ಮಂಡ್ಯ: ಸಣ್ಣೇನಹಳ್ಳಿ ಜಮೀನಿನಲ್ಲಿ ಚಿರತೆ ಕಳೇಬರ ಪತ್ತೆ

By Kannadaprabha NewsFirst Published Aug 7, 2019, 3:07 PM IST
Highlights

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಚಿರತೆಯೊಂದು ಸತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚಿರತೆಯ ಕಳೇಬರ ಪತ್ತೆಯಾಗಿದ್ದು, ನಾಲ್ಕು ದಿನಗಳ ಹಿಂದೆ ಸತ್ತಿರಬಹುದೆಂದು ಅಂದಾಜಿಸಲಾಗಿದೆ. ಇಲಾಖೆಯ ನಿಯಮಾನುಸಾರ ಚಿರತೆಯ ಕಳೆಬರವನ್ನು ಸ್ಥಳದಲ್ಲಿಯೇ ಸುಟ್ಟುಹಾಕಲಾಯಿತು.

ಮಂಡ್ಯ(ಆ.07): ನಾಗಮಂಗಲ ತಾಲೂಕಿನ ಬೋಗಾದಿ ಸಮೀಪದ ಸಣ್ಣೇನಹಳ್ಳಿ ಗ್ರಾಮದ ಜಮೀನೊಂದರಲ್ಲಿ 4 ದಿನಗಳ ಹಿಂದೆ ಮೃತಪಟ್ಟಿರುವ ಚಿರತೆಯೊಂದರ ಕಳೇಬರ ಪತ್ತೆಯಾಗಿದೆ.

ಗ್ರಾಮದ ಹೊರವಲಯದ ಮಹದೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದ ಕೃಷ್ಣೇಗೌಡರ ಜಮೀನೊಂದರಲ್ಲಿ ನಾಲ್ಕರಿಂದ ಐದು ವರ್ಷ ಪ್ರಾಯದ ಕೊಳೆತ ಸ್ಥಿತಿಯಲ್ಲಿರುವ ಗಂಡು ಚಿರತೆಯ ಕಳೆಬರ ಪತ್ತೆಯಾಗಿದೆ. ಚಿರತೆಯ ಎದೆ ಹಾಗೂ ಹೊಟ್ಟೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವ ಗಾಯದ ಗುರುತುಗಳು ಕಂಡುಬಂದಿದೆ.

ಮೈಸೂರು: ಚಿರತೆ ದಾಳಿ ನಿಯಂತ್ರಣದ ಹಿಂದೆ ಅರಬ್ಬಿತಿಟ್ಟು!

ಸ್ಥಳೀಯ ಜನರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿ ಮಂಜುನಾಥ್‌ ನೇತೃತ್ವದ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ನಂತರ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ.ಬಿಷಜಮೂರ್ತಿ, ಅರಣ್ಯ ಪ್ರದೇಶದಲ್ಲಿ ಸಂಚರಿಸುವ ವೇಳೆ ಬಿದ್ದಿರುವ ಪೆಟ್ಟಿನಿಂದ ಚೇತರಿಸಿಕೊಳ್ಳಲಾರದೆ ಈ ಚಿರತೆ ಕಳೆದ ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂಬ ಶಂಕೆವ್ಯಕ್ತಪಡಿಸಿದರು. ಬಳಿಕ ಇಲಾಖೆಯ ನಿಯಮಾನುಸಾರ ಚಿರತೆಯ ಕಳೆಬರವನ್ನು ಸ್ಥಳದಲ್ಲಿಯೇ ಸುಟ್ಟುಹಾಕಲಾಯಿತು.

ಕಾಡು ಪ್ರಾಣಿಗಳಿಗಿಲ್ಲ ರಕ್ಷಣೆ:

ತಾಲೂಕಿನ ಆದಿಚುಂಚನಗಿರಿ, ಬೋಗಾದಿ, ಬಿಂಡಿಗನವಿಲೆ, ಮೈಲಾರಪಟ್ಟಣ, ಕೋಟೆಬೆಟ್ಟ, ನಲ್ಕುಂದಿ, ತಟ್ಟಹಳ್ಳಿ, ಶಿಕಾರಿಪುರ, ಹಾಲ್ತಿ, ಕರಡಹಳ್ಳಿ ಸೇರಿದಂತೆ ಹಲವು ಭಾಗಗಳಲ್ಲಿ ಬಹುತೇಕ ಅರಣ್ಯ ಪ್ರದೇಶವಿದೆ. ಕಾಡು ಪ್ರಾಣಿಗಳಾದ ಕರಡಿ, ಚಿರತೆ, ಜಿಂಕೆ, ಕೃಷ್ಣಮೃಗ, ಕಾಡುಹಂದಿ, ಮೊಲ, ಕಾಡುಕುರಿ, ನರಿ, ಹಾಗೂ ತೋಳಗಳು ಸೇರಿದಂತೆ ಹೆಚ್ಚಾಗಿ ನವಿಲುಗಳು ಕಂಡುಬರುತ್ತವೆ. ಆದರೆ ಇವುಗಳು ಕಾಡಿನಲ್ಲಿ ಜೀವಿಸಲು ಸೂಕ್ತ ರಕ್ಷಣೆ ಜೊತೆಗೆ ಆಹಾರ, ನೀರಿಲ್ಲದೆ ಕಾಡಿನಲ್ಲಿಯೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಪಕ್ಕದ್ಮನೆ ನಾಯಿಯೊಂದಿಗೆ ಅನೈತಿಕ ಸಂಬಂಧ, ಮನೆಯಿಂದಲೇ ಶ್ವಾನ ಔಟ್

ಸಮಾಜದಲ್ಲಿ ಜೀವಿಸಲು ಮನುಷ್ಯರಿಗಿರುವಂತೆ ಕಾಡು ಪ್ರಾಣಿಗಳಿಗೂ ಹಕ್ಕಿದೆ. ಚಿರತೆ, ಜಿಂಕೆ, ಕರಡಿ, ಕಾಡುಹಂದಿಯಂತಹ ಪ್ರಾಣಿಗಳನ್ನು ರಕ್ಷಣೆ ಮಾಡಿ ಅವುಗಳಿಗೂ ಬದುಕಲು ಅವಕಾಶ ಮಾಡಿಕೊಡಲು ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ತಾಲೂಕಿನ ಪ್ರಾಣಿಪ್ರಿಯರು ಆಗ್ರಹಿಸಿದ್ದಾರೆ.

click me!