ಚಿಕ್ಕಮಗಳೂರು: ಕುಸಿಯುವ ಸ್ಥಿತಿಯಲ್ಲಿ ರಾಜ್ಯ ಹೆದ್ದಾರಿ ಸೇತುವೆ

By Kannadaprabha NewsFirst Published Aug 10, 2019, 10:37 AM IST
Highlights

ಚಿಕ್ಕಮಗಳೂರಿನ ತರೀಕೆರೆಯ ರಾಜ್ಯ ಹೆದ್ದಾರಿಯ ಪ್ರಮುಖ ಸಂಪರ್ಕ ಸೇತುವೆ ಕುಸಿಯುವ ಹಂತದಲ್ಲಿದೆ. ರಾಮನಾಯ್ಕನ ಕೆರೆಯಿಂದ ಪಟ್ಟಣದ ಚಿಕ್ಕಕೆರೆ ಹಾಗೂ ದೊಡ್ಡ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿದು ಹೋಗಲು ನಿರ್ಮಾಣವಾದ ದೊಡ್ಡ ಸೇತುವೆ ಇದಾಗಿದೆ. ಆದರೆ, ಇಲಾಖೆಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲಕಾಲಕ್ಕೆ ಸೇತುವೆಯಲ್ಲಿ ಸವಕಳಿ ಉಂಟಾಗಿ ಇಂದು ಅಪಾಯದ ಸ್ಥಿತಿಗೆ ತಲುಪಿದೆ.

ಚಿಕ್ಕಮಗಳೂರು(ಆ.10): ತರೀಕೆರೆ ಪಟ್ಟಣದ ಕೇಂದ್ರ ಸ್ಥಳದಲ್ಲಿರುವ ತರೀಕೆರೆ ಚಿಕ್ಕಮಗಳೂರು ರಾಜ್ಯ ಹೆದ್ದಾರಿಯ ಪ್ರಮುಖ ಸಂಪರ್ಕ ಸೇತುವೆ ದುರಸ್ತಿ ಮಾಡಲಾಗದಷ್ಟು ಹಾಳಾಗಿದೆ.

ಹಿಂದೊಂದು ಸಂದರ್ಭದಲ್ಲಿ ತರೀಕೆರೆಯಿಂದ ನೇರವಾಗಿ ಚಿಕ್ಕಮಗಳೂರಿಗೆ ಸಂಪರ್ಕ ಸೇತುವೆಯಾಗಿ ಮತ್ತು ಇಂದಿಗೂ ಸಹ ರಾಮನಾಯ್ಕನ ಕೆರೆಯಿಂದ ಪಟ್ಟಣದ ಚಿಕ್ಕಕೆರೆ ಹಾಗೂ ದೊಡ್ಡ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿದು ಹೋಗಲು ನಿರ್ಮಾಣವಾದ ದೊಡ್ಡ ಸೇತುವೆ ಇದಾಗಿದೆ. ಆದರೆ, ಇಲಾಖೆಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲಕಾಲಕ್ಕೆ ಸೇತುವೆಯಲ್ಲಿ ಸವಕಳಿ ಉಂಟಾಗಿ ಇಂದು ಅಪಾಯದ ಸ್ಥಿತಿಗೆ ತಲುಪಿದೆ.

24 ಗಂಟೆಯೂ ಸೇತುವೆ ಮೇಲೆ ಪ್ರಯಾಣಿಸುತ್ತಿದ್ದರು:

ಪಟ್ಟಣದ ರೈತಾಪಿ ಜನತೆ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುವ ದಿನದ 24 ಗಂಟೆಗಳ ಕಾಲದಲ್ಲಿ ಎತ್ತಿನಗಾಡಿಗಳು, ಟ್ರ್ಯಾಕ್ಟರ್‌, ಶಾಲಾ ವಾಹನಗಳು ಬೈಕು, ಕಾರು ಇತ್ಯಾದಿ ವಾಹನಗಳು ಸಂಚರಿಸುವ ಈ ಸೇತುವೆ ಬಹಳ ಹಿಂದಿನ ಕಾಲದಲ್ಲಿ ನಿರ್ಮಾಣವಾಗಿದೆ.

