ಆಲಮಟ್ಟಿ- ಬಾಗಲಕೋಟೆ ಮಧ್ಯೆ ಜಲಸಾರಿಗೆಗೆ ಅಸ್ತು

By Kannadaprabha NewsFirst Published Jan 6, 2023, 11:30 PM IST
Highlights

ಮೊದಲ ಹಂತದಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲೂಕಿನ ಹೆರಕಲ್‌ವರೆಗೆ ಕೃಷ್ಣಾ ನದಿಯಲ್ಲಿ 25 ಕಿಮೀ ಉದ್ದದವರೆಗೆ ಹಾಗೂ ಎರಡನೇ ಹಂತದಲ್ಲಿ ಹೆರಕಲ್‌ ಮತ್ತು ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ 6 ಕಿಮೀ ಉದ್ದದವರೆಗೆ ಜಲಸಾರಿಗೆಗೆ ಉದ್ದೇಶಿಸಲಾಗಿದೆ. 

ಆಲಮಟ್ಟಿ(ಜ.06):  ಆಲಮಟ್ಟಿಯ ಲಾಲ್‌ ಬಹಾದ್ದೂರ ಶಾಸ್ತ್ರೀ ಜಲಾಶಯದ ಹಿನ್ನೀರಿನಿಂದ ಬಾಗಲಕೋಟೆಯ ನಡುವೆ ಕೃಷ್ಣಾ ನದಿಯಲ್ಲಿ ಜಲಸಾರಿಗೆ ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮೂಲಭೂತ ಸೌಕರ್ಯ ಕಲ್ಪಿಸಲು 12 ಕೋಟಿ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. ಮೊದಲ ಹಂತದಲ್ಲಿ ಆಲಮಟ್ಟಿಯಿಂದ ಬೀಳಗಿ ತಾಲೂಕಿನ ಹೆರಕಲ್‌ವರೆಗೆ ಕೃಷ್ಣಾ ನದಿಯಲ್ಲಿ 25 ಕಿಮೀ ಉದ್ದದವರೆಗೆ ಹಾಗೂ ಎರಡನೇ ಹಂತದಲ್ಲಿ ಹೆರಕಲ್‌ ಮತ್ತು ಬಾಗಲಕೋಟೆಯ ಘಟಪ್ರಭಾ ನದಿಯಲ್ಲಿ 6 ಕಿಮೀ ಉದ್ದದವರೆಗೆ ಜಲಸಾರಿಗೆಗೆ ಉದ್ದೇಶಿಸಲಾಗಿದೆ. ಈಗ ಮೊದಲ ಹಂತದ ಯೋಜನೆ ಅನುಷ್ಠಾನ ಕಾಮಗಾರಿ ಆರಂಭಗೊಂಡಿವೆ.

2020ರಲ್ಲಿ ದೇಶವ್ಯಾಪಿ ಜಲ ಸಾರಿಗೆ ಅಭಿವೃದ್ಧಿಗೆ ಸರ್ವೆ ಮಾಡಿದಾಗ, ಜಲಸಾರಿಗೆಯ ಸರ್ವೆ ಮಾರ್ಗ ಸಮೀಕ್ಷೆಗೆ ಬ್ಲಾಕ್‌ ಬ್ರಿಕ್ಸ್‌ ಕಂಪನಿಯವರು ಆಗಮಿಸಿದ್ದರು. ಆಗ, ಇಲ್ಲಿ ಜಲಸಾರಿಗೆ ಆರಂಭಿಸುವುದರಿಂದ ಆಗುವ ಪ್ರಯೋಜನ, ಪ್ರವಾಸಿ ಚಟುವಟಿಕೆಯ ಅಭಿವೃದ್ಧಿ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಇದರಿಂದಾಗಿ ಈ ಜಲ ಮಾರ್ಗದ ಸರ್ವೆ ನಡೆಸಿ, ಭಾರತ ಸಾಗರಮಾಲಾ ಯೋಜನೆಯಡಿ ಸೇರಿತು ಎಂದು ಆಲಮಟ್ಟಿಅರಣ್ಯ ಇಲಾಖೆಯ ಆರ್‌ಎಫ್‌ಒ ಮಹೇಶ ಪಾಟೀಲ ಹೇಳಿದರು.

