ದಲಿತ ಸಿಎಂಗೆ ಜಾತಿ ವ್ಯವಸ್ಥೆಯೇ ಅಡ್ಡಗಾಲು: ಡಾ.ಪಿ.ಮೂರ್ತಿ ಬೇಸರ

By Kannadaprabha NewsFirst Published Dec 7, 2023, 8:53 PM IST
Highlights

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಕರ್ನಾಟಕದಲ್ಲಿ ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಾಧ್ಯವಾಗಿಲ್ಲ. ಇದು ಸಮಾಜದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದು ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿ ಬೇಸರ ವ್ಯಕ್ತಪಡಿಸಿದರು. 

ರಾಮನಗರ (ಡಿ.07): ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಕರ್ನಾಟಕದಲ್ಲಿ ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಾಧ್ಯವಾಗಿಲ್ಲ. ಇದು ಸಮಾಜದಲ್ಲಿ ಜಾತಿ ವ್ಯವಸ್ಥೆ ಜೀವಂತವಾಗಿರುವುದಕ್ಕೆ ಸಾಕ್ಷಿ ಎಂದು ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಾ.ಪಿ.ಮೂರ್ತಿ ಬೇಸರ ವ್ಯಕ್ತಪಡಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಸೇನೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.2 ಮತ್ತು ಶೇ.8ರಷ್ಟು ಜನರಿರುವ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, ಶೇ.22ರಷ್ಟು ದಲಿತರು ಇದ್ದರೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಸಮಾಜದಲ್ಲಿ ಜಾತಿ ವ್ಯವಸ್ಥೆ ಬಲವಾಗಿ ಬೇರೂರಿರುವುದರ ಜೊತೆಗೆ ದಲಿತರಲ್ಲಿ ಒಗ್ಗಟ್ಟು ಇಲ್ಲ. ಎಸ್ಸಿಯಲ್ಲಿ 101 ಜಾತಿ, ಎಸ್ಟಿನಲ್ಲಿ 51 ಜಾತಿಗಳು. ಅದರಲ್ಲಿಯೂ ಒಂದೊಂದು ವರ್ಗಗಳು ಸೃಷ್ಟಿಯಾಗಿವೆ. ಇವರೆಲ್ಲರು ಒಗ್ಗೂಡಿ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿರುವ 51 ಶಾಸಕರು ಕೈಜೋಡಿಸಿದರೆ ದಲಿತರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಅಂಬೇಡ್ಕರ್ ದೇಶದ ಬೆಳಕಾಗಿದ್ದರು. ಆ ಬೆಳಕನ್ನು ನಾವೆಲ್ಲರು ಕಳೆದುಕೊಂಡಿದ್ದೇವೆ. ಅವರು ತಮ್ಮ ಜೀವನವನ್ನು ದಲಿತರು,ಶೋಷಿತರ ಉದ್ಧಾರಕ್ಕಾಗಿ ಮುಡಿಪಾಗಿಟ್ಟವರು. ತಾವು ವಿಷ ಸೇವಿಸಿ, ನಮಗೆಲ್ಲ ಅಮೃತ ನೀಡಿದವರು.

Latest Videos

ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು ಜೋಲಿಯೇ ಗತಿ: ಗುಂಡಿಯ ನೀರೇ ಕೊಡಗಿನ ಸೂಳೆಭಾವಿ ಹಾಡಿ ಜನರಿಗೆ ಜೀವಜಲ!

ಇಂದು ದಲಿತರು ಉನ್ನತ ಹುದ್ದೆ ಅಲಂಕರಿಸಲು, ಟೀ ಮಾರುತ್ತಿದ್ದ ವ್ಯಕ್ತಿ ಪ್ರಧಾನಿ ಹುದ್ದೆ, ದಿನಪತ್ರಿಕೆ ಹಾಕುತ್ತಿದ್ದ ಯುವಕ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ್ದರೆ ಅದಕ್ಕೆ ಅಂಬೇಡ್ಕರ್ ಕಾರಣ ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು. ಶೂದ್ರರೆಂಬ ಕಾರಣಕ್ಕೆ ಅಂಬೇಡ್ಕರ್ ಬಾಲ್ಯದಿಂದಲೂ ಅವಮಾನ ಅನುಭವಿಸಿದರು. ಅದೆಲ್ಲವನ್ನು ಮೆಟ್ಟಿನಿಂತು ಉನ್ನತ ವ್ಯಾಸಂಗ ಮಾಡಿದರು. ಯಾವ ಜನರು ಅಂಬೇಡ್ಕರ್ ಅವರನ್ನು ಮುಟ್ಟಿಸಿಕೊಳ್ಳದೆ ಅಸ್ಪೃಶ್ಯರಂತೆ ಅವಮಾನಿಸಿದರೊ ಅವರೆಲ್ಲರ ಹಣೆ ಬರಹವನ್ನು ಅಂಬೇಡ್ಕರ್ ರವರು ಸಂವಿಧಾನದ ಮೂಲಕ ಬರೆದರು. ಅಸಂಖ್ಯಾತ ಶೋಷಿತರು ಮತ್ತು ದಲಿತರಿಗೆ ಬೆಳಕು ನೀಡಿದ ಸೂರ್ಯ ಎಂದು ಬಣ್ಣಿಸಿದರು.

ನಾವೆಲ್ಲರು ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ್ದೇವೆ. ಕೆಲವರು ಅವರನ್ನು ಅವಹೇಳನ ಮಾಡಿರುವುದನ್ನು ನೋಡಿದ್ದೇವೆ. ಆದರೆ, ಅಮೆರಿಕಾದಂತಹ ದೇಶ ಅಂಬೇಡ್ಕರ್ ವಿಶ್ವರತ್ನ ಪ್ರಶಸ್ತಿ ನೀಡಿತು. ಅದೇ ದೇಶದಲ್ಲಿ ಎಸ್ಸೆಸ್ಸೆಲ್ಸಿ ಫೇಲಾದ ಸಚಿನ್ ತೆಂಡೋಲ್ಕರ್ ಗೆ ಭಾರತ ರತ್ನ ನೀಡಿದರು, ಅಂಬೇಡ್ಕರ್ ಬದುಕಿದಾಗ ಆ ಪುರಸ್ಕಾರ ನೀಡುವ ದೊಡ್ಡತನ ತೋರಿಸಲಿಲ್ಲ ಎಂದು ಡಾ.ಪಿ.ಮೂರ್ತಿ ಬೇಸರ ವ್ಯಕ್ತಪಡಿಸಿದರು. ಒಬ್ಬ ರಾಜಕಾರಣಿ , ಚಿತ್ರನಟ ಸತ್ತರೆ 5 - 10 ಎಕರೆ ಭೂಮಿ , ನೂರಾರು ಕೋಟಿ ಹಣ ಕೊಡುತ್ತಾರೆ. ಆ ಜಾಗವನ್ನು ದೊಡ್ಡ ಮ್ಯೂಸಿಸಂಮಾಡುತ್ತಾರೆ. 

ತಮಿಳುನಾಡಿನಲ್ಲಿ 600 ಕೋಟಿ ರು.ಖರ್ಚು ಮಾಡಿ ಜಯಲಲಿತಾರವರ ಸಮಾಧಿ ನಿರ್ಮಿಸಿದ್ದಾರೆ. ಆದರೆ, ದೇಶಕ್ಕೆ ಶ್ರೇಷ್ಠವಾದ ಸಂವಿಧಾನ ನೀಡಿದ ಅಂಬೇಡ್ಕರ್ ಒಂದಡಿ ಜಾಗ ಕೊಡಲಿಲ್ಲ. ಇಂದಿಗೂ ಕೇಂದ್ರ - ರಾಜ್ಯಸರ್ಕಾರಗಳು ಅಂಬೇಡ್ಕರ್ ಸಮಾಧಿಯಿರುವ ಚೈತ್ಯ ಭೂಮಿಯನ್ನು ಅಭಿವೃದ್ಧಿ ಪಡಿಸುವ ಯೋಗ್ಯತೆ ತೋರಿಸಿಲ್ಲ ಎಂದು ಟೀಕಿಸಿದರು. ಅಂಬೇಡ್ಕರ್ ಇಹಲೋಕ ತ್ಯಜಿಸಿದಾಗ 193 ರಾಷ್ಟ್ರಗಳು ಧ್ವಜ ಅರ್ಧ ಕ್ಕೆ ಇಳಿಸಿ ಗೌರವ ಸಲ್ಲಿಸಿದರು. ಅಂತಹ ಗೌರವ ದೇಶದಲ್ಲಿ ಯಾರಿಗೂ ಸಿಗಲಿಲ್ಲ. 

ಅ‍‍‍‍‍ವರು ಹುಟ್ಟದೇ ಹೋಗಿದ್ದರೆ ಸ್ವಾತಂತ್ರ್ಯ ಸಮಾನತೆ ಇಲ್ಲದೆ ಶೋಷಿತರು ಗುಲಾಮಗಿರಿಯಲ್ಲಿ ಬದುಕಬೇಕಾಗಿತ್ತು. ಆದರೆ, ಅಂಬೇಡ್ಕರ್ ಅವರನ್ನು ದಲಿತರೆಂದು ಸೀಮಿತ ಅಂದುಕೊಂಡಿದ್ದಾರೆ. ಅವರು ಒಂದು ಜಾತಿಗೆ ಸೀಮಿತರಲ್ಲ. 130 ಕೋಟಿ ಜನರ ಆಸ್ತಿಯಾಗಿದ್ದಾರೆ ಎಂದು ಡಾ.ಪಿ.ಮೂರ್ತಿ ಹೇಳಿದರು. ಮಾಜಿ ಶಾಸಕ ಕೆ.ರಾಜು ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಮಾಜದಲ್ಲಿ ಸಮಾನತೆ ಮೂಡಿಲ್ಲ. ಜಾತಿಯತೆ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಅಂಬೇಡ್ಕರ್ ಆಶಯಗಳನ್ನು ಇಲ್ಲಿವರೆಗೊ ಈಡೇರದಿರುವುದು ನೋವಿನ ಸಂಗತಿ ಎಂದು ವಿಷಾಧ ವ್ಯಕ್ತಪಡಿಸಿದರು.

Kodagu: ಚೆಟ್ಟಳ್ಳಿ ಕೇಂದ್ರೀಯ ತೋಟದಲ್ಲಿ ಬಾಯಿ ನೀರೂರಿಸುವ ಕೆಂಪು, ಹಸಿರು, ಚೈನೀಸ್ ಲಿಚ್ಚಿ!

ಸಮಾರಂಭದಲ್ಲಿ ಗಣ್ಯರು ಅಂಬೇಡ್ಕರ್ ಮೂರ್ತಿಗೆ ಪುಷ್ಪಾರ್ಚನೆ ಮಾಡಿದರು. ವೇದಿಕೆಯಲ್ಲಿದ್ದ ಅತಿಥಿಗಳು ಹಾಗೂ ಸಭಿಕರು ಕ್ಯಾಂಡಲ್ ಹಚ್ಚಿ ಬೆಳಕಿನ ನಮನ ಸಲ್ಲಿಸಿದರು. ನಗರಸಭೆ ಅಧ್ಯಕ್ಷೆ ವಿಜಯ ಕುಮಾರಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ಶೇಷಾದ್ರಿ, ಅಂಬೇಡ್ಕರ್ ಅಭಿವೃದ್ಧಿ ನಿಗಮ ವ್ಯವಸ್ಥಾಪಕಿ ಸರೋಜನಿ ದೇವಿ, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ನಗರಸಭೆ ಮಾಜಿ ಸದಸ್ಯ ಶಿವಶಂಕರ್, ಸಮತಾ ಸೈನಿಕ ದಳ ಯುವ ಘಟಕ ರಾಜ್ಯಾಧ್ಯಕ್ಷ ಡಾ.ಜಿ.ಗೋವಿಂದಯ್ಯ, ನಟ ಸುನಾಮಿ ಕಿಟ್ಟಿ, ಕುಂತೂರು ಕುಮಾರ್, ಸುಮಾ, ಕೃಷ್ಣ ಮೂರ್ತಿ, ನಿಖಿಲ್ ಸಜ್ಜೆನಿಂಗಯ್ಯ, ಬಾನಂದೂರು ಕುಮಾರ್, ವಿಶ್ವನಾಥ್, ಲೋಕೇಶ್, ಕರುನಾಡ ಸೇನೆ ಜಗದೀಶ್, ಕರವೇ ಎಂಎನ್ ಆರ್ ರಾಜು, ಕರವೇ ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.

click me!