ಸೇತುವೆಯ ಕೆಳಗಿನ ಮತ್ತು ಸೇತುವೆಯ ಅಕ್ಕಪಕ್ಕದ ತಡೆಗೋಡೆಗಳೆಲ್ಲಾ ತುಂಬಾ ಹಾಳಾಗಿವೆ. ಸೇತುವೆಯ ಕೆಳಗಿನ ಕಬ್ಬಿಣವೆಲ್ಲ ತುಕ್ಕುಹಿಡಿದು ಹಾಳಾಗಿದೆ. ತಡೆಗೋಡೆಗಳೆಲ್ಲಾ ಕೊರಕಲು ಬಿದ್ದಿವೆ. ಇಲ್ಲಿಯವರೆಗೆ ಇದು ತಡೆದುಕೊಂಡಿರುವುದೇ ಹೆಚ್ಚು ಎಂದು ಹೇಳುತ್ತಾರೆ ಸಾರ್ವಜನಿಕರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೇತುವೆ ದುರಸ್ತಿಗೆ 3 ವರ್ಷಗಳ ಹಿಂದೊಂದು ಸಾರಿ ಸರ್ಕಾರದಿಂದ ಅರ್ಥಿಕ ನೆರವು ಕೂಡ ಪ್ರಕಟವಾಗಿತ್ತು. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಸೇತುವೆ ದುರಸ್ತಿ ಬಗ್ಗೆ ಎಸ್ಟಿಮೇಟ್‌ ಸಿದ್ಧಪಡಿಸಿ ಕಳಿಸಲಾಗಿತ್ತು. ಆದರೆ ಈವರೆವಿಗೂ ಸೇತುವೆ ದುರಸ್ತಿ ಕಂಡಿಲ್ಲ. ಇದೀಗ ಈ ಸಲದ ಭಾರಿ ಮಳೆಯಿಂದ ಎಲ್ಲ ಕೆರೆ -ಕಟ್ಟೆಗಳು ನೀರಿನಿಂದ ತುಂಬಿಕೊಳ್ಳುತ್ತಿರುವುದು ಶುಭ ಲಕ್ಷಣವಾಗಿದೆ.

ಚಿಕ್ಕಮಗಳೂರು: 6 ಕುಟುಂಬಗಳ ಸ್ಥಳಾಂತರ

ರಾಮನಾಯ್ಕನ ಕೆರೆ ಕೋಡಿ ನೀರು ಹರಿದು ಚಿಕ್ಕ ಕೆರೆ ಮೂಲಕ ದೊಡ್ಡ ಕೆರೆ ಇತ್ಯಾದಿ ಸಂಪರ್ಕ ಕೆರೆಗಳಿಗೆ ಈ ಸೇತುವೆ ಕೆಳಗಿನ ಕಾಲುವೆ ಮೂಲಕವೇ ಹರಿದು ಹೋಗಬೇಕು. ಆದರೆ ಸೇತುವೆ ಇಂದಿನ ಸ್ಥಿತಿ ನೋಡಿದರೆ ಹೆದರಿಕೆಯಾಗುತ್ತದೆ. ಭಾರಿ ಪ್ರಮಾಣದ ನೀರು ನುಗ್ಗಿದರೆ ಸೇತುವೆ ಏನಾಗುತ್ತದೋ ಎಂಬ ಭಯ ಎಲ್ಲರಲ್ಲೂ ಕಾಡುತ್ತಿದೆ.

ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಅಪಾಯದ ಸ್ಥಿತಿಗೆ ತಲುಪಿರುವ ಈ ಸೇತುವೆಯ ಸುರಕ್ಷತೆಯ ಕಡೆಗೆ ತಕ್ಷಣವೇ ಗಮನ ಹರಿಸಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

click me!