
ಚಾಮರಾಜನಗರ: ಹನೂರು ತಾಲೂಕಿನ ಮರೂರು, ಅಸ್ತೂರು ಹಾಗೂ ಪೊನ್ನಾಚಿ ಗ್ರಾಮಗಳಿಗೆ ಸಂಚರಿಸುವ ಕೆಎಸ್ಆರ್ಟಿಸಿ ಬಸ್ (KSRTC Bus) ವೇಳಾಪಟ್ಟಿಯನ್ನು ಏಕಾಏಕಿ ಬದಲಾಯಿಸಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಇಲ್ಲಿಯ ಗ್ರಾಮಸ್ಥರು ಹೇಳುವ ಪ್ರಕಾರ, ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ ಸುಮಾರು 25 ವರ್ಷಗಳಿಂದ ಬೆಳಗ್ಗೆ 11ಕ್ಕೆ ಪೊನ್ನಾಚಿಗೆ ಆಗಮಿಸಿ ಸಂಜೆ 3.30ಕ್ಕೆ ಹನೂರಿಗೆ ಹಿಂದಿರುಗುತ್ತಿತ್ತು. ಈ ವೇಳಾಪಟ್ಟಿಯು ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ನಿತ್ಯದ ಕೆಲಸಗಳಿಗೆ ಪಟ್ಟಣಕ್ಕೆ ತೆರಳುವ ಜನರಿಗೆ ಅತ್ಯಂತ ಅನುಕೂಲವಾಗಿತ್ತು.
ಆದರೆ ಇತ್ತೀಚೆಗೆ ಬಸ್ ಸಂಚಾರದ ಸಮಯವನ್ನು ಏಕಾಏಕಿ ಬೆಳಗ್ಗೆ 9.30ಕ್ಕೆ ಬದಲಾಯಿಸಿರುವುದರಿಂದ ಜನರಿಗೆ ತೀವ್ರ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.
ಇದನ್ನೂ ಓದಿ : 59 ದಿನಗಳ ಬಳಿಕ ಕೊನೆಗೂ ಹುತ್ತೂರು, ಶ್ಯಾನಡ್ರಹಳ್ಳಿ ಕೆರೆಗೆ ನೀರು ಬಂತು; ರೈತರಲ್ಲಿ ಸಂತಸ
ಹಳೆಯ ವೇಳಾಪಟ್ಟಿಯೇ ಮುಂದುವರೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡದಿದ್ದರೆ ಮುಂದೆ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯ ಗಡಿ ಗ್ರಾಮಕ್ಕೆ ಸ್ಯಾಟ್ಲೈಟ್ ಮೂಲಕ ಬಿಎಸ್ಎನ್ಎಲ್ ನೆಟ್ವರ್ಕ್ ಸೌಲಭ್ಯ