
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯ ಬೈರಗಾನಹಳ್ಳಿ ಗ್ರಾಮದಲ್ಲಿ ಬಹಳ ವರ್ಷಗಳ ನಂತರ ಸಪ್ಪಲಮ್ಮದೇವಿ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಸುಮಾರು 25 ವರ್ಷಗಳ ನಂತರ ನಡೆದ ಈ ಮೆರವಣಿಗೆ ಗ್ರಾಮಸ್ಥರ ಪಾಲಿಗೆ ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವಾಗಿರದೆ ಹಳೆಯ ನೆನಪುಗಳನ್ನು ಜೀವಂತಗೊಳಿಸಿದ ಅಪರೂಪದ ಕ್ಷಣವಾಗಿತ್ತು.
ಊರಿನ ಹಿರಿಯರು, ಮುಖಂಡರು, ಮಹಿಳೆಯರು, ಮಕ್ಕಳು ಹಾಗೂ ಮುಖ್ಯವಾಗಿ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು. ಮನೆಗಳ ಮುಂದೆ ಹಾಕಿದ ಸುಂದರ ರಂಗೋಲಿ, ಬೀದಿಗಳಲ್ಲಿ ಕಂಗೊಳಿಸಿದ ಮಾವಿನ ತೋರಣ, ಮೊಳಗಿದ ತಮಟೆಯ ಸದ್ದುಬೈರಗಾನಹಳ್ಳಿಯ ಹಬ್ಬದ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡಿತು.
ಈ ಅದ್ಭುತ ಕಾರ್ಯಕ್ರಮದ ಹಿಂದೆ ನಮ್ಮ ಗ್ರಾಮದ ಯುವಕರ ಶ್ರಮ ಮತ್ತು ಉತ್ಸಾಹ ಬಹಳ ದೊಡ್ಡದು. ವಿಶೇಷವಾಗಿ ಯುವಕರ ಸಂಘದ ಎಲ್ಲಾ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಹಿಸಿದ ಜವಾಬ್ದಾರಿ ನಿಜಕ್ಕೂ ಶ್ಲಾಘನೀಯ ಎಂದು ಗ್ರಾಮದ ಹಿರಿಯ ಮುಖಂಡರು ಅಭಿಪ್ರಾಯಪಟ್ಟರು. ಯುವಕರು ಮನಸ್ಸು ಮಾಡಿದರೆ ಊರಿನಲ್ಲಿ ಎಂತಹ ಒಳ್ಳೆಯ ಬದಲಾವಣೆ ತರಬಹುದು ಎಂಬುದಕ್ಕೆ ಈ ಕಾರ್ಯಕ್ರಮವೇ ಉತ್ತಮ ಉದಾಹರಣೆ ಎಂದರು.
ಇದನ್ನೂ ಓದಿ : ವಿಶೇಷ ಚೇತನ ತಂದೆ-ತಾಯಿಗೆ ಧ್ವನಿಯಾದ ಮುದ್ದು ಕಂದಮ್ಮ; ಹೃದಯಸ್ಪರ್ಶಿ ವಿಡಿಯೋ ವೈರಲ್
ಊರಿನ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿಕೊಟ್ಟ ರತ್ನಮ್ಮನ ಮಗ ಮಧು ಅವರ ಸೇವಾಭಾವನೆ ವಿಶೇಷವಾಗಿ ಪ್ರಶಂಸನೀಯ ಎಂದು ಕೊಂಡಾಡಿದರು.