ಇವತ್ತಿನ ಕಾಂಗ್ರೆಸ್ ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ಕಾಂಗ್ರೆಸ್ ಅಲ್ಲ: ಚಕ್ರವರ್ತಿ ಸೂಲಿಬೆಲೆ

By Girish GoudarFirst Published Aug 23, 2022, 11:30 PM IST
Highlights

ಹಿಂದುತ್ವ ಅನ್ನೋ ಪದದ ಕೊಡುಗೆ ಸಾವರ್ಕರ್ ರದ್ದು. ಮುಸಲ್ಮಾನ, ಕ್ರಿಶ್ಚಿಯನ್ ಗೆ ಈ ಭಾರತ ಪಿತೃಭೂಮಿ, ಅಖಂಡ ಭಾರತ ಅಂತ ಕಂಡರೆ ಆತನೂ ಹಿಂದುವೇ.‌ ಇಂಥದ್ದೊಂದು ಅದ್ಭುತ ಹಿಂದುತ್ವದ ಕಲ್ಪನೆಯನ್ನ ಸೃಷ್ಟಿಸಿದ್ದು ಸಾವರ್ಕರ್: ಸೂಲಿಬೆಲೆ

ಮಂಗಳೂರು(ಆ.23):  ಇವತ್ತಿನ ಕಾಂಗ್ರೆಸ್ ಸ್ವಾತಂತ್ರ್ಯದ ಸಮಯದಲ್ಲಿ ಇದ್ದ ಕಾಂಗ್ರೆಸ್ ಅಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಇತ್ತು ಅನ್ನೋ ಕಾಂಗ್ರೆಸ್ಸಿಗರನ್ನ ಈ ಬಗ್ಗೆ ಪ್ರಶ್ನೆ ‌ಮಾಡಿ. ಈಗಿನ ಕಾಂಗ್ರೆಸ್ಸಿಗರು ನಮ್ಮದು ಸ್ವಾತಂತ್ರ್ಯ ಕಾಲದ ಮೂಲ ಕಾಂಗ್ರೆಸ್ ಅಂತ ಹೇಳಿದ್ರೆ ಈ ಪ್ರಶ್ನೆ ಕೇಳಿ ಅಂತ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇಂದು(ಮಂಗಳವಾರ) ಸಾವರ್ಕರ್ ಸಾಹಸ-ಯಾತನೆ-ಅವಮಾನಗಳ ಬದುಕಿನ ಬಗ್ಗೆ ಚಿಂತನ ಗಂಗಾ ಎಂಬ ಹೆಸರಿನಲ್ಲಿ  ಖ್ಯಾತ ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆಯಿಂದ ಸಾವರ್ಕರ್ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಂಗಳೂರಿನ ‌ಡೊಂಗರಕೇರಿಯ ಭುವನೇಂದ್ರ ಸಭಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಎಷ್ಟು ದಿನ ಸಹಿಸುವಿರಾ?, ಸಾವರ್ಕರ್ ನಿಂದನೆಗೆ ಪ್ರತ್ಯುತ್ತರ' ಎಂದ ಘೋಷಣೆಯಡಿ ಸಾವರ್ಕರ್ ಬದುಕು ಮತ್ತು ಇತಿಹಾಸದ ಅನಾವರಣದ ಕಾರ್ಯಕ್ರಮ ನಡೆಯಿತು.‌

