ಬಹುದಿನಗಳ ಕನಸು ಈಡೇರುವ ಆಶಾಭಾವನೆ: ಚಿಕ್ಕಬಳ್ಳಾಪುರ- ಗೌರಿಬಿದನೂರು ರೈಲು ಮಾರ್ಗ ಸಮೀಕ್ಷೆ

By Kannadaprabha NewsFirst Published Jul 29, 2022, 11:44 AM IST
Highlights

ಕೇಂದ್ರದ ರೈಲ್ವೆ ಮಂಡಳಿ ನಿರ್ಧಾರದಿಂದ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ರೈಲ್ವೆ ಮಾರ್ಗ ಸ್ಥಾಪನೆಗೊಳ್ಳುವುದು ಬಹುತೇಕ ಖಚಿತವಾದಂತೆ. 

ಕಾಗತಿ ನಾಗರಾಜಪ್ಪ

ಚಿಕ್ಕಬಳ್ಳಾಪುರ(ಜು.29): ರಾಷ್ಟ್ರದ ರಾಜಾಧಾನಿ ದೆಹಲಿಗೆ ಕರ್ನಾಟಕದಿಂದ ಹೆಚ್ಚು ರೈಲು ಸಂಪರ್ಕ ಜಾಲ ಹೊಂದಿರುವ ಜಿಲ್ಲೆಯ ಗೌರಿಬಿದನೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹೊಸ ರೈಲು ಮಾರ್ಗಕ್ಕೆ ಅಂತಿಮ ಸರ್ವೆ ನಡೆಸಲು ಕೊನೆಗೂ ಕೇಂದ್ರ ಸರ್ಕಾರ ಮುಂದಾಗುವ ಮೂಲಕ ಜಿಲ್ಲೆಯ ಜನರ ಬಹುದಿನಗಳ ಕನಸು ಈಡೇರುವ ಆಶಾಭಾವನೆ ಮೂಡಿದೆ. ರಾಜ್ಯದ ನೈರುತ್ಯ ರೈಲ್ವೆ ಇಲಾಖೆ ಜನರಲ್‌ ಮ್ಯಾನೇಜರ್‌ಗೆ ಕೇಂದ್ರದ ರೈಲ್ವೆ ಮಂಡಳಿಯ ನಿರ್ದೇಶಕ (ಸಿವಿಲ್‌) ದೀಪಕ್‌ ಸಿಂಗ್‌ ಪತ್ರ ಬರೆದಿದ್ದು ಸ್ವಾಮಿಹಳ್ಳಿ-ರಾಯದುರ್ಗ, ಬಳ್ಳಾರಿ-ಹೊಪೇಟೆ, ಬಳ್ಳಾರಿ- ಚಿಕ್ಕಜಾರು ಸೇರಿ ರಾಜ್ಯದ 4 ರೈಲ್ವೆ ಮಾರ್ಗಗಳ ಉನ್ನತ್ತೀಕರಣಗೊಳಿಸುವ ನಿಟ್ಟಿನಲ್ಲಿ ಕೂಡಲೇ ಸರ್ವೆ ಕಾರ್ಯಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.

ಜಿಲ್ಲೆಯ ತಾಲೂಕುಗಳಿಗೆ ಸಂಪರ್ಕ

ಈಗಾಗಲೇ ಜಿಲ್ಲೆಯ ಗುಡಿಬಂಡೆ, ಬಾಗೇಪಲ್ಲಿ ಬಿಟ್ಟರೆ ಎಲ್ಲ ತಾಲೂಕುಗಳಿಗೆ ರೈಲ್ವೆ ಸಂಪರ್ಕ ಇದೆ. ಅದರಲ್ಲೂ ಜಿಲ್ಲೆಯ ಅಂಧ್ರದ ಗಡಿಯಲ್ಲಿರುವ ಅನಂತಪುರ, ಹಿಂದೂಪುರಕ್ಕೆ ಕೂಗಳತೆಯ ದೂರದಲ್ಲಿರುವ ಗೌರಿಬಿದನೂರು ಹೆಚ್ಚು ರೈಲ್ವೆ ಸೌಲಭ್ಯ ಹೊಂದಿದ್ದು ದೆಹಲಿ ಸೇರಿದಂತೆ ಉತ್ತರ ಭಾರತದ ಕಡೆ ಪ್ರಯಾಣಿಸುವ ಬಹುಪಾಲು ರೈಲುಗಳು ಗೌರಿಬಿದನೂರು ಮೂಲಕವೇ ಹಾದು ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ಹೊಸ ರೈಲು ಮಾರ್ಗ ಸ್ಥಾಪನೆಗೆ ಸರ್ವೆ ಕಾರ್ಯ ನಡೆಸಿ ವರದಿ ನೀಡುವಂತೆ ಆದೇಶಿಸುವ ಮೂಲಕ ಕೇಂದ್ರದ ರೈಲ್ವೆ ಮಂಡಳಿ ಈ ಭಾಗದ ರೈಲ್ವೆ ಜಾಲಕ್ಕೆ ಇನ್ನಷ್ಟುಬಲ ಸಿಗುವ ನಿರೀಕ್ಷೆ ಮೂಡಿಸಿದೆ.

