100 ರು. ತೆಗೆದ್ರೆ 500 ರು. : ATMಲ್ಲಿ ಹಣ ತೆಗೆದವರಿಗೆ ಬಂಪರೋ ಬಂಪರ್ !

By Suvarna NewsFirst Published Jan 13, 2020, 11:32 AM IST
Highlights

ಎಟಿಎಂ ನಿಂದ 100 ರುಪಾಯಿ ತೆಗೆದ್ರೆ 500 ರುಪಾಯಿ ಬಂದಿದ್ದು, ಇದರಿಂದ ಗ್ರಾಹಕರ ಕೈಗೆ ಹೆಚ್ಚುವರಿ ಹಣ ಸೇರಿದೆ. ಎಲ್ಲಾಯ್ತು ಈ ಘಟನೆ..?

ಮಡಿಕೇರಿ [ಜ.13]:  ನಗರದ ಕೊಹಿನೂರು ರಸ್ತೆಯ ಶ್ರೀಕಂಠೇಶ್ವರ ಎಲೆಕ್ಟ್ರಾನಿಕ್ಸ್‌ ಪಕ್ಕದಲ್ಲಿರುವ ಕೆನರಾ ಬ್ಯಾಂಕ್‌ ಎ.ಟಿ.ಎಂ ಯಂತ್ರಕ್ಕೆ ಹಣ ತುಂಬುವ ಸಿಬ್ಬಂದಿ ಮಾಡಿದ್ದ ಎಡವಟ್ಟಿನಿಂದ ಗ್ರಾಹಕರು ನಮೂದು ಮಾಡಿದ್ದಕ್ಕಿಂತ ಹೆಚ್ಚಿನ ಹಣ ಡ್ರಾ ಆಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಡಿ.30ರಂದು ಇಡೀ ದಿನ ಗ್ರಾಹಕರೂ ಯಾರಿಗೂ ತಿಳಿಯದಂತೆ ಈ ಎಟಿಎಂನಿಂದ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದ್ದು, ಹಣ ಡ್ರಾ ಮಾಡಿ ಹೆಚ್ಚುವರಿ ಹಣ ಪಡೆದವರು ಈ ಬಗ್ಗೆ ತಮ್ಮ ಆಪ್ತರಿಗೂ ಹೇಳಿದ್ದು, ಅವರು ಕೂಡ ಈ ಎಟಿಎಂ ಯಂತ್ರದಿಂದ ಹೆಚ್ಚುವರಿ ಹಣ ಪಡೆದುಕೊಂಡಿದ್ದಾರೆಂಬುದು ತಿಳಿದುಬಂದಿದೆ.

ಅದೇ ದಿನ ಸಂಜೆಯ ವೇಳೆಗೆ ಬ್ಯಾಂಕ್‌ ಸಿಬ್ಬಂದಿಗೆ ಹೆಚ್ಚುವರಿ ಹಣ ಡ್ರಾ ಆಗುತ್ತಿರುವುದು ಗೊತ್ತಾಗಿದೆ. ಅಷ್ಟೊತ್ತಿಗಾಗಲೇ ಸಾಕಷ್ಟುಹಣ ಡ್ರಾ ಆಗಿತ್ತು. ಅಂದಾಜು 1.50 ಲಕ್ಷ ರು. ಹಣ ಡ್ರಾ ಆಗಿತ್ತು!.

20 ವರ್ಷ ಹಿಂದೆ ಪಡೆದ ಸಾಲ, ಜಪ್ತಿಗೆ ಬಂದ ಅಧಿಕಾರಿಗಳು ವಾಪಾಸ್ ಹೋದ್ರು..!

ಕೆಲವು ಗ್ರಾಹಕರು ಹಣವನ್ನು ಹಿಂದಿರುಗಿಸಲು ಹಿಂದೇಟು ಹಾಕಿದ್ದರಿಂದ ಈ ಪ್ರಕರಣವು ನಗರ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ. ಹಣವನ್ನು ಡ್ರಾ ಮಾಡಿದ್ದ ವ್ಯಕ್ತಿಗಳು ಪೊಲೀಸರಿಗೆ ಹೆದರಿ ಹೆಚ್ಚುವರಿಯಾಗಿ ಬಂದ ಹಣವನ್ನು ಮರಳಿ ಬ್ಯಾಂಕ್‌ಗೆ ನೀಡುತ್ತಿದ್ದಾರೆ. ಬ್ಯಾಂಕ್‌ ಸಿಬ್ಬಂದಿಯೂ ನಿಟ್ಟುಸಿರು ಬಿಡುವಂತಾಗಿದೆ.

ಹೇಗಾಯ್ತು ಈ ಘಟನೆ?: ಡಿ.30ರಂದು ಖಾಸಗಿ ಏಜೆನ್ಸಿಯ ಸಿಬ್ಬಂದಿ, ಈ ಎ.ಟಿ.ಎಂ ಕೇಂದ್ರಕ್ಕೆ ಹಣ ತುಂಬಿದ್ದರು. ಹಣ ತುಂಬುವಾಗ . 100 ಹಾಕುವ ಟ್ರೇನಲ್ಲಿ  500 ರು. ಮುಖಬೆಲೆಯ ನೋಟುಗಳನ್ನು ತುಂಬಿದ್ದರು. ಇಲ್ಲೇ ಆಗಿದ್ದು ಎಡವಟ್ಟು. 500 ರು. ಡ್ರಾ ಮಾಡಲು ಬಂದವರು ಆ ಸಂಖ್ಯೆ ನಮೂದಿಸಿದರೆ, 100 ರು. ಮುಖ ಬೆಲೆಯ 5 ನೋಟು ಬರುವ ಬದಲಿಗೆ 500 ರು. ಮುಖ ಬೆಲೆಯ 5 ನೋಟಿನಂತೆ ಒಟ್ಟು 2,500 ರು. ಗ್ರಾಹಕರ ಕೈಸೇರಿಬಿಟ್ಟಿದೆ.

ಕಾಲು ಕೆಜಿ ತೂಗುತ್ತೆ ಈ ಸಿಗಡಿ, ಕೊಡಗಿನ ಮತ್ಸ್ಯ ಭವನಕ್ಕೆ ಕೇರಳದ ಟೈಗರ್ ಪ್ರಾನ್ಸ್..!.

ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು: ಈ ಎಡವಟ್ಟನ್ನು ದುರುಪಯೋಗಪಡಿಸಿಕೊಂಡ ಕೆಲವರು  64 ಸಾವಿರ ರು., 50 ಸಾವಿರದಂತೆ ಸರಣಿಯಾಗಿ ಹಣ ಪಡೆದಿದ್ದಾರೆ. ಒಬ್ಬ ಭೂಪ ಒಂದೇ ದಿನ ಹ ಲವು ಬಾರಿ ಬಂದು ಹಣ ಪಡೆದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅದರಲ್ಲಿ ಶ್ರೀಧರ ಎಂಬ ಗ್ರಾಹಕ ಮಾತ್ರ ಬ್ಯಾಂಕ್‌ಗೆ ಕರೆ ಮಾಡಿ ಎಟಿಎಂ ಕೇಂದ್ರದಲ್ಲಿ ದೋಷವಿರುವ ಬಗ್ಗೆ ಮಾಹಿತಿ ನೀಡಿದ್ದರು. ಆ ಹೊತ್ತಿಗಾಗಲೇ ಹೆಚ್ಚುವರಿ ಹಣ ಗ್ರಾಹಕರ ಕೈಸೇರಿತ್ತು. ನಂತರ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಲಾದ ಬ್ಯಾಂಕ್‌ ಖಾತೆಗಳ ಎಟಿಎಂ ಕಾರ್ಡ್‌ ಪರಿಶೀಲಿಸಿ, ಹೆಚ್ಚುವರಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ, ಹಣ ಹಿಂದಿರುಗಿಸುವಂತೆ ಬ್ಯಾಂಕ್‌ ಸಿಬ್ಬಂದಿ ಮನವಿ ಮಾಡಿದ್ದರು. ಬಹುತೇಕರು ಬ್ಯಾಂಕಿಗೆ ಹಣ ಹಿಂದಿರುಗಿಸಿದ್ದಾರೆ. ಮತ್ತೆ ಕೆಲವರು ಹಣ ಕೊಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜ.6ರಂದು ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

click me!