ಚಿತ್ರದುರ್ಗದಲ್ಲಿ ಸಂಭ್ರಮದ ಜೋಡೆತ್ತಿನ ಗಾಡಿ ಸ್ಪರ್ಧೆ: ನಾವು ಯಾರಿಗೂ ಕಮ್ಮಿ ಇಲ್ಲ ಅಂತ ಶಕ್ತಿ ಪ್ರದರ್ಶಿಸಿದ ರೈತರು..!

By Girish GoudarFirst Published Feb 21, 2024, 10:15 PM IST
Highlights

ಬುಡಕಟ್ಟು ಸಮುದಾಯವೊಂದು ಪೂರ್ವಜರ ಕಾಲದಿಂದಲೂ ಮುಂಗಾರು ಮಳೆಗೂ ಮುನ್ನ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ನಡೆಸೋದು ಇಲ್ಲಿನ ವಾಡಿಕೆ. ಆದ್ರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ  ರೈತರಲ್ಲಿನ ಉತ್ಸಾಹ ಕುಗ್ಗದಿರಲಿ ಹಾಗೂ ಅವರ  ಕೃಷಿ ಚಟುವಟಿಕೆಗಳು ನಿಲ್ಲದಿರಲಿ ಅನ್ನೋ ಸದುದ್ದೇಶದಿಂದ ದೇವಿಯ ಜಾತ್ರೆ ವೇಳೆ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ನಡೆಸಲಾಯಿತು.

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಫೆ.21): ಹಬ್ಬ, ಹರಿದಿನ ಅಂದ್ರೆ ಪೂಜಾ, ಕೈಂಕಾರ್ಯ ಸಹಜ‌. ಆದ್ರೆ ಕೋಟೆನಾಡಲ್ಲಿ ನಡೆದ ಜಾತ್ರೆಯಲ್ಲಿ ರೈತರ ಮನೋರಂಜನೆಗಾಗಿಯೇ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದ್ರು‌. ಆ ಸ್ಪರ್ಧೆಯಲ್ಲಿ ರೈತರು, ನಾವು ಯಾರಿಗೂ ಕಮ್ಮಿ ಇಲ್ಲ ಅಂತ ಅವರ ಶಕ್ತಿ ಪ್ರದರ್ಶಿಸಿದ್ರು‌. ಹಾಗಾದ್ರೆ ಆ ಸ್ಪರ್ಧೆ ಹೇಗಿತ್ತು,..! ಯಾವ ಸ್ಪರ್ಧೆ ಅದು ಅಂತ ಒಮ್ಮೆ ನೋಡೋಣ ಬನ್ನಿ.

ನೋಡಿ‌ ಹೀಗೆ ನಾ ಮುಂದು, ತಾ ಮುಂದು ಅಂತ ವೇಗವಾಗಿ ಓಡ್ತಿರೋ ಜೋಡೆತ್ತಿನ ಗಾಡಿಗಳು. ಆ ಎತ್ತುಗಳ ಪೈಪೋಟಿ ಕಂಡು ರಣಕೇಕೆ ಹಾಕ್ತಿರೊ ರೈತರು. ಈ ದೃಶ್ಯಗಳು ಕಂಡು ಬಂದಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹಿರೇಕೆರೆಕಾವಲು ಗ್ರಾಮದಲ್ಲಿ. ಹೌದು, ಬುಡಕಟ್ಟು ಸಮುದಾಯವೊಂದು ಪೂರ್ವಜರ ಕಾಲದಿಂದಲೂ ಮುಂಗಾರು ಮಳೆಗೂ ಮುನ್ನ ಜೋಡೆತ್ತಿನಗಾಡಿ ಸ್ಪರ್ಧೆಯನ್ನು ನಡೆಸೋದು ಇಲ್ಲಿನ ವಾಡಿಕೆ. ಆದ್ರೆ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ  ರೈತರಲ್ಲಿನ ಉತ್ಸಾಹ ಕುಗ್ಗದಿರಲಿ ಹಾಗೂ ಅವರ  ಕೃಷಿ ಚಟುವಟಿಕೆಗಳು ನಿಲ್ಲದಿರಲಿ ಅನ್ನೋ ಸದುದ್ದೇಶದಿಂದ ದೇವಿಯ ಜಾತ್ರೆ ವೇಳೆ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನು ನಡೆಸಲಾಯಿತು. ಈ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ರೈತರು ಹವ್ಯಾಸಿ ಸ್ಪರ್ಧಾಳುಗಳಂತೆ ಅವರ ಜೋಡೆತ್ತಿನ ಗಾಡಿಯನ್ನು ವೇಗವಾಗಿ ಓಡಿಸಿದ್ರು‌. ಅವರ ಎತ್ತುಗಳ ಶಕ್ತಿ ಪ್ರದರ್ಶಿಸಿದ್ರು. ಈ ವೇಳೆ ಸ್ಪರ್ಧೆಯಲ್ಲಿ ಜಯಗಳಿಸಿದ ರೈತರಿಗೆ ಆಕರ್ಷಕ ಪಾರಿತೋಷಕ ಹಾಗೂ ನಗದು ಬಹಮಾನ ಕೊಟ್ಟು ಆಯೋಜಕರು ಸನ್ಮಾನಿಸಿದ್ರು.

ಚಿತ್ರದುರ್ಗ ಮೆಡಿಕಲ್ ಕಾಲೇಜು ಕ್ರೆಡಿಟ್‌ಗಾಗಿ ಕೈ- ಕಮಲ ನಾಯಕರ ವಾಕ್ಸಮರ..!

ಇನ್ನು ಈ ಸ್ಪರ್ಧೆಗಾಗಿ ಸುತ್ತಮುತ್ತ ಹತ್ತಾರು ಹಳ್ಳಿಗಳ ರೈತರು ಸೇರಿದಂತೆ ಹೊರ ಜಿಲ್ಲೆಯ ರೈತರು ಸಹ ಭಾಗವಹಿಸಿದ್ದರು.‌ ಈ ರೋಮಾಂಚಕಾರಿ  ಜೋಡೆತ್ತಿನಗಾಡಿ ಸ್ಪರ್ಧೆಯನ್ನು ಕಣ್ತುಂಬಿಕೊಂಡ ರೈತರು ಮನಸಾರೆ ಸಂತಸಗೊಂಡು  ಪುಳಕಿತರಾದರು.‌ ಸದ್ಯ ಜಿಲ್ಲೆಯಾದ್ಯಂತ ಬರಗಾಲ ಆವರಸಿದ್ದು, ಜನರು ಜಮೀನುಗಳತ್ತ ತೆರಳುವುದು ಕಡಿಮೆ ಆಗಿದೆ. ಅಂತದ್ರಲ್ಲಿ ಜನರು ಪ್ಲಾನ್ ಮಾಡಿ ಈ ರೀತಿಯ ಸ್ಪರ್ಧೆ ಏರ್ಪಡಿಸಿರೋದು ಖುಷಿಯ ವಿಚಾರ ಎಂದು ಸಂತಸಗೊಂಡರು

ಒಟ್ಟಾರೆ ಜಾತ್ರೆ ಪ್ರಯುಕ್ತ ಕೋಟೆನಾಡಲ್ಲಿ ನಡೆದ ಜೋಡೆತ್ತಿನ ಗಾಡಿ ಸ್ಪರ್ಧೆ  ರೈತರ‌‌ ಮನಸುಗಳಿಗೆ  ಮನೋರಂಜನೆ ನೀಡಿತು.ಕೇವಲ ಉಳುಮೆ ಹಾಗು ಬಿತ್ತನೆ ಅಂತ ಬಿಸಿಯಾಗಿದ್ದ ರೈತರ ಶಕ್ತಿ ಪ್ರದರ್ಶನ ಇಲ್ಲಿ ಅನಾವರಣವಾಗಿದ್ದು, ಕೃಷಿಯಲ್ಲಿ ಸಕ್ರಿಯರಾಗಿರಲು ಸ್ಪೂರ್ತಿಯಾಯಿತು.

click me!