Chikkamagaluru rains: ವರುಣನ ರುದ್ರ ನರ್ತನಕ್ಕೆ ನಲುಗಿದ ಕಾಫಿನಾಡು: ಅಪಾರ ಬೆಳೆ ನಷ್ಟ!

By Kannadaprabha NewsFirst Published May 25, 2023, 9:19 AM IST
Highlights

ಜಿಲ್ಲೆಯಲ್ಲಿ ವರುಣನ ಆರ್ಭಟ ಬುಧವಾರ ಕೊಂಚ ಇಳಿಮುಖವಾಗಿತ್ತು. ಆದರೆ, ಮೋಡ ಕವಿದ ವಾತಾವರಣ, ಗುಡುಗಿನ ಸದ್ದು ಎಂದಿನಂತೆ ಕೆಲವೆಡೆ ಕೇಳಿ ಬಂದಿದೆ. ಚಿಕ್ಕಮಗಳೂರು ಸೇರಿದಂತೆ ಬಯಲುಸೀಮೆಯ ಕೆಲವೆಡೆ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಮಳೆಯ ಅಬ್ಬರ ಕಡಿಮೆಯಾಗಿತ್ತು

ಚಿಕ್ಕಮಗಳೂರು (ಮೇ.25) : ಜಿಲ್ಲೆಯಲ್ಲಿ ವರುಣನ ಆರ್ಭಟ ಬುಧವಾರ ಕೊಂಚ ಇಳಿಮುಖವಾಗಿತ್ತು. ಆದರೆ, ಮೋಡ ಕವಿದ ವಾತಾವರಣ, ಗುಡುಗಿನ ಸದ್ದು ಎಂದಿನಂತೆ ಕೆಲವೆಡೆ ಕೇಳಿ ಬಂದಿದೆ. ಚಿಕ್ಕಮಗಳೂರು ಸೇರಿದಂತೆ ಬಯಲುಸೀಮೆಯ ಕೆಲವೆಡೆ ಸ್ವಲ್ಪ ಮಟ್ಟಿಗೆ ಮಳೆಯಾಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಮಳೆಯ ಅಬ್ಬರ ಕಡಿಮೆಯಾಗಿತ್ತು.

ಜಿಲ್ಲೆಯಲ್ಲಿ ವಾರ್ಷಿಕ 1833 ಮಿ.ಮೀ. ಮಳೆಯನ್ನು ನಿರೀಕ್ಷಿಸಲಾಗಿದೆ. ಕಳೆದ ಜ.1 ರಿಂದ ಮೇ 24ರವರೆಗೆ ಮಳೆಯ ಗುರಿ 138.8 ಮಿ.ಮೀ. ಆದರೆ, ಪ್ರಸಕ್ತ ಸಾಲಿನಲ್ಲಿ ಈವರೆಗೆ 115.3 ಮಿ.ಮೀ. ಮಳೆ ಬಂದಿದೆ. ಅಂದರೆ, ಶೇ. 82 ರಷ್ಟುಮಳೆ ಬಂದಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಜಿಲ್ಲೆಯ 8 ತಾಲೂಕುಗಳ ಪೈಕಿ ಕಡೂರು, ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಎನ್‌.ಆರ್‌.ಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆ ಬಂದಿದೆ.

Karnataka rains: ಮುಂಗಾರುಪೂರ್ವ ಮಳೆಗೆ 10 ಜಿಲ್ಲೆಗಳಲ್ಲಿ ಅಪಾರ ಬೆಳೆ ಹಾನಿ

ದಿಢೀರ್‌ ಮಳೆ ಬಂದಿದ್ದರಿಂದ ಕೆಲವೆಡೆ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದರೆ, ಮತ್ತೆ ಕೆಲವೆಡೆ ವಿದ್ಯುತ್‌ ಕಂಬಗಳು ನೆಲಕ್ಕೆ ಉರುಳಿವೆ, ಟ್ರಾನ್ಸ್‌ ಫಾರ್ಮರ್‌ಗಳು ಸುಟ್ಟು ಹೋಗಿವೆ.

ಎಲ್ಲಲ್ಲಿ ಎಷ್ಟುಹಾನಿ ?

ಮಳೆಯಿಂದಾಗಿ ಈವರೆಗೆ ಓರ್ವರು ಮೃತಪಟ್ಟಿದ್ದರೆ, 30 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ಕಡೂರು ತಾಲೂಕಿನಲ್ಲಿ 14, ಚಿಕ್ಕಮಗಳೂರು ತಾಲೂಕಿನಲ್ಲಿ 8 ಮನೆಗೆ ಹಾನಿಯಾಗಿದೆ.

