ಚಿಕ್ಕಮಗಳೂರು: ವಕೀಲ ಪ್ರೀತಂ ಮೇಲಿನ ಹಲ್ಲೆ, ಸಿಐಡಿ ತನಿಖೆ ಚುರುಕು

By Girish GoudarFirst Published Dec 7, 2023, 8:16 PM IST
Highlights

ಟೌನ್ ಪೊಲೀಸ್ ಠಾಣೆಯ ಗುರುಪ್ರಸಾದ್ ಸೇರಿದಂತೆ ಇತರೆ ಪೊಲೀಸರಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರು ಸಲ್ಲಿಸಿರುವ ವಕೀಲ ಪ್ರೀತಂ ಅವರನ್ನು ಇಂದು ಸಿಐಡಿ ಅಧಿಕಾರಿಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದರು. ಇದನ್ನು ಲಿಖಿತ ರೂಪದಲ್ಲಿ ದಾಖಲಿಸಿದರು. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.07):  ಚಿಕ್ಕಮಗಳೂರಲ್ಲಿ ಪೊಲೀಸ್ ಲಾಯರ್ ಗಲಾಟೆ ಪ್ರಕರಣದ ಸಿಐಡಿ ತನಿಖೆ ಚುರುಕು ಪಡೆದಿದೆ, ಖುದ್ದು ಸಿಐಡಿ ಡಿಐಜಿ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದ್ದು ಪೊಲೀಸರಿಂದ ಹಲ್ಲೆಗೊಳಗಾದ ವಕೀಲ ಪ್ರೀತಂನನ್ನ ವಿಚಾರಣೆಗೊಳಪಡಿಸಲಾಗಿದೆ. ಟೌನ್ ಪೊಲೀಸ್ ಠಾಣೆಯಲ್ಲಿ ವಕೀಲರ ಮೇಲೆ ಪೊಲೀಸರು ನಡೆಸಿರುವ ಹಲ್ಲೆಯಿಂದಾಗಿ ರಾಜ್ಯಾದ್ಯಂತ ಪ್ರತಿಭಟನೆಯ ಕಿಚ್ಚು ಹೊತ್ತಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಸತ್ಯ ಸತ್ಯತೆ ಅರಿಯಲು ಸಿಐಡಿ ತನಿಖೆ ಆರಂಭಗೊಂಡಿದೆ.ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠದ ನಿರ್ದೇಶನದ ಮೇರೆಗೆ ಸಿಐಡಿ ಡಿಐಜಿಪಿ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಇಂದು (ಗುರುವಾರ) ತನಿಖೆ ಆರಂಭಿಸಿದೆ. 

ಸಿಐಡಿ ಅಧಿಕಾರಿಗಳಿಂದ ವಕೀಲ ಪ್ರೀತಂ ವಿಚಾರಣೆ : 

ಟೌನ್ ಪೊಲೀಸ್ ಠಾಣೆಯ ಗುರುಪ್ರಸಾದ್ ಸೇರಿದಂತೆ ಇತರೆ ಪೊಲೀಸರಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರು ಸಲ್ಲಿಸಿರುವ ವಕೀಲ ಪ್ರೀತಂ ಅವರನ್ನು ಇಂದು (ಗುರುವಾರ) ಸಿಐಡಿ ಅಧಿಕಾರಿಗಳು ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನಡೆಸಿ ಮಾಹಿತಿಯನ್ನು ಕಲೆ ಹಾಕಿದರು. ಇದನ್ನು ಲಿಖಿತ ರೂಪದಲ್ಲಿ ದಾಖಲಿಸಿದರು. ಈ ಸಂದರ್ಭದಲ್ಲಿ ಸಿಐಡಿ ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಉಮೇಶ್, ಕಾನೂನು ಸಲಹೆಗಾರರಾದ ಆರ್.ಕೆ. ಕಾಳೆ ಹಾಜರಿದ್ದು, ವಕೀಲರ ಪ್ರೀತಂ ಅವರಿಂದ ಮಾಹಿತಿಯನ್ನು ಪಡೆದುಕೊಂಡರು.