ದೇಶದ ನೈಜ ಇತಿಹಾಸ ಎಂದಿಗೂ ಬದಲಾಗದು: ವಿನಯಕುಮಾರ್‌ ಸೊರಕೆ

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಸ್ವಾತಂತ್ರ್ಯದ ಹೊತ್ತಲ್ಲಿ ಇದ್ದ ಕಾಂಗ್ರೆಸ್ ‌ಈಗಿ‌ನ ಕಾಂಗ್ರೆಸ್ ಅಲ್ಲ. ಈಗ ಇರುವ ಕಾಂಗ್ರೆಸ್ ‌ಇಂದಿರಾ ಗಾಂಧಿ ಸ್ಥಾಪಿಸಿದ್ದು. ಅದನ್ನು ಕಾಂಗ್ರೆಸ್ (ಐ) ಅಂತ ಮಾಡಿದ್ರು. 1975ರ ನಂತರ ಇಂದಿರಾ ಗಾಂಧಿ ಪ್ರತ್ಯೇಕ ಕಾಂಗ್ರೆಸ್ ‌ಮಾಡಿದರು.‌ ಆದರೆ‌ ಕಾಲಕ್ರಮೇಣ ಅದನ್ನೇ ಸ್ವಾತಂತ್ರ್ಯ ಸಂದರ್ಭದ ಕಾಂಗ್ರೆಸ್ ಅಂತ ಹೇಳಿಕೊಳ್ಳಲಾಯ್ತು.‌ ಕಾಲಕ್ರಮೇಣದಲ್ಲಿ ಇವರೇ ಇದನ್ನ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಹೇಳಿದರು.‌ ಅದೇ ಕಾಂಗ್ರೆಸ್ ಇವತ್ತು ದೇಶದಲ್ಲಿರೋದು ಬಿಟ್ಟರೆ ಸ್ವಾತಂತ್ರ್ಯ ‌ಕಾಲದ ಕಾಂಗ್ರೆಸ್ ಅಲ್ಲ. 1885 ರಲ್ಲಿ ಎ.ಓ.ಹ್ಯೂಮ್ ಅನ್ನೋ ಬ್ರಿಟಿಷ್ ಅಧಿಕಾರಿ ಮೊದಲ ಕಾಂಗ್ರೆಸ್ ಹುಟ್ಟು ಹಾಕಿದ್ದು. ಆದರೆ ಈಗ ಇರೋ ಕಾಂಗ್ರೆಸ್ ಸ್ವಾತಂತ್ರ್ಯದ ಹೊತ್ತಲ್ಲಿ ಇದ್ದ ಕಾಂಗ್ರೆಸ್ ಅಲ್ಲ ಎಂದರು.

ನೆಹರೂ ಜೀವನದಲ್ಲಿ ಒಂದೇ ಒಂದು ಬಾರಿ ನಿಜವಾಗಿ ಜೈಲಿನಲ್ಲಿದ್ದರು.‌ ಅವರ ಅಪ್ಪ ಕ್ಷಮೆ ಪತ್ರ ಬರೆದು ಗೋಗರೆದು ಮಗನನ್ನ ಬಿಡಿಸಿ ಕೊಂಡರು‌. ಕೇವಲ ಹನ್ನೊಂದು ದಿನಗಳ ಶಿಕ್ಷೆಗೆ ಅವರು ಗೋಗರೆದಿದ್ದರು.‌ ಸಾವರ್ಕರ್ ಮಾತ್ರ ಕ್ಷಮಾಪಣೆ ಪತ್ರ ಬರೆದಿದ್ದಾರೆ ಅಂತ ಹೇಳೋರು ಮೂರ್ಖರು. ಸಾವರ್ಕರ್ ರಂತೆ ಸಾವಿರಾರು ರಾಜಕೀಯ ಖೈದಿಗಳು ಆ ಜೈಲಿನಲ್ಲಿ ಇದ್ದರು.‌ ಅಲ್ಲಿದ್ದ ಬಹುತೇಕ ಖೈದಿಗಳು ಕ್ಷಮಾಪಣೆ ಪತ್ರ ಬರೆದಿದ್ದರು. ಇದೊಂದು ನ್ಯಾಯಾಲಯಕ್ಕೆ ಬರೆಯೋ ಮೆರ್ಸಿ ಪಿಟಿಷನ್. ರಾಜಕೀಯ ಖೈದಿಗಳು ಪತ್ರ ಬರೆದು ಕ್ಷಮೆ ಕೇಳೋದು ಕೋರ್ಟ್ ನಲ್ಲಿ ವಾದ ಮಾಡಿದಂತೆ.‌ ಯಾರ್ಯಾರನ್ನ ಜೈಲಿನಿಂದ ಬಿಡಬೇಕು ಅಂತ ಈ ಪಿಟಿಷನ್ ಆಧಾರದಲ್ಲಿ ಬಿಡಲಾಗ್ತಿತ್ತು‌. ಆದರೆ ಇದರಲ್ಲಿ ಸಾವರ್ಕರ್ ಅವರ ಕ್ಷಮೆ ಪತ್ರ ಮಾತ್ರ ತಿರಸ್ಕೃತ ಅಂತ ಉತ್ತರ ಬಂದಿತ್ತು. ಇನ್ಯಾರಿಗೂ ಕೊನೆವರೆಗೂ ಯಾವುದೇ ಉತ್ತರ ಬರಲೇ ಇಲ್ಲ.‌ ತನಗೆ ತಾನೇ ಬಿರುದು ಕೊಟ್ಟುಕೊಂಡಿದ್ದು ಚಾಚಾ ಅಂತ.‌ ಆದರೆ ಸಾವರ್ಕರ್ ಗೆ ಮಾತ್ರ ವೀರ ಅನ್ನೋ ಬಿರುದು ಸಿಕ್ಕಿದೆ.‌ ಹಿಂದುತ್ವ ಅನ್ನೋ ಪದದ ಕೊಡುಗೆ ಸಾವರ್ಕರ್ ರದ್ದು. ಮುಸಲ್ಮಾನ, ಕ್ರಿಶ್ಚಿಯನ್ ಗೆ ಈ ಭಾರತ ಪಿತೃಭೂಮಿ, ಅಖಂಡ ಭಾರತ ಅಂತ ಕಂಡರೆ ಆತನೂ ಹಿಂದುವೇ.‌ ಇಂಥದ್ದೊಂದು ಅದ್ಭುತ ಹಿಂದುತ್ವದ ಕಲ್ಪನೆಯನ್ನ ಸೃಷ್ಟಿಸಿದ್ದು ಸಾವರ್ಕರ್. 

ಸಾವರ್ಕರ್ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಹಿಂದೂ ಧರ್ಮಕ್ಕಾಗಿ ಹೆಗಲು ಕೊಟ್ಟವರು.‌ ಗಾಂಧಿ‌ ಹತ್ಯೆ ನಾಥೋರಾಮ್ ಗೋಡ್ಸೆ ಮಾಡಿದ ಕಾರಣಕ್ಕೆ ಸಾವರ್ಕರ್ ಆರೋಪಿ ಮಾಡಲಾಯಿತು.‌ ಗೋಡ್ಸೆಗೆ ಸಾವರ್ಕರ್ ಪರಿಚಯ ಇತ್ತು ಅಂತ ಹೀಗೆ ಮಾಡಲಾಯ್ತು. ಆದರೆ ಸ್ವತಃ ಗೋಡ್ಸೆಯೇ ಈ ಹತ್ಯೆಯಲ್ಲಿ ಸಾವರ್ಕರ್ ಇಲ್ಲ ಅಂತ ಹೇಳಿದ್ದ.‌ ಸಾವರ್ಕರ್ ಫೋಟೋ ಮುಸ್ಲಿಂ ಏರಿಯಾದಲ್ಲಿ ಹಾಕಬಾರದು ಅನ್ನೋದು ಯಾವ ದಾಷ್ಟ್ಯ. ಯಾರೇ ಬೈದರೂ ನಾವು ಸಾವರ್ಕರ್ ವಿಚಾರಗಳನ್ನು ಮನೆ ಮನೆಗೂ ಮುಟ್ಟಿಸ್ತೇವೆ. ಈ ಬಾರಿಯ ಚೌತಿ ಸಾವರ್ಕರ್ ಚೌತಿ ಆಗಲಿದೆ.‌ ಸಾವರ್ಕರ್ ಬಗ್ಗೆ ಪುಸ್ತಕ ಮಾಡಿದ್ದೇವೆ, ಪ್ರಿಂಟ್ ಆದ ಬಗ್ಗೆ ಇವತ್ತು ಅನೌನ್ಸ್ ಮಾಡಿದ್ದೇವೆ.‌ ಆದರೆ ಒಂದೇ ದಿನದಲ್ಲಿ 75 ಸಾವಿರ ಪುಸ್ತಕ ಸೋಲ್ಡ್ ಔಟ್ ಆಗಿದೆ ಎಂದರು.
 

click me!