ಈ ದಂಧೆ ನಡೆಸುತ್ತಿದ್ದ ರೇಸ್‌ ಕೋರ್ಸ್‌ಗೆ ಪೊಲೀಸ್ ರೈಡ್ : 40 ಮಂದಿ ಅರೆಸ್ಟ್

By Kannadaprabha NewsFirst Published Dec 7, 2019, 8:28 AM IST
Highlights

ಬೆಂಗಳೂರು ರೇಸ್ ಕೋರ್ಸ್ ಮೇಲೆ ಪೊಲೀಸರು ದಾಳಿ ಮಾಡಿದ್ದು 40 ಜನರನ್ನು ಬಂಧಿಸಲಾಗಿದೆ. ಈ ದಂಧೆಯಲ್ಲಿ ತೊಡಗಿರುವ ಮಾಹಿತಿ ಆಧಾರದಲ್ಲಿ ದಾಳಿ ಮಾಡಲಾಗಿದೆ.

ಬೆಂಗಳೂರು[ಡಿ.07]:  ಬೆಟ್ಟಿಂಗ್‌ ಹಣದ ಲೆಕ್ಕ ನೀಡದೆ, ಅವ್ಯವಹಾರ ನಡೆಸುತ್ತಿದ್ದ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಟಫ್‌ರ್‍ ಕ್ಲಬ್‌ ಮೇಲೆ ಶುಕ್ರವಾರ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 40 ಖಾಸಗಿ ಬುಕ್ಕಿಗಳಿಂದ ಸುಮಾರು 96 ಲಕ್ಷ ರು. ನಗದು ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ಬೆಟ್ಟಿಂಗ್‌ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಸಾಕಷ್ಟುದೂರುಗಳು ಬಂದಿದ್ದವು. ಪ್ರಕರಣ ದಾಖಲಿಸಿಕೊಂಡು 40 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹೇಳಿದ್ದಾರೆ.

ರೇಸ್‌ಕೋರ್ಸ್‌ನಲ್ಲಿ ನಿತ್ಯ ತಮ್ಮ ಇಷ್ಟದ ಕುದುರೆಗಳ ಮೇಲೆ ಸಾವಿರಾರು ಜನರು ಕೋಟ್ಯಂತರ ರುಪಾಯಿ ಬೆಟ್ಟಿಂಗ್‌ ಕಟ್ಟುತ್ತಾರೆ. ರೇಸ್‌ ಕೋರ್ಸ್‌ನವರು ಇದನ್ನು ಕಾನೂನು ಬದ್ಧವಾಗಿ ನಡೆಸುತ್ತಾರೆ. ಆದರೆ, ರೇಸ್‌ಕೋರ್ಸ್‌ನಲ್ಲಿರುವ ಖಾಸಗಿ ಬುಕ್ಕಿಗಳು, ಪಂಟ​ರ್ಸ್ ಸಾವರ್ಜನಿಕರಿಂದ ಕೌಂಟರ್‌ನಲ್ಲಿ ಬೆಟ್ಟಿಂಗ್‌ ಕಟ್ಟಿಸಿಕೊಳ್ಳುತ್ತಾರೆ. ಪಂಟ​ರ್ಸ್ (ಬೆಟ್ಟಿಂಗ್‌ ಕಟ್ಟುವವರು) ಒಂದು ಸಾವಿರ ಕಟ್ಟಿದರೆ ಅದಕ್ಕೆ ಬದಲಾಗಿ 100 ರು. ಎಂದು, 10 ಸಾವಿರ ಬೆಟ್ಟಿಂಗ್‌ ಕಟ್ಟಿದರೆ 1 ಸಾವಿರ ರುಪಾಯಿ ಎಂದು ಬರೆದು ಚೀಟಿ ಕೊಡುತ್ತಿದ್ದರು.