Vijayapura : 8 ವಿಧಾನಸಭಾ ಕ್ಷೇತ್ರಗಳಲ್ಲಿ 18,38,452 ಮತದಾರರು

ಈಗ ಮೊದಲ ಹಂತದಲ್ಲಿ ಆಲಮಟ್ಟಿಯ ಜವಾಹರ ನವೋದಯ ಶಾಲೆಯ ಹಿಂಭಾಗ ಹಾಗೂ ಬೀಳಗಿ ತಾಲೂಕಿನ ಹೆರಕಲ್‌ ಬಳಿ ಕೃಷ್ಣಾ ನದಿ ತೀರದಲ್ಲಿ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಫೆರ್ರಿ ಬೋಟ್‌ ಗಳು ನಿಲ್ಲಲು ನಿಲ್ದಾಣ ನಿರ್ಮಾಣ, (ಜೆಟ್ಟಿನಿರ್ಮಾಣ), ಪೊಲೕಟಿಂಗ್‌ ಜೆಟ್ಟಿನಿರ್ಮಾಣ, ಕಾಂಕ್ರೀಟ್‌ ಜೆಟ್ಟಿನಿರ್ಮಾಣ, ನಿಲ್ದಾಣಗಳಲ್ಲಿ ಪಾರ್ಕಿಂಗ್‌, ಲೈಟಿಂಗ್‌ ವ್ಯವಸ್ಥೆ, ಸರಕು ಬೋಟ್‌ನಲ್ಲಿ ಹಾಕಲು ನಾನಾ ಯಂತ್ರಗಳು ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಲು .12.20 ಕೋಟಿ ಟೆಂಡರ್‌ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಉಪಯೋಗ:

ಆಲಮಟ್ಟಿಯ ಹಿನ್ನೀರು ಸುಂದರ ಪರಿಸರ ಹಾಗೂ ದೇಶ ವಿದೇಶ ಪಕ್ಷಿಗಳ ಸಂಕುಲಗಳ ತಾಣವಾಗಿದೆ. ಹಿನ್ನೀರಿನ ಸುಂದರ ದೃಶ್ಯ, ಪಕ್ಷಿ ಸಂಕುಲ ವೀಕ್ಷಣೆಗೆ ಅನುಕೂಲವಾಗಿದೆ. ಹಿನ್ನೀರಿನಲ್ಲಿ ನಾನಾ ರೀತಿಯ ದ್ವೀಪದ ಪ್ರದೇಶಗಳಿದ್ದು, ಅಲ್ಲಿ ಪ್ರವಾಸಿ ಚಟುವಟಿಕೆ ವಿಸ್ತರಿಸಲು, ಜಲ ಆಧಾರಿತ ಕ್ರೀಡೆಗಳ ಬೆಳವಣಿಗೆಗೆ ಈ ಸಾರಿಗೆ ಅನುಕೂಲ ಒದಗಿಸಲಿದೆ.

2022ರಲ್ಲಿ ವಿಜಯಪುರಕ್ಕೆ ಹೆಚ್ಚು ಕಾಡಿದ ಭೂಕಂಪನ, ಅತಿವೃಷ್ಟಿ..!

ಜುಲೈ ವೇಳೆಗೆ ಕಾರ್ಯಾಚರಣೆ ನಿರೀಕ್ಷೆ:

ಕರ್ನಾಟಕ ಮರಿಟೈನ್‌ ಬೋರ್ಡ್‌ (ಕರ್ನಾಟಕ ಜಲಸಾರಿಗೆ ಮಂಡಳಿ) ವತಿಯಿಂದ ಆಲಮಟ್ಟಿ-ಹೆರಕಲ್‌ ಮಧ್ಯೆ ಜಲ ಸಾರಿಗೆ ಆರಂಭಿಸಲು ನಿರ್ಧರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಆಸಕ್ತ ಬೋಟಿಂಗ್‌ ಕಂಪನಿಗಳಿಂದ ಬೋರ್ಡ್‌ ಈಗಾಗಲೇ ಟೆಂಡರ್‌ ಕರೆದಿದೆ. ಜ.6ರವರೆಗೂ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಮಂಡಳಿ ನಿರ್ದೇಶಕ (ಬಂದರು) ಕ್ಯಾಪ್ಟನ್‌ ಸಿ.ಸ್ವಾಮಿ ಮಾಹಿತಿ ನೀಡಿದರು.

ಈಗಾಗಲೇ ಮೂಲಸೌಕರ್ಯಕ್ಕಾಗಿ ಕರೆದಿರುವ ಟೆಂಡರ್‌ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ 15 ದಿನದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಎಲ್ಲವೂ ಅಂದುಕೊಂಡಂತೆಯಾದರೆ ಪ್ರಸಕ್ತ ಸಾಲಿನ ಜುಲೈನಲ್ಲಿ ಜಲ ಸಾರಿಗೆ ಆರಂಭಗೊಳ್ಳಬಹುದು ಎಂದು ಹೇಳಿದರು.

click me!