ವೀರೇಂದ್ರ ಹೆಗ್ಗಡೆ ಮಾತನಾಡುವ ದೇವರು: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ ತಾಲೂಕುಗಳಿಗೆ ರೈಲು ಸಂಪರ್ಕ ಇದೆಯಾದರೂ ಹೆಚ್ಚಿನ ರೈಲುಗಳ ಓಡಾಟ ಇಲ್ಲ. ಪ್ಯಾಸೆಂಜರ್‌ ರೈಲುಗಳು ಹೊರತುಪಡಿಸಿದರೆ ಎಕ್ಸಪ್ರೆಸ್‌ ರೈಲುಗಳು ಸಂಚಾರ ಇಲ್ಲ. ಇಂತಹ ಸಂದರ್ಭದಲ್ಲಿ ರೈಲ್ವೆ ಮಂಡಳಿ ಮಾರ್ಗ ಸಮೀಕ್ಷೆಗೆ ಆದೇಶಿರುವುದರಿಂದ ಗೌರಿಬಿದನೂರು -ಚಿಕ್ಕಬಳ್ಳಾಪುರ ನಡುವೆ ರೈಲು ಸಂಚಾರ ಆರಂಭವಾಗುವ ಆಸೆ ಚಿಗರಿದಂತಾಗಿದೆ. ಜೊತೆಗೆ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ರೈಲ್ವೆ ಸಂಪರ್ಕ ಕಲ್ಪಿಸುವುದರಿಂದ ಚಿಕ್ಕಬಳ್ಳಾಪುರ ವಯಾ ಗೌರಿಬಿದನೂರಿಗೆ ಹಾಗೂ ಗೌರಿಬಿದನೂರು ವಯಾ ಚಿಕ್ಕಬಳ್ಳಾಪುರ ಮೂಲಕ ಕೋಲಾರ, ಬಂಗಾರಪೇಟೆ ಆ ಮೂಲಕ ಚೈನ್ನೈ, ತಿರುಪತಿಗೆ ಹೆಚ್ಚು ರೈಲ್ವೆ ಸೌಕರ್ಯಗಳು ಸಿಗುವ ನಿರೀಕ್ಷೆ ಇದೆ.

ಪಟ್ಟಪರ್ತಿ ರೈಲು ಮಾರ್ಗ ಬಾಕಿ:

ಕೇಂದ್ರದ ರೈಲ್ವೆ ಮಂಡಳಿ ಈ ನಿರ್ಧಾರದಿಂದ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ರೈಲ್ವೆ ಮಾರ್ಗ ಸ್ಥಾಪನೆಗೊಳ್ಳುವುದು ಬಹುತೇಕ ಖಚಿತವಾದಂತೆ. ಆದರೆ ಚಿಕ್ಕಬಳ್ಳಾಪುರ ವಯಾ ಬಾಗೇಪಲ್ಲಿ ಮೂಲಕ ಪುಟ್ಟಪರ್ತಿಗೆ ರೈಲ್ವೆ ಮಾರ್ಗ ಸ್ಥಾಪಿಸುವ ಜಿಲ್ಲೆಯ ಬಹುದಿನಗಳ ಕನಸು ಯಾವಾಗ ಈಡೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸತ್ಯಸಾಯಿ ಬಾಬಾ ಮರಣದ ನಂತರ ಪುಟ್ಟಪರ್ತಿ, ಚಿಕ್ಕಬಳ್ಳಾಪುರ ರೈಲ್ವೆ ಮಾರ್ಗ ಸ್ಥಾಪನೆ ನೆನಗುದಿಗೆ ಬಿದ್ದಿದೆ. 

ಕಾಂಗ್ರೆಸ್‌ ಹಿರಿಯ ನಾಯಕರಿಬ್ಬರ ಕಚ್ಚಾಟ ಈಗ ಹೈಕಮಾಂಡ್ ಅಂಗಳಕ್ಕೆ..!

44 ಕಿ,ಮೀ ಸರ್ವೇ ಕಾರ್ಯ

ಜಿಲ್ಲೆ ಜಿಲ್ಲಾ ಕೇಂದ್ರವಾಗಿರುವ ಚಿಕ್ಕಬಳ್ಳಾಪುರ ಹಾಗೂ ಗೌರಿಬಿದನೂರು ನಡುವೆ ಬರೋಬ್ಬರಿ 44 ಕಿ,ಮೀ ದೂರ ಇದ್ದು 44 ಕಿ,ಮೀ ದೂರದಷ್ಟು ರೈಲ್ವೆ ಹಳಿ ನಿರ್ಮಾಣಕ್ಕೆ ಸರ್ವೆ ಕಾರ್ಯ ನಡೆಸುವಂತೆ ಹುಬ್ಬಳ್ಳಿಯ ನೈರುತ್ಯ ಇಲಾಖೆಯ ಜನರಲ್‌ ಮ್ಯಾನೇಜರ್‌ ಆದೇಶಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 1.10 ಕೋಟಿ ರು, ಅನುದಾನವನ್ನು ಬಿಡುಗಡೆಗೊಳಿಸಿದ್ದಾರೆ.

ಗೌರಿಬಿದನೂರು - ಚಿಕ್ಕಬಳ್ಳಾಪುರ ನಗರಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು 2019 ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ಸುರೇಶ್‌ ಅಂಗಡಿ ಅವರನ್ನು ಖುದ್ದು ಭೇಟಿ ಗೌರಿಬಿದನೂರು- ಚಿಕ್ಕಬಳ್ಳಾಪುರ ನಗರಕ್ಕೆ ನೂತನ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕೋರಿ ಮನವಿ ಸಲ್ಲಿಸಿದ್ದೆ. ಈಗ ಸರ್ವೆ ಕಾರ್ಯಕ್ಕೆ ಆದೇಶಿಸಿರುವುದು ಸಂತಸ ತಂದಿದೆ ಅಂತ ಗೌರಿಬಿದನೂರು ಶಾಸಕ ಎನ್‌.ಎಚ್‌.ಶಿವಶಂಕರರೆಡ್ಡಿ ತಿಳಿಸಿದ್ದಾರೆ. 

click me!