ರಾಜ್ಯದಲ್ಲೇ ನಡೆದಿದ್ದ ಅತೀ ದೊಡ್ಡ ಭೂ ಹಗರಣ: ತಹಶೀಲ್ದಾರ್ ಸೇರಿ ಅಧಿಕಾರಿಗಳಿಂದ ಸರ್ಕಾರಿ ಭೂಮಿ ಕಬ್ಜಾ..!

By Girish GoudarFirst Published Dec 7, 2023, 7:21 PM IST
Highlights

ಕಳೆದೆರಡು ತಿಂಗಳಿಂದ 15 ತಹಶೀಲ್ದಾರ್ ಹಾಗೂ 9 ಉಪತಹಶೀಲ್ದಾರ್ ನೇತೃತ್ವದ ತಂಡ ಅಕ್ರಮದ ಇಂಚಿಂಚು ತನಿಖೆಗೆ ಇಳಿದಿತ್ತು. ಎರಡು ತಿಂಗಳಲ್ಲಿ ಸುದೀರ್ಘ ತನಿಖೆ ನಡೆಸಿದ ತಂಡ ಸರ್ಕಾರ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ 10500 ಪುಟಗಳ ವರದಿ ಸಲ್ಲಿಸಿದ್ದಾರೆ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.07):  ರಾಜ್ಯದಲ್ಲೇ ಬಗೆದಷ್ಟು ಭೂ ಅಕ್ರಮಕ್ಕೆ ಸಾಕ್ಷಿಯಾಗಿದ್ದು ಕಾಫಿನಾಡು ಚಿಕ್ಕಮಗಳೂರು. ಸರ್ಕಾರದ ಜಾಗವನ್ನು ಸಿಕ್ಕಾ ಸಿಕ್ಕವರಿಗೆ ಮಂಜೂರು ಮಾಡಿದ ಪ್ರಕರಣ ಇಡೀ ರಾಜ್ಯದಲ್ಲೇ ಸದ್ದು ಮಾಡಿತ್ತು. ಕೆಲವರು ತಹಶೀಲ್ದಾರರನ್ನೇ ಖರೀದಿಸಿ ಭೂಮಿ ಖರೀದಿಸಿದ್ದರು . ಆದ್ರೀಗ, ಅರ್ಜಿಯನ್ನೇ ಹಾಕದೆ ಅಧಿಕಾರಿಗಳ ಜೊತೆ ಸೇರ್ಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದ ಅಕ್ರಮ ಭೂಗಳ್ಳರಿಗೆ ಭೂಮಿಯೂ ಇಲ್ಲ. ಹಣವೂ ಇಲ್ಲ ಎಂಬಂತಾಗಿದೆ. 

Latest Videos

5500 ಎಕರೆ ಜಮೀನಿನಲ್ಲಿ 750 ಎಕರೆ ವಶಪಡಿಸಿಕೊಂಡಿ ಸರ್ಕಾರ 

ರಾಜ್ಯವೇ ಬೆಚ್ಚಿ ಬೀಳಿಸುವ ಭೂ ಅಕ್ರಮಕ್ಕೆ ಸಾಕ್ಷಿಯಾಗಿದ್ದು ಕಾಫಿನಾಡು ಚಿಕ್ಕಮಗಳೂರು. ತಹಶೀಲ್ದಾರ್, ಅಧಿಕಾರಿಗಳು ಹಾಗೂ ಭೂಒತ್ತುವರಿದಾರರ ಕಣ್ಣಾಮುಚ್ಚಾಲೆ ಆಟಕ್ಕೆ ಸರ್ಕಾರಿ ಭೂಮಿಯನ್ನ ಹರಿದು ಹಬ್ಬ ಮಾಡಿದ್ರು. ಕಡೂರು ತಾಲೂಕಿನಲ್ಲಿ 3500 ಎಕರೆ. ಮೂಡಿಗೆರೆ ತಾಲೂಕಿನಲ್ಲಿ 1900 ಎಕರೆ. ಒತ್ತುವರಿದಾರರು ತೋರಿಸಿದ ಜಾಗಕ್ಕೆಲ್ಲಾ ಅಧಿಕಾರಿಗಳು ಹಕ್ಕುಪತ್ರ, ಪಹಣಿ ನೀಡಿದ್ರು. ಆದ್ರೀಗ, ಸ್ಥಳಿಯರು ತಹಶೀಲ್ದಾರರನ್ನ ಖರೀದಿಸಿ ಖರೀದಿಸಿದ್ದ ಸರ್ಕಾರಿ ಭೂಮಿಯನ್ನ ಸರ್ಕಾರ ಕಬ್ಜಾ ಮಾಡ್ತಿದೆ. ಪ್ರಕರಣ ಊರುಬಾಗಿಲಾದ ಮೇಲೆ ಸರ್ಕಾರ 15 ತಹಶೀಲ್ದಾರ್ಗಳ ತಂಡ ರಚಿಸಿ ಪ್ರಕರಣದ ತನಿಖೆಗೆ ಸೂಚಿಸಿತ್ತು. ತನಿಖೆಯಲ್ಲಿ ಗೋಮಾಳ, ಕರಾಬು, ಸರ್ಕಾರಿ ಜಾಗ, ಮೀಸಲು ಅರಣ್ಯ ಎಲ್ಲವೂ ಗೋಲ್ಮಾಲ್ ಆಗಿರೋದು ಬಟಾಬಯಲಾಗಿತ್ತು. ಅದರಲ್ಲಿ ಹತ್ತಾರು ಎಕರೆ ತೋಟವಿದ್ದವರೇ ವಂಶವೃಕ್ಷಕ್ಕೆ ಜಮೀನು ಮಾಡಿಸಿಕೊಂಡಿದ್ದು ಇತ್ತು. ಒಂದು ಹೆಜ್ಜೆ ಮುಂದೆ ಹೋಗಿ ವಿದೇಶದಲ್ಲಿದವರಿಗೂ ಭೂಮಿ ಮಂಜೂರು ಮಾಡಿದ್ರು. ಆದ್ರೀಗ, ಮೂಡಿಗೆರೆ ತಾಲೂಕಿನ ಒತ್ತುವರಿ ಬಗ್ಗೆ ತನಿಖೆ ನಡೆಸಿದ ಚಿಕ್ಕಮಗಳೂರು ಎಸಿ ಅಕ್ರಮವಾಗಿ ಬೇಲಿ ಹಾಕಿದ್ದ ಸರ್ಕಾರಿ ಜಾಮೀನನ್ನ ವಶಪಡಿಸಿಕೊಂಡು ಪಹಣಿಯನ್ನ ಸರ್ಕಾರದ ಹೆಸರಿಗೆ ಮಾಡಿಸಿದ್ದಾರೆ. 

