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ತೆನ್ನೀರ ಮೈನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಇಲಾಖೆ ಸಹಾಯ ಕಾರ್ಯಪಾಲಕ ಎಂಜಿನಿಯರ್ ದೃವರಾಜ್ ತಡೆಗೋಡೆ ಕಾಮಗಾರಿ ಮಾಡಿದ್ದ ಇಂಕ್ ಪೋಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯವರೇ ಹಿಂದೆ ಬಿಡುಗಡೆಯಾಗಿದ್ದ ಅನುದಾನದಲ್ಲೇ ಮತ್ತೆ ಕಾಮಗಾರಿ ಮಾಡುತ್ತಿದ್ದಾರೆ. ಹಿಂದೆ ಬಳಸಿದ್ದ ತಂತ್ರಜ್ಞಾನವನ್ನೇ ಬಳಸಿ ಕಾಮಗಾರಿ ಮಾಡುತ್ತಿದ್ದಾರೆ. ಈಗಾಗಲೇ ತಡೆಗೋಡೆ ಕುಸಿಯುವ ಸ್ಥಿತಿ ತಲುಪಿದ್ದ 60 ಮೀಟರ್ ವ್ಯಾಪ್ತಿಯಲ್ಲಿ ತಡೆಗೋಡೆಯನ್ನು ತೆರವು ಮಾಡಲಾಗಿದೆ. 

ದೇವೇಗೌಡರ ಕಾಲಿನ ಧೂಳಿಗೂ ನಳಿನ್‌ ಕಟೀಲ್‌ ಸಮನಲ್ಲ: ಎಚ್‌.ಡಿ.ಕುಮಾರಸ್ವಾಮಿ

ಇನ್ನೊಂದೆರಡು ದಿನಗಳಲ್ಲಿ ತೆರವು ಕಾಮಗಾರಿ ಪೂರ್ಣಗೊಳ್ಳಲಿದ್ದು, ಬಳಿಕ ಮತ್ತೆ ಕಾಮಗಾರಿ ನಡೆಸಿ ತಡೆಗೋಡೆ ನಿರ್ಮಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕಾಮಗಾರಿ ಆರಂಭಿಸಿ ಇನ್ನೊಂದೆರಡು ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ. ಇದೇ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಎಇಇ ದೃವರಾಜ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ 4 ಕೋಟಿ ಖರ್ಚು ಮಾಡಿದ್ದರೂ, 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ತಡೆಗೋಡೆ ಕಾಮಗಾರಿ ವಿವಾದ ಲೋಕಾಯುಕ್ತ ನ್ಯಾಯಾಮೂರ್ತಿಗಳ ಬಳಿ ವಿಚಾರಣೆಗೆ ಇರುವಾಗಲೇ ತಡೆಗೋಡೆಯನ್ನು ತೆರವು ಮಾಡುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

PREV
Read more Articles on
click me!

Recommended Stories

ಮೇ.20ಕ್ಕೆ ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ, ಎಲ್ಲಾ ಬಸ್ ನಿಲ್ಲಿಸಿ ಸರ್ಕಾರದ ವಿರುದ್ದ ಪ್ರತಿಭಟನೆ
ವಿಜಯನಗರದಲ್ಲಿ ಇನ್ನೂ ಜೀವಂತ ಕರಾಳ ಜೀತ ಪದ್ಧತಿ, ಎನ್‌ಜಿಒ ಸಂಸ್ಥೆ ನೆರವಿನಿಂದ ಒಡಿಶಾದ 37 ಜೀವಗಳಿಗೆ ಮುಕ್ತಿ!