ಮನೆಗಳಿಗೆ ಹಾನಿಯಲ್ಲಿ ಮಾತ್ರವಲ್ಲ ಬೆಳೆ ಹಾನಿಯಲ್ಲೂ ಕಡೂರು ತಾಲೂಕು ಪ್ರಥಮ ಸ್ಥಾನದಲ್ಲಿದೆ. ಈ ಒಂದೇ ತಾಲೂಕಿನಲ್ಲಿ 10.50 ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿ ಸಂಭವಿಸಿದ್ದರೆ, ತರೀಕೆರೆ ತಾಲೂಕಿನಲ್ಲಿ 0.40 ಹೆಕ್ಟೇರ್‌ಗೆ ಹಾನಿಯಾಗಿದೆ. ಇನ್ನುಳಿದ ತಾಲೂಕುಗಳಲ್ಲಿ ವರದಿಯಾಗಿಲ್ಲ.

678 ವಿದ್ಯುತ್‌ ಕಂಬಗಳಿಗೆ ಹಾನಿ

ಜಿಲ್ಲೆಯಲ್ಲಿ ಬೆಳೆ ಮಾತ್ರವಲ್ಲ, ಬಲವಾಗಿ ಬೀಸಿದ ಗಾಳಿಗೆ ಮಲೆನಾಡಿನಲ್ಲಿ ಈವರೆಗೆ 678 ವಿದ್ಯುತ್‌ ಕಂಬಗಳು ಧರೆಗೆ ಉರುಳಿವೆ. ಈ ಪೈಕಿ ಅತಿ ಹೆಚ್ಚು ಹಾನಿಯಾಗಿದ್ದು ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ಶೃಂಗೇರಿ, ಕಳಸ ಹಾಗೂ ಕಡೂರು ತಾಲೂಕಿನ ಕೆಲವು ಭಾಗಗಳಲ್ಲಿ. ಇಲ್ಲಿ ವಿದ್ಯುತ್‌ ಕಂಬಗಳಿಗೆ ಹಾನಿ ಸಂಭವಿಸಿದೆ. 13.56 ಕಿ.ಮೀ. ವಿದ್ಯುತ್‌ ಲೈನ್‌ಗೆ ಹಾನಿಯಾಗಿದೆ. ಹಾನಿಯಾಗಿದ್ದ 678 ವಿದ್ಯುತ್‌ ಕಂಬಗಳ ಪೈಕಿ 458 ಕಂಬಗಳನ್ನು ಬದಲಾವಣೆ ಮಾಡಲಾಗಿದೆ. 13.56 ಕಿ.ಮೀ. ಲೈನ್‌ನಲ್ಲಿ 9.16 ಕಿ.ಮೀ. ಲೈನ್‌ ದುರಸ್ತಿ ಗೊಳಿಸಲಾಗಿದೆ. ವಿದ್ಯುತ್‌ ಕಂಬಗಳು ಹಾಗೂ ಲೈನ್‌ಗೆ ಹಾನಿಯಾಗಿದ್ದರಿಂದ ಒಟ್ಟು 63.58 ಲಕ್ಷ ರುಪಾಯಿ ನಷ್ಟಸಂಭವಿಸಿದೆ.

ಬೀದರ್‌ ಮುಂದು​ವ​ರಿದ ಭಾರಿ ಮಳೆ: ಸಿಡಿಲಿಗೆ 6 ಜಾನುವಾರು ಬಲಿ

ಮಳೆ ಬಿಡುವಿನ ನಿರೀಕ್ಷೆ

ಅಜ್ಜಂಪುರ, ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಅಂಬಳೆ ಹೋಬಳಿಯಲ್ಲಿ ಮಳೆ ಆಶ್ರಿತ ಬೆಳೆ ಬೆಳೆಯಲಾಗುತ್ತಿದ್ದು, ದ್ವಿದಳ ದಾನ್ಯ ಬೆಳೆಗಳ ಬಿತ್ತನೆ ಕಾರ್ಯ ನಡೆಯುತಿತ್ತು. ಕಳೆದ ಒಂದು ವಾರದಲ್ಲಿ ಪ್ರತಿ ದಿನ ಮಧ್ಯಾಹ್ನ ಗುಡುಗು ಸಹಿತ ಮಳೆ ಬರುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ತೊಡಗಿಕೊಂಡಿರಲಿಲ್ಲ. ಬುಧವಾರ ಮಳೆ ಬಿಡುವು ನೀಡಿದ್ದು, ಇದೇ ವಾತಾವರಣ ಒಂದು ವಾರಗಳ ಕಾಲ ಮುಂದುವರೆದರೆ ಬಿತ್ತನೆ ಕಾರ್ಯ ಇನ್ನಷ್ಟುಚುರುಕುಗೊಳ್ಳಲಿದೆ.

click me!