ಚಿಕ್ಕಮಗಳೂರು: ವೇಗವಾಗಿ ಬಂದು ಬೈಕ್‌ಗೆ ಗುದ್ದಿದ ಕಾರು, ಇಬ್ಬರು ಸಾವು

ಅಕ್ರಮಗಳ ಬಗ್ಗೆ ತನಿಖೆ ಮಾಡ್ತಿರೋ ಅಧಿಕಾರಿ ಎತ್ತಂಗಡಿಗೆ ತೆರಮರೆ ಕಸರತ್ತು....?

ಇನ್ನು ಕಳೆದೆರಡು ತಿಂಗಳಿಂದ 15 ತಹಶೀಲ್ದಾರ್ ಹಾಗೂ 9 ಉಪತಹಶೀಲ್ದಾರ್ ನೇತೃತ್ವದ ತಂಡ ಅಕ್ರಮದ ಇಂಚಿಂಚು ತನಿಖೆಗೆ ಇಳಿದಿತ್ತು. ಎರಡು ತಿಂಗಳಲ್ಲಿ ಸುದೀರ್ಘ ತನಿಖೆ ನಡೆಸಿದ ತಂಡ ಸರ್ಕಾರ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ 10500 ಪುಟಗಳ ವರದಿ ಸಲ್ಲಿಸಿದ್ದಾರೆ. ಇದೇ ವೇಳೆ, ಅಕ್ರಮ ಭೂಕಬಳಿಕೆಯ ವಿಶೇಷ ನ್ಯಾಯಾಲಯ ಕೂಡ ಸೂಮೋಟೋ ಕೇಸ್ ದಾಖಲಿಸಿಕೊಂಡು ಅಕ್ರಮದ ತನಿಖೆ ನಡೆಸುತ್ತಿದೆ. ಫಾರಂ ನಂಬರ್ 50, 53, 57ರ ಅಡಿಯಲ್ಲಿ ಅರ್ಜಿ ಸಲ್ಲಿಸದೆ ಇದ್ದರೂ ಸರ್ಕಾರಿ ಜಾಗ ಹೇಗೆ ಮಂಜೂರಾಯಿತು ಅನ್ನೋದು ಸ್ಥಳೀಯ ರೈತರು ಹಾಗೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ರೈತ ಸಂಘ ಕೂಡಲೇ ಮೂಡಿಗೆರೆ-ಕಡೂರು ತಾಲೂಕಿನಲ್ಲಿನ ಎಲ್ಲಾ ಅಕ್ರಮ ಭೂಮಂಜೂರಾತಿಯನ್ನ ಸರ್ಕಾರ ವಶಪಡಿಸಿಕೊಳ್ಳಬೇಕು. ಜೊತೆಗೆ, ಬಡರೈತರು ಬದುಕಿಗಾಗಿ ಮಾಡಿರುವ 2-3 ಎಕರೆ ಒತ್ತುವರಿಯನ್ನ ಕೈಬಿಡಬೇಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಒಟ್ಟಾರೆ. ಬಿಟ್ಟಿ ಸಿಕ್ತು ಅಂತ ನನಗೂ ಬೇಕು ನಮ್ಮ ತಲೆಮಾರಿಗೂ ಬೇಕು ಅಂತ ನಕಲಿ ದಾಖಲೆ ಸೃಷ್ಟಿಸಿ ತಲೆಗೊಬ್ಬರಿಗಂತೆ ಅಕ್ರಮವಾಗಿ ಜಮೀನು ಮಾಡಿಕೊಂಡಿದ್ದವರಿಗೆ ಸರ್ಕಾರ ಮೈಚಳಿ ಬಿಡಿಸ್ತಿದೆ. ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದ ನೂರಾರು ಪ್ರಕರಣಗಳು ಬಟಾಬಯಲಾಗ್ತಿದೆ. ತನಿಖೆಯ ವೇಗವನ್ನ ಇನ್ನಷ್ಟು ಚುರುಕು ಮಾಡಿದ್ರೆ ಮತ್ತಷ್ಟು ಮಿಕಾಗಳ ಬಣ್ಣ ಬಯಲಾಗೋದು ಗ್ಯಾರಂಟಿ. ಆದ್ರೆ, ತೆರೆಮರೆಯಲ್ಲಿ ತನಿಖಾಧಿಕಾರಿಯನ್ನೇ ಎತ್ತಂಗಡಿ ಮಾಡಹೊರಟಿರೋದು ಮಾತ್ರ ನಿಜಕ್ಕೂ ದುರಂತ.

click me!