ಚಿತ್ರದುರ್ಗ: ಸರ್ಕಾರಿ ಕೆಲಸ ಮಾಡಿಕೊಡಲು ಹಣ ಕೇಳಿದ್ರೆ ಕ್ರಿಮಿನಲ್ ಮೊಕದ್ದಮೆ: ಸಿಇಒ ದಿವಾಕರ್ ಎಚ್ಚರಿಕೆ

By Girish GoudarFirst Published Nov 16, 2022, 10:08 PM IST
Highlights

ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಟೆಯಿಂದ ನಿರ್ವಹಿಸಬೇಕು: ಜಿಪಂ ಸಿಇಒ ಎಂ.ಎಸ್.ದಿವಾಕರ್

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ನ.16):  ಚಿತ್ರದುರ್ಗದ ಗ್ರಾಮೀಣ ಪ್ರದೇಶದ ಜನರಿಗೆ ಇ-ಸ್ವತ್ತು ಸೇರಿದಂತೆ ಇನ್ನಿತರ ಸರ್ಕಾರಿ ಕೆಲಸಗಳನ್ನು ಮಾಡಿಕೊಡಲು ಹಣದ ಆಮಿಷ ನೀಡಿದ್ದು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಪಂ ಸಿಇಒ ಎಂ.ಎಸ್.ದಿವಾಕರ್ ಎಚ್ಚರಿಕೆ ನೀಡಿದ್ದಾರೆ. 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ಇಂದು(ಬುಧವಾರ) ಏರ್ಪಡಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಿಇಓ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ ದಿವಾಕರ್ ಅವರು, ಇಲಾಖೆಗಳ ಅಧಿಕಾರಿಗಳು ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿಕವಾಗಿ ಹಾಗೂ ನಿಷ್ಟೆಯಿಂದ ನಿರ್ವಹಿಸಬೇಕು. ನಿಸ್ವಾರ್ಥ ಸೇವಾ ಮನೋ ಭಾವದಿಂದ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ನಾವು ಬೆಂಬಲವಾಗಿ ನಿಲ್ಲುತ್ತೇವೆ. ಲೋಪ ಕಂಡು ಬಂದಲ್ಲಿ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿಯಾಗಲಿದೆ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಲ್ಲಿ ಇಟ್ಟುಕೊಳ್ಳಬೇಕು ಎಂದರು.

ಮುರುಘಾ ಮಠ ಮಾಜಿ ಆಡಳಿತಾಧಿಕಾರಿ ಬಸವರಾಜನ್‌ ಹೊರತರಲು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಕೆ

ಇ-ಸ್ವತ್ತು ಪಡೆಯುವುದು ಸಾರ್ವಜನಿಕರ ಹಕ್ಕಾಗಿದೆ. ಜನರ ದಾಖಲೆ ಜನರಿಗೆ ನೀಡಲು ಹಣದ ಆಮಿಷ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಇಂಥಹ ಪ್ರಕರಣಗಳು ಕಂಡು ಬಾರದಂತೆ ಎಚ್ಚರದಿಂದ ಕರ್ತವ್ಯ ನಿರ್ವಹಿಸುವುದು ಉತ್ತಮ.  ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಬೀದಿ ದೀಪ ನಿರ್ವಹಣೆ, ಕುಡಿವ ನೀರು ಸರಬರಾಜು, ಘನತ್ಯಾಜ್ಯ ವಿಲೇವಾರಿ ಕೆಲಸಗಳನ್ನು ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಉತ್ತಮ ಹೆಸರು ಪಡೆಯಲಿದ್ದೀರಾ ಎಂದರು.  ಇತ್ತೀಚಿಗೆ ಈ ಭಾಗದಲ್ಲಿ ದನಕರುಗಳಿಗೆ ಚರ್ಮಗಂಟು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ರಾಸುಗಳಿಗೆ ಚಿಕಿತ್ಸೆ ನೀಡುವ ಅಭಿಯಾನ ಆರಂಭಿಸಲಾಗಿದೆ. ರೈತರಿಗೆ ನೆರವಾಗಲು 8277100200 ಸಹಾಯವಾಣಿ ತೆರೆಯಲಾಗಿದ್ದು, ಈ ಸಂಬಂಧ ಹೆಚ್ಚು ಪ್ರಚಾರ ನಡೆಸಬೇಕು ಅಂತ ಹೇಳಿದರು. 

ಈ ಸಹಾಯವಾಣಿಗೆ ಕರೆ ಬಂದ ಕೂಡಲೇ ಸಮೀಪದ ಪಶು ವೈದ್ಯರನ್ನು ಸಂಪರ್ಕ ಮಾಡಿ ಸ್ಥಳಕ್ಕೆ ಕಳುಹಿಸಲಾಗುತ್ತದೆ. ಈ ಸೇವೆಯು ರೈತರಿಗೆ ಹೆಚ್ಚು ಅನುಕೂಲಕರವಾಗಿದ್ದು, ಗ್ರಾಪಂ ಪಿಡಿಒಗಳು ಗ್ರಾಮಗಳಲ್ಲಿ ಟಾಂ-ಟಾಂ ಹಾಕಿಸಿ ಪ್ರತಿಯೊಬ್ಬರೂ ತಿಳಿಸ ಬೇಕು ಎಂದು ಸೂಚಿಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯುನ್ನತ ಪರಿಕರ ಹಾಗೂ ನುರಿತ ವೈದ್ಯರಿದ್ದಾರೆ. ಇದರ ಜತೆ ಅಗತ್ಯ ಔಷಧಿ ಲಭ್ಯವಿರುತ್ತದೆ. ಅನೇಕರು ಮಾಹಿತಿ ಕೊರತೆಯಿಂದ ಹೆಚ್ಚು ಹಣತೆತ್ತು ಖಾಸಗಿ ಆಸ್ಪತ್ರೆಗಳಗತ್ತ ಮುಖ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಸರಕಾರಿ ಆಸ್ಪತ್ರೆ ಗಳಲ್ಲಿರುವ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗತಿ ಮೂಡಿಸಬೇಕು ಎಂದರು. 

click me!