ಒಂದು ವೇಳೆ ಪಂಟ​ರ್ಸ್ ಗೆದ್ದರೆ ಬೆಟ್ಟಿಂಗ್‌ ಕಟ್ಟಿದ್ದವರಿಗೆ ಹಣ ಕೊಡುತ್ತಿದ್ದರು. ಸೋತರೆ, ಆ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳುವ ಮೂಲಕ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ತೆರೆಗೆ ವಂಚನೆ ಮಾಡುತ್ತಿದ್ದರು. ಜಿಎಸ್‌ಟಿಯಿಂದ ನುಣುಚಿಕೊಳ್ಳುತ್ತಿದ್ದರು. ಈ ಬಗ್ಗೆ ಸಾಕಷ್ಟುದೂರುಗಳು ಬಂದ ಹಿನ್ನೆಲೆಯಲ್ಲಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಖಲೆಗಳನ್ನು ತಿದ್ದಿರುವುದು ಕಂಡು ಬಂದಿದೆ. ದಂಧೆಕೋರರು ರಾಜಾರೋಷವಾಗಿ ಅಕ್ರಮ ವ್ಯವಹಾರ ನಡೆಸುತ್ತಿದ್ದರು. ಈ ಬಗ್ಗೆ ಟರ್ಫ್ ಕ್ಲಬ್‌ನ ಆಡಳಿತ ಮಂಡಳಿ ಭಾಗಿಯಾಗಿದೆಯೇ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.

ದಾಳಿ ವೇಳೆ ಲೆಕ್ಕ ಬರೆಯುವ ಪುಸ್ತಕ ಸೇರಿದಂತೆ ಹಲವು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ನೂರು ರುಪಾಯಿಗೆ ಶೇ.28ರಷ್ಟುತೆರಿಗೆಯನ್ನು ರೇಸ್‌ಕೋರ್ಸ್‌ನವರು ಪಾವತಿಸಬೇಕು. ಸೂಕ್ತವಾಗಿ ಹಣದ ಲೆಕ್ಕ ತೋರಿಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟಉಂಟು ಮಾಡಿದ್ದಾರೆ. ಎಷ್ಟುವಂಚನೆ ಮಾಡಿದ್ದಾರೆ ಎಂಬುದು ತನಿಖೆ ಬಳಿಕ ತಿಳಿದು ಬರಲಿದೆ. ಬೆಟ್ಟಿಂಗ್‌ನಲ್ಲಿ ಕುದುರೆಗಳ ಮಾಲೀಕರು, ಬುಕ್ಕಿಗಳು, ಅಧಿಕಾರಿವರ್ಗ, ಸಿಬ್ಬಂದಿ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆಯುಕ್ತರು ವಿವರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಬ್ಬರು ಡಿಸಿಪಿ ಮತ್ತು 20 ಇನ್ಸ್‌ಪೆಕ್ಟರ್‌ಗಳ ನೇತೃತ್ವ ತಂಡ ದಾಳಿ ನಡೆದಿದೆ. ಈ ಸಂಬಂಧ ವಂಚನೆ ಪ್ರಕರಣದಡಿ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರು ಮತ್ತು ದಾವಣಗೆರೆಯಲ್ಲಿ ಇದೇ ರೀತಿ ಪೊಲೀಸರು ದಾಳಿ ನಡೆಸಿದ್ದರು.

ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ನಗರ ಪೊಲೀಸ್‌ ಆಯುಕ್ತರು ನಾಮ ನಿರ್ದೇಶಕರಾಗಿರುತ್ತಾರೆ. ಇಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿರಲಿಲ್ಲ ಮತ್ತು ಅಕ್ರಮ ಎಸಗುತ್ತಿರುವರು ಸಹ ಉನ್ನತ್ತ ಅಧಿಕಾರಿಗಳು ನಾಮನಿರ್ದೇಶಕರು ಆಗಿರುವುದರಿಂದ ಏನು ಆಗುವುದಿಲ್ಲ ಎಂದು ಕೊಂಡಿದ್ದರು. ಆದರೆ, ಇತ್ತೀಚೆಗೆ ಕುದುರೆ ಬಿದ್ದು ಗಲಾಟೆ ಉಂಟಾದ ಮೇಲೆ ಅಕ್ರಮದ ಬಗ್ಗೆ ದೂರು ಬಂದಿದ್ದವು. ಚುನಾವಣೆ ಸಲುವಾಗಿ ದಾಳಿ ನಡೆಸಲು ಸಾಧ್ಯವಾಗಿರಲಿಲ್ಲ. ಶುಕ್ರವಾರ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕ್ರಮ ತೆಗೆದುಕೊಳ್ಳಲಾಗಿದೆ.

ಭಾಸ್ಕರ್‌ ರಾವ್‌, ನಗರ ಪೊಲೀಸ್‌ ಆಯುಕ್ತ

click me!