ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಅನ್ಯಾಯದ ಸರಮಾಲೆ: ಸಚಿವ ಈಶ್ವರ ಖಂಡ್ರೆ

By Kannadaprabha NewsFirst Published Mar 10, 2024, 3:00 PM IST
Highlights

ಕನ್ನಡಿಗರು ಬಹಳ ಸೌಮ್ಯ ಸ್ವಭಾವದವರು ಎನ್ನುವ ಕಾರಣಕ್ಕೆ ಕೃಷ್ಣ, ಕಾವೇರಿ, ಮೇಕೆದಾಟು, ಮಹದಾಯಿ ಸೇರಿ ವಿವಿಧ ನೀರಾವರಿ ಯೋಜನೆಗಳಲ್ಲಿ ಕೇಂದ್ರದಿಂದ ಆದ್ಯತೆ ಸಿಗುತ್ತಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. 

ಬೀದರ್‌ (ಮಾ.10): ಕನ್ನಡಿಗರು ಬಹಳ ಸೌಮ್ಯ ಸ್ವಭಾವದವರು ಎನ್ನುವ ಕಾರಣಕ್ಕೆ ಕೃಷ್ಣ, ಕಾವೇರಿ, ಮೇಕೆದಾಟು, ಮಹದಾಯಿ ಸೇರಿ ವಿವಿಧ ನೀರಾವರಿ ಯೋಜನೆಗಳಲ್ಲಿ ಕೇಂದ್ರದಿಂದ ಆದ್ಯತೆ ಸಿಗುತ್ತಿಲ್ಲ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಹೀಗಾಗಿ ನಾಡು, ನುಡಿ ಸಂರಕ್ಷಣೆಗಾಗಿ ಕನ್ನಡಿಗರು ಜಾಗೃತರಾಗಿ ಒಗ್ಗಟ್ಟು ತೋರಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಈಶ್ವರ ಖಂಡ್ರೆ ತಿಳಿಸಿದರು. ನಗರದ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಸಮ್ಮೇಳನದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಈ ರೀತಿಯ ನಮ್ಮ ಮನೋಭಾವನೆ, ಮನಸ್ಥಿತಿ ಇರುವ ಕಾರಣ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ. ನಮ್ಮ ಹಕ್ಕು ಕೇಳಲು ನಾವು ಹಿಂದೆ ಸರಿಯಬಾರದು ಎಂದರು. ಕರ್ನಾಟಕದಿಂದ ಸುಮಾರು 4.30 ಲಕ್ಷ ಕೋಟಿ ರು. ತೆರಿಗೆಯನ್ನು ಕೇಂದ್ರ ಸಂಗ್ರಹಿಸಿದೆ. ಇದರಲ್ಲಿ ನೇರ ತೆರಿಗೆ, ಜಿಎಸ್ಟಿ, ಸೆಸ್‌ ಸೇರಿದಂತೆ. ಆದರೆ ಇದರಲ್ಲಿ ರಾಜ್ಯಕ್ಕೆ ತನ್ನ ಪಾಲಿನ ರೂಪದಲ್ಲಿ ಸಿಕ್ಕಿರುವುದು ಕೇವಲ 50ರಿಂದ 60 ಸಾವಿರ ಕೋಟಿ ರು. ಮಾತ್ರ. ಉತ್ತರ ಪ್ರದೇಶದವರು ಒಂದು ಲಕ್ಷ ಕೋಟಿ ರು. ತೆರಿಗೆ ನೀಡಿದರೆ, 2 ಲಕ್ಷ ಕೋಟಿ ರು.ಗೂ ಅಧಿಕ ಆ ರಾಜ್ಯಕ್ಕೆ ಸಿಗುತ್ತದೆ. ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿದ್ದು ನಮಗೆ ಸಲ್ಲಬೇಕು. ಹೀಗೆ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಸಾಮಾನ್ಯರಿಗೆ ಉನ್ನತ ಸ್ಥಾನ ನೀಡುವ ಪಕ್ಷ ಬಿಜೆಪಿ: ಮಾಜಿ ಸಚಿವ ಹಾಲಪ್ಪ ಆಚಾರ್‌

ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ಇಲ್ಲಿಯವರೆಗೆ 36 ಕೃತಿಗಳನ್ನು ಹೊರ ತಂದಿದ್ದಾರೆ. ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ಸೇವೆ ಪರಿಗಣಿಸಿ ಇಲ್ಲಿಯವರೆಗೆ ಅನೇಕ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಮುಂದಿನ ದಿನಗಳಲ್ಲಿ ಪೂಜ್ಯರಿಗೆ ಪದ್ಮಶ್ರೀ ಹಾಗೂ ಪದ್ಮ ವಿಭೂಷಣದಂತಹ ಪ್ರಶಸ್ತಿಗಳು ಸಿಗಲಿ ಎಂದು ಪ್ರಾರ್ಥಿಸಿದರು. ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಧುನಿಕ ಅನುಭವ ಮಂಟಪದ ನಿರ್ಮಾಣ ಕಾರ್ಯ ಮುಂದಿನ 2025ರ ಒಳಗಾಗಿ ಪೂರ್ಣಗೊಳಿಸುವುದಾಗಿ ಅವರು ಭರವಸೆ ನೀಡಿದರು.

ಕರ್ನಾಟಕದಲ್ಲಿ ಬೀದರ್‌ ಉಳಿಯಲು ಹಾಗೂ ಗಡಿ ಜಿಲ್ಲೆಯಲ್ಲಿ ಮಾತೃ ಭಾಷೆ ಕನ್ನಡ ಉಳಿದಿದ್ದರ ಶ್ರೇಯ ಲಿಂ. ಡಾ. ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಹೊರಗೆ ಉರ್ದು ಬೋರ್ಡ್‌ ಹಾಕಿ, ಒಳಗೆ ಕನ್ನಡ ಕಲಿಸಿದ ಕೀರ್ತಿ ಲಿಂ. ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು. ಯುವಕರಲ್ಲಿ ಇತ್ತೀಚೆಗೆ ಓದುವ ಅಭಿರುಚಿ ಕಮ್ಮಿಯಾಗಿ, ಸಾಮಾಜಿಕ ಜಾಲತಾಣದಲ್ಲಿ ಮಗ್ನರಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ವಚನ ಸಾಹಿತ್ಯ ಅಧ್ಯಯನ ಮಾಡಿಸಬೇಕು. ನಿತ್ಯ ಪತ್ರಿಕೆಗಳನ್ನು ಓದುವ ರೂಢಿ ಹಾಕಿಕೊಳ್ಳಬೇಕು ಎಂದು ಸಚಿವ ಖಂಡ್ರೆ ಹೇಳಿದರು.

ಮುರ್ಡೇಶ್ವರ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಲು ಸಿದ್ಧ: ಸಚಿವ ಮಂಕಾಳ ವೈದ್ಯ

ಕಸಾಪ ಸುಪರ್ದಿಯಲ್ಲೇ ಕನ್ನಡ ಭವನ, ಚರ್ಚೆಯ ಭರವಸೆ: ಬೀದರ್‌ ನಗರದಲ್ಲಿ ಕನ್ನಡ ಭಾವನ ನಿರ್ಮಾಣಕ್ಕೆ ನಾನು ಒಂದು ಎಕರೆ ಭೂಮಿ ಕೊಡಿಸಿದ್ದೆ. ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿಯಅವರ ಕಳಕಳಿ ಅಪಾರವಾಗಿದೆ. ಈ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯಲ್ಲಿಯೇ ಇರುವಂತೆ ಪ್ರಯತ್ನಿಸುತ್ತೇನೆ ಎಂದು ಸಚಿವ ಖಂಡ್ರೆ ಭರವಸೆ ನೀಡಿದರು.

click me!