ಒಬ್ಬ ವಕೀಲನಿಗೆ ಹೊಡೆದ್ರೆ, 100 ಪೊಲೀಸರ ಕೊಲೆ ಮಾಡ್ತೀವೆಂದ ಹಿರಿಯ ವಕೀಲರಿಂದ ಬೇಷರತ್ ಕ್ಷಮೆ!

ಸತ್ಯ ಸತ್ಯತೆ ತಿಳಿಯಲು ಸಿಐಡಿ ತನಿಖೆ : 

ನವೆಂಬರ್ 30 ರಂದು ಪ್ರೀತಂ ಅವರು ಮಾರ್ಕೇಟ್ ರಸ್ತೆಯಲ್ಲಿ ಹೋಗುವಾಗ ಟೌನ್ ಪೊಲೀಸ್ ಠಾಣೆ ಎದುರು ಪ್ರೀತಂ ಅವರ ಬೈಕನ್ನು ನಿಲ್ಲಿಸಿ ಹೆಲ್ಮೆಟ್ ಕೇಳಿ ನಂತರದಲ್ಲಿ ಬೈಕಿನ ಕೀ ತೆಗೆದುಕೊಂಡು ಠಾಣೆಯೊಳಗೆ ಹೋಗಿದ್ದ ಸಂದರ್ಭದಲ್ಲಿ ಪೊಲೀಸರು ಪ್ರೀತಂ ಮೇಲೆ ಹಲ್ಲೆ ನಡೆಸಿದ್ದು, ಅವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದವು.ಪ್ರೀತಂ ನೀಡಿರುವ ದೂರಿನನ್ವಯ ಪಿಎಸ್ಐ, ಎಎಸ್ಐ, ಮುಖ್ಯ ಪೇದೆ ಹಾಗೂ ಮೂವರು ಪೊಲೀಸ್ ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಅವರನ್ನು ಬಂಧಿಸುವಂತೆ ಆಗ್ರಹಿಸಿ ವಕೀಲರು ಪ್ರತಿಭಟನೆ ನಡೆಸಿದರು. ಪೇದೆ ಗುರುಪ್ರಸಾದ್ ಅವರನ್ನು ಹಿರಿಯ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆಂಬ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸಿದ್ದರು. ಇದರಿಂದಾಗಿ ಬಿಕ್ಕಟ್ಟು ಉಲ್ಬಣಗೊಂಡಿತ್ತು.ವಕೀಲರು ಹಾಗೂ ಪೊಲೀಸರ ನಡುವೆ ಸೌಹಾರ್ದತೆಗಾಗಿ ಹೈಕೋರ್ಟ್‌ನ ವಿಭಾಗೀಯ ಪೀಠ ಮಧ್ಯ ಪ್ರವೇಶಿಸಿ ಘಟನೆಯ ಸತ್ಯ ಸತ್ಯತೆ ತಿಳಿಯಲು ಸಿಐಡಿ ತನಿಖೆ ನಡೆಸಲು ಸಮ್ಮತಿ ಸೂಚಿಸಿತು. 

ರಾಜ್ಯ ಸರ್ಕಾರ ರಚನೆ ಮಾಡಿರುವ ಸಿಐಡಿ ತಂಡ ಬುಧವಾರ ಚಿಕ್ಕಮಗಳೂರಿಗೆ ಆಗಮಿಸಿದ್ದು, ಗುರುವಾರ ತನಿಖೆ ಆರಂಭಗೊಂಡಿತು.ವಕೀಲ ಪ್ರೀತಂ ಅವರಿಂದ ಮಾಹಿತಿಯನ್ನು ಕಲೆ ಹಾಕಿರುವ ಸಿಐಡಿ ತಂಡ, ಶುಕ್ರವಾರ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಯಿಂದ ನವೆಂಬರ್  30 ರಂದು ನಡೆದಿರುವ ಮಾಹಿತಿಯನ್ನು ಕಲೆ ಹಾಕಲಿದೆ.

click me!