4 ವರ್ಷ ಕಳೆದರೂ ಸಿಗದ ನೆರೆ ಪರಿಹಾರ: ತಾಲೂಕು ಕಚೇರಿಯಲ್ಲಿ ವಿಷ ಕುಡಿಯಲು ಮುಂದಾದ ನೆರೆ ನಿರಾಶ್ರಿತರು

By Govindaraj SFirst Published Feb 10, 2023, 10:41 PM IST
Highlights

2019ರಲ್ಲಿ ಉಂಟಾದ ಅತಿವೃಷ್ಟಿ, ಭೂಕುಸಿತ ಮತ್ತು ನೆರೆಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬದವರು ತಮಗೆ ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಕಛೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಫೆ.10): 2019ರಲ್ಲಿ ಉಂಟಾದ ಅತಿವೃಷ್ಟಿ, ಭೂಕುಸಿತ ಮತ್ತು ನೆರೆಹಾವಳಿಯಿಂದ ಸಂತ್ರಸ್ತರಾಗಿರುವ ಕುಟುಂಬದವರು ತಮಗೆ ಸರ್ಕಾರ ಸೂಕ್ತ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಕಛೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು. ಎರಡು ಗಂಟೆ ಕಾಲ ಪ್ರತಿಭಟನೆ ನಡೆಸುತ್ತಿದ್ದ ಸಂತ್ರಸ್ಥರ ಬಳಿಗೆ ಯಾವುದೇ ಅಧಿಕಾರಿ , ಜನಪ್ರತಿನಿಧಿಗಳು ಭೇಟಿ ನೀಡಿ ಸ್ವಾಂತನ ಹೇಳಿದ ಹಿನ್ನೆಲೆಯಲ್ಲಿ  ಆಕ್ರೋಶಗೊಂಡ ಪ್ರತಿಭಟನೆನಿತರು ಆತ್ಮಹತ್ಯೆಗೆ ಯತ್ನ ನಡೆಸಿದರು. 

ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಆತ್ಮಹತ್ಯೆಗೆ ಯತ್ನ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ತಾಲೂಕು ಕಚೇರಿಯಲ್ಲಿ ನೆರೆ ಸಂತ್ರಸ್ಥರು ಕೈಯಲ್ಲಿ ವಿಷದ ಬಾಟಲಿ ಇಟ್ಕೊಂಡು ಕುಡಿಯಲು ಯತ್ನಿಸಿದರು.. ಅಲ್ಲದೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬದುಕು ಕೊಡಿ ಇಲ್ಲ ವಿಷ ಕೊಡಿ ಎಂದು ಆಕ್ರೋಶ ಹೊರಹಾಕಿದರು. ಹೀಗೆ ಆತ್ಮಹತ್ಯೆಗೆ ಯತ್ನಿಸಿದವರು ಮೂಡಿಗೆರೆ ತಾಲೂಕಿನ ಮಧುಗುಂಡಿ-ಮಲೆಮನೆ ಗ್ರಾಮಸ್ಥರು. 2019ರ ಆಗಸ್ಟ್ 9ರಂದು ಒಂದೇ ರಾತ್ರಿ 22 ಇಂಚಿನಷ್ಟು ಮಳೆ ಸುರಿದಿತ್ತು. ಮಲೆಮನೆ-ಮಧುಗುಂಡಿ ಗ್ರಾಮಗಳು ಅಲ್ಲೋಲ-ಕಲ್ಲೋಲವಾಗಿದ್ವು. ಇಲ್ಲಿ ಮನೆಗಳಿದ್ವಾ ಎಂಬ ಅನುಮಾನ ಮೂಡುವಂತಿತ್ತು. 

ಕೊಡಗಿಗೆ ಬರಲು ಹೆದರಿತಾ ಸಿದ್ದು, ಡಿಕೆಶಿ ಜೋಡಿಯ ಪ್ರಜಾಧ್ವನಿ ಯಾತ್ರೆ!

ಗುಡ್ಡದ ಮಣ್ಣು ಕಳಚಿ ಬಿದ್ದು ಊರಿಗೆ ಊರೇ ನೆಲಸಮವಾಗಿತ್ತು. ರಾತ್ರೋರಾತ್ರಿ ಮನೆಯಿಂದ ಓಡಿಬಂದು ಜೀವ ಉಳಿಸಿಕೊಂಡಿದ್ದರು. ಆದರೆ, ಸಿಎಂ ಬಿಎಸ್‍ವೈ, ಆರ್.ಅಶೋಕ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಮಾಧುಸ್ವಾಮಿ ಸೇರಿದಂತೆ ಹಲವರು ಬಂದು ಹೊಸ ಬದುಕಿನ ಭರವಸೆ ನೀಡಿದ್ದರು. ಆದರೆ, ಭರವಸೆ ಭರವಸೆಯಾಗೇ ಉಳಿದಿವೆ. ಇಲ್ಲಿನ ಜನ ಹೋರಾಟ, ಮನವಿ ಏನೇ ಮಾಡಿದರು. ಸರ್ಕಾರದಿಂದ ಸಿಕ್ಕಿದ್ದು ಅರೆಕಾಸಿನ ಪರಿಹಾರ. ನಾಲ್ಕು ವರ್ಷದಿಂದ ಕಾದು-ಕಾದು ಸುಸ್ತಾದ ಜನ ಇಂದು ತಾಲೂಕು ಕಚೇರಿಯಲ್ಲಿ ವಿಷ ಸೇವಿಸಿ, ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಪೊಲೀಸರು ಇದ್ದಿದ್ದಕ್ಕೆ ಏನೂ ಆಗಲಿಲ್ಲ. ಇಲ್ಲವಾದರೆ, ಮೂಡಿಗೆರೆ ತಾಲೂಕು ಕಚೇರಿ ಹಾಗೂ ಸರ್ಕಾರ ಮತ್ತೊಂದು ಅನಾಹುತಕ್ಕೆ ಕಾರಣವಾಗ್ತಿತ್ತು. 

ಶತಮಾನದ ಬದುಕು ಕ್ಷಣಾರ್ಧದಲ್ಲಿ ಮಣ್ಣುಪಾಲಾಗಿತ್ತು: ಅದು 2019ರ ಆಗಸ್ಟ್ ತಿಂಗಳು. ಅಕ್ಷರಶಃ ಮಲೆನಾಡಿಗರ ಪಾಲಿಗೆ ಮರಣಶಾಸನದಂತಹಾ ಮಳೆ. ಒಂದೇ ರಾತ್ರಿಗೆ ಮಲೆನಾಡಲ್ಲಿ ಸುಮಾರು 22 ಇಂಚಿನಷ್ಟು ಮಳೆ ಸುರಿದು ಶತಮಾನದ ಬದುಕು ಕ್ಷಣಾರ್ಧದಲ್ಲಿ ಮಣ್ಣುಪಾಲಾಗಿತ್ತು. ಎಲ್ಲಾ ಇದ್ದವರು ಒಂದೇ ರಾತ್ರಿ ಏನೂ ಇಲ್ಲದವರಂತೆ ನಿರ್ಗತಿಕರಾಗಿದ್ದರು. ಮನೆಯಲ್ಲಿನ ಒಂದು ಚಮಚ ಕೂಡ ಸಿಗದಂತಾ ಸ್ಥಿತಿ ನಿರ್ಮಾಣವಾಗಿತ್ತು. ಸಿಎಂ ಸೇರಿದಂತೆ ನಾಲ್ಕೈದು ಸಚಿವರು ನಿಮಗೆ ನಾವಿದ್ದೇವೆ. ಹೊಸ ಬದುಕು ಕೊಡ್ತೀವಿ ಅಂತ ಹೇಳಿ ನಾಲ್ಕು ವರ್ಷ ಆಯ್ತು ಎಂದು  ನಿರಾಶ್ರಿತರಾದ ಶಾರದಾ ಆಕ್ರೋಶ ಹೊರಹಾಕಿದರು. ಅಲ್ಲದೆ ಸರ್ಕಾರ, ತಾಲೂಕು ಆಡಳಿತ ಹಾಗೂ ಜನನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದರು. ನೆರೆಪರಿಹಾರ ಅಂತ ಮೂಡಿಗೆರೆಗೆ ನೂರಾರು ಕೋಟಿ ಹಣ ಬಂದರೂ ಅದು ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದರು.  ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕೋಟ್ಯಾಂತರ ರೂಪಾಯಿ ಮನೆ ಕಟ್ಟುತ್ತಿದ್ದಾರೆ. ನಮಗೆ ಇರೋದಕ್ಕೆ ಒಂದು ಸೂರು ಬೇಡ್ವಾ. ಸರ್ಕಾರ ಹಾಗೂ ಶಾಸಕರಿಗೆ ನಮ್ಮ ನೋವು ಅರ್ಥವಾಗಿಲ್ವಾ ಎಂದು ವ್ಯವಸ್ಥೆ ವಿರುದ್ಧ ಕಿಡಿಕಾರಿದರು. 

ಕಾಡಾನೆ ಕಾಟ ಇರುವ ಸ್ಥಳಕ್ಕೆ ಹೋಗುವುದು ಹೇಗೆ?: ಜಿಲ್ಲಾಡಳಿತ ಮೂಡಿಗೆರೆ ತಾಲ್ಲೂಕಿನ ಭೈರಾಪುರ ಗ್ರಾಮಕ್ಕೆ ಹೋಗಿ ಅಂತಿದ್ದಾರೆ. ಭೈರಾಪುರ ವಾರ್ಷಿಕ 300 ಇಂಚು ಮಳೆ ಬೀಳುವ ಪ್ರದೇಶ. ದಟ್ಟಕಾನನ. ಕಾಡುಪ್ರಾಣಿಗಳು, ಅದರಲ್ಲೂ ಕಾಡಾನೆ ಹಾವಳಿಗೆ ಮಿತಿಯೇ ಇಲ್ಲ. ಅಲ್ಲಿನ ಜನರೇ ಅಲ್ಲಿ ಏನೂ ಮಾಡಲಾಗದೆ ಕೈಕಟ್ಟಿ ಕೂತಿದ್ದಾರೆ. ಆ ಕಾಡಿಗೆ ಹೋಗಿ ನಾವು ಹೋಗಿ ಏನು ಮಾಡೋದು. ನಮ್ಮ ಜಾಗವನ್ನ ಸರ್ಕಾರಕ್ಕೆ ಬರೆದುಕೊಟ್ಟಿದ್ದೇವ. ಸರ್ಕಾರ ನಮಗೆ ಸೂಕ್ತ ಬದಲಿ ಜಾಗವನ್ನಾದರೂ ನೀಡಿದರೆ ಸಾಕು. ನಮ್ಮ ಬದುಕನ್ನ ನಾವು ನೋಡಿಕೊಳ್ತೇವೆ. ಆದ್ರೆ, ಸರ್ಕಾರ ಪ್ರತಿಸಾರಿ ಬಂದಾಗಲೂ ನಮ್ಮ ಮೂಗಿಗೆ ತುಪ್ಪಾ ಸವರಿ, ಶಾಸಕರು ಬಣ್ಣದ ಮಾತುಗಳನ್ನಾಡಿ ಕಳಿಸುತ್ತಾರೆ. ನಮಗೆ ಬದುಕು ಬೇಕು ಇಲ್ಲ, ವಿಷ ಬೇಕು ಎಂದು ತಾಲೂಕು ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ದಕ್ಷಿಣ ಭಾರತದಲ್ಲೇ ಅಪರೂಪವಾದಂತಹ ಬಿಲ್ವಪತ್ರೆ ಪಾರ್ಕ್‌: ತಪಿಸ್ಸಿನಿಂದ ಉದ್ಭವವಾಗಿರುವ ವನ

ಒಟ್ಟಾರೆ, 2019ರ ಮಲೆನಾಡ ರಣಮಳೆ ಸಾವಿರಾರು ಜನರ ಬದುಕಿನ ಮೇಲೆ ಬರೆ ಎಳೆದಿದೆ. ಶತಮಾನದ ಬದುಕು ಕಣ್ಣೆದುರೇ ಕೊಚ್ಚಿ ಹೋಗುವಾಗ ಜನ ಮೂಕಪ್ರೇಕ್ಷಕರಾಗಿ ನಿಂತಿದ್ರು. ಸರ್ಕಾರ ಅವರ ನೆರವಿಗೆ ಬರಲಿಲ್ಲ. ಅವರಿಗೆ ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗ್ತಿಲ್ಲ. ಇವರ ಪಾಲಿಗೆ ಸರ್ಕಾರ ಇದ್ದು ಇಲ್ಲದಂತಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನ ಒಂದೇ ಜೀವಿತಾವಧಿಯಲ್ಲಿ ಎರಡನೇ ಬಾರಿಗೆ ಹೊಸ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಸರ್ಕಾರ ಕಳೆದುಕೊಂಡಿದ್ದೆಲ್ಲವನ್ನೂ ನೀಡೋದಕ್ಕೆ ಸಾಧ್ಯವಿಲ್ಲ. ನಿಜ. ಆದರೆ, ಮೂಲಭೂತ ಸೌಲಭ್ಯವನ್ನಾದ್ರು ನೀಡಬೇಕಿತ್ತು. ಆದ್ರೆ, ಸರ್ಕಾರ ಆ ಗೋಜಿಗೂ ಹೋಗದಿರೋದು ಮಾತ್ರ ನಿಜಕ್ಕೂ ದುರಂತವೇ ಸರಿ.

click me!