ಚಾಮರಾಜನಗರ: ಪ್ರೀತಿಗೆ ಮನೆಯವರ ವಿರೋಧ; ಒಂದೇ ಹಗ್ಗಕ್ಕೆ ಕೊರಳೊಡ್ಡಿದ ಆದಿವಾಸಿ ಯುವ ಪ್ರೇಮಿಗಳು!

Published : Apr 02, 2026, 09:14 PM IST
Chamarajanagara Lovers death

ಸಾರಾಂಶ

ಚಾಮರಾಜನಗರದ ಪೊನ್ನಾಚ್ಚಿ ಗ್ರಾಮದಲ್ಲಿ, ಪೋಷಕರ ವಿರೋಧ ಮತ್ತು ಪೊಲೀಸ್ ದೂರಿನ ಭೀತಿಯಿಂದ ಆದಿವಾಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.

ಚಾಮರಾಜನಗರ (ಏ.02): ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚ್ಚಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ನಡೆದಿದೆ. ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಾಗೂ ಪೊಲೀಸ್ ಕೇಸ್ ಆಗುವ ಭೀತಿಯಿಂದ ಈ ಜೋಡಿ ಆತ್ಮ*ಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ, ಯುವತಿ ಮನೆಯವರು ಇವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.

ಮೃತ ಪ್ರೇಮಿಗಳ ವಿವರ:

ಸಾವಿಗೆ ಶರಣಾದ ಪ್ರೇಮಿಗಳನ್ನು 21 ವರ್ಷದ ನಾಗೇಂದ್ರ ಹಾಗೂ 19 ವರ್ಷದ ನಾದಿಯಾ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಆದಿವಾಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾಗೇಂದ್ರ ಹನೂರು ತಾಲೂಕಿನ ಪೊನ್ನಾಚ್ಚಿ ಗ್ರಾಮದ ನಿವಾಸಿಯಾಗಿದ್ದು, ನಾದಿಯಾ ಪಾಲಾರ್ ಗ್ರಾಮದವಳಾಗಿದ್ದಾಳೆ. ನಾಗೇಂದ್ರ ಮತ್ತು ನಾದಿಯಾ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರ ಪ್ರೇಮಕ್ಕೆ ಎರಡು ಕುಟುಂಬಗಳ ಕಡೆಯಿಂದ ವಿರೋಧವಿತ್ತು. ಮದುವೆಗೆ ಪೋಷಕರು ಒಪ್ಪದ ಕಾರಣ, ನಾಗೇಂದ್ರ ಸುಮಾರು 3 ದಿನಗಳ ಹಿಂದೆ ನಾದಿಯಾಳನ್ನು ತನ್ನ ಪೊನ್ನಾಚ್ಚಿಯಲ್ಲಿರುವ ತಾತನ ಮನೆಗೆ ಕರೆದುಕೊಂಡು ಬಂದಿದ್ದನು.

ಪೊಲೀಸ್ ದೂರು ಮತ್ತು ಸಾವು:

ಇತ್ತ ಮಗಳು ನಾಪತ್ತೆಯಾಗಿದ್ದಾಳೆಂದು ನಾದಿಯಾಳ ಪೋಷಕರು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಷಯ ನಾಗೇಂದ್ರ ಮತ್ತು ನಾದಿಯಾ ಗಮನಕ್ಕೆ ಬಂದಿದೆ. ಈಗಾಗಲೇ ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ, ಈಗ ಪೊಲೀಸ್ ಕೇಸ್ ಕೂಡ ಆಗಿದೆ ಎಂಬ ಭಯ ಅವರನ್ನು ಕಾಡಲಾರಂಭಿಸಿದೆ. ತಮಗೆ ಮನೆಯವರ ಅಥವಾ ಸಮಾಜದ ಬೆಂಬಲ ಸಿಗುವುದಿಲ್ಲ ಎಂದು ಆತಂಕಗೊಂಡ ಪ್ರೇಮಿಗಳು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಂದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ:

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನಾಗೇಂದ್ರ ತನ್ನ ತಾತನ ಮನೆಗೆ ಬರುತ್ತಿದ್ದ ನಾದಿಯಾಳನ್ನು ಪ್ರೀತಿಸುತ್ತಿದ್ದನು, ಆಗಾಗ್ಗೆ ನಾದಿಯಾ ಅಜ್ಜಿ ಮನೆಗೆ ಭೇಟಿ ನೀಡುವ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

ನಾದಿಯಾ ಪೋಷಕರಿಂದ ಕೊಲೆ ಆರೋಪ: 

ಇನ್ನು ನಮ್ಮ ಮಗಳು ನಾದಿಯಾ ಮತ್ತು ಹುಡುಗ ಇಬ್ಬರೂ ಪ್ರೀತಿ ಮಾಡಿದ್ದಕ್ಕೆ ವಿರೋಧ ಇದ್ದದ್ದು ನಿಜ. ಆದರೆ, ಅವರಿಬ್ಬರೂ ಮನೆ ಬಿಟ್ಟು ಹೋಗಿದ್ದರು. ಅಲ್ಲಿಗೆ ಹೋದ ಮೇಲೆ ಜೀವನ ಮಾಡುವುದಕ್ಕಾಗಿ ಕೆಲಸಕ್ಕೆ ಹೋಗುತ್ತಿದ್ದರು. ಇದೀಗ ಇಬ್ಬರೂ ಸತ್ತಿದ್ದಾರೆ. ನಮ್ಮ ಮಗಳು ಆಕೆಯೇ ಆತ್,*ಹತ್ಯೆ ಮಾಡಿಕೊಂಡಿಲ್ಲ. ಅವರಾಗಿಯೇ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಇನ್ನು ಹುಡುಗನನ್ನು ಬಿಟ್ಟರೆ ಕೊಲೆ ಆರೋಪ ಬರುತ್ತದೆಂದು, ಅವನನ್ನೂ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತ ಯುವತಿ ದೊಡ್ಡಮ್ಮ ಆರೋಪ ಮಾಡಿದ್ದಾರೆ.

ಒಟ್ಟಾರೆಯಾಗಿ ಆದಿವಾಸಿ ಸಮುದಾಯದ ಇಬ್ಬರು ಯುವ ಪ್ರೇಮಿಗಳು ಅಕಾಲಿಕವಾಗಿ ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸುವಂತೆ ಮಾಡಿದೆ. ಒಂದು ವೇಳೆ ಪ್ರೇಮಿಗಳಿಗೆ ವಿರೋಧ ಉಂಟಾಗಿ ಯಾರಾದರೂ ಕೊಲೆ ಮಾಡಿದ್ದಲ್ಲಿ ಅವರಿಗೆ ಶಿಕ್ಷೆಯಾಗಬೇಕು ಎಂದು ಗ್ರಾಮಸ್ಥರು ಕೂಡ ಆಗ್ರಹ ಮಾಡಿದ್ದಾರೆ. ಇನ್ನು ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷಾ ವರದಿ ಬಂದ ಮೇಲೆ ಸತ್ಯಾಂಶ ಹೊರಬೀಳಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

PREV
Read more Articles on
click me!

Recommended Stories

ವಿದ್ಯಾರ್ಥಿಗಳಲ್ಲಿನ ಮೊಬೈಲ್‌ ವ್ಯಸನ ನಿವಾರಣೆಗೆ ಮಾರ್ಗಸೂಚಿ: ಸಚಿವ ದಿನೇಶ್ ಗುಂಡೂರಾವ್
ನೀರು ಕಾಯಿಸುವಾಗ ಸ್ವಿಚ್ ಆಫ್ ಮಾಡದೇ 'ವಾಟರ್ ಹೀಟರ್' ಮುಟ್ಟಿದ ಯುವತಿ; ಕರೆಂಟ್ ಶಾಕ್‌ನಿಂದ ಸ್ಥಳದಲ್ಲೇ ಸಾವು!