ಅವರೆಲ್ಲರೂ ಒಲವು ತೋರಿಸಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ
ತುಮಕೂರು (ಅ.23): ಈ ಬಾರಿಯ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಇತಿಹಾಸ ಪುಟದಲ್ಲಿ ಸೇರಲಿದೆ ಎಂಬ ವಿಶ್ವಾಸವನ್ನು ಸಂಸದ ತೇಜಸ್ವಿ ಸೂರ್ಯ ವ್ಯಕ್ತಪಡಿಸಿದರು.
ಅವರು ಶಿರಾದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರ ಪರ ಮತಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿರಾ ಭಾಗದ ಯುವಕರು ಬಿಜೆಪಿ ಕಡೆ ಒಲವು ತೋರಿದ್ದಾರೆ. ನೂರಾರು ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಈ ಭಾಗದ ಯುವಕರ ಆಶೋತ್ತರಗಳಿಗೆ ಸ್ಪಂದಿಸುವಂತಹ ಯುವ ನಾಯಕ ಡಾ.ಸಿ.ಎಂ.ರಾಜೇಶ್ ಗೌಡ ಅವರನ್ನು ಎಲ್ಲರೂ ಒಗ್ಗೂಡಿ ಗೆಲ್ಲಿಸಿ, ಈ ಬಾರಿ ಬಿಜೆಪಿ ಗೆದ್ದು ಮುಂದಿನ 20-30 ವರ್ಷಗಳವರೆಗೂ ಇಲ್ಲಿ ಬಿಜೆಪಿ ಭದ್ರ ನೆಲೆಯೂರುತ್ತದೆ ಎಂದರು.
ಅಪ್ಪ, ತಾತನ ಹೇಸರೇಳಿಕೊಂಡ ಬಂದ ಯುವರಾಜ ನಿರುದ್ಯೋಗಿ: ತೇಜಸ್ವಿ ಸೂರ್ಯ
ನಾನು ಕಳೆದ ಕೆಲವು ದಿನಗಳ ಹಿಂದ ಬಿಹಾರದ ಚುನಾವಣೆ ಪ್ರಚಾರದಲ್ಲಿ ಮೂರು ದಿನ ಪಾಲ್ಗೊಂಡಿದ್ದೆ. ಅಲ್ಲೂ ಇದುವರೆಗೂ ಅಭಿವೃದ್ದಿಯಾಗಿಲ್ಲ. ಸುಮಾರು 60 ರಿಂದ 70 ವರ್ಷಗಳ ಕಾಲ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಆಳ್ವಿಕೆ ನಡೆಸಿವೆ. ಆದರೆ ಯಾವುದೇ ಅಭಿವೃದ್ದಿ ಮಾಡಿಲ್ಲ. ಇದಕ್ಕೆಲ್ಲಾ ಯಾರು ಹೊಣೆ ಆದ್ದರಿಂದ ಬಿಜೆಪಿಯನ್ನು ಗೆಲ್ಲಿಸಿ ಅಭಿವೃದ್ಧಿಗೆ ಸಹಕರಿಸಿ ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾಡುಗೊಲ್ಲರ ಹಲವು ದಿನಗಳ ಬೇಡಿಕೆಯಾದ ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರ್ಪಡೆಗೊಳಿಸಬೇಕು ಎಂಬುದು. ಈ ಬಾರಿ ಬಿಜೆಪಿ ಪಕ್ಷವನ್ನು ಗೆಲ್ಲಿಸಿ ಖಂಡಿತಾ ಕಾಡುಗೊಲ್ಲರನ್ನು ಎಸ್ಟಿಗೆ ಸೇರ್ಪಡೆ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಭಾಜಪ ಅಧ್ಯಕ್ಷ ಬಿ.ಸುರೇಶ್ ಗೌಡ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಅರಕೆರೆ ರವೀಶ್, ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ, ನಗರ ಮಂಡಲ ಅಧ್ಯಕ್ಷ ವಿಜಯರಾಜ್, ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.