ಕಪಾಲಿ ಥಿಯೇಟರ್‌ ಪಕ್ಕದ 2 ಕಟ್ಟಡ ಕುಸಿತ

By Kannadaprabha NewsFirst Published Jul 29, 2020, 8:16 AM IST
Highlights

ಗಾಂಧಿನಗರದಲ್ಲಿನ ಕಪಾಲಿ ಚಿತ್ರಮಂದಿರವಿದ್ದ ಸ್ಥಳದ ಪಕ್ಕದ ಮೂರು ಮತ್ತು ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು ಮಂಗಳವಾರ ಕುಸಿದು ಬಿದ್ದಿವೆ. ಕೆಲ ದಿನಗಳ ಹಿಂದೆಯೇ ವಾಲಿದ್ದ ಈ ಕಟ್ಟಡಗಳದಲ್ಲಿದ್ದವರನ್ನು ಬಿಬಿಎಂಪಿ ಹಾಗೂ ಸ್ಥಳೀಯ ಪೊಲೀಸರು ತೆರವುಗೊಳಿಸಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬೆಂಗಳೂರು(ಜು.29): ಗಾಂಧಿನಗರದಲ್ಲಿನ ಕಪಾಲಿ ಚಿತ್ರಮಂದಿರವಿದ್ದ ಸ್ಥಳದ ಪಕ್ಕದ ಮೂರು ಮತ್ತು ನಾಲ್ಕು ಅಂತಸ್ತಿನ ಎರಡು ಕಟ್ಟಡಗಳು ಮಂಗಳವಾರ ಕುಸಿದು ಬಿದ್ದಿವೆ. ಕೆಲ ದಿನಗಳ ಹಿಂದೆಯೇ ವಾಲಿದ್ದ ಈ ಕಟ್ಟಡಗಳದಲ್ಲಿದ್ದವರನ್ನು ಬಿಬಿಎಂಪಿ ಹಾಗೂ ಸ್ಥಳೀಯ ಪೊಲೀಸರು ತೆರವುಗೊಳಿಸಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಹಿಂದೆ ಇದ್ದ ಕಪಾಲಿ ಚಿತ್ರಮಂದಿರ ಸ್ಥಳದಲ್ಲಿ, ಥೇಟರನ್ನು ತೆರವುಗೊಳಿಸಿ ಬೃಹತ್‌ ವಾಣಿಜ್ಯ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಈ ಕಟ್ಟಡದ ನೆಲಮಹಡಿ ವಾಹನ ನಿಲುಗಡೆಗಾಗಿ ಸುಮಾರು 50 ಅಡಿ ಆಳದವರೆಗೂ ಮಣ್ಣು ತೆಗೆಯಲಾಗಿತ್ತು. ಇದರಿಂದ ಈ ಎರಡು ಕಟ್ಟಡಗಳ ಅಡಿಪಾಯ ಶಿಥಿಲಗೊಂಡು ಮಂಗಳವಾರ ಕಟ್ಟಡಗಳು ಕುಸಿದಿವೆ.

ಪ್ರತಿದಿನ 11,500 ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್ ನಡೆಸುವಲ್ಲಿ BBMP ಫೇಲ್..!

ಕಪಾಲಿ ಚಿತ್ರಮಂದಿರ ತಾಣದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಸ್ಥಳದಲ್ಲಿನ ಮೇಲ್ವಿಚಾರಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದಾಗಿ ಎಂದು ಉಪ್ಪಾರಪೇಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.

ಆಗಿದ್ದೇನು?:

ಕಪಾಲಿ ಚಿತ್ರ ಮಂದಿರವನ್ನು ಕೆಲ ತಿಂಗಳ ಹಿಂದೆಯೇ ಕೆಡವಲಾಗಿತ್ತು. ಕಪಾಲಿ ಚಿತ್ರ ಮಂದಿರ ಇದ್ದ ಸ್ಥಳಕ್ಕೆ ಬೇರೊಬ್ಬರಿಗೆ ಮಾರಾಟ ಮಾಡಲಾಗಿತ್ತು. ರಾಯಚೂರು ಮೂಲದ ವ್ಯಕ್ತಿ ಮಾಲೀಕತ್ವದಲ್ಲಿ ಈ ಬೃಹತ್‌ ವಾಣಿಜ್ಯ ಕಟ್ಟಡ ನಿರ್ಮಾಣ ನಡೆದಿತ್ತು. ಇದಕ್ಕಾಗಿ ನೆಲದಡಿ ಪಾರ್ಕಿಂಗ್‌ ನಿರ್ಮಿಸಲು ಮಣ್ಣು ಅಗೆಯಲಾಗುತ್ತಿತ್ತು. ಮಣ್ಣು ಅಗೆತದಿಂದ ಪಕ್ಕದ 3 ಅಂತಸ್ತಿನ ಹಾಗೂ 4 ಅಂತಸ್ತಿನ 2 ಕಟ್ಟಡಗಳು ಶನಿವಾರವೇ ವಾಲತೊಡಗಿದ್ದವು. ಈ ಕಟ್ಟಡಗಳಲ್ಲಿ ಹೋಟೆಲ್‌, ಲಾಡ್ಜ್‌ ಹಾಗೂ ಪಿ.ಜಿ. ಇತ್ತು.

ಹೀಗಾಗಿ ಬಿಬಿಎಂಪಿ ಹಾಗೂ ಸ್ಥಳೀಯ ಪೊಲೀಸರು ಕಟ್ಟಡದಲ್ಲಿದ್ದ ಹೋಟೆಲ್‌ ಕಾರ್ಮಿಕರು, ಗ್ರಾಹಕರು ಹಾಗೂ ಪಿ.ಜಿಯಲ್ಲಿ ತಂಗಿದ್ದವರನ್ನು ಶನಿವಾರವೇ ಮುಂಜಾಗೃತಾ ಕ್ರಮವಾಗಿ ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಿದ್ದರು. ಸ್ಥಳದಲ್ಲಿ ಓರ್ವ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್‌: ದಂಧೆಕೋರ ಅರೆಸ್ಟ್‌

ಮಂಗಳವಾರ ರಾತ್ರಿ 7.45ರ ಸುಮಾರಿಗೆ ಇದ್ದಕ್ಕಿದ್ದ ಹಾಗೇ ನಾಲ್ಕು ಮತ್ತು ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಮುಂಜಾಗೃತ ಕ್ರಮವಾಗಿ ಎಲ್ಲರನ್ನು ಕಟ್ಟಡದಿಂದ ಹೊರಗೆ ಕಳಿಸಿದ ಪರಿಣಾಮ ಯಾವುದೇ ಅವಘಡ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ವಾಹನ ಬಂದಿದ್ದು, ಅವಶೇಷ ತೆರವು ಮಾಡಲಾರಂಭಿಸಿದೆ. ಅವೈಜ್ಞಾನಿಕವಾಗಿ ಮಣ್ಣು ತೆಗೆದ ಪರಿಣಾಮ ಈ ಅವಘಡ ಸಂಭವಿಸಿದೆ. ಬಿಬಿಎಂಪಿ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

ಕಪಾಲಿ ಚಿತ್ರಮಂದಿರದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಗುತ್ತಿಗೆದಾರರು ಹಾಗೂ ಕಟ್ಟಡದ ಮಾಲೀಕರು ತಲೆ ಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಆರಂಭಿಸಲಾಗಿದೆ. ಕಟ್ಟಡದ ಮಾಲೀಕ ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಕಟ್ಟಡ ನಿರ್ಮಾಣ ಮಾಡಲು ಬಿಬಿಎಂಪಿಯಿಂದ ನಕ್ಷೆ ಮಂಜೂರಾತಿ ಪಡೆದಿದ್ದರು ಎಂಬುದು ತಿಳಿದು ಬಂದಿದೆ.

ಪಕ್ಕದ ಆಶ್ರಮಕ್ಕೂ ಅಪಾಯ

ಕಟ್ಟಡ ಕುಸಿತದಿಂದ ಮೂರ್ನಾಲ್ಕು ಕಟ್ಟಡಗಳು ಬಿರುಕು ಬಿಟ್ಟಿವೆ. ಈ ಕಟ್ಟಡಗಳಿಗೆ ಹೊಂದಿಕೊಂಡಂತೆ ಆಶ್ರಮವೊಂದಿದ್ದು, ಆಶ್ರಮದ ಗೋಡೆಗಳು ಬಿರುಕು ಬಿಟ್ಟಿವೆ. ಆಶ್ರಮ ನವೀಕರಣ ಕಾರ್ಯ ನಡೆದಿದೆ. ಆದರೆ, ಆಶ್ರಮದಲ್ಲಿ ಯಾರೂ ಇಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕೊರೋನಾತಂಕ, ರಾಜ್ಯದಲ್ಲಿ 2000 ಗಡಿ ದಾಟಿದ ಸಾವಿನ ಸಂಖ್ಯೆ!

ತಳಮಹಡಿ ಪಾರ್ಕಿಂಗ್‌ ನಿರ್ಮಾಣಕ್ಕಾಗಿ ಅನುಮತಿ ದೊರಕಿದ್ದಕ್ಕಿಂತ ಹೆಚ್ಚಿನ ಆಳ ತೆಗೆದ ಪರಿಣಾಮ ಈ ಅವಘಡ ಸಂಭವಿಸಿದೆ. ಅಲ್ಲದೆ, ಸ್ಥಳದಲ್ಲಿನ ಮೂರ್ನಾಲ್ಕು ಕಟ್ಟಡಗಳು ಕೂಡ ಬಿರುಕು ಬಿಟ್ಟಿವೆ. ವಾಣಿಜ್ಯ ಕಟ್ಟಡ ತಲೆ ಎತ್ತುತ್ತಿದ್ದ ಸ್ಥಳದಲ್ಲಿ ದೊಡ್ಡದೊಂದು ಬಂಡೆ ಇತ್ತು. ರಾತ್ರಿ ಸಮಯದಲ್ಲಿ ಬಂಡೆ ಸಿಡಿಸಿ ಪಾಯ ಅಗೆಯುವ ಕೆಲಸ ನಡೆಯುತ್ತಿತ್ತು. ಇದಕ್ಕಾಗಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಎಂದು ಪಕ್ಕದ ಲಾಡ್ಜ್‌ ಮಾಲೀಕ ತಿಳಿಸಿದ್ದಾರೆ.

50 ಲಕ್ಷ ವೆಚ್ಚದಲ್ಲಿ ಲಾಡ್ಜ್‌ ನವೀಕರಣ:

ಲಾಕ್‌ಡೌನ್‌ ಇದ್ದ ಕಾರಣ ನಾಲ್ಕು ತಿಂಗಳಿಂದ ಲಾಡ್ಜ್‌ ಬಂದ್‌ ಮಾಡಲಾಗಿತ್ತು. . 50 ಲಕ್ಷ ವ್ಯಯಿಸಿ ಲಾಡ್ಜ್‌ ನವೀಕರಣ ಮಾಡಲಾಗಿತ್ತು. ಸಿಬ್ಬಂದಿ ಶನಿವಾರ ಕರೆ ಮಾಡಿ ವಿಷಯ ತಿಳಿಸಿದ್ದರು. ಬರುವಷ್ಟರಲ್ಲಿ ಕಟ್ಟಡವೇ ನೆಲ ಸಮವಾಗಿದೆ. ನಿರ್ಲಕ್ಷ್ಯದಿಂದಲೇ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು ಎಂದು ಲಾಡ್ಜ್‌ ಮಾಲೀಕ ದೂರಿದ್ದಾರೆ.

ಎರಡು ದಿನದ ಹಿಂದೆಯೇ ಕಟ್ಟಡದ ಬಿರುಕು ಬಿಟ್ಟಕಾರಣ ಸಂಬಂಧಪಟ್ಟಎಂಜಿನಿಯರ್‌ಗಳನ್ನು ಕರೆಯಿಸಿ ಮಾತನಾಡಿಸಿದ್ದೆವು. ಎಂಜನಿಯರ್‌ಗಳು ಕೂಡಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಅಷ್ಟೊತ್ತಿಗೆ ಕಟ್ಟಡ ಸಂಪೂರ್ಣ ಕುಸಿದಿದೆ. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಬಿಲ್ಡರ್‌ ವಿರುದ್ಧ ದೂರು ನೀಡಿರುವುದಾಗಿ ಮೂರು ಹೋಟೆಲ್‌ ಕಟ್ಟಡದ ಮಾಲೀಕ ಪ್ರಸಾದ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇಂದಿನಿಂದ ಬಿಎಂಟಿಸಿ ಮಾಸಿಕ ಪಾಸ್‌ ವಿತರಣೆ

ನಿಮ್ಮ ಕಟ್ಟಡವನ್ನು ನಾವು ಕಟ್ಟಿಸಿಕೊಡುವುದಾಗಿ ಡೆವಲಪರ್‌ ಹಾಗೂ ಎಂಜಿನಿಯರ್‌ ನಮಗೆ ಮೊದಲಿನಿಂದಲೂ ಹೇಳುತ್ತಿದ್ದಾರೆ. ನಾವು ಕಾನೂನು ಪ್ರಕಾರವೇ ಹೋರಾಟ ನಡೆಸುತ್ತೇವೆ. ನನಗೆ ಏನು ಹೇಳಬೇಕೆಂಬುದು ತಿಳಿಯುